ಜೈ ಕನ್ನಡ...

Saturday, November 1, 2008


ಎಲ್ಲರಿಗೂ 53ನೆಯ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹೆಚ್ಚು ಹೆಚ್ಚು ಕನ್ನಡಲ್ಲೇ ಮಾತನಾಡಿ, ಕನ್ನಡ ಉಳಿಸಿ, ಬೆಳೆಸಿ, ಜೊತೆಗೆ ನೀವು ಬೆಳೆಯಿರಿ(ಇದು ನಾನು 53 ನೆಯ ರಾಜ್ಯೋತ್ಸವದ ಸಂಧರ್ಭದಲ್ಲಿ ನಾಡಿಗೆ ಕೊಡುತ್ತಿರುವ ಕರೆ ;-) )


ಇದೇ ಸಂಧರ್ಭದಲ್ಲಿ ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಕೇಂದ್ರ ಸರಕಾರ ಘೋಷಿಸಿದೆ,ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು, ನೆರೆಯ ತೆಲುಗಿಗೂ ಈ ಭಾಗ್ಯ ಲಭಿಸಿದೆ.Cheers...


ಶಾಸ್ತ್ರೀಯ ಭಾಷೆ ಎಂದರೆ ಒಂದು ಭಾಷೆ ತನ್ನ ಅಸ್ತಿತ್ವದಲ್ಲಿ, ದಶಕಗಳಿಂದ ತನ್ನ ಪ್ರಭಾವನ್ನು ಬೀರಿದ್ದೇ ಆದರೆ ಹಾಗೂ ತನ್ನ ಮೂಲ ರೂಪದಿಂದ ಬೇರೆ ರೂಪಗಳನ್ನು ಪಡೆದಿದ್ದಾಗ್ಯೂ ಅದರ ಪ್ರಭಾವ ಹಾಗೆ ಉಳಿಸಿಕೊಂಡಿರುವ ಭಾಷೆಯನ್ನು "Classical" ಅಥವಾ ಶಾಸ್ತ್ರೀಯ ಭಾಷೆಯೆನ್ನುತ್ತಾರೆ.


ಶಾಸ್ತ್ರೀಯ ಭಾಷೆಯ ಬಗ್ಗೆ ಒಂದಷ್ಟು ತುಣುಕುಗಳು :

1)ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲಿಕ್ಕೆ ಇವಿಷ್ಟೂ ಅಂಶಗಳು ಮಾನದಂಡ

-ಭಾಷೆಯು ಕನಿಷ್ಟವೆಂದರೂ ಸಾವಿರ ವರ್ಷ ಪುರತನದ್ದಾಗಿರಬೇಕು(ಕನ್ನಡ ಎರಡು ಸಾವಿರ ವರ್ಷಕ್ಕಿಂತಲೂ ಪುರಾತನವಾದದ್ದು)

-ಭಾಷೆಗೆ ಅಷ್ಟು ವರ್ಷಗಳ ಐತಿಹ್ಯವಿರಬೇಕು, ಅದರ ಸಲುವಾಗಿ ಶಾಸನಗಳು, ಸೂಕ್ತ ದಾಖಲೆಗಳು ಹೊಂದಿರಬೇಕು.

-ಭಾಷೆಯು ಸ್ವಂತದ್ದಾಗಿರಬೇಕು, ಬೇರೆ ಭಾಷೆಯಿಂದ ಟಿಸಿಲೊಡೆದಿರಬಾರದು.


2)ಶಾಸ್ತ್ರೀಯ ಭಾಷೆಯನ್ನು ಮೃತ(!!) ಭಾಷೆಯೆಂದೂ ಕರೆಯುತ್ತಾರೆ, ಕಾರಣ ಅದರ ಮೂಲರೂಪದಿಂದ ಕವೊಲೊಡೆದು ಈಗ ಬೆರೆಯೆ ತೆರೆನಾದ ರೂಪವನ್ನು ಹೊಂದಿರುತ್ತದೆ.


3)ಸಂಸ್ಕೃತ ಭಾಷೆಯು ಪ್ರಪಂಚದ ಶಾಸ್ತ್ರೀಯ ಭಾಷೆಗಳ ಪಟ್ಟಿಯಲ್ಲಿದೆ, ಅದರ ಜೊತೆಗೆ ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳು ಕೂಡ ಇವೆ.


4)ತಮಿಳು ಭಾಷೆಯನ್ನು 2004 ರಲ್ಲಿ ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲಾಯಿತು. ಅದರ ಹಿಂದೆ ನಲವತ್ತು ವರ್ಷಗಳ ಹೋರಾಟವಿತ್ತು.

ಶಾಸ್ತ್ರೀಯ ಭಾಷೆಯ ಗರಿಯನ್ನು ಸಿಕ್ಕಿಸಿಕೊಂಡದ್ದಾಯಿತು. ಇನ್ನಷ್ಟು ಕನ್ನಡ ಸಾಹಿತ್ಯದಲ್ಲಿ ಕೃಷಿಯಾಗಲಿ, ಕನ್ನಡ ಇನ್ನಷ್ಟು ಮತ್ತಷ್ಟು ಮುಗಿಲಿಗೇರಲಿ ಎನ್ನುವ ಆಶಯದೊಂದಿಗೆ ಮತ್ತೊಮ್ಮೆ ತಮಗೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.

(ಫೋಟೋ ಕಾಣಿಕೆ : ಡೈನಮಿಕ್ ದಿವ್ಯಾ)


ITC Infotech ಗೆ ವಿದಾಯ

Wednesday, October 29, 2008

ಈ ಲೇಖನವನ್ನ 24-ಶುಕ್ರವಾರ-2008 ರಂದೇ ಬರೆಯಬೇಕಿತ್ತು, ಕಾರಣಾಂತರಗಳಿಂದ ಆಗಲಿಲ್ಲ. ಅಂದಿನ ದಿನಾಂಕಕ್ಕೆ ಸಮೀಕರಿಸಿಕೊಳ್ಳಿ ;-)



ನನ್ನ ಜೀವನದ 22ವರುಷಗಳದ್ದು ಒಂದು ಪರ್ವವಾದರೆ ಇನ್ನೆರಡು ವರ್ಷ ಮತ್ತೊಂದು ಪರ್ವ. ಪರ್ವದಲ್ಲಿ ನನ್ನ ಮೊದಲ ಕಂಪೆನಿಯಾದ ITC Infotech ಗೆ ತನ್ನದೇ ಆದ ಸ್ಥಾನವಿದೆ. ಹಲವಾರು ಮೊದಲುಗಳಿಗೆ ಕಾರಣವಾಗಿದೆ. ಒಂದು ಕಂಪೆನಿಯಲ್ಲಿ ಹೇಗಿರಬೇಕು ಎಂಬುದರಿಂದ ಹಿಡಿದು ಜನರ ಜೊತೆ ಹೇಗಿರಬಾರದು ಎಂಬುದರವರೆಗೂ ಕಂಪೆನಿ ಕಲಿಸಿಕೊಟ್ಟಿದೆ. ಅನೇಕ ಕಟು ಸತ್ಯಗಳನ್ನು ಕಲಿಸಿದೆ, ಸಿಹಿ ಸಿಂಚನಗಳಿಗೇನೂ ಕಮ್ಮಿಯಿಲ್ಲ. ಹೌದು ಇಂದು ಕಂಪೆನಿಯಿಂದ ಬೇರ್ಪಡುತ್ತಿದ್ದೇನೆ ಇನ್ನೊಂದು ಕಡೆಗೆ...Change is the only constant thing in Life...Hmmm

ಎಂಜಿನಿಯರಿಂಗ್ ವಿದ್ಯಾರ್ಥಿ ಜೀವನದ ಮುಂದುವರಿದ ಭಾಗದಂತೇ ಇತ್ತು ITC Infotech ನಲ್ಲಿ ನನ್ನ ದಿನಗಳು. ನನ್ನ ಜೊತೆ ಸೇರಿದವರೆಲ್ಲರನ್ನು ನಾನು ಗೆಳೆಯರೆಂದೇ ಹೇಳಲಿಚ್ಚಿಸುತ್ತೇನೆ, ಯಾರೊಬ್ಬರನ್ನು ಕಲೀಗ್ಸ್ ಎಂದು ಸಂಭೋದಿಸಲು ಇಂದಿಗೂ ಮುಜುಗರವಾಗುತ್ತದೆ. ಎರಡು ವರ್ಷಗಳು ಆಟ ಆಡಿಕೊಂಡೇ ಕಳೆದುಬಿಟ್ಟೆ. ಕೆಲಸ ಮಾಡುತ್ತಿದ್ದೇನೆ ಎಂದೆನಿಸುತ್ತಿರಲಿಲ್ಲ, ಕಾಲೇಜಿಗೇ ಹೋಗಿ ಬರುವಂತಿತ್ತು ದಿನವೂ. ಇಂದಿಗೆ ನನ್ನ ಎಲ್ಲ ಆಟಗಳಿಗೆ, ಆರಾಮದಾಯಕ Professional ಜೀವನಕ್ಕೆ ತೆರೆ ಬಿದ್ದಿದೆ. ನಾನು ಈಗ ಹೋಗುತ್ತಿರುವ ಕಡೆ ಹೇಗಿರುತ್ತದೋ ಏನೋ??

ಕಳೆದ ವಾರವೇ ನನ್ನ ಕಟ್ಟ ಕಡೆಯ ರಾತ್ರಿ ಪಾಳಿಯನ್ನು ಇಡೀ ರಾತ್ರಿ ತೂಕಡಿಸದೆ ವಿಜೃಂಭಣೆಯಿಂದ ನಾನೊಬ್ಬನೇ ಆಚರಿಸಿದ್ದೆ. ಅಲ್ಲೆಲ್ಲಾ ನಾನೊಬ್ಬನೇ ತಿರುಗಾಡುತ್ತಾ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದೆ. ಮತ್ತೆ ಹೀಗೆ ರಾತ್ರಿಯೆಲ್ಲಾ ಕೆಲಸ ಮಾಡುವ ಕರ್ಮವಿರುವುದಿಲ್ಲವೆಂಬ ಸಂತೋಷ ಒಂದು ಕಡೆಯಾಗಿದ್ದರೆ ಇಂದಿಗೆ ಮತ್ತೆ ಇವೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತೇನೆಂಬ ದುಗುಡ ಇನ್ನೊಂದು ಕಡೆ. ರಾತ್ರಿ ಪಾಳಿಯಲ್ಲಿ ಇಡೀ ರಾತ್ರಿ ಇರುತ್ತಿದ್ದದ್ದೆ ಹಾಗೆ, ಕೆಲಸವಿದ್ದರೆ ಯಾವುದೇ ತಾಪತ್ರಯವಿರುತ್ತಿರಲಿಲ್ಲ, ಹೇಗೋ ಎಚ್ಚರವಾಗಿದ್ದು ಕೆಲಸ ಮಾಡುವುದರಲ್ಲಿ ಮಗ್ನರಾಗಿ ಸಮಯ ಕಳೆಯುತ್ತಿದ್ದೆವು, ಕೆಲಸ ಇರದಿದ್ದರೆ 2 ಗಂಟೆಯೊಳಗಾಗಿ ನಿದಿರಾದೇವಿ ಆವರಿಸಿಕೊಳ್ಳುತ್ತಿದ್ದಳು, ತನ್ನ ಕಬಂದ ಬಾಹುಗಳನ್ನು ಚಾಚಿ ಬರಸೆಳೆದು ನಿದಿರೆಗೆ ಜಾರಲು ಪ್ರೇರೇಪಿಸುತ್ತಿದ್ದಳು, ಅದರ ಪರಿಣಾಮ ಅಲ್ಲೇ ತೂಕಡಿಸಿ ಹಾಗೆ ಒರಗಿಕೊಂಡು ನಿದಿರೆಗೆ ಜಾರಿಬಿಡುತ್ತಿದ್ದೆ. ರಾತ್ರಿ ಪಾಳಿಯ ಇನ್ನೊಂದು ಸೊಗಸೆಂದರೆ ಕೆಲಸ ಮಾಡುತ್ತ ಹಾಡುಗಳು ಕೇಳುತ್ತಾ, ಕಾಪಿ ಹೀರುತ್ತ ಆರಮಾಗಿ ಇರಬಹುದಾಗಿತ್ತು , ಯಾರೊಬ್ಬರು ಕೇಳಲು ಇರುತ್ತಿರಲಿಲ್ಲ. ನಮ್ಮ ಕೆಲಸಗಳು ಸಾವಧಾನವಾಗಿ ಮಾಡಿಕೊಳ್ಳಬಹುದಾಗಿತ್ತು, ಹೊಸ ವಿಷಯಗಳ ಕಲಿಕೆಗೂ ಬಹಳ ಪೂರಕವಾಗಿತ್ತು. ಆದರೆ ಅದರಿಂದ ಆರೋಗ್ಯ ಹದಗೆಡುತ್ತಿತ್ತು. ನಾಲ್ಕು ತಿಂಗಳ ಹಿಂದೆ ಇನ್ನು ಮುಂದೆ ರಾತ್ರಿ ಪಾಳಿಗೆ ಬರಲಾಗುವುದಿಲ್ಲವೆಂದು ನನ್ನ ಮ್ಯಾನೇಜರಿಗೆ ಖಡಾಖಂಡಿತವಾಗಿ ಹೇಳಿಬಿಟ್ಟೆ. ಅವೆಲ್ಲಾ ಮುಗಿದ ಮೇಲೆ ಬೇರೆ ಕಂಪೆನಿಯಲ್ಲಿ ಕೆಲಸ ದೊರೆತು ನನ್ನ ರಾಜೀನಾಮೆಯನ್ನು ನೀಡಿದ ಬಳಿಕ ಮ್ಯಾನೇಜರಿನ ಕೋರಿಕೆಯ ಮೇರೆಗೆ ಮತ್ತೆ ಒಂದು ವಾರ ರಾತ್ರಿ ಪಾಳಿಗೆ ಒಪ್ಪಿಕೊಂಡೆ. ಅದನ್ನು ಕಳೆದ ಶುಕ್ರವಾರ(17-Friday-2008) ಮುಗಿಸಿದೆ.

ಕಡೆಯ ವಾರ ಕಂಪೆನಿಯಿಂದ ಹೊರನಡೆಯಲು ಇದ್ದ ಬದ್ದ ಎಲ್ಲ ನಿಯಮಾವಳಿಗಳನ್ನು ಮುಗಿಸುವುದರಲ್ಲಿ ಒಡಾಡುತ್ತಿದ್ದೆ. ಪ್ರತಿಯೊಂದು ವಿಭಾಗದಲ್ಲೂ ಅವರ ಸಹಿ ಹಾಕಿ, ಕ್ಲಿಯರೆನ್ಸ್ ಪತ್ರ ಕೊಡುತ್ತಿದ್ದ ಹಾಗೆ ಇಂಚಿಂಚಾಗಿ ಕಂಪೆನಿಯಿಂದ ಬೇರ್ಪಡುತ್ತಿದ್ದ ಭಾವ ಸುಳಿಯುತ್ತಿತ್ತು. ಮತ್ತೆ ವಾಪಸು ಸೇರಿಬಿಡೋಣವೇ ಎಂದಂತಲೂ ಅನಿಸುತ್ತಿತ್ತು, ನಿರ್ಧಾರ ಬಿಗಿ ಮಾಡಿ ಮುಂದಿನ ವಿಭಾಗದೆಡೆಗೆ ನಡೆದೆ.


ಎಲ್ಲಾ ವಿಭಾಗಗಳಿಂದಲೂ ಕ್ಲಿಯರೆನ್ಸ್ ಪತ್ರ ಪಡೆದು ಕಂಪೆನಿಗೆ ಪಾವತಿಸಬೇಕಾದ ಹಣ ಪಾವತಿಸಿ ಸಂಜೆ ಐದರ ಹೊತ್ತಿಗೆ ಕಂಪೆನಿಯ ರಿಲೀವಿಂಗ್(ಕನ್ನಡ ಪದ ತಿಳಿಯಲಿಲ್ಲ) ಪತ್ರ ಇಸಿದುಕೊಂಡೆ. ನನ್ನ ಕಂಪೆನಿ ಗೆಳೆಯರು ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ ಎರಡು ಮಾತನಾಡಿ ಎಲ್ಲರ ಕೈಕುಲುಕಿ ಎಲ್ಲಾ ಮುಗಿದ ಮೇಲೆ ಅಲ್ಲೇ ಮೂಲೆಯಲ್ಲಿ ಒಂದೆಡೆ ಕುಳಿತೆ. ಸಂಜೆ ಗೆಳೆಯರಿಗೆ Farewell ಪಾರ್ಟಿ ಕೊಡಿಸಿ ಮತ್ತೆ ಆಫೀಸಿಗೆ ಹಿಂದಿರುಗಿದಾಗ ಗಂಟೆ ಹತ್ತಾಗಿತ್ತು. ಲೀಟರುಗಟ್ಟಲೆ ಕಾಫಿ ಎರಕ ಹೊಯ್ದಿದ್ದ ಕಾಫಿ ಮೆಶೀನಿನ ಎರಡು ಫೋಟೋ ಕ್ಲಿಕ್ಕಿಸಿ ಮತ್ತೊಂದು ಕಪ್ ಕಾಫಿ ಕುಡಿದು ಜಡಿ ಮಳೆಯಲ್ಲೇ ಮನೆಗೆ ಹಿಂದಿರುಗಿ ಬಂದೆ.

ಪದಗಳಿಗೆ ನಿಲುಕದ ಅನೇಕ ಭಾವಗಳಿಗೆ ನನ್ನ ಮೊದಲ ಕಂಪೆನಿ ಸಾಕ್ಷಿಯಾಗಿದೆ, ಎರಡು ವರ್ಷಗಳು ಕಳೆದದ್ದೇ ಗೊತ್ತಾಗಲಿಲ್ಲ. ಅನೇಕ ಗೆಳೆಯರನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಹೊಸ ಪ್ರಪಂಚಕ್ಕೆ ಕಾಲಿಡಲಿದ್ದೇನೆ ಸೋಮವಾರದಿಂದ. Wish me all the best.

ಕಡೆಯ ದಿನಗಳಲ್ಲಿ ಕಂಪೆನಿಯಲ್ಲಿ ತೆಗೆದ ಫೋಟೋಗಳನ್ನು ಬಿಡುವು ಮಾಡಿಕೊಂಡು ನೋಡಿಬಿಡಿ.

ಕಥೆಗಾರ....

Monday, September 29, 2008


ಇದು ನನ್ನ ತಂಗಿಯ ಅಬ್ಸರ್ವೇಶನ್. ಜೊತೆಗೆ ನನ್ನಗನ್ನಿಸಿದ್ದು ಸೇರಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಕಮೆಂಟಿಸಿ..

ಒಂದು ಮಧ್ಯಾನ್ಹ ಹೀಗೆ ಅವಳೊಡನೆ ಚರ್ಚಿಸುತ್ತಿದ್ದೆ, ಕನ್ನಡ ಬರಹಗಾರರ ಬಗ್ಗೆ, ತೇಜಸ್ವಿ ಬಹಳ ಚೆನ್ನಾಗಿ ಬರೀತಾರೆ, ಎಷ್ಟು ಸರಳವಾಗಿ ವಿಷಯ ಮುಟ್ಟಿಸುತ್ತಾರೆ, ಭೈರಪ್ಪನೋರು ಒಂಥರಾ ಸ್ತ್ಯಾಂಡರ್ಡ್, ಸಿಕ್ಕಾಪಟ್ಟೆ ಫಿಲಾಸಪಿ ಓದಿಕೊಂಡಿದ್ದಾರೆ, ಅವರ ಕಾದಂಬರಿಗಳು ಓದಿ ಮುಗಿಸಿದರೆ ಅದೇ ಗುಂಗಿನಲ್ಲಿ ಇರಬೇಕಾಗುತ್ತದೆ ಹಾಗೆ ಹೀಗೆ ಅಂತೆಲ್ಲ.

ತಟ್ಟನೆ ಹೇಳಿದಳು "ನೋಡಣ್ಣ ಈ ಕತೆಗಳು ಕಾದಂಬರಿಗಳು ಬರೆಯುವ ಮಂದಿಯನ್ನು ನೋಡಿದ್ದೇನೆ, ಅವರ್ಯಾರು ಮೂಲತ: ಬೆಂಗಳೂರಿನವರಲ್ಲ, ಅವರಿಗೊಂದು ಮೂಲವೆಂಬುದು ಇರುತ್ತದೆ ಅದು ಹಳ್ಳಿಗಳು. ಬೆಂಗಳೂರಿನ ಮೂಲದವರಿಗೆ ಒಳ್ಳೆ ಕತೆ ಹೆಣೆಯಲು ಆಗುವುದಿಲ್ಲವೆನಿಸುತ್ತದೆ" ಎಂದಳು.ನಾನು ಆದಾದ ಬಳಿಕ ಯೋಚಿಸತೊಡಗಿದೆ, ಬೆಳಗೆರೆ ಬಳ್ಳಾರಿಯವರು, ಭೈರಪ್ಪ ಚನ್ನಪಟ್ಟಣದ ಕಡೆಯವರು, ತೇಜಸ್ವಿ ಮೂಡಿಗೆರೆಯವರು, ಕಾಯ್ಕಿಣಿ ಗೋಕರ್ಣದವರು. ಅರೆರೆ ನನಗೆ ತಿಳಿದವರು ಬೆಂಗಳೂರಿನವರು ಯಾರು ಇಲ್ಲ!! ತಕ್ಷಣ soft soft software ಕತೆಗಳನ್ನು ಬರೆಯುವ ವಸುಧೇಂದ್ರರಿದ್ದಾರಲ್ಲ ಎಂದು ನಿರಾಳವಾಯಿತು. ನಾನು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ಅವರ ಕತೆಗಳು ಹೆಚ್ಚು ಇಷ್ಟವಾಗುತ್ತದೆ, ಕಾರಣ ಅದು ನಮಗೆ ಹತ್ತಿರವಾಗಿರುತ್ತದೆ. ಅವರ "ಎಲ್ಲರ ಮನೆ ಕಾರಿಗೂ ನೆಗ್ಗು" ಎಂಬ ಲೇಖನವನ್ನ ಪತ್ರಿಕೆಯಲ್ಲಿ ಓದಿದ್ದೆ. ಇಡೀ ಪತ್ರಿಕೆಯನ್ನ ಜತನವಾಗಿ ಇಂದಿಗೂ ಕಾಪಿಟ್ಟುಕೊಂಡಿದ್ದೇನೆ, ಅಷ್ಟು ನಕ್ಕಿದ್ದೇನೆ. ಒಬ್ಬರಾದರೂ ಸಿಕ್ಕರಲ್ಲ ಎಂದು ಅವರ ಪುಸ್ತಕ ತೆರೆದು ನೋಡಿದರೆ "ಬಳ್ಳಾರಿಯ ಸಂಡೂರಿನಲ್ಲಿ ಜನನ" ನೋಡಿ ನಿರಾಶನಾದೆ. ಉಹೂ ಬೆಂಗಳೂರಿನವರು ಸಿಗಲೇ ಇಲ್ಲ.
ಮತ್ತೆ ಹುಡುಕಿ ಹುಡುಕಿ ಸಾಕಾಯಿತು. ನಿಮಗಾರಾದರು ಗೊತ್ತಿದ್ದರೆ ತಿಳಿಸಿ.

ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಶಹರಗಳಲ್ಲಿ ಹುಟ್ಟಿ ಬೆಳೆದವರಿಗೆ ಕತೆಗಳು ಏಕೆ ಹುಟ್ಟುವುದಿಲ್ಲವೋ ನಾ ಕಾಣೆ. ನಾನು ಹಲವಾರು ಪ್ರಯತ್ನಿಸಿದ್ದೇನೆ, ಸಣ್ಣ ಕತೆಗಳು ಬರೆಯಲು. ರಭಸವಾಗಿ ಬೈಕ್ ಓಡಿಸುವಾಗ ಯಾವುದೋ ತಿರುವಿನಲ್ಲೋ ಸಿಗ್ನಲಿನಲ್ಲೋ ಕತೆ ಹುಟ್ಟಿಕೊಂಡಿರುತ್ತದೆ. ಲೋಕದ ಚಿಂತೆ ಮರೆತು ಕತೆಗೆ ರೆಕ್ಕೆ ಪುಕ್ಕ ಕಟ್ಟಲು ಕೂತಿದ್ದೇನೆ. ಬೈಕ್ ಪಾಡಿಗೆ ರಭಸವಾಗಿ ಹೋಗುತ್ತಿರುತ್ತದೆ ಕತೆಯ ಓಘ ಕೂಡ ಅದೇ ರಭಸದಲ್ಲಿ ಬೆಳೆಯುತ್ತಿರುತ್ತದೆ. "ಒಂದು ಮುಂಜಾವಿನಲ್ಲಿ ಆತ ಹಳ್ಳಿಯಿಂದ ಹೊರಟ, ಮನೆಯಲ್ಲಿ ಇನ್ನು ಇರಲಾಗುವುದಿಲ್ಲವೆಂದು ನಿರ್ಧರಿಸಿದ, ಮನೆಯ ಕಿರುಕುಳ ಸಾಕೆಂದು .........." ಹೀಗೆ ಹಲವು ಸಾಲುಗಳು. ಮತ್ತೆ ಕತೆ ಆರಂಭಿಸಲು ಯಾವುದೋ ಹಳ್ಳಿ ಹೆಸರನ್ನು ತಡಕಾಡುತ್ತಿರುತ್ತೇನೆ. ಜೀವಮಾನದಲ್ಲೇ ಒಂದು ಹಳ್ಳಿಯನ್ನೂ ಸರಿಯಾಗಿ ನೋಡದ, ಅಲ್ಲಿನ ಪರಿಸರ ತಿಳಿಯದ ನಾನು ಕತೆ ಹೇಗೆ ಬರೆಯಲು ಸಾಧ್ಯ?M G road ಶುರುವಾಗುವ ಹೊತ್ತಿಗೆ ಶುರುವಾಗುವ ಕತೆ Corporation ಬಳಿ ಬರುವುದರೊಳಗಾಗಿ ರೆಕ್ಕೆ ಪುಕ್ಕ ಸರಿಯಾಗಿ ಅಂಟಿಕೊಳ್ಳದೆ ಕತೆ ಸತ್ತಿರುತ್ತದೆ, ಬೈಕ್ ನ ವೇಗವೂ ಕಮ್ಮಿಯಾಗಿರುತ್ತದೆ. ಕತೆ ಬರೆಯಲು ಮನಸಿನ್ನೂ ಮಾಗಿಲ್ಲವೆಂದು ಸುಮ್ಮನಾಗುತ್ತೇನೆ. ತೇಜಸ್ವಿಯವರ "ಚಿದಂಬರ ರಹಸ್ಯ" ಓದಿ ಅದರಲ್ಲಿ ಬರುವ ಲಂಟಾನದ ಜಿಗ್ಗು ತಿಳಿಯಲು ನಾನು ಪಟ್ಟ ಹರಸಾಹಸ ಅರುಣನಿಗೆ ಮಾತ್ರ ಗೊತ್ತು. ರಂಗಶಂಕರದಲ್ಲಿ ನಾಟಕವನ್ನು ಏರ್ಪಡಿಸಿದಾಗ ನಾನು ಕಾಯುತ್ತಲಿದ್ದು ಲಂಟಾನದ ಜಿಗ್ಗು ನೋಡಲೆಂದೆ. ಮುಳ್ಳಯ್ಯನಗಿರಿ ಚಾರಣದಲ್ಲಿ ಅರುಣ ತೋರಿಸಿದ್ದ "ಇದೇ ಕಣೊ ಲಂಟಾನದ ಜಿಗ್ಗು" ಎಂದು..ಇನ್ನು ಸಮಾಧಾನವಾಗಿಲ್ಲ. ತೇಜಸ್ವಿಯರ ಕತೆಗಳ ಪಾತ್ರಗಳೇ ತಿಳಿಯಲು ಇಷ್ಟು ಒದ್ದಾಡಿದರೆ ನಾನು ಹೇಗೆ ತಾನೆ ಕತೆ ಬರೆಯಬಲ್ಲೆನು?

ಕನ್ನಡದಲ್ಲಿ ಆರುನೂರಕ್ಕೂ ಹೆಚ್ಚು ಬ್ಲಾಗುಗಳಿದೆ. ಅದರಲ್ಲಿ ಬೆಂಗಳೂರಿನವರೆಂದರೆ ಎಂದರೆ ಒಂದಂಕಿಯಲ್ಲಿ ಎಣಿಸಿಬಿಡಬಹುದು. ಎಲ್ಲರಿಗೂ ಬೇರೆಯ ಮೂಲವೊಂದಿರುತ್ತದೆ. ಅದಕ್ಕಾಗಿ ಕತೆಗಳು ಹುಟ್ಟುತ್ತವೆ ಎನಿಸುತ್ತಿದೆ ನನಗೆ. ಒಂದಷ್ಟು ಹಳ್ಳಿಗಳು, ಬೆಟ್ಟಗಳು, ಊರು ಕೇರಿ ಸುತ್ತಿ ಬಂದರೆ ಕತೆಗಳನ್ನ ಬರೆಯಬಹುದೇನೊ? ಬರೆದರೆ ಖಂಡಿತಾ ನಿಮ್ಮ ಮುಂದಿಡುತ್ತೇನೆ.

ವಿ.ಸೂ : ಇಲ್ಲಿ ಬೆಂಗಳೂರಿನವರು ಏಕೆ ಕತೆ ಬರೆಯಲಾಗುತ್ತಿಲ್ಲ ಎಂಬುದನ್ನ ತಿಳಿಯಲು ಯತ್ನಿಸಿರುವದರ ಬಗ್ಗೆ ಬರೆದಿದ್ದೇನಷ್ಟೆ, ಬೇರೆ ಊರಿನವರ ಬಗ್ಗೆ ಜೆಲಸಿ ಇದೆಯೆಂದು ಅಪ್ಪಿ ತಪ್ಪಿಯೂ ಕೂಡ ಭಾವಿಸಬೇಡಿ. ಜೈ ಕರ್ನಾಟಕ.

ನಾನೇಕೆ ಬರೆಯುತ್ತಿಲ್ಲ!!??...

Wednesday, September 24, 2008


ಎಸ್. ಎಲ್. ಭೈರಪ್ಪನವರ  "ನಾನೇಕೆ ಬರೆಯುತ್ತೇನೆ" ಎಂಬ ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಇಂತಹುದೊಂದು ಲೇಖನ ಕುಟ್ಟುತ್ತಿದ್ದೇನೆ. ಹೌದು "ನಾನೇಕೆ ಬರೆಯುತ್ತಿಲ್ಲ" ??


ಇದು ನನಗನ್ನಿಸಿದ್ದು ಬ್ಲಾಗ್ ಬರೆಯುವುದು ಬಿಟ್ಟು ಸುಮಾರು ಎರಡು ತಿಂಗಳಾಗುವ ಹೊತ್ತಿಗೆ. ಅರುಣ ಚಾಟ್ ನಲ್ಲಿ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ ಪಿಂಗಿ "ಬರ್ಯೋ ಇವತ್ತಾದ್ರು" ಎನ್ನುತ್ತಿದ್ದ, ಶ್ರೀಕಾಂತ್ ನನ್ನ ಹಳೆಯ ಬ್ಲಾಗ್ ಲೇಖನದ ಕೊಂಡಿಗಳನ್ನು ಗೆಳೆಯರಿಗೆ ಕಳಿಸಿ ಬ್ಲಾಗ್ update ಆಗಿದೆ ಎಂದು ಸಾರುತ್ತಿದ್ದ!!. ಲಕ್ಷ್ಮಿ "ಕರ್ಮಕಾಂಡ ಪ್ರಭುಗಳೇ , ಕಂಗ್ಲೀಷ್ ನಲ್ಲಿ ಲೇಖನ ಬರೆದು ಕೊಡಿ ಕನ್ನಡಕ್ಕೆ ತರುವ ಜವಾಬ್ದಾರಿ ನನ್ನದು" ಎನ್ನುತ್ತಿದ್ದರು.. ಎಲ್ಲರ ಮಾತಿಗೂ, ಅಪ್ಪಣೆಗೂ, ಬೆದರಿಕೆಗೂ, ಛೀಮಾರಿಗಳಿಗೂ "ದಿವ್ಯ"ಮೌನ ವಹಿಸಿದ್ದೆ.

 

ಹೊಸ ಕೆಲಸ ಹುಡುಕುವ ಗೋಜಿನಲ್ಲೇ ಇವರುಗಳೆಲ್ಲರ ಬ್ಲಾಗುಗಳನ್ನು ಓದುತ್ತಿದ್ದೆ. ಓದುವುದು ಕಮೆಂಟಿಸುವುದು ಇಷ್ಟಕ್ಕೆ ಸೀಮಿತವಾಗಿತ್ತು ನನ್ನ ಬರವಣಿಗೆ. ಇತ್ತ ಅರುಣ consistent ಆಗಿ ಪರಿಸರಪ್ರೇಮಿ ಮತ್ತು Speaktonature ನಲ್ಲಿ ಯಾವುದೇ ಅಡೆ ತಡೆಯಿಲ್ಲದೆ ಅಂಕಣಗಳು ಹೊರಹೊಮ್ಮುತ್ತಿತ್ತು, ಲಕ್ಷ್ಮಿಯಂತೂ 5-6 ಬ್ಲಾಗುಗಳನ್ನು ನಿಭಾಯಿಸುತ್ತಿದ್ದರು, ವಾರಕ್ಕೆ ಎರಡರಂತೆ ಲೇಖನಗಳು ಬರುತ್ತಿದ್ದವು, ಚಾಟ್ ಗೆ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ update ಸರಮಾಲೆ ಹೇಳುತ್ತಿದ್ದರು. ಶ್ರೀಕಾಂತ ಆಗಾಗ್ಗೆ

ವೈಚಾರಿಕ ಲೇಖನಗಳನ್ನು ಹರಿಯಬಿಡುತ್ತಿದ್ದ ಮತ್ತು ಶ್ರೀನಿವಾಸ ಆಂಗ್ಲಭಾಷೆಯಲ್ಲಿ ಬರೆಯಲು ಶುರುಮಾಡಿದ್ದ. ಅರೆರೆ ನನ್ನ ಗೆಳೆಯರೆಲ್ಲಾ ಬರೆಯುತ್ತಿದ್ದಾರೆ, ಒಂದರ ಮೇಲೊಂದಂತೆ ಒಂದರ ಮೇಲೊಂದಂತೆ. ಏನಾದರಾಗಲಿ ಕುಪ್ಪಳ್ಳಿ ಪ್ರವಾಸ ಕಥನವನ್ನು ಮುಗಿಸಿಯೇ ಬಿಡುವ ಎಂದು ಕೂತು 10ಸಾಲುಗಳಿಂದ 20ಸಾಲಿಗೆ ಏರಿಸಿಬಿಟ್ಟೆ, ಆ ಜೋಷ್ ನಲ್ಲಿ, ಅಷ್ಟೇ ಅದು ಅಲ್ಲಿಗೆ ನಿಂತುಬಿಟ್ಟಿತು, ಅರುಣನಿಗೆ ಹೇಳಿದೆ "ಕುಪ್ಪಳ್ಳಿ ಲೇಖನ ಬರೀತಿದೀನಿ ಕಣೊ" ಎಂದು ಹಲ್ಲುಕಿರಿಯುತ್ತ. ಯಥಾಪ್ರಕಾರ ಬೈದು ಹೂಂಕರಿಸಿ ಸುಮ್ಮನಾದ. ಈ "ಕುಪ್ಪಳ್ಳಿ" ಪ್ರವಾಸ ಕಥನಕ್ಕೆ ಅರುಣನಿಂದ ಕಾಫಿಯಲ್ಲಿ ವಿಷಬೆರಕೆ ಶ್ರೀಕಾಂತನಿಂದ ಕೊಲೆಬೆದರಿಕೆ ಎಲ್ಲವನ್ನು ಎದುರಿಸಿದ್ದೇನೆ, ಏಕೋ ಏನೋ ಅದು ಅದು ಮುಂದೆ ಹೋಗುತ್ತಿಲ್ಲ ಕರ್ಮಕಾಂಡ ಬ್ಲಾಗಿಗೆ ಅಲಂಕರಿಸುವ ಯೋಗ ಎಂದಿದೆಯೋ??

 

ಮತ್ತೆ ಅದೇ ಪ್ರಶ್ನೆಗೆ ಬರೋಣ, ನಾನೇಕೆ ಬರೆಯುತ್ತಿಲ್ಲ?? ಕಾರಣಗಳು ಹಲವಾರು. ಹೊಸಕೆಲಸ ಹುಡುಕುವುದೇ ಮುಖ್ಯವಾಗಿತ್ತು, ಈಗ ಮಾಡುತ್ತಿದ್ದ ಕೆಲಸ ಅನುಕೂಲಕರವಾಗಿರದುದ್ದರ ಪರಿಣಾಮ ಹೊಸತನ್ನು ಹುಡುಕಲೇ ಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ಸಂದರ್ಶನಗಳಿಗೆ ಅಣಿಯಾಗುತ್ತಲಿದ್ದೆ ಇಷ್ಟು ದಿನವೂ, ಅದಕ್ಕಾಗಿ ಬರವಣಿಯೆಡೆಗೆ ಬರಲಾಗಲಿಲ್ಲ. ಮುಂದಿನ ತಿಂಗಳಿಂದ ಬೇರೆ ಕಂಪೆನಿಗೆ ಹೋಗಲಿದ್ದೇನೆ. ಏಲ್ಲೋ ನಡೆದು ಹೋಗುತ್ತಿರುವಾಗ, ಬೈಕ್ ಓಡಿಸುತ್ತಿರುವಾಗ, ಇನ್ನೇನು ನಿದ್ದೆ ಹತ್ತುತ್ತಿದೆ ಅನ್ನುವಾಗ ಪುಂಖಾನುಪುಂಖವಾಗಿ ಲೇಖನಗಳು ಬಂದಿವೆ, ಎಷ್ಟು ಕೊರೆತ ಎಂದರೆ ಬರೆದುಬಿಡಲೇ ಬೇಕು ಎಂದು ತಡಬಡಿಸಿ ಸಿಸ್ಟಮ್ ಮುಂದೆ ಕೂತ ಕೂಡಲೇ ಎಲ್ಲವೂ ಖಾಲಿ ಖಾಲಿ. ಹೀಗೆಷ್ಟು ಬಾರಿ ಆಗಿದೆಯೋ ಲೆಕ್ಕವಿಟ್ಟಿಲ್ಲ. ಬರೆಯಬೇಕು ಅನಿಸಿದಾಗಲೆಲ್ಲ ಬರೆದುಬಿಟ್ಟಿದ್ದರೆ ಅದರ ಕತೆಯೇ ಬೆರೆಯದಾಗಿರುತ್ತಿತ್ತು, ಸುಮ್ಮನೇ ಶೀರ್ಷಿಕೆಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದೆ. ನನ್ನ ಕನ್ನಡ ಕೈಬರಹ ಯಾವುದೇ ಗುಪ್ತಭಾಷೆಗೂ ಕಮ್ಮಿಯಿಲ್ಲದುದ್ದರ ಕಾರಣ ಪೆನ್ನು ಹಿಡಿದು ಪೇಪರಿನ ಮೇಲೆ ಬರೆಯುವ ದುಸ್ಸಾಹಸ ಮಾಡಲಿಲ್ಲ. ಈಗಲೂ ಸಾಕಷ್ಟು ಶೀರ್ಷಿಕೆಗಳು ಹರಿದಾಡುತ್ತಿವೆ. "ನಾನೇಕೆ ಬರೆಯುತ್ತಿಲ್ಲ" ಎಂದು ಮತ್ತೆ ಬರವಣಿಗೆ ಶುರು ಮಾಡಿದ್ದೇನೆ.

 

ನಿಮ್ಮ ಹಾರೈಕೆಯಿರಲಿ. 

ಸೈಕೊ....

Sunday, September 14, 2008

ಚಿತ್ರ ಬಿಡುಗಡೆಯಾಗಬೇಕಿದೆ, ಅಪಾರ ನಿರೀಕ್ಷೆ ಹೊತ್ತಿದ್ದೇನೆ ಚಿತ್ರದ ಬಗ್ಗೆ, ಜಯಂತ್ ಕಾಯ್ಕಿಣಿ ಯುಗಳಗೀತೆಗಳ ರಚನಾಕಾರರಾಗಿ ಹೊರಹುಮ್ಮುತ್ತಿದ್ದಾರೆ.

ನನಗೆ ಬಹಳ ಇಷ್ಟವಾದ ಹಾಡೊಂದನ್ನು ನಿಮ್ಮ ಮುಂದಿರಿಸಿದ್ದೇನೆ. ಗುನುಗಿಕೊಳ್ಳಿ....

 

ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು

ಅನುರಾಗದಲ್ಲಿ ಹೊಳೆ ಹೊಳೆಯುತ ನಸು ನಾಚಿ ನಿಂದಿರಲು ನೀನು

ಮರುಳಾದೆ ದಿವ್ಯಸಖಿ ನಿನಗೆ ಪ್ರಣಾಮ, ಅಪರೂಪ ರೂಪಸಿಯೇ ನಿನಗೆ ಪ್ರಣಾಮ

 

ತಂಗಾಳಿಯಂತೆ ಸುಳಿ ಸುಳಿಯುತ ಆವರಿಸಿಕೊಂಡಿರಲು ನೀನು

ಕುಡಿನೋಟದಲ್ಲೆ ನುಲಿ ನುಲಿಯುತ ನೀವರಿಸಿನಿಂದಿರಲು ನೀನು

ಮನಸೋತೆ ಮೋಹಿತನೆ ನಿನಗೆ ಪ್ರಣಾಮ, ಹಿತವಾದ ಸ್ನೇಹಿತನೆ ನಿನಗೆ ಪ್ರಣಾಮ

 

ಕನಸಲ್ಲು ಹುಚ್ಚನಂತೆ ನಿನಗಾಗಿ ಓಡುವೆ, ಮೈಮರೆತು ಸಂತೆಯಲ್ಲೂ ನಿನ್ನನ್ನೆ ಕೂಗುವೆ

ಒರಗಿರಲು ನಿನ್ನ ಮಡಿಲಲಿ

ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ, ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಜೀಕುವೆ

ನೀನಿರಲು ನನ್ನಾ ಕತೆಯಲಿ

 

ನಾನಿರುವೆ ನಿನ್ನಾ ಜೊತೆಯಲಿ

 

ಬೆಳದಿಂಗಳಂತೆ ಮಿನು ಮಿನುಗುತ ||

 

 

ಕಣ್ತುಂಬ ನಿನ್ನ ಅಂದ ಸವಿಯುತ್ತಾ ಕೂಡಲೇ, ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೇ

ನೀನಿರಲು ನನ್ನಾ ತೊಳಲಿ

ನಾನೆಂದು ನೋಡದಂತ ಬೆಳಕೊಂದು ಮೂಡಿದೆ ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ

ಕೈಯಿರಲು ನಿನ್ನಾ ಕೈಯಲಿ

 

ನಾನಿರುವೆ ನಿನ್ನಾ ಬಾಳಲಿ

 

ಬೆಳದಿಂಗಳಂತೆ ಮಿನು ಮಿನುಗುತ ||

 

 

ಶೋ.....ಗಳು

Tuesday, June 10, 2008

ಟೀವಿ ವಾಹಿನಿಗಳಲ್ಲಿ ಒಂದು ಕಾರ್ಯಕ್ರಮ ಸ್ವಲ್ಪ ಯಶಸ್ಸು ಗಳಿಸಿದರೆ ಅದನ್ನೇ ಅನುಸರಿಸಿ ಬೇರೆ ವಾಹಿನಿಗಳಲ್ಲಿ ಶುರುವಿಕ್ಕುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಈ ಟೀವಿಯಲ್ಲಿ ಪ್ರಸಾರವಾಗುವ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮ. ಎಂದು ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಂದ ಹಾಡಿಸಲು ಶುರು ಮಾಡಿದರೋ ಬೇರೆ ವಾಹಿನಿಗಳಲ್ಲೂ ಸಹ ಇದೇ ರೀತಿಯ ಕಾರ್ಯಕ್ರಮಗಳನ್ನು ಶುರು ಮಾಡಿದರು. ಈಗ ಯಾವ ಚಾನೆಲ್ ನೋಡಿದರೂ ಇದೇ ಕಾರ್ಯಕ್ರಮಗಳು. ತೀರ್ಪುಗಾರ ವೈವಿಧ್ಯಮಯ ತೀರ್ಪು, ಮಕ್ಕಳ ಕಾಂಪಿಟೇಶನ್, ಹೆತ್ತವರ ಉದ್ವೇಗ, ಚಪ್ಪಾಳೆ. ಎಲ್ಲವೂ ವಾರಕ್ಕೆ ಒಮ್ಮೆ ಬಂದರೆ ಚೆನ್ನ, ದಿನಾ ಅದೇ ಆಗಿಹೋದರೆ ಬೋರ್ ಹೊಡೆಸುತ್ತದೆ.

ಕಾರ್ಯಕ್ರಮದ ಉದ್ದೇಶ ಒಳ್ಳೆಯದೇ ಇರಬಹುದು, ಬಾಲ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ನಿಜಕ್ಕೊ ಶ್ಲಾಘನೀಯ. ಎಲ್ಲವೂ ಹಾಡು ಹಾಡುವುದಕ್ಕೆ ಏಕೆ ಕೇಂದ್ರೀಕೃತವಾಗಿದೆ? ಏಕೆ ಇದೇ ವಾಹಿನಿಗಳು ಚಿತ್ರ ಬರೆಯುವುದಕ್ಕೆ, ಕತೆ, ಕವನ ಹೇಳುವುದಕ್ಕೆ, ವೀಣೆ, ತಬಲ, ಕೊಳಲು ಇನ್ನು ಅನೇಕ ಸಂಗೀತ ಸಾಧನಗಳನ್ನು ನುಡಿಸುವುದಕ್ಕೆ, ಏಕಪಾತ್ರಾಭಿನಯ ಮಾಡುವುದಕ್ಕೆ ದೊಡ್ಡ ಮಟ್ಟದಲ್ಲಿ ವೇದಿಕೆ ಏಕೆ ಎರ್ಪಡಿಸಬಾರದು? ಟೀವಿ ವಾಹಿನಿಗಳನ್ನ ನಡೆಸುವವರಿಗೆ ಇದೂ ಕೂಡ ಹೊಳೆಯುವುದಿಲ್ಲವೆ?

ಎಲ್ಲರೂ ಒಂದಕ್ಕೆ ಏಕೆ ಗಂಟು ಬೀಳುತ್ತಾರೆ?

ಇವರುಗಳು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಜನರನ್ನು ತಮ್ಮ ವಾಹಿನಿಯೆಡೆಗೆ ಸೆಳೆಯುವುದೇ ಆಗಿದೆ. ಅದಕ್ಕೆ ಯಶಸ್ಸಿನ ಜಾಡನ್ನೇ ಹಿಡಿಯುತ್ತಾರೆ. ಇನ್ನೂ ಪ್ರವರ್ಧಮಾನಕ್ಕೆ ಬರದ ಹಾಡುಗಾರರೆಲ್ಲರೂ ಆಗಲೇ ಈ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಬಿಟ್ಟಿದ್ದಾರೆ, ಅವರಿಗೆ ಸಂಗೀತವಾದರೂ ಎಷ್ಟರ ಮಟ್ಟಿಗಿದೆ? ಹಾಡುವ ಮಕ್ಕಳನ್ನು ಅಳೆಯಲು ನಿಜವಾಗಲು ಅವರಿಗೆ ಅರ್ಹತೆ ಇದೆಯೆ? ಸುಮ್ಮನೆ ಸ್ಟಾರ್ ಗಳನ್ನು ತಂದು ಕೂರಿಸಿರುತ್ತಾರೆ. ಈ ಕಾರ್ಯಕ್ರಮಗಳಿಗೆ ಬರುವವರೆಲ್ಲರೂ Celebrityಗಳೇ ಆಗಿರುತ್ತಾರೆ. ಇನ್ನು ತೀರ್ಪು ನೀಡುವ ಸಂಧರ್ಭಗಳಲ್ಲಿ ಎಲ್ಲ ವಾಹಿನಿಗಳಲ್ಲೂ ಒಂದೇ ರೀತಿಯ ಸಂಭಾಷಣೆಗಳು. "ಇಲ್ಲಿ ಯಾರೂ ಸೋತಿಲ್ಲ, ಯಾರೂ ಗೆದ್ದಿಲ್ಲ, ಎಲ್ಲರೂ ಚೆನ್ನಾಗಿಯೇ ಹಾಡಿದ್ದಾರೆ, ನನಗೆ ತೀರ್ಪು ನೀಡುವುದಕ್ಕೆ ನಿಜವಾಗಲೂ ಕಷ್ಟವಾಗುತ್ತಿದೆ" ಎಂದು ಹೇಳುತ್ತಲೆ ಒಬ್ಬರಿಗೆ ಪ್ರಶಸ್ತಿ ನೀಡುತ್ತಾರೆ.

ಇನ್ನು ಕೊನೆ ಸುತ್ತಿನಲ್ಲಿ ಪ್ರಶಸ್ತಿ ಕಳಕೊಂಡ ಮಕ್ಕಳು ಅಳುವುದು ಸಹಜ. ಆದರ ಅವರ ಪೋಷಕರೂ ಸಹ ಅಳುತ್ತಿರುತ್ತಾರೆ. feelings ಅರ್ಥ ವಾಗುತ್ತದೆ ನನಗೆ ಆದರೂ ಹೀಗೆ ಅಳುವ ಮಕ್ಕಳ ಜೊತೆ ಅಳುವುದು ಉಚಿತವೆ? ಬಂದು ಮಕ್ಕಳ ಮೈದಡವಿ ಸಮಾಧಾನ ಮಾಡುವುದು ಬಿಟ್ಟು. ಒಮ್ಮೊಮ್ಮೆ ರೇಗಿ ಹೋಗುತ್ತದೆ ಇವೆಲ್ಲವನ್ನು ನೋಡಿದರೆ. ಚಾನೆಲ್ ಬದಲಾಯಿಸಿಬಿಡುತ್ತೇನೆ.

ಬರೀ ಇಂತಹ ಕಾರ್ಯಕ್ರಮಗಳನ್ನೇ ಮಾಡುವ ಬದಲು Discovery, National Geographic, Animal Planet, History ಚಾನೆಲ್ ನಲ್ಲಿ ಬರುವ ಕೆಲವು ಒಳ್ಳೆಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಸಾರ ಮಾಡಬಾರದೇಕೆ?? ಇನ್ನಾದರೂ ಪ್ರಮುಖ ವಾಹಿನಿಗಳು ಒಂದೇ ತೆರನಾದ ಕಾರ್ಯಕ್ರಮಗಳಿಗೆ ಜೋತು ಬೀಳದೆ ಬೇರೆಡೆಗೆ ಗಮನ ನೀಡಿದರೆ ಒಳಿತು.

"ಪಾಡವಾ ತೀಯಗಾ ಕಮ್ಮನಿ ಒಕ ಪಾಟ..."

ಮುಳ್ಳಯ್ಯನಗಿರಿ

ಕಡೇ ಘಳಿಗೆಯ ನನ್ನ ನಿರ್ಧಾರ ಒಂದು ಸುಂದರ ಚಾರಣ ಮಾಡಲು ಅನುವುಮಾಡಿಕೊಟ್ಟಿತು. ಹೋಗದೆ ಬರೀ ಚಿತ್ರಗಳನ್ನು ನೋಡಿದ್ದರೆ ಖಂಡಿತವಾಗಿ ಪರಿತಪಿಸುತ್ತಿದ್ದೆ, ಹೋಗಲಾಗಲಿಲ್ಲವೆಂದು. ಇಂತಹ ಒಂದು ಸುಂದರವಾದ ಸ್ಥಳಕ್ಕೆ ಕರೆದುಕೊಂಡು ಹೋದ ಅರುಣನಿಗೆ Thanks -u... ಇದುವರೆಗೂ ನಾನು ಮಾಡಿದ best trek ಇದು.


ಈ ಬಾರಿ ನಾವು ಹೋಗುತ್ತಿದ್ದ ಸ್ಥಳ "ಮುಳ್ಳಯ್ಯನಗಿರಿ", ಒಟ್ಟೂ ಐದು ಜನ, ನಾನು, ಅರುಣ್, ಶ್ರೀನಿವಾಸ್, ವಿವೇಕ್ ಮತ್ತು ನಾರಾಯಣ್. ನಾನು, ಅರುಣ್,ವಿವೇಕ್ ಬೆಂಗಳೂರಿನಿಂದ ಹೊರಟೆವು, ಶ್ರೀನಿವಾಸ್ ಮಂಗಳೂರಿನಿಂದ ಹೊರಟಿದ್ದ, ನಾರಯಣ್ ಮೈಸೂರಿನಿಂದ. ಎಲ್ಲರೂ "ಚಿಕ್ಕಮಗಳೂರು" ನಲ್ಲಿ ಭೇಟಿಯಾಗುವುದೆಂದು ನಿರ್ಧರಿಸಿದ್ದೆವು. ಶ್ರೀನಿವಾಸನು ಬೆಳಗಿನ ಜಾವ ಒಂದೂವರೆಗೆಲ್ಲ ಚಿಕ್ಕಮಗಳೂರು ಬಸ್ ನಿಲ್ದಾಣ ತಲುಪಿದ್ದುದ್ದರ ಕಾರಣ ಬಸ್ ನಿಲ್ದಾಣದ ವಲಯನ್ನು ಚೆನ್ನಾಗಿ "ಬೀಟ್" ಹಾಕಿದ್ದ, ಒಂದಷ್ಟು ಫೋಟೋಗಳೂ ಸಹ ಕ್ಲಿಕ್ಕಿಸಿದ್ದ. ಬೆಂಗಳೂರಿನಿಂದ ಹೊರಟ ನಾವು ಮೂವರೂ ಅವನನ್ನು ಮತ್ತು ನಾರಯಣನನ್ನು ಬೆಳಿಗ್ಗೆ 5:30ಗೆ ಅಲ್ಲೇ ಇದ್ದ ಹೋಟೆಲಿನಲ್ಲಿ ಉಪ್ಪಿಟ್ಟು ಸಮೇತರಾಗಿ ಎದುರುಗೊಂಡೆವು. ಶ್ರೀನಿವಾಸ ಬಂದ ಕೂಡಲೇ "ನಮ್ಮಗೆ ಕಾಯದೆ ತಿನ್ನಕ್ಕೆ ಕೂತಿದ್ದೀರೇನೋ" ಎಂದು ಹುಸಿ ಕೋಪವನ್ನು ಹೊರಸೂಸಿದ.
ಅಲ್ಲಿಂದ ಹೊರಬಂದು "ಬಾಬಾಬುಡನ್ ಗಿರಿ" ಬಸ್ ಗಾಗಿ ಬಂದು ನಿಂತೆವು. ಅಲ್ಲೇ ಒಂದು ಬಸ್ ಇನ್ನು 15-20ನಿಮಿಷದೊಳಗೆ ಹೊರಡಲು ಸಜ್ಜಾಗಿ ನಿಂತಿತ್ತು. ನಾವು ನಮ್ಮ ಟ್ರೆಕ್ ಬ್ಯಾಗುಗಳ ಸಮೇತ ಒಳ ಹೊಕ್ಕೆವು. ಕಂಡಕ್ಟರ್ ಮಹಾಶಯ ಬಂದು ನಿಮ್ಮ ಬ್ಯಾಗುಗಳನ್ನು ಟಾಪ್ ನಲ್ಲಿ ಹಾಕಿ ಎಂದ. ಒಬ್ಬರನ್ನೊಬ್ಬರು ಮುಖ ನೋಡಿ, ಬ್ಯಾಗ್ ಬಿದ್ದು ಗಿದ್ದು ಹೋದರೆ ಏನು ಗತಿ ಮತ್ತೆ ಮೇಲೆ ಬಹಳ ಒದ್ದೆ ಇದ್ದುದರ ಕಾರಣ ಈ ಬಸ್ ಮಿಸ್ ಮಾಡಲು ನಿರ್ಧರಿಸಿದೆವು. ಆದರೂ ಮನಸು ಒಪ್ಪದೆ ಅವರನ್ನು ಮುಂದಿನ ಬಸ್ ಬಗ್ಗೆ ವಿಚಾರಿಸಿದಾಗ 8:30ಗೆ ಎಂದ. ಲೇಟ್ ಆಗುತ್ತದೆಂದು ಮತ್ತೊಮ್ಮೆ ಬಸ್ ಬಳಿ ಬಂದು ನಿಂತೆವು, ಮತ್ತೊಮ್ಮೆ ಕಂಡಕ್ಟರ್ ಮಹಾಶಯ ಬಂದು ಬಸ್ ಟಾಪ್ ನಲ್ಲಿ ಕುಳಿತುಕೊಳ್ಳಿ ಎಂದ. ಬಸ್ ಟಾಪ್ ನಲ್ಲಿ ಪಯಣ ಎಂದು ತಿಳಿದ ಕೂಡಲೇ ಮಜವಾಗಿರುತ್ತದೆಂದು ಎಲ್ಲರೂ ಈ ಬಸ್ ಅನ್ನು ಮಿಸ್ ಮಾಡದಿರಲು ನಿರ್ಧರಿಸಿ ಮೇಲೆ ಹತ್ತಿ ಕುಳಿತೆವು. ಬಸ್ ಟಾಪ್ ಮೇಲೆ ಇದೇ ನನ್ನ ಮೊದಲ ಪಯಣ. ಬೆಳಗಿನ ಜಾವ ಆರುಗಂಟೆ ಹೊತ್ತಿನಲ್ಲಿ ಘಾಟ್ section ನಲ್ಲಿ ಒಂದೂವರೆಗಂಟೆ ಪಯಣ, ಯಾರಿಗುಂಟು ಯಾರಿಗಿಲ್ಲ. ಶ್ರೀನಿವಾಸನು ಬಸ್ ದಿಕ್ಕಿಗೆ ಮುಖ ಮಾಡಿದ್ದರೆ ನಾವೆಲ್ಲ ವಿರುದ್ದ ದಿಕ್ಕಿಗೆ ಮುಖ ಮಾಡಿ ಕುಳಿತಿದ್ದೆವು!!..ಅರುಣ ಬಿದ್ದುಕೊಂಡಿದ್ದ. ಶ್ರೀನಿವಾಸ ಬಸ್ ಹೋಗುತ್ತಿದುರ ದಿಕ್ಕಿಗೆ ಮುಖ ಮಾಡಿದ್ದಿದುರರಿಂದ ಯಾವುದಾದರು ಮರದ ಟೊಂಗೆಗಳು ನಮ್ಮ ತಲೆಗಳಿಗೆ ತಾಗುವಂತಿದ್ದರೆ ಎಚ್ಚರಿಸುತ್ತಿದ್ದ. ಆತ ಹೇಳಿದ ಕೂಡಲೇ ಶಿರಬಾಗಿಸಿಬಿಡುತ್ತಿದ್ದೆವು. ಹಿತವಾದ ಚಳಿಯಿತ್ತು. ಸುತ್ತಲೂ ಪರ್ವತ ತಪ್ಪಲು, ಪಯಣ ಅತ್ಯದ್ಭುತವಾಗಿತ್ತು, ಅನೇಕ ಫೋಟೊಗಳನ್ನು ಶ್ರೀನಿವಾಸನ ಮೊಬೈಲು ಮತ್ತು ವಿವೇಕನ ಕ್ಯಾಮೆರಾ ಸೆರೆ ಹಿಡಿದವು. ಮುಂಜಾವಿನ ಆಹ್ಲಾದಕರ ಪಯಣ ಮುಗಿಸಿ "ಬಾಬಾಬುಡನ್ ಗಿರಿ" ತಲುಪಿದೆವು. ಅಲ್ಲೇ "ದತ್ತ ಪೀಠ" ಇರುವುದೆಂದು ತಿಳಿಯಿತು, ಹೋಗಲಿಲ್ಲ. ಈ ದತ್ತ ಪೀಠದ ವಿಶೇಷತೆ ಎಂದರೆ ಹಿಂದೂಗಳು ಮತ್ತೆ ಮುಸ್ಲಿಮರು ಒಟ್ಟಿಗೆ ಭೇಟಿಕೊಡುವ ಸ್ಥಳ ಎಂದು ಅರುಣ ವಿವರಿಸಿದ.
ಅಲ್ಲಿಂದ "ಮಾಣಿಕ್ಯಧಾರ" ವನ್ನು ನೋಡಲು ಹೊರಟೆವು. ಸುಮಾರು 20ನಿಮಿಷಗಳ ನಡಿಗೆ. ಅಲ್ಲಿ ನೀರು ಬೀಳುವುದು ನೋಡಲು ಚೆನ್ನಾಗಿಯೇನೊ ಇದೆ, ಸಣ್ಣದಾಗಿ ಝರಿಯಂತೆ ಒಂದು ಬಂಡೆ ಮೇಲಿನಿಂದ ಬೀಳುತ್ತಿರುತ್ತದೆ. ಆದರೆ ಅದಕ್ಕೆ ಭೇಟಿ ನೀಡುವ ಜನಗಳು ಮಾತ್ರ ಆ ಜಾಗವನ್ನು ಗಬ್ಬೆಬ್ಬಿಸಿಬಿಟ್ಟಿದ್ದಾರೆ. ಸ್ನಾನ ಮಾಡಿದ ಮೇಲೆ ಅಲ್ಲೆ ಬಟ್ಟೆ ಬಿಸಾಕಬೇಕಂತೆ, ಒಳ್ಳೆ ತಿಪ್ಪೆಯಂತಿತ್ತು, ಒಂದಷ್ಟು ದುರ್ನಾತ ಬೆರೆ ಸೂಸುತ್ತಿತ್ತು, ಬೇಗ ಅದನ್ನು ವೀಕ್ಷಿಸಿ ಅಲ್ಲಿಂದ ಆದಷ್ಟು ಬೇಗ ಹೊರಡಲನುವಾದೆವು. ನಮ್ಮ ಪ್ಲಾನ್ ಇದ್ದದ್ದು ಮಾಣಿಕ್ಯಧಾರದಿಂದ ಬಾಬಾಬುಡನ್ ಗಿರಿ ಗೆ ವಾಪಸ್ ಬಂದು ಅಲ್ಲಿಂದ ಬಸ್ ಹಿಡಿದು ಸ್ವಲ್ಪ ದೂರ ಕ್ರಮಿಸಿ ಅಲ್ಲಿಂದ ಮುಳ್ಳಯ್ಯನಗಿರಿಗೆ ಚಾರಣ ಮಾಡುವೆದೆಂದಿದ್ದೆವು. ಮಾಣಿಕ್ಯಧಾರಾದ ಹೋಟೆಲೊಂದರಲ್ಲಿ ವೆಜಿಟಬಲ್ ಪಲಾವ್ ತಿಂದ ಮೇಲೆ ಮುಂಚೆ ಮಾಡಿದ್ದ ಪ್ಲಾನ್ ಅನ್ನು ಅಲ್ಲಿಗೆ ಡ್ರಾಪ್ ಮಾಡಲು ನಿರ್ಧರಿಸಿದೆವು. ಹೋಟೆಲಿನಲ್ಲಿ ಮನಸೋಇಚ್ಚೆ ತಿಂದ ಮೇಲೆ ಮಾಣಿಕ್ಯಧಾರದಿಂದಲೇ ಮುಳ್ಳಯ್ಯನಗಿರಿ ಗೆ ಚಾರಣಗೈಯ್ಯಲ್ಲು ನಿರ್ಧರಿಸಿದೆವು. ವೆಜಿಟಬಲ್ ಪಲಾವ್ ಬುತ್ತಿ ಕಟ್ಟಿಸಿಕೊಂಡು ಮುಳ್ಳಯ್ಯನಗಿರಿ ಕಡೆಗೆ ಹೊರಟೆವು.
ಅಲ್ಲಿಂದ ಸುಮಾರು 5-6 ಗಂಟೆಗಳ ಚಾರಣ ಮಾಡಿದೆವು, ಅದರ ವಿವರಣೆ ಕೊಡಲು ಪದಗಳಿಗೆ ತಡಕಾಡುತ್ತಿದ್ದೇನೆ, ಅಷ್ಟು ಸೊಗಸು, ಅಷ್ಟು ಸುಂದರ, ಅಷ್ಟು ರಮಣೀಯ, ಅಷ್ಟು ರುದ್ರ. ಸುತ್ತಮುತ್ತಲೆಲ್ಲವೂ ಹಸಿರುಮಯ. ನಮ್ಮ ಸದ್ದು ಬಿಟ್ಟು ಮಿಕ್ಕೆಲ್ಲವೂ ಶಾಂತ. ಬಹಳ ಆಹ್ಲಾದಕರವಾಗಿತ್ತು, ಬಿಸಿಲೂ ಕೂಡ ಅಷ್ಟಾಗಿರಲಿಲ್ಲ, ಮೋಡಗಳ ಮೇಲಿದ್ದೆವು. ಅಲ್ಲೆ ಪಕ್ಕದ ಬೆಟ್ಟದಲ್ಲಿ ಮಳೆಯಾಗುತ್ತಿತ್ತು, ಅತ್ತ ಕಡೆಯಿಂದ ಬೀಸುವ ಗಾಳಿ ಆ ಮಳೆಯ ಹನಿಗಳನ್ನು ನಮ್ಮ ಮೇಲೆ ಸಿಂಪಡಿಸುತ್ತಿದ್ದವು. ಸ್ವರ್ಗಸದೃಶವೇ ಸರಿ. ಒಂದಾದ ಮೇಲೊಂದು ಬೆಟ್ಟಗಳನ್ನು ಹತ್ತುತ್ತಿದ್ದೆವು, ಹಾಗೆ ಇಳಿಯುತ್ತಿದ್ದೆವು. ದೂರದಲ್ಲಿ ನಮ್ಮ ಗಮ್ಯ ಮುಳ್ಳಯ್ಯನಗಿರಿ ಕಾಣುತ್ತಲಿತ್ತು. ಹಿತವಾದ ತಂಗಾಳಿಯಲ್ಲಿ ನಿಧಾನವಾಗಿ ಸಾಗುತ್ತಿದ್ದೆವು. ಮಧ್ಯ ಒಂದು ಬೆಟ್ಟ ಬಹಳ ಕಡಿದಾಗಿತ್ತು, ಸ್ವಲ್ಪ ಆಯ ತಪ್ಪಿದರೂ ಪ್ರಪಾತಕ್ಕೆ ಬೀಳುವ ಸಂಭವ. ಹಿಂದೆಂದೂ ಈ ರೀತಿಯ ಸಾಹಸಗಳನ್ನು ಮಾಡಿರಲಿಲ್ಲ, ನಾವೆಲ್ಲರೂ ಆ ಕಡಿದಾದ ಜಾಗಗಳಲ್ಲಿ ಹತ್ತಿ ಇಳಿಯುತ್ತಿದ್ದು ನಮ್ಮ ಮನೆಯವರು ನೋಡಿದ್ದರೆ ನನ್ನ ಮುಖಸ್ತುತಿ ಮಾಡುತ್ತಿದ್ದರು. ಬಹಳ ರೋಮಾಂಚಕಾರಿಯಾಗಿತ್ತು, ಸಿಕ್ಕಾಪಟ್ಟೆ "ಎಂಜಾಯ್" ಮಾಡಿದೆ. ಎಲ್ಲ ಚಾರಣಗಳಲ್ಲೂ ಈ ರೀತಿಯ ಕಡಿದಾದ ಪ್ರದೇಶಗಳಿರಬೇಕು, ಮೈಯೆಲ್ಲ ಕಣ್ಣಾಗಿ ಬಹಳ ಎಚ್ಚರ ವಹಿಸಿ ಹತ್ತಿ ಇಳಿಯುವುದರಲ್ಲಿ ಬಹಳ ಥ್ರಿಲ್ಲ್ ಇರುತ್ತದೆ. ಶ್ರೀನಿವಾಸನ ಮೊಬೈಲು ಮತ್ತೆ ವಿವೇಕನ ಕ್ಯಾಮೆರ ಎಡೆಬಿಡದೆ ಅಲ್ಲಿ ಇದ್ದುದುವೆಲ್ಲದನ್ನು ದಾಖಲಿಸುವ ಯತ್ನದಲ್ಲಿದ್ದವು. ಅರುಣ ಮತ್ತೆ ಶ್ರೀನಿವಾಸ ಕನ್ನಡ ಹಾಡುಗಳನ್ನು ಆಂಗ್ಲೀಕರಿಸುವ ಯತ್ನದಲ್ಲಿದ್ದರು, ವಿವೇಕ್ ಹೇಳುವಂತೆ ಈ ಹಾಡುಗಳನ್ನೆಲ್ಲ ಬರೆದ ಸಾಹಿತಿಗಳು ಇವರೀರ್ವರ ಆಂಗ್ಲೀಕರಣ ಕೇಳಿದ್ದರೆ ಅಲ್ಲಿದ್ದ ಪರ್ವತವೊಂದರಿಂದ ಸಾಲು ಸಾಲಾಗಿ ಧುಮುಕುತ್ತಿದ್ದರು. ದಾರಿ ಉದ್ದಕ್ಕೂ ಎಡೆಬಿಡದೆ ಇವರೀರ್ವರ ಆಂಗ್ಲೀಕರಣ ಸಾಗುತ್ತಲೇ ಇತ್ತು. ಇನ್ನೇನು ಮುಳ್ಳಯ್ಯನಗಿರಿ ತಲುಪುವುದಕ್ಕೆ 10-15ನಿಮಿಷಗಳು ಇರುವಾಗ ಮಳೆ ಶುರುವಾಯಿತು. ಹಿಂದೆಂದೂ ಮಳೆಯಲ್ಲಿ ಚಾರಣ ಮಾಡಿರಲಿಲ್ಲ, ದಣಿದ ದೇಹಕ್ಕೆ ಮಳೆ ನೀರು ಬಿದ್ದಾಗ ಆಗುವ ಆನಂದ ವರ್ಣನಾತೀತ. ಬಾಟಲಿಗಳಲ್ಲಿ ತಂದ ಕುಡಿಯುವ ನೀರು ಖಾಲಿಯಾಗಿತ್ತು, ಮಳೆ ನೀರಿಗೆ ಬಾಯ್ತೆರೆದು ದಾಹ ನೀಗಿಸಿಕೊಳ್ಳುವ ಯತ್ನ ಮಾಡಿದೆ. ನಾನು , ವಿವೇಕ್ ಮತ್ತು ನಾರಯಣ್ ಮುಳ್ಳಯ್ಯನಗಿರಿ ತುದಿಯನ್ನು ಮೊದಲು ಮುಟ್ಟಿದೆವು, ಅಲ್ಲಿ ಯಾರೋ ನಿಂತಿದ್ದವರು ನಾವು ಬೆಟ್ಟ ಹತ್ತಿ ಬಂದಿದ್ದು ನೋಡಿ "ಎಲ್ಲಿಂದ ಬರುತ್ತಿದ್ದೀರಿ" ಎಂದರು..
ನಾನು "ಬಾಬಾ ಬುಡನ್ ಗಿರಿಯಿಂದ" ಎಂದೆ..
"ಹೇಗೆ" ಎಂದರು..
"ನಡಕೊಂಡು" ಎಂದೆ..

ಇಬ್ಬರೂ ಕಣ್ಣಗಲಿಸುತ್ತ ನಿಂತಿದ್ದರು.....ಅಷ್ಟರಲ್ಲಿ ಅರುಣ ಮತ್ತೆ ಶ್ರೀನಿವಾಸ ಒಡಗೂಡಿದರು...ಮುಂದೆ ಸಾಗಿದೆವು..
ಬೆಟ್ಟದ ಮೇಲೆ ಸಣ್ಣ ದೇವಸ್ಥಾನ ವಿದೆ, ಅದರ ಅರ್ಚಕರು ಅರುಣನಿಗೆ ಪರಿಚಯ, ಅವರ ಮನೆಯಲ್ಲೇ ಉಳಿದುಕೊಳ್ಳಲು ಅವಕಾಶವಿತ್ತರು. ಸಮಯ ಸುಮಾರು ಐದಿರಬಹುದು, ಮುಖ ತೊಳೆದು ಅವರು ಮಾಡಿಕೊಟ್ಟ ಅತ್ಯದ್ಭುತವಾದ ಕಾಫಿ ಕುಡಿದೆವು.. ಅಹಾ ಸೂಪರ್ ಕಾಪಿ...

ಸೂರ್ಯಾಸ್ತವನ್ನು ವೀಕ್ಷಿಸಿ ಮತ್ತೆ ಒಳಗೆ ಬಂದು ಕುಳಿತಿದ್ದೆವು, ಏನು ಮಾಡಬೇಕೆಂದು ತೋಚಲಿಲ್ಲ, ಮತ್ತೊಂದು ಸುತ್ತು ಕಾಪಿ ಕೇಳಲಾ ಎಂದು ಅರುಣನಿಗೆ ಕೇಳಿದೆ..

"ಹೋಗೊ ನಾಚಿಕೆ ಎಲ್ಲಾ ಬಿಟ್ಟು ಕೇಳು, ಏನು ಅನ್ಕೊಳಲ್ಲ ಮಾಡ್ಕೊಡ್ತಾರೆ" ಅಂದ...

ಹಾಗೆ ಅಳುಕುತ್ತಲೇ ಕೇಳಿದೆ.."ಆಂಟೀ ಇನ್ನು ಸ್ವಲ್ಪ ಕಾಫಿ ಬೇಕಿತ್ತು" ಎಂದು..

ಪಾಪ ಮಾಡಿಕೊಟ್ಟರು ಬೇಸರ ಪಟ್ಟಿಕೊಳ್ಳದೆ...ಮತ್ತೊಂದು ಸುತ್ತು ಕಾಫಿ ಸಮಾರಾಧನೆ ಸಾಗಿತು.

ಎಂಟೂವರೆಗೆಲ್ಲ ಊಟ ಮಾಡಿ ಮತ್ತೊಂದು ಸುತ್ತು ಹಾಕಲು ಹೊರ ಬಂದೆವು.

ಹೊರಗಡೆ ತುಂಬಾ ಚಳಿಯಿತ್ತು. ಆ ದೇವಸ್ಥಾನದ ದ್ವಾರದಲ್ಲಿ ಸ್ವಲ್ಪ ಜಾಗವಿತ್ತು, ಅಲ್ಲೆ ಟೆಂಟ್ ಹಾಕೋಣವೆಂದುಕೊಂಡೆವು, ಆದರೆ ರಾತ್ರಿ ಮಳೆ ಶುರುವಾದರೆ ತೊಂದರೆಯಾಗುವುದೆಂದು ಯೋಚಿಸಿ ಒಳಗಡೆಯೆ ಮಲಗಲು ಹೊರಟೆವು.
ರಾತ್ರಿ ಹೊತ್ತು ಆಕಾಶದ ತುಂಬಾ ಚುಕ್ಕಿಗಳ ಚಿತ್ತಾರ, ಎಲ್ಲೆಲ್ಲೂ ನಕ್ಷತ್ರಗಳು, ಹಿತವಾದ ಗಾಳಿ, ಆಗಾಗ್ಗೆ ಮಂಜು ಮುಸುಕುತ್ತಿತ್ತು, ನಗರ ಜೀವನ ಜಂಜಡಗಳಿಂದ ತಪ್ಪಿಸಿಕೊಂಡು ತಿಂಗಳಿಗೆ ಒಮ್ಮೆಯಾದರೂ ಇಲ್ಲಿಗೆ ಬರಬೇಕೇನಿಸುತ್ತಿತ್ತು. ಬೆಟ್ಟದ ಮೇಳಿಂದ ನೋಡಿದರೆ ಚಿಕ್ಕಮಗಳೂರು ಕಾಣಿಸುತ್ತಿತ್ತು, ಝಗಮಗಿಸುವ ದೀಪಗಳು, ಇಡೀ ಊರಿಗೆ ಕರೆಂಟ್ ಹೋದರೆ ನೋಡಲು ಹೇಗಿರುತ್ತದೆ ಎಂದು ಆಲೋಚಿಸುತ್ತ ಬಂದು ಮಲಗಿದೆ.

ಬೆಳಿಗ್ಗೆ ಅರುಣ ಎಬ್ಬಿಸಿದ್ದು ನೆನಪಿದೆ, "ಎಳೊ ಟೈಮ್ ಆಯ್ತು" ಎಂದು..ಆತನ ಮಾತಿಗೆ ಕಿವಿಗೊಡದೆ ಮತ್ತೆ ತಿರುಗಿ ಮಲಗಿಬಿಟ್ಟೆ.
ಆಮೇಲೆ ತಿಳಿಯಿತು ಸೂರ್ಯೋದಯಕ್ಕೆ ಎಬ್ಬಿಸಿದರು ಎಂದು..ಎಬ್ಬಿಸುವಾಗ ಒಬ್ಬರೂ ಹೇಳಲಿಲ್ಲ ಸೂರ್ಯೋದಯಕ್ಕೆ ಹೋಗುತ್ತಿದ್ದೆವೆಂದು, Hopeless fellows..
ನಾನು ಮತ್ತೆ ನಾರಾಯಣ್ ಸೂರ್ಯೋದಯವನ್ನು ಮಿಸ್ ಮಾಡಿದೆವು..

ಮುಂಜಾವಿನ ಕಾರ್ಯಗಳನ್ನು ಮುಗಿಸಿ ತಿಂದು ತಿಂದು ಮತ್ತೆ ಚಿಕ್ಕಮಗಳೂರಿಗೆ ಹೊರಟೆವು, downhill trek. ಯಾಕೋ ಕಾಲು ಹಿಡಿದುಕೊಂಡಿತ್ತು, ಇಳಿಯಲು ತುಸು ಕಷ್ಟವಾಗುತ್ತಿತ್ತು. ಬಹಳ ಸುಸ್ತಾಗುತ್ತಿತ್ತು ಕೂಡ.. ಕಾಫಿ ಏಸ್ಟೇಟ್ ನಡುವೆಯೆಲ್ಲ ಹಾದು ಹೋದೆವು. ಮಧ್ಯ ಮಧ್ಯ ಸಿಕ್ಕ ಸಣ್ಣ ಝರಿಗಳಿಂದ ನೀರು ಕುಡಿಯುತ್ತಾ, ದಾರಿ ಹುಡುಕುತ್ತ ಸಾಗುತ್ತಿದ್ದೆವು. ಮತ್ತೆ ಶ್ರೀನಿವಾಸ ಮತ್ತೆ ಅರುಣ ಆಂಗ್ಲೀಕರಣ ಶುರು ಹಚ್ಚಿಕೊಂಡಿದ್ದರು. ಸ್ವಲ್ಪ ದೂರ ನಡೆದು ಮುಖ್ಯರಸ್ತೆಗೆ ಬಂದು ಒಬ್ಬೊಬ್ಬರು ರಸ್ತೆಯ ಇಕ್ಕೆಲಗಳಲ್ಲಿ ಕುಳಿತುಬಿಟ್ಟೆವು, ಯಾವುದಾದರೂ ಗಾಡಿ ಬಂದರೆ ಹೋಗೋಣವೆಂದು. ಐದು ನಿಮಿಷ ಕಳೆಯುವುದರೊಳಗೆ ಲಗ್ಗೇಜ್ ಆಟೋ ನಮ್ಮನ್ನು ಹತ್ತಿಸಿಕೊಂಡಿತು, ಅದರಲ್ಲೆ ಮತ್ತೊಂದು ಫೋಟೋ ಸೆಷನ್ ಮುಗಿಸಿ ಚಿಕ್ಕಮಗಳೂರಿಗೆ ಬಂದೆವು...ಸಮಯ 12ಗಂಟೆ.

ಮಧ್ಯಾನ್ಹದ ಊಟ ಮುಗಿಸಿ ಎಲ್ಲರೂ ಬೀಳ್ಕೊಂಡೆವು. ಶ್ರೀನಿವಾಸ ಮಂಗಳೂರಿನ ಬಸ್, ನಾರಯಣ್ ಮೈಸೂರಿನ ಬಸ್ ಹತ್ತಿದರು. ನಾವು ಬೆಂಗಳೂರಿನ ಬಸ್ ಹತ್ತಿ ಕುಳಿತೆವು. ಸಂಜೆ 7ಕ್ಕೆ ಬೃಹತ್ ಬೆಂಗಳೂರಿಗೆ ಯಾವುದೇ ತೊಂದರೆಯಿಲ್ಲದೆ ತಂದು ಹಾಕಿತು ರಾಜಹಂಸ.

ನಮ್ಮ ನಮ್ಮ ಮನೆಗಳಿಗೆ ಬಂದು ಬೀಳಲು BMTC ಸಹಾಯ ಮಾಡಿತು. ಹೀಗೆ ಮುಗಿದಿತ್ತು "ಮುಳ್ಳಯ್ಯನಗಿರಿ" ಚಾರಣ.

ಸರಿಯಾಗಿ ಒಂದು ವರ್ಷವಾಗಿತ್ತು ನಾನು ಎರಡು ದಿನದ ಚಾರಣ ಮಾಡಿ, ಅದು ಮುಳ್ಳಯ್ಯನಗಿರಿ ಚಾರಣದೊಂದಿಗೆ ಮುಗಿಯಿತು. ಅದೇ ಬೆಂಗಳೂರು, ಅದೇ ಕಟ್ಟಡಗಳು, ಅದೇ traffic ಕಿರಿಕಿರಿ ಅದೇ ಆಫೀಸಿನ ಕೆಲಸದಿಂದ ಬೇಸೆತ್ತುಹೋಗಿದ್ದ ನನಗೆ ಸಿಕ್ಕಾಪಟ್ಟೆ relief ;-) ಕೊಟ್ಟ ಟ್ರೆಕ್ ಇದು. ಇದುವರೆಗೂ ಮಾಡಿದ best trek. ನನ್ನ ಜೊತೆಗೂಡಿದ ಎಲ್ಲರಿಗೂ ವಂದನೆಗಳು. ಈ ಚಾರಣದ ಹೆಚ್ಚಿನ ಫೋಟೊಗಳಿಗಾಗಿ ಕೆಳಕೊಟ್ಟಿರುವ ಮೈಲ್ ಗೆ ಮೈಲ್ ರವಾನಿಸುವುದು.