ರಿಸೆಷನ್ ಜಾರಿಯಲ್ಲಿದೆ...

Tuesday, May 19, 2009


ಹೌದು ಸದ್ಯಕ್ಕೆ ರಿಸೆಷನ್ ಜಾರಿಯಲ್ಲಿದೆ, ಅಮೇರಿಕಾದ 'ಅಣ್ಣ' ಸೀನಿದರೆ ಇಲ್ಲಿನವರಿಗೆಲ್ಲಾ ಚಳಿ ಜ್ವರ. ಇಡೀ ವಿಶ್ವವೇ ಆರ್ಥಿಕ ಹಿಂಜರಿತದ 'ಜರ್ಕ್' ನಲ್ಲಿರುವಾಗ ನಮ್ಮ ನಿಮ್ಮಂತಹ ಶ್ರೀಸಾಮನ್ಯರು ಏನು ತಾನೆ ಮಾಡಿಯಾರು? ಒಂದಾನೊಂದು ಕಾಲದಲ್ಲಿ software ಉದ್ಯೋಗಿಗಳು ಯಾವಾಗೆಂದರೆ ಆಗ ವಿಮಾನ ಹತ್ತಿ ಪರದೇಶಕ್ಕೆ ಹೋಗಿ ಬರುತ್ತಿದ್ದರು, ಈಗ ಯಾವಾಗ ಬೇಕಾದರೂ 'ಪಿಂಕ್ ಸ್ಲಿಪ್' ಪಡೆದು ಮನೆಗೆ ಬರುವಂತಾಗಿದೆ. 'ಬಯಸದೇ ಬರುವ ಭಾಗ್ಯ' ವನ್ನು ತಪ್ಪಿಸಿಕೊಳ್ಳಲು ಆದಷ್ಟು ಹೆಣಗುತ್ತಾರೆ. ಇನ್ನು ಹೆಚ್ಚಾಗಿ ರಿಸೆಷನ್ ಬಗ್ಗೆ ಮಾತನಾಡಿ ನಿಮ್ಮ ಬ್ಲಡ್ ಪ್ರೆಶರ್ ಏರಿಸುವುದಿಲ್ಲ, ನನಗೆ ಗೊತ್ತು ದಿನಾ ಆಫೀಸಿನಲ್ಲಿ ಇದರ ಬಗ್ಗೆ ಚರ್ಚೆ ಅಲ್ಲಲ್ಲಿ ಸಮಯ ಸಿಕ್ಕಾಗ ನಡೆಸುತ್ತಿರುತ್ತೀರಿ, ಮಿನಿ ಮೀಲ್ಸ್ ತಿನ್ನುವಾಗ, ಕೆಪಚ್ಚಿನೋ ಹೀರುವಾಗ, ಪಕ್ಕದ ಕ್ಯೂಬಿಕಲ್ ನಲ್ಲಿ ಗುಂಪು ಸೇರಿದಾಗ ಇವೇ ಮಾತುಗಳು ಎಂದು ನನಗೆ ಗೊತ್ತು, ಎಷ್ಟೇ ಆದರೂ ನಾವು 'ಮಧ್ಯಮ' ವರ್ಗದವರು, ಇದೆಲ್ಲವನ್ನು ಎದುರಿಸುವ ಛಾತಿಯನ್ನು ಆ ಬ್ರಹ್ಮ ಹುಟ್ಟುವಾಗಲೇ ನಮ್ಮ ರಕ್ತದಲ್ಲಿ ಮಿಕ್ಸ್ ಮಾಡಿ ಕಳುಹಿಸಿದ್ದಾನೆ ಎಂದು. ಆದರೂ ಇಂತಹ ಕಾಲದಲ್ಲಿ ನನ್ನದೊಂದಿಷ್ಟು ರಿಸೆಷನ್ ಟಿಪ್ಸ್. ನೋಡಿ ನಿಮ್ಮ ಅನುಕೂಲ ಹೇಗಿದೆಯೋ??


1)ನೀವು ಅತಿಯಾಗಿ ಫೋನಿನಲ್ಲಿ ಮಾತನಾಡುವುದಾದರೆ ಅದಕ್ಕಾಗಿ ನಾಲ್ಕಂಕಿಯ ಮೊತ್ತವನ್ನು ಪಾವತಿಸುವವರಾದರೆ ಮೊದಲು ಆ ಹುಚ್ಚಾಟವನ್ನು ಬಿಡಿ, ಗೂಗಲ್ ಟಾಕ್ ಎಂದು ಪುಟಾಣಿ ಅದ್ಭುತವಾದ software ವೇರ್ ಇದೆ, ಅದನ್ನು ಯಥೇಚ್ಚವಾಗಿ ಬಳಸಿ ನಿಮ್ಮ ಗೆಳೆಯರೊಡನೆ ಹರಟೆ ಹೊಡೆಯಲು, ಅದು ಬೋರಾದರೆ ಯಾಹೂ ಮೆಸ್ಸೆಂಜರ್ ಗೆ ಲಾಗಿನ್ ಆಗಿ ಸ್ಮೈಲೀ ಗಳನ್ನು ಹಾಕಿಕೊಂಡು ನಲಿಯಿರಿ.

2)ಫೋನ್ ಮಾಡಲೇ ಬೇಕೆನಿಸಿದರೆ ಆಫೀಸಿನ ನಂಬರಿನಿಂದ ಕರೆ ಮಾಡಿ.

3)ಟ್ರೆಕ್ಕು , ಟ್ರಿಪ್ಪು ಗಳನ್ನು ಪ್ರತೀ ವಾರಂತ್ಯ ಮಾಡುವವರಂತಾಗಿದ್ದರೆ ಮೊದಲು ಇರುವ ರಕ್ ಸ್ಯಾಕನ್ನು ಅಟ್ಟದ ಮೇಲಿಡಿ. 4೦೦ ಮರಗಳನ್ನು ಕಡಿಯಲು ಹೊರಟ್ಟಿದ್ದಾರೆ ಲಾಲ್ ಬಾಗಿನಲ್ಲಿ , ಹೋಗಿ ಮೊದಲು ನೋಡಿ, ಎಷ್ಟು ಬೇಗ ಆದರೆ ಅಷ್ಟು ಬೇಗ. ಯಾವತ್ತು ಧರಾಶಾಯಿಯಾಗುವವೊ?? ಅಂದಹಾಗೆ ಹಲಸೂರು ಕೆರೆಯನ್ನು ನೋಡಿದ್ದೀರ?? ವಾಟ್ ಅಬೌಟ್ ಬೆಳ್ಳಂದೂರ್ ಲೇಕ್? ಯಾವುದೋ ಊರಿನ ಯಾವುದೋ ಕಾಡನ್ನು ದುಡ್ಡು ತೆತ್ತು ದಡ್ಡರಾಗುವ ಮೊದಲು ಇವನ್ನು ನೋಡಿ.

4)'ಪ್ರೀತಿ' ಯಲ್ಲಿ ಬಿದ್ದಿದ್ದರೆ ಇಂದಿನಿಂದ 'ಏಳುವ' ಪ್ರಯತ್ನ ಮಾಡಿ. ಗರ್ಲ್ ಫ್ರೆಂಡ್ ಬಾಯ್ ಫ್ರೆಂಡ್ ಗಳಿಗೆ ದುಬಾರಿ ಗಿಫ್ಟ್ ಕೊಟ್ಟು ಕಂಡ ಕಂಡ ಕಡೆ ಸುತ್ತಿ ದುಡ್ಡು ಪೋಲು ಮಾಡಬೇಡಿ, ಗಿಫ್ಟಾಗಿ ಕತೆ, ಕವನಗಳನ್ನು ಬರೆದು ಕೊಡಿ, ಇಷ್ಟ ಪಟ್ಟಾರು. "ಯಾಕೆ ಜುಗ್ಗ ಆಗಿದ್ಯಾ" ಎಂದರೆ ಮುಂದೆ ನಮ್ಮ ಭವಿಷ್ಯಕ್ಕಾಗಿ ಹಣ ಕೂಡಿಡುತ್ತಿದ್ದೇನೆಂದು ಹೇಳಿ. 'ಕಾರ್ನರ್ ಹೌಸ್' ನಲ್ಲಿ ಐಸ್ ಕ್ರೀಮ್ ನೆಕ್ಕುವ ಬದಲು 'ಅರುಣ್' ಕಪ್ ಐಸ್ ಕ್ರೀಮ್ ತಿನ್ನುವುದು ಉತ್ತಮ. ವಿದ್ಯಾಬಾಲನ್ ಮತ್ತು ಮಾಧವನ್ ನಟಿಸಿರುವ 'ಏರ್ ಟೆಲ್' ನ ಹೊಸ ಜಾಹೀರಾತಿಗೆ ಮಾರುಹೋಗಿದ್ದರೆ ಈ ಪಾಯಿಂಟನ್ನು ಬಿಟ್ಟುಬಿಡಿ.

5)ವಾರಕ್ಕೊಮ್ಮೆ 'ಮದ್ಯ' ಪಾನ ಮಾಡಿ ತೂರಾಡುವವರು ತಿಂಗಳಿಗೊಮ್ಮೆ ತೂರಾಡಿದರೆ ಅವರಿಗೇ ಉತ್ತಮ. ಸೀಸೈಡ್, ಲೇಕ್ ಸೈಡ್ ಹೋಟೆಲುಗಳನ್ನು ಬಿಟ್ಟು ರೂಮುಗಳಲ್ಲಿ ಕುಡಿದು,ಉಪ್ಪಿನಕಾಯಿ ನೆಕ್ಕುವುದು ಲೇಸು.

6)ಆಫೀಸಿನಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸವೂ ನಿಮ್ಮ ಮ್ಯಾನೇಜರರ ದೃಷ್ಟಿಗೆ ಬೀಳಲಿ. ಪರ್ವಾಗಿಲ್ಲ ಹುಡುಗ ಕೆಲಸ ಮಾಡುತ್ತಿದ್ದಾನೆ ಎಂದು ಅನಿಸಿಕೊಂಡರೆ ನೀವು ಸೇಫ್ , ಅಪ್ಪಿ ತಪ್ಪಿಯೂ ಕೂಡ ಅವರ ಬಳಿ 'ಪಂಗಾ' ತೆಗೆದುಕೊಳ್ಳಬೇಡಿ.

7)ಮಲ್ಟೀಪ್ಲೆಕ್ಸ್ ಗಳಲ್ಲಿ ಸಿನೆಮಾ ನೋಡುವ ಅಭ್ಯಾಸವನ್ನು ಬಿಡಿ, ಬೆಂಗಳೂರಿನಲ್ಲಿ ಇನ್ನೂ ನಲವತ್ತು ರೂಪಾಯಿಗೆ(!!) ಸಿನೆಮಾ ತೋರಿಸುತ್ತಾರೆ, ಅಂತಹ ಥಿಯೇಟರ್ ಗಳನ್ನ ಹುಡುಕಿ. ಒಟ್ಟಿಗೆ ಮುಂದಿನ ವಾರವೇ ಹೋಗೋಣ.

8)ದುಡ್ಡು ಕೊಟ್ಟು ಪುಸ್ತಕ ಕೊಳ್ಳುವ ಅಭ್ಯಾಸವಿದ್ದರೆ , ಸದ್ಯಕ್ಕೆ ಮುಂದೂಡಿ. ಇದನ್ನು ನೀವು 'ಕನ್ನಡ' ಪುಸ್ತಕಗಳಿಗೆ ಅನ್ವಯಿಸದಿದ್ದರೆ ನಿಮಗೊಂದು ಸಲಾಂ. ನಮ್ಮ ಹಿಂದಿನವರ ಸಾಹಿತ್ಯ ನಿಮಗೇನು ಗೊತ್ತು ?, Old is gold -ಉ ತತ್ವಕ್ಕೆ ಬೆಲೆ ಕೊಟ್ಟು ಅವೆನ್ಯೂ ರಸ್ತೆಗೆ ಕಾಲಿಡಿ. ಅಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳು ದೊರೆಯುತ್ತವೆ, ಅವನ್ನೆಲ್ಲಾ ಓದಿ ಮುಗಿಸಿ. ಇಲ್ಲವಾದರೆ ನಗರ ಫುಟ್ ಪಾತ್ ನಲ್ಲೂ ನಡೆದಾಡಿದರೆ ನಿಮಗೆ ಸಾಕಷ್ಟು ಪುಸ್ತಕಗಳು ದೊರಕೀತು.

9)ಸಾಲ ಮಾಡಬೇಡಿ ಎಂದು ಹೇಳಬೇಕಾಗಿಲ್ಲ ಎಂದು ಭಾವಿಸುತ್ತೇನೆ.

10)ಕಾರು ಕೊಳ್ಳಲೇಬೇಕೆಂದು ಹಟ ಹಿಡಿದಿದ್ದರೆ 'ನ್ಯಾನೊ' ಕಡೆಗೆ ಗಮನ ನೀಡಿ.

ನನಗೆ ತೋಚಿದ್ದು ಇಷ್ಟು. ಇಷ್ಟನ್ನೂ ನೀವು ಯಥಾಪ್ರಕಾರವಾಗಿ ಪಾಲಿಸ ಹೊರಟರೆ ಅದು ನಿಮ್ಮ ಕರ್ಮ.

ಎಲ್ಲಾ ಟೈಮೂ...

Sunday, May 17, 2009

ಈ ಲೇಖನವನ್ನ ಪೂರಾ ಓದಿದ ಮೇಲೆ ಬಹಳಷ್ಟು ಜನರಿಗೆ ಅನ್ನಿಸುವುದಿಷ್ಟೆ "ಎಲ್ಲಾ ಟೈಮು....." , ಅದಕ್ಕೆಂದೇ ಇದೇ ಹೆಸರನ್ನು ಟೈಟಲಾಗಿಟ್ಟುಬಿಟ್ಟೆ. ಬಹಳ ಸಲ ನಾವೊಂದು ಅಂದುಕೊಂಡರೆ ಅದಿನ್ನೊಂದಾಗಿರುತ್ತದೆ, ಇಂತಹವುದೆಲ್ಲವನ್ನು ನೋಡಿದರೆ "ಎಲ್ಲಾ ಟೈಮೂ...." ಎಂದು ಸುಮ್ಮನಾಗಬೇಕಷ್ಟೆ


ಅರುಣನ ಮದುವೆ ಏಪ್ರಿಲ್ 16ರಂದು "ಹೊಳೆನರಸೀಪುರ"ದಲ್ಲಿದ್ದುದರಿಂದ ಶ್ರೀಕಾಂತ ಅದಕ್ಕೆ ಸರಿಯಾಗಿ ಒಂದು ತಿಂಗಳ ಮುಂಚೆಯೇ ಸಿದ್ಧತೆ ನಡೆಸಿದ್ದ !! "ನಾವೆಲ್ಲರೂ" ಅಲ್ಲಿಗೆ ಹೇಗೆ ತಲುಪುವುದು ಮತ್ತದರ ಟೈಮಿಂಗ್ಸ್ ವಿಷಯವಾಗಿ. "ಹಚ್ ಅಲಿಯಾಸ್ Vodafone ಪ್ರಕಾಶಿಸುತ್ತಲೇ ಇರುತ್ತದೆ" :-)


ಎಲ್ಲಾ ಜನರ ಲಿಸ್ಟ್ ರೆಡಿಯಾದಮೇಲೆ ಮೊದಲಿಗೆ "ಟಾಟಾ ಇಂಡಿಕಾ" ಬುಕ್ ಮಾಡಿದ್ದೆವು. ಲಿಸ್ಟ್ ಹಿಗ್ಗಿದುದರ ಪರಿಣಾಮವಾಗಿ "ಟವೇರಾ"ದಲ್ಲಿ "ಸವಾರಿ" ಮಾಡಬೇಕಾಯಿತು. ಶುಭಾಳನ್ನು ಬಸವೇಶ್ವರ ನಗರದಿಂದ ಹತ್ತಿಸಿಕೊಂಡು ಬೆಂಗಳೂರು ಮಹಾನಗರದಿಂದ ಹೊರಬರುವ ಹೊತ್ತಿಗೆ ಸಂಜೆ ಏಳಾಗಿತ್ತು. ಶ್ರೀಕಾಂತನ ಲೆಕ್ಕಾಚಾರ ಅದಾಗಲೇ ಲೆಕ್ಕ ತಪ್ಪಿತ್ತು. "ಟವೇರಾ" ದಲ್ಲಿದ್ದಿದ್ದು ನಾವು ಒಟ್ಟು ಏಳು ಜನ. ನಾನು, ಶ್ರೀಕಾಂತ, ಶುಭಾ, ಶ್ರುತಿ ಶರ್ಮಾ, ಅರ್ಜುನ್, ಹರೀಶ್ ಮತ್ತೆ ಗೋವಿಂದರಾಜ್. ಡ್ರೈವರ್ ಸೇರಿಸಿ ಒಟ್ಟು ಎಂಟು. ಎಲ್ಲರ ಪರಿಚಯ ಮಾಡಿಕೊಂಡು ಹೋಗುತ್ತಾ ಶ್ರುತಿ "ಮೂಕಾಭಿನಯ" ಆಡುವುದೋ ಅಥವಾ "ಅಂತ್ಯಾಕ್ಷರಿ" ಆಡುವುದೋ ಎಂಬುದರ ಸಲುವಾಗಿ ಎಲ್ಲರನ್ನು ಕೇಳುತ್ತಿದ್ದಳು. ಡ್ರೈವರ್ ಮಹಾಶಯ ತನ್ನ ಕಿರಿಕಿರಿಯನ್ನು ಆರಂಭಿಸಿದ್ದ. ಗಾಡಿಯ ಸೌಂಡ್ ಸಿಸ್ಟಮ್ ಸರಿ ಇರಲಿಲ್ಲವೆಂದು ತೊರುತ್ತದೆ, ಮುಂದೆ ಕೂತವರಿಗೆ ಯಾವ ಹಾಡು ಬರುತ್ತಿದೆ ಎನ್ನುವುದು ಕೂಡ ಗೊತ್ತಾಗುತ್ತಿರಲಿಲ್ಲ. ಈ ಮಹಾಶಯ ಇದ್ದಕ್ಕಿದ್ದ ಹಾಗೆ ಸೌಂಡ್ ಜಾಸ್ತಿ ಮಾಡಿಬಿಡುತ್ತಿದ್ದ, ಹಿಂದಿನಿಂದ ಶರ್ಮಾ ನನ್ನನ್ನು ತಿವಿಯುತ್ತಿದ್ದಳು, "ಸೌಂಡ್" ಸಲ್ಪ ಕಮ್ಮಿ ಮಾಡು ಎಂದು. ಇಲ್ಲಿ ಸೌಂಡ್ ಜಾಸ್ತಿ ಮಾಡಿದರೆ ಹಿಂದೆ ಕೂತವರಿಗೆ "ಧೋಮ್ ಧೋಮ್" ಸದ್ದು. ಸೌಂಡ್ ಕಮ್ಮಿ ಮಾಡಿದ ಸಲ್ಪ ಹೊತ್ತಿನಲ್ಲೇ ಮತ್ತೆ ಏರಿಸಿಬಿಡುತ್ತಿದ್ದ. "ನೈಸ್" ರೋಡಿನಲ್ಲಿ ನೈಸಾಗಿ ಜಾರಿ, ನೆಲಮಂಗಲದ ಟ್ರಾಫಿಕ್ ಕಿರಿಕಿರಿ ಅನುಭವಿಸಿ ಊರು ಬಿಡುವ ಹೊತ್ತಿಗೆ ಕತ್ತಲಾಗಿತ್ತು. "ಮೂಕಾಭಿನಯ" ದ ಆಟ ಸಾಗುತ್ತಲೇ ಇತ್ತು. ಆದರೆ ತೊಂದರೆಗಿಟ್ಟುಕೊಂಡ ವಿಷಯವೆಂದರೆ ಡ್ರೈವರನೂ ಕೂಡ ನಮ್ಮ ಆಟದಲ್ಲಿ ಭಾಗವಹಿಸಿದ್ದು!!. ನಾನು ಡ್ರೈವರ್ ಪಕ್ಕದಲ್ಲಿ ಕೂತಿದ್ದೆ, ನಾನು ಮಾಡುವ "ಮೂಕಾಭಿನಯ" ವನ್ನು ನೋಡುತ್ತ ಆತನೂ ಕೂಡ ಅದರಲ್ಲಿ ಭಾಗವಹಿಸುತ್ತಿದ್ದ!!. ಇದು ಒಳ್ಳೆ ಡ್ರೈವರನ ಲಕ್ಷಣವಂತೂ ಖಂಡಿತಾ ಅಲ್ಲ.



ಹೀಗೆ ಸಾಗುತ್ತಲೇ ಸುಮಾರು ಏಳೂ ಮುಕ್ಕಾಲಿರಬಹುದು, ಇದ್ದಕ್ಕಿಂದಂತೆ ಗಾಡಿಯ ವೇಗವನ್ನು ಕಮ್ಮಿ ಮಾಡಿ ಪಕ್ಕದಲ್ಲಿ ನಿಲ್ಲಿಸಿದ, ಮತ್ತೆ ಮತ್ತೆ ಶುರು ಮಾಡಲು ಯತ್ನಿಸಿದನಾದರೂ ಆಗಲಿಲ್ಲ. ಎಲ್ಲರ ಮುಖದಲ್ಲೂ ಆತಂಕದ ಗೆರೆಗಳು ಹೆದ್ದಾರಿಯಲ್ಲಿ ಒಡಾಡುತ್ತಿದ್ದ ಗಾಡಿಗಳ ಬೆಳಕಿನಿಂದ ಕಾಣುತ್ತಿತ್ತು. ಪ್ರಾಮಾಣಿಕವಾಗಿ ನನಗನ್ನಿಸಿದ್ದು ಯಾವುದೋ ಇದು ಡಬ್ಬಾ ಗಾಡಿ ಮತ್ತು ಬೇಜವಾಬ್ದಾರಿ ಡ್ರೈವರ್ ಎಂದು. ಯಾರ್ಯಾರಿಗೋ ಫೋನ್ ಮಾಡಿ ಆಯಿಲ್ ಲೀಕ್ ಆಗಿದೆ, ನೋಡಿಲ್ಲವಾ? ಚೆಕ್ ಮಾಡಿಲ್ಲವಾ? ಎಂದು ಜೋರಾಗಿ ಕೇಳುತ್ತಿದ್ದ . ಫೋನಿನ ಆಬದಿಯವರು ಎಲ್ಲಾ ಸರಿಯಾಗಿದೆ ಎಂದು ಹೇಳಲಿ ಎನ್ನುವದೇ ನನ್ನ ಆಶಯವಾಗಿತ್ತು, ಆದರೆ ಹಾಗಾಗಲಿಲ್ಲ. ಕಡೆಗೆ ನಮ್ಮೆಡೆಗೆ ತಿರುಗಿ "ಏನು ಆಗಿಲ್ಲ ಸಾರ್, ಟೆನ್ಷನ್ ಆಗ್ಬೇಡಿ" ಎಂದು ಹೇಳಿ ಕಿಸಕ್ಕನೆ ನಕ್ಕಿದ.



ಹಾಗೂ ಹೀಗೂ ಸ್ಟಾರ್ಟ್ ಮಾಡಿ ಗಾಡಿ ಮುಂದಕ್ಕೆ ಚಲಿಸತೊಡಗಿತು, ಅನತಿ ದೂರದಲ್ಲಿದ್ದ ಪೆಟ್ರೋಲ್ ಬಂಕಿನಲ್ಲಿ ಸಲ್ಪ ಆಯಿಲ್ ಕೊಂಡು ಮುಂದೆ ಹೊರಟೆವು. ಮತ್ತೆ ಎಲ್ಲೂ ಗಾಡಿ ನಿಲ್ಲದಿರಲಿ ಎಂದು ಎಲ್ಲರೂ ಒಕ್ಕೊರಲಿನಿಂದ ಪ್ರಾರ್ಥಿಸಿದ್ದರೋ ಏನೋ?? ಮತ್ತೆ ಗಾಡಿ ಕೆಡಲಿಲ್ಲ.. ಹೊಳೆನರಸೀಪುರದ ದಾರಿಯಲ್ಲಿ "ಮಂಗಳೂರು ಟೀಸ್ಟಾಲ್" ನಲ್ಲಿ ಟೀ ಕುಡಿದು ಸುಮಾರು 9 ರ ಹೊತ್ತಿಗೆ ಊಟಕ್ಕೆ ಗಾಡಿ ನಿಲ್ಲಿಸಿದೆವು(ಸ್ಥಳ ಮರೆತುಹೋಗಿರುವೆ). ಗಾಡಿ ಕೆಟ್ಟು ನಿಂತಾಗಲೇ ಶ್ರುತಿ ಶರ್ಮಾ ನನ್ನ ಬಳಿ ಬಂದು "ಈ ಡ್ರೈವರ್ ಸರಿ ಇಲ್ಲ, ಎಲ್ಲಾ ಮುಂಚೆಯೇ ಚೆಕ್ ಮಾಡ್ಕೋಬೇಕಿತ್ತು, ಈಗ ನೋಡಿದ್ರೆ ಹೀಗಾಗಿದೆ" ಎಂದು ಪೇಚಾಡುತ್ತಿದ್ದಳು, ಹಾಗೆ ಅದನ್ನು ಮುಂದುವರೆಸಿ "ನೀನು ಆಡುವುದನ್ನೇ ಈ ಡ್ರೈವರ್ ನೋಡ್ತಾನೆ ಇರ್ತಾನೆ, ಮುಂದೆ ನೋಡ್ಕೊಂಡ್ ಗಾಡಿ ಒಡ್ಸಲ್ಲ ಸರ್ಯಾಗಿ, ಆದ್ರಿಂದ ನೀನು ಆಟಗಳಿಂದ "ಔಟ್" ಎಂದಳು. ನನಗೂ ಸರಿಯೆನ್ನಿಸಿತು, ತೆಪ್ಪಗೆ ತಲೆಯಾಡಿಸಿದೆ.

ಕತ್ತಲು ಕವಿದುದ್ದರಿಂದ "ಮೂಕಾಭಿನಯ" ದಿಂದ "ಅಂತ್ಯಾಕ್ಶರಿ"ಗೆ ಶಿಫ್ಟ್ ಆಗಿದ್ದರು. ಹೆದ್ದಾರಿಯಲ್ಲಿ ಹರಿದಾಡುತ್ತಿದ್ದ ವಾಹನಗಳ ಬೆಳಕಿನಿಂದ ಇಕ್ಕೆಲಗಳಲ್ಲಿ ಕಾಣುತ್ತಿದುದ್ದನ್ನು ನನ್ನ ಕಣ್ಣು ಸುಮ್ಮನೆ ನೋಡುತ್ತಲಿತ್ತು. ಎಲ್ಲಾ ದೃಶ್ಯಗಳು ಒಂದೇ ತರವೇ ಆಗಿದ್ದರೂ ಕೂಡ ಮನಸ್ಸು ಹುಚ್ಚು ಕುದುರೆಯಂತೆ ಸಾವಿರ ದಿಕ್ಕಿನಲ್ಲಿ ಯೋಚಿಸುತ್ತಿತ್ತು. ಕೆಲವು ಕಡೆ ಹೆದ್ದಾರಿ ಬಹಳ ಅಚ್ಚುಕಟ್ಟಾಗಿತ್ತು, ಮತ್ತೆ ಕೆಲವು ಕಡೆ ವಿವರಿಸಲು ಆಗದಷ್ಟು ಹದೆಗೆಟ್ಟಿತ್ತು. ಅದ್ಯಾಕೆ ಹೀಗೆ ಮಾಡಿದಾರೋ ಎಂದು ಅರಿಯದಾದೆ.



ಹೊಳೆನರಸೀಪುರ ತಲುಪುವ ಹೊತ್ತಿಗೆ ರಾತ್ರಿ 11 ಗಂಟೆ ಆಗಿತ್ತು. ಅರುಣ ಮತ್ತೆ ಶ್ರೀನಿವಾಸ ಪಂಚೆಧಾರಿಗಳಾಗಿ ನಮ್ಮೆಲ್ಲರನ್ನು ಎದುರುಗೊಂಡರು . ಅರುಣ ಅಲಿಯಾಸ್ "ಮದುವೆ ಗಂಡು" ಕ್ಲೀನಾಗಿ ಕ್ರಾಪ್ ಕಟ್ ಮಾಡಿಸಿಕೊಂಡು ಮಂದಸ್ಮಿತನಾಗಿ ಚೈನು, ಉಂಗುರ ಧರಿಸಿ ಕೊಂಚ "ಭಿನ್ನ"ವಾಗಿ ನನಗೆ ತೋರಿದ. ರೇಖಾ ಮತ್ತೆ ಅರುಣ ಇಬ್ಬರು ಬಂದು ನಾವು ಉಳಿದುಕೊಳ್ಳಬೇಕಾದ ಜಾಗವನ್ನು ತೋರಿಸಿದರು. ಬರೀ ಸಿನೆಮಾಗಳಲ್ಲಿ ಈ ರೀತಿಯ ಮನೆಗಳನ್ನು ನೋಡಿದ ನಾನು ಅಲ್ಲಿ ಮಲಗುವುದಕ್ಕೆ ನಿಜಕ್ಕೂ ಉತ್ಸುಕನಾಗಿದ್ದೆ. ಹೆಚ್ಚಾಗಿ ನನ್ನನ್ನು ಆಕರ್ಷಿಸಿದ್ದು ಮನೆ ಜಗುಲಿ. ಶೌಚಕಾರ್ಯಗಳನ್ನು ಮುಗಿಸಿ ಬರುವ ಹೊತ್ತಿಗೆ ನಮಗೆ ಮಲಗಲು ನೀಡಿದ್ದ ಜಾಗ ಸಾಕಗುವುದಿಲ್ಲವೆನಿಸಿತು. ಗೋವಿಂದರಾಜ್, ಹರೀಶ್, ಅರ್ಜುನ್ ಒಂದು ಕಡೆ ಮತ್ತೆ ಶ್ರುತಿ, ಶುಭಾ ಇನ್ನೊಂದೆಡೆ ಮಲಗಲು ಅಣಿಯಾಗುತ್ತಿದ್ದರು. ಶರ್ಮಾ ತಂದಿದ್ದ ಒಂದು ಎಕ್ಸ್ಟ್ರಾ ಹೊದಿಕೆಯನ್ನು ಇಸಿದುಕೊಂಡು ನಾನು, ಶ್ರೀನಿವಾಸ ಮತ್ತೆ ಶ್ರೀಕಾಂತ ಅಲ್ಲಿಂದ ಕಾಲ್ತೆಗೆದವು. ಸಮಯ 11:30 ಆಗಿತ್ತೇನೋ. ಅಲ್ಲೇ ಮೂವರು ಮಲಗಿದೆವು, ಒಂದು ಹೊದಿಕೆ ಮೂವರಿಗೆ ಹೇಗೆ ತಾನೇ ಸಾಕಾದೀತು?
ನಾನೊಬ್ಬನೇ ಹೊದ್ದುಕೊಂಡು ಅಲ್ಲೇ ಮಲಗಿದೆ, ಪಾಪ ಶ್ರೀನಿವಾಸ ಕೇಳಲಿಲ್ಲ, ಅವನಿಗೆ ನಿದ್ದೆ ಬಂದರೆ ಅದು ಬೇಕಾಗುವುದಿಲ್ಲವೆಂದು ನನಗಿಂತ ಅವನಿಗೇ ಚೆನ್ನಾಗಿ ಗೊತ್ತಿತ್ತು. ಶ್ರೀಕಾಂತ ಕೇಳಿದನಾದರೂ "ತ್ಯಾಗ" ಮನೋಭಾವ ಅವನನ್ನು ಸುಮ್ಮನಿರಿಸಿತು ಎಂದು ನಾನೆಂದುಕೊಂಡೆ ;-) ನನ್ನ ಎತ್ತರದ ಬಗ್ಗೆ ನನಗೆ ಬಹಳಷ್ಟು ಬಾರಿ ಕಿರಿ ಕಿರಿ ಆಗಿದೆ, ಈ ದಿನವೂ ಅದೇ ಆಯಿತು. ಆ ಹೊದಿಕೆಯಿಂದ ಕಾಲು ಮುಚ್ಚಿದರೆ ಮುಖ ಮುಚ್ಚುತ್ತಿರಲಿಲ್ಲ, ಮುಖ ಮುಚ್ಚಿದರೆ ಕಾಲು ಮುಚ್ಚುತ್ತಿರಲಿಲ್ಲ. ಆ ಮನೆಯವರೆಲ್ಲರೂ ಸೊಳ್ಳೆ ಪರದೆಯಲ್ಲಿ ಮಲಗಿದುದ್ದನ್ನು ನೋಡಿದಾಗಲೇ ತಿಳಿದು ಹೋಯಿತು, ಸೊಳ್ಳೆ ಕಾಟವಿದೆಯೆಂದು. ಹೊರಗಡೆ ಮಲಗಿದ ಕೂಡಲೆ ಸೊಳ್ಳೆಗಳ ತಮ್ಮ ನಿತ್ಯ ವ್ಯವಹಾರ ಶುರು ಮಾಡಿದ್ದವು. ತಣ್ಣಗೇನೋ ಗಾಳಿಯಿತ್ತು, ಆದರೆ ಕಾಲಿಗೆ, ಕೈಗೆ, ಮುಖಕ್ಕೆ ಎಲ್ಲೆಂದರಲ್ಲಿ ಕಚ್ಚುತ್ತಿದ್ದ ಸೊಳ್ಳೆಗಳಿಂದ ನಿದ್ದೆ ಬರುವುದಾದರೂ ಹೇಗೆ ಸಾಧ್ಯ??



ಸುಮ್ಮನೆ ಹೊದಿಕೆಯನ್ನು ಸರಿ ಮಾಡಿಕೊಂಡು ಹೊರಳಾಡುತ್ತಿದ್ದೆ. ಇತ್ತ ಶ್ರೀಕಾಂತ, ಶ್ರೀನಿವಾಸನ ಸ್ಥಿತಿಯೂ ಅದೇ ಆಗಿತ್ತು. ಅದಾಗ್ಯೂ ನಾನು ಏನೋ ಒಂದು ಹೇಳಿದ್ದಕ್ಕೆ ಇಬ್ಬರೂ ಮಲಗಿದ್ದಲ್ಲೇ ಹೊರಳಾಡಿಕೊಂಡು ನಗಲು ಶುರು ಮಾಡಿದರು. ಸೊಳ್ಳೆಗಳ ಕಾಟ ಶ್ರುತಿ ಶರ್ಮಾ ಮತ್ತೆ ಅರ್ಜುನ್ ಗೂ ತಟ್ಟಿತ್ತು. ಅವರೂ ಸಹ ನಿದ್ದೆ ಬಾರದೆ ಹೊರಗಡೆ ಬಂದು ಜಗುಲಿಯಲ್ಲಿ ಕುಳಿತರು. ಹೊದಿಕೆಯನ್ನು ಮೈಯೆಲ್ಲ ಹೊದ್ದುಕೊಂಡು ಕೂತಿದ್ದೆ, ಆದರೂ ಅಲ್ಲಿ ಇಲ್ಲಿ ಕಚ್ಚುತ್ತಿದ್ದವು. ಐವರೂ ಅದೂ ಇದೂ ಅಂತ ಮಾತನಾಡುತ್ತಿದ್ದೆವು. ನಾವು ಕುಳಿತಿದ್ದ ಜಗುಲಿಯ ಎದುರುಗಡೆಯೇ ನಮ್ಮೊಡನೆ ಬಂದಿದ್ದ ಡ್ರೈವರ್ ತನ್ನ "ಟವೇರಾ" ದಲ್ಲಿ ಸುಖವಾಗಿ ನಿದ್ದೆ ಮಾಡುತ್ತಿದ್ದ. ಬಹಳ ಅಸೂಯೆಯಾಯಿತು. ಎದುರು ಮನೆಯವರೆಲ್ಲಾ "ಬೆಡ್ ಲೈಟ್" ಹೊತ್ತಿಸಿಕೊಂಡು ಮಲಗಿದ್ದು ಕಣ್ಣಿಗೆ ಬಿದ್ದು ಮತ್ತಷ್ಟು ಸಂಕಟವಾಗುತ್ತಿತ್ತು. ಮತ್ತೆ ಸುಮಾರು ಒಂದು ಗಂಟೆಗೆ ಎಲ್ಲರೂ ಮಲಗಲು ನಿರ್ಧರಿಸಿದೆವು. ಎಲ್ಲಿಯ ನಿದ್ದೆ?? ಹಾಗೂ ಹೀಗೂ ಆ ಹೊದಿಕೆಯಲ್ಲೇ ತೂರಿಕೊಂಡು ಒಂದು ಗುಬ್ಬಿ ನಿದ್ದೆ ತೆಗೆಯುವಲ್ಲಿ ಯಶಸ್ವಿಯಾಗಿದ್ದೆ. ಮಧ್ಯ ಇವರೀರ್ವರಿಗೂ ನಿದ್ದೆ ಬರದೆ "ಹೊಳೆನರಸೀಪುರ"ದ ರಸ್ತೆಗಳಲ್ಲಿ ಬೀಟ್ ಹಾಕಿಕೊಂಡು ಬಂದರಂತೆ. ನನಗೆ ಗೊತ್ತಾಗಲಿಲ್ಲ. ಮತ್ತೆ ಬಂದು ನಿದ್ದೆ ಮಾಡಲು ಯತ್ನಿಸಿದರಾದರೂ ಆಗಲಿಲ್ಲ.



ಬೀಟ್ ಮುಗಿಸಿಕೊಂಡು ಬಂದ ಶ್ರೀಕಾಂತನಿಗೆ "ತ್ಯಾಗ" ಭಾವ ಕಳಚಿ ಹೋಗಿತ್ತೆಂದೆನಿಸುತ್ತದೆ. ನನ್ನ ಹೊದಿಕೆಯನ್ನು ಕಿತ್ತುಕೊಂಡ. ಮತ್ತೆಲ್ಲಿಯ ನಿದ್ದೆ?? ಅವನಿಗೂ ನಿದ್ದೆ ಬರಲಿಲ್ಲ. ಸಮಯ ೪ಗಂಟೆ ಎಂದು ತೋರಿಸುತಿತ್ತು. ಒಳಗೆ ಮಲಗಿರುವವರೆಲ್ಲರೂ "ದಿವ್ಯ ಭವ್ಯ" ನಿದ್ದೆಯಲ್ಲಿರುವವರೆಂದು ನಾವೆಂದುಕೊಳ್ಳುವ ಹೊತ್ತಿಗೆ ಅರ್ಜುನ "ದರಿದ್ರ ಸೊಳ್ಳೆಗಳು" ಎನ್ನುತ್ತಾ ಹೊರಬಂದ. ರಾತ್ರಿ ಪೂರ ನಿದ್ದೆ ಆಗಲಿಲ್ಲವೆಂದು ತನ್ನ ಅಳಲು ತೋಡಿಕೊಂಡ. ಮತ್ತೆ ಎಲ್ಲರೂ ಬೀಟ್ ಹಾಕಲು ನಿರ್ಧರಿಸಿದೆವು. ಅಷ್ಟರಲ್ಲಿ ಕಾಫಿಗಾಗಿ ನನ್ನ ನಾಲಗೆ ಚಡಪಡಿಸುತಿತ್ತು. ಅರುಣನಿಗೆ ಮೆಸೆಜ್ ಕಳಿಸಿದೆ. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. "ಸಿಗುತ್ತೆ" ಅಂದಿದ್ದ. ದೇವೇಗೌಡರ ಪ್ರಭಾವೋ ಏನೋ ಅರುಣನ ಮೇಲೆ, ಅದು ಹುಸಿ ಆಶ್ವಾಸನೆ ಎಂದು ತಿಳಿಯಲು ಬಹಳ ಸಮಯ ಹಿಡಿಯಲಿಲ್ಲ.



ಮತ್ತೊಂದು ಸುತ್ತು ಮುಗಿಸಿ ಮತ್ತೆ ನಾವು ಉಳಿದು ಕೊಂಡಿದ್ದ ಜಾಗಕ್ಕೆ ಬಂದಾಗ ಐದು ಗಂಟೆ. ಸ್ನಾನಕ್ಕೆ ಹೊಳೆಗೆ ಹೋಗಲನುವಾದೆವು. ದಾರಿ ಕೇಳಿಕೊಂಡು ಹೋಗುವಾಗ ಅಲ್ಲೇ ಒಂದು ಸರ್ಕಲ್ಲಿನಲ್ಲಿ "ಮದುವೆ ಆಗ್ಬೇಡಿ ಸಾರ್" ಎಂದು ಆಣಿಮುತ್ತನ್ನುದುರಿಸುತ್ತಿದ್ದ. ಕುಡಿದಿದ್ದ ಎಂದು ಅವನ ಹಾವ-ಭಾವದಲ್ಲೇ ತಿಳಿಯಿತು. ಸ್ನಾನಕ್ಕೆಂದು ಹೊಳೆ ಬಳಿ ಬಂದಾಗ ಭಯಂಕರವಾದ ಸಹಿಸಲಸಾಧ್ಯವಾದ ಘಾಟು ಆ ಘಾಟಿನಲ್ಲಿ ಆವರಿಸಿಕೊಂಡಿತು. ಗಾಳಿ ಬೀಸಿದರೆ ದುರ್ನಾತ. ಅಲ್ಲೆ ಪಕ್ಕದಲ್ಲಿ 'ದಾನಿ'ಗಳು ಅಪಾರಪ್ರಮಾಣದಲ್ಲಿ ದಾನ ಮಾಡಿದ್ದುದರ ಪರಿಣಾಮ ಇದು(ಈ 'ದಾನಿ' ಪದಪ್ರಯೋಗ ಅರ್ಜುನನ ಅನ್ವೇಷಣೆ). ಆಗಸದಲ್ಲಿ ಇನ್ನು ಸೂರ್ಯ ಮೂಡಿರಲಿಲ್ಲ. 'ಹೇಮಾವತಿ' ಯಲ್ಲಿ ಮಿಂದಲು ಹೆದರಿಕೆಯಾಯಿತು. ಗೋವಿಂದರಾಜ್ ಮತ್ತು ಹರೀಶ್ ಸ್ನಾನ ಮಾಡುವ ನಿರ್ಧಾರವನ್ನು ಕೈಬಿಟ್ಟರು, ಹೊಳೆಯಲ್ಲಿ. ನಾನು ಮತ್ತೆ ಅರ್ಜುನ್ ಸೂರ್ಯನ ಆಗಮನಕ್ಕಾಗಿ ಎದುರು ನೋಡುತ್ತಿದೆವು. ಶ್ರೀನಿವಾಸ ಮತ್ತು ಶ್ರೀಕಾಂತ ಕತ್ತಲೆಯಲ್ಲಿ ದಾರಿ ಮಾಡಿಕೊಂಡು ನೀರಿಗಿಳಿದು 'ಸಾಹಸಿ'ಗಳಾದರು. ಬೆಳಕು ಮೂಡಿ ನೀರಿಗಿಳಿಯುವ ಹೊತ್ತಿಗೆ 'ದಾನಿ'ಗಳ ಆಗಮನ ಶುರುವಾಯಿತು. ಅವರ 'ದಾನ' ಯಾವ ಕಡೆಗೆ ಸಾಗುತ್ತಿದೆ ಎಂದು ನೋಡಿಕೊಂಡು ನೀರಿಗೆ ಇಳಿದೆವು. 'ದಾನಿ'ಗಳ ಬಗೆಗಿನ ಎಚ್ಚರಿಕೆಯಿಂದ ಬೇಗ ಸ್ನಾನ ಮುಗಿಸಿ ಹೊರಬಂದೆವು, ಶ್ರೀನಿವಾಸ ಮತ್ತು ಶ್ರೀಕಾಂತ ಸಂಧ್ಯಾವಂದನೆ ಮುಗಿಸಿ ಹೊರಬಂದರು. ಹರೀಶ್ ಮತ್ತು ಗೋವಿಂದರಾಜ್ ಅವರು ಸ್ನಾನಕ್ಕೆ ಬೇರೆ ಕಡೆ ಹೋಗಿದ್ದರು.



ಎಲ್ಲಾ ಮುಗಿಸಿ ಚತ್ರಕ್ಕೆ ಮತ್ತೆ ಬಂದಾಗ ಸಮಯ ಎಂಟಾಗಿತ್ತು. ಅರುಣನನ್ನು 'ಮದುವೆ ಗಂಡಿನ' ಅವತಾರದಲ್ಲಿ ನೋಡುವ ತವಕ ನನ್ನಲ್ಲಿ ಹೆಚ್ಚಿತ್ತು. ರಾತ್ರಿಯೆಲ್ಲ ನಿದ್ದೆಯಿಲ್ಲವಾದ್ದರಿಂದ ಶ್ರೀನಿವಾಸ, ಶ್ರೀಕಾಂತ ಕೂತಲ್ಲಿಯೇ ನಿದ್ರಿಸಲು ಶುರು ಮಾಡಿದರು. ಅಷ್ಟರಲ್ಲಿ 'ಮೈಸೂರು ಪೇಟ' ಧರಿಸಿ ಹಸೆಮಣೆಗೆ ಬಂದೇ ಬಿಟ್ಟ ಅರುಣ. ಕಿವಿಯಲ್ಲಿ ಅರಿಶಿಣದಿಂದ ಮಾಡಿದ ಕೋಡುಬಳೆಯನ್ನು ಸಿಕ್ಕಿಸಿಕೊಂಡಿದ್ದ. ಬಹಳ ವಿನೋದಮಯವಾಗಿತ್ತು. ಒಂದಷ್ಟು ಫೋಟೋಗಳು ಶ್ರೀನಿವಾಸ ಮತ್ತು ಶ್ರೀಕಾಂತನ ಕ್ಯಾಮೆರಾಗಳಿಂದ ಕ್ಲಿಕ್ಕಿಸಲ್ಪಟ್ಟವು.

'ಕಾಶೀಯಾತ್ರೆ' ಯ ನಾಟಕದ ತೆರೆ ಸರಿದು ಮಾಂಗಲ್ಯಧಾರಣೆ ವಿಧ್ಯುಕ್ತವಾಗಿ ನಡೆಯಿತು. ಅರುಣ್ ಮತ್ತು ರೇಖಾ ದಂಪತಿಗಳಾದರು :-) ಅರುಣನ ಲಕ ಲಕ ಹಲ್ಲಿನ ಹೊಳಪು ಹೈಲೈಟು. ಅವನ ನಗು ಕ್ಯಾಮೆರಾ ಫ್ಲಾಶ್ ಗಳಿಗೇ ಸ್ಪರ್ಧೆಯೊಡ್ಡುವಂತಿದ್ದವು. ಅರುಣ್ ಮತ್ತು ರೇಖಾ ನೂರ್ಕಾಲ ಚೆನ್ನಾಗಿ ಬಾಳಿ ಬದುಕಲಿ :-) ನಮ್ಮೊಂದಿಗೆ ಒಡಾಡಿಕೊಂಡಿದ್ದ ಗೆಳೆಯ, ಕಾಫಿ ಗೆಳೆಯ ಸಂಸಾರಸ್ಥನಾಗಿದ್ದ. ಅದರ ಭಾವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ ನನಗೆ. ತುಂಬಾ ಖುಶಿಯಾಯಿತು.

ಮದುವೆ ಕಲಾಪಗಳೆಲ್ಲ ಮುಗಿದು ನಾವು ತಂದಿದ್ದ "ಗಿಫ್ಟ್" ಕೊಟ್ಟು ಊಟಕ್ಕೆ ಹೊರಟೆವು. ಊಟ ಮುಗಿಸಿ ಬಂದಾಗ ಡ್ರೈವರ್ ಶಾಕ್ ನೀಡಿದ್ದ, "ಗಾಡಿ ಸ್ವಲ್ಪ ಪ್ರಾಬ್ಲಮ್ ಇದೆ ಸಾರ್, ಇಲ್ಲೆ ಪಕ್ಕದ ಊರಿಗೆ ಹೋಗಿ ರಿಪೇರಿ ಮಾಡಿಸಿಕೊಂಡು ಬರ್ತೀನಿ" ಅಂದ. ಮೈಉರಿದುಹೋಯಿತು ,ಆದರೂ ಉಗುಳು ನುಂಗಿಕೊಂಡು "ಎಷ್ಟೊತ್ತಾಗುತ್ತೆ" ಎಂದೆ .
"ಒನ್ ಅವರ್ ಸಾರ್, ಬೇಗ ಸರಿ ಮಾಡ್ಸ್ಕೊಂಡ್ ಬರ್ತೀನಿ" ಎಂದು ಹಲ್ಕಿರಿದ .
ನಾವೆಲ್ಲ ಊಟ ಮುಗಿಸಿ ಹೊರಡಬೇಕೆಂದಿದ್ದರೆ ಈ ಡಬ್ಬಾ ಗಾಡಿ ರಿಪೇರಿ ಅನ್ನುತ್ತಿದ್ದಾನಲ್ಲ ಎಂದು. ಶುಭಾ ಒಂದಷ್ಟು ಆಂಗ್ಲಭಾಷೆಯಲ್ಲಿ ಬೈದಳು. ಬೆಂಗಳೂರಿಗೆ ಎಷ್ಟೊತ್ತಿಗೆ ತಲುಪುವೆವೋ ಎನ್ನುವ ಆತಂಕದಿಂದ ಊಟ ಮುಗಿಸಿದೆವು.

ಗಾಡಿ ಹೊರಡುವುದು ತಡವಾಗುತ್ತದೆಂದು ತಿಳಿದ ಅರ್ಜುನ್ ಮತ್ತು ಹರೀಶ್ ಹೊರಡಲು ಸಿದ್ದವಾದರು. ಅವರಾಗಲೇ ಊಟ ಮುಗಿಸಿದ್ದುದರ ಕಾರಣ ಮತ್ತು ಅವರಿಗೆ ಬೆಂಗಳೂರಿನಲ್ಲಿ ಮುಖ್ಯವಾದ ಕೆಲಸವಿದ್ದುದ್ದರಿಂದ ಅವರು ಹೊರಟರು.

ನಾನು, ಶ್ರೀಕಾಂತ ಊಟ ಮುಗಿಸಿ ಬರುವ ಹೊತ್ತಿಗೆ ಅದೇನಾಯಿತೋ ಏನೋ ಡ್ರೈವರ್ "ಗಾಡಿ ಓಕೆ ಸಾರ್, ಬೆಂಗಳೂರಿಗೆ ಹೋಗಿ ರಿಪೇರಿ ಮಾಡಿಸ್ಕೋಬೋದು, ಏನು ತೊಂದ್ರೆ ಇಲ್ಲ" ಎಂದ. ಎಲ್ಲರೂ ನಿರಾಳರಾದೆವು, ಬೇಗ ರೆಡಿ ಆಗಿ ಹೊರಡಲು ನಿರ್ಧರಿಸಿದೆವು. ಅರ್ಜುನ್ ಮತ್ತು ಹರೀಶರ ಜಾಗವನ್ನು 'ಮದುವೆ ಗಂಡಿನ' ಎರಡು ಭಾರವಾದ ಸೂಟುಕೇಸುಗಳು ತುಂಬಿದವು, ಫಿಸಿಕಲಿ. ಅರುಣ ಮತ್ತು ರೇಖಾಗೆ ವಿದಾಯ ಹೇಳಿ ಹೊರಡುವ ಹೊತ್ತಿಗೆ ಸಮಯ ಮಧ್ಯಾಹ್ನ ಮೂರು ಗಂಟೆ. ಶ್ರೀನಿವಾಸ ಕೂಡ ನಾವು ಹೊರಡುವ ಹೊತ್ತಿಗೆ ಹೊರಟು ನಿಂತಿದ್ದ. ಅವನು ಮೈಸೂರಿನಿಂದ ಹೊಳೆನರಸೀಪುರಕ್ಕೆ ಬೈಕಿನಲ್ಲಿ ಬಂದಿದ್ದ. ಶ್ರೀಕಾಂತ ಡ್ರೈವರನ ಹತ್ತಿರ ಮಾತನಾಡಿ ಮೈಸೂರಿನ ಮಾರ್ಗವಾಗಿ ಬೆಂಗಳೂರನ್ನು ಸೇರುವ ಬಗ್ಗೆ ಅವನನ್ನು ಒಪ್ಪಿಸಿದ್ದ. 'ಟವೇರಾ' ವೇಗಕ್ಕೆ ಬೈಕಿನ ಸ್ಪೀಡು ಹೊಂದುವುದೇ?? ಶ್ರೀನಿವಾಸ ನಮ್ಮನ್ನು ಹಿಂದಿಕ್ಕಿ ಮೈಸೂರಿನೆಡೆಗೆ ಶರವೇಗದಲ್ಲಿ ಧಾವಿಸಿದ್ದ.

ಹಿಂದಿನ ರಾತ್ರಿ ಯಾರೊಬ್ಬರಿಗೂ ಸರಿಯಾದ ನಿದ್ದೆ ಆಗಿರಲಿಲ್ಲ. ಗಾಡಿ ಹೊರಟ ಹದಿನೈದು ಇಪ್ಪತ್ತು ನಿಮಿಷದೊಳಗೆ ಎಲ್ಲರಿಗೂ ನಿದ್ದೆ ಹತ್ತಿಬಿಟ್ಟಿತ್ತು ಶ್ರೀಕಾಂತನ ಹೊರತಾಗಿ. ಡ್ರೈವರ ಪಕ್ಕ ಕೂತಿದ್ದ ಅವನು ರಸ್ತೆಯ ಇಕ್ಕೆಲಗಳನ್ನು ನೋಡುತ್ತಿದ್ದ, ಅವನನ್ನೇ ನೋಡುತ್ತಾ ನಾನು ನಿದ್ದೆಗೆ ಜಾರಿದ್ದೆ. ಸುಮಾರು ಅರ್ಧ ಗಂಟೆ ಆಗಿರಬಹುದು.

ಇದ್ದಕ್ಕಿದ್ದ ಹಾಗೆ ಶ್ರೀಕಾಂತ "ಗಾಡಿ ನಿಲ್ಸಿ ಗಾಡಿ ನಿಲ್ಸಿ " ಎಂದು ಕೂಗಿದ.

ಏನಾಯಿತು ಎಂದು ಕೇಳಿದಾಗ "ಅಲ್ಲಿ ಹಿಂದಗಡೆ ಶ್ರೀನಿವಾಸ ನಿಂತಿದ್ದಾನೆ, ಅವನ ಗಾಡಿ ಇದೆ" ಎಂದ.

ನಿದ್ದೆಯಿಂದ ಎದ್ದ ನಾನು ಕಣ್ಣುಜ್ಜಿಕೊಳ್ಳುತ್ತ ಗಾಡಿ ಇಳಿದು ಹಿಂದಕ್ಕೆ ಓಡಿದೆ, ಒಂದಷ್ಟು ಜನ ನಿಂತಿದ್ದರು, ಅವರನ್ನು ಸರಿಸಿ ನೊಡಿದರೆ ಶ್ರೀನಿವಾಸ ನಿಂತಿದ್ದಾನೆ, ಬಲ ಮೊಣಕೈಯೆಲ್ಲವೂ ರಕ್ತ ಸಿಕ್ತ. ಮುಖದ ಬಲಭಾಗದಲ್ಲಿ ತರಚಿದ ಗಾಯಗಳು, ಮುಖ ಸ್ವಲ್ಪ ಊದಿಕೊಂಡಿತ್ತು. ಹಾಕಿಕೊಂಡಿದ್ದ ಶರ್ಟ್ ಹರಿದಿತ್ತು. ಕತ್ತು ತಿರುಗಿಸಲಾಗದೆ ನರಳುತ್ತಿದ್ದ. ನನಗೆ ಬಹಳ ಗಾಬರಿಯಾಯಿತು, ನೀರು ಬೇಕಾ ಎಂದು ಕೇಳಿದ್ದಕ್ಕೆ ಸರಿಯಾಗಿ ನಮ್ಮೊಡನೆ ಮಾತನಾಡುತ್ತಿರಲಿಲ್ಲ, ಮಾತನಾಡಲು ಆಗುತ್ತಿರಲಿಲ್ಲ. ಅಪಘಾತದ 'ಶಾಕ್' ನಲ್ಲಿದ್ದ. ಅವನು ಉತ್ತರಿಸದೇ ಇರುವುದನ್ನು ನೋಡಿ ಇನ್ನಷ್ಟು ಭಯವಾಯಿತು.

ಅಲ್ಲೇ ಅಕ್ಕಪಕ್ಕದ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜನಗಳು ಹೇಳಿದ್ದಿಷ್ಟು. "ನಾವು ನೋಡ ನೋಡುತ್ತಿದ್ದಂತೆ ಗಾಡಿ ಸ್ಕಿಡ್ ಆಗಿ ಗಾಡಿ ಸಮೇತ ಮೂರು ಪಲ್ಟಿ ಹೊಡೆದು ಇಲ್ಲಿ ಕಾಣುತ್ತಿದೆಯಲ್ಲ ಈ ಪೊದೆ ಇಲ್ಲಿ ಬಂದು ಬಿದ್ಬಿಟ್ರು, ಸಾರ್ ಹೆಲ್ಮೆಟ್ ಇಲ್ದಿದ್ರೆ ಇವ್ರು ಇಲ್ಲೇ ಔಟ್ ಆಗ್ಬಿಡ್ತಿದ್ರು" ಎಂದರು.

ಎಲ್ಲರಿಗೂ ವಂದಿಸಿ ಅವನನ್ನು ಅಲ್ಲಿಂದ 'ಟವೇರ' ಬಳಿ ಕರೆತಂದೆವು. ಕುಡಿಯಲು ನೀರು ಕೊಟ್ಟು, ಏನಾಯಿತೋ ಎಂದು ಕೇಳಿದಾಗ, "ದಾರಿ ಮಧ್ಯ ಒಂದು ಕಲ್ಲು ಸಿಕ್ಕಿ, ಮುಂದಿನ ಟಯರ್ ಪಂಚರ್ ಆಗಿ ಪಲ್ಟಿ ಹೊಡೆದು ಬಿದ್ದುಬಿಟ್ಟೆ, ಅಲ್ಲೊಂದು ಕಲ್ಲಿತ್ತು ಅದಕ್ಕೆ ಸರಿಯಾಗಿ ಕುತ್ತಿಗೆಗೆ ಬಿತ್ತು" ಎಂದು ಕತ್ತು ಅಲುಗಿಸಲಾಗದೆ ಚೀರಿದ.

ಸ್ಥಳಕ್ಕೆ ಹೋಗಿ ನೋಡಿದಾಗ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಬೈಕಿನ ರುಂಡವೇ ಕಳಚಿ ಬಿದ್ದಿತ್ತು!! ಕ್ರಾಶ್ ಗಾರ್ಡ್ ಬೆಂಡಾಗಿತ್ತು, ಹ್ಯಾಂಡಲ್ ಬೇರೆ ದಿಕ್ಕಿನೆಡೆಗೆ ತಿರುಗಿತ್ತು, ಎಲ್ಲಕ್ಕಿಂತ ಹೆಚ್ಚಾಗಿ ಶ್ರೀನಿವಾಸ ನ ಹೆಲ್ಮೆಟ್ ದವಡೆಯ ಬಳಿ ಬಿರುಕು ಬಿಟ್ಟಿತ್ತು. ನಮಗೂ ಪ್ರಾಮಾಣಿಕವಾಗಿ ಅನ್ನಿಸಿತ್ತು ಹೆಲ್ಮೆಟ್ ಇಲ್ಲದಿದ್ದರೆ ತಲೆಗೆ ಬಲವಾದ ಪೆಟ್ಟು ಬೀಳುತ್ತಿತ್ತು ಎಂದು, ಜೀವ ಹೋಗುವ ಸಾಧ್ಯತೆಯಂತೂ ಇತ್ತು ಹೆಲ್ಮೆಟ್ ಇಲ್ಲದಿದ್ದರೆ.

ಅಲ್ಲಿದ್ದ ಹಳ್ಳಿಗರು ಹೇಳಿದರು ಮುಂದೆ ಸಲ್ಪ ದೂರದಲ್ಲಿ ಆಸ್ಪತ್ರೆಯಿದೆ ಕರೆದುಕೊಂಡು ಹೋಗಿ ಎಂದು, ಅಲ್ಲಿಗೆ ಕರೆದುಕೊಂಡು ಹೋಗಿ ಪ್ರಥಮಚಿತ್ಸೆಯನ್ನು ಕೊಡಿಸಿದೆವು. ಅಲ್ಲಿದ್ದ ಡಾಕ್ಟರ್ ಸಲಹೆಯ ಮೇರೆಗೆ ಮೈಸೂರಿಗೆ ಕರೆದುಕೊಂಡು ಹೋಗಿ X-ray ತೆಗೆಸಿ ಎಂದು. ನಮಗಿದ್ದಿದ್ದ ಮುಖ್ಯ ಆತಂಕವೇ ಅದಾಗಿತ್ತು, ಕತ್ತಿನ ಮೂಳೆಯೇನಾದರೂ ಮುರಿದಿದ್ದರೆ ಎಂದು. ಆದಷ್ಟು ಮೈಸೂರಿಗೆ ಹೊರಡಬೇಕೆಂದು ನಿರ್ಧರಿಸಿದೆವು.

ಸಂಜೆ ಏಳರ ಹೊತ್ತಿಗೆ ಬೆಂಗಳೂರನ್ನು ತಲುಪುವ ಎಲ್ಲರ ಆನಿಕೆ ದಿಕ್ಕು ತಪ್ಪಿತ್ತು. ಮುಂದೆ ಹೇಗೆ ನಡೆಸುವುದು ?, ಏನು ಮಾಡುವುದು ? ನೂರು ಪ್ರಶ್ನೆಗಳನ್ನು ಪರಿಸ್ಥಿತಿ ನಮ್ಮೆದುರು ಇರಿಸಿ "ಈಗೇನ್ಮಾಡ್ತೀ" ಎಂಬಂತಿತ್ತು. ಸ್ವಲ್ಪ ಚೇತರಿಸಿಕೊಂಡು ಶ್ರೀನಿವಾಸನೇ ಅವರ ತಂದೆ ತಾಯಿಗೆ ವಿಷಯ ತಿಳಿಸಿದ, ಆದಷ್ಟು ಬೇಗ ಊರಿಗೆ ಬರುತ್ತೇನೆಂದ. ಇಲ್ಲಿ ಇದೆಲ್ಲ ನಡೆಯುತ್ತಿದ್ದರೆ ಅಲ್ಲಿ ಗೋವಿಂದರಾಜ್ ಮತ್ತು ಡ್ರೈವರ್ ಬೈಕನ್ನು ರಿಪೇರಿ ಮಾಡಿಸುತ್ತಿದ್ದರು. ಹೀಗೆಲ್ಲಾ ಆದರೂ ಶ್ರೀನಿವಾಸ "ನೀವೆಲ್ಲಾ ಹೊರ್ಡಿ, ನಾನು ಮೈಸೂರಿಗೆ ಹೋಗ್ತೀನಿ" ಎಂದಿದ್ದು ನನಗೆ ಬಹಳ ವಿಚಿತ್ರವಾಗಿ ತೋರಿತು.

ಅಮೇಲೆ ಶ್ರೀಕಾಂತ ಬಂದು "ಸರಿ ಈಗ ನೀನು ಮತ್ತು ಗೋವಿಂದರಾಜ್ ಗಾಡಿಯನ್ನು ಮೈಸೂರಿಗೆ ಲಗ್ಗೇಜ್ ಆಟೋ ದಲ್ಲಿ ಹಾಕ್ಕೊಂಡ್ ಬನ್ನಿ, ನಾನು ಇವನನ್ನ ಉಳಿದವರೊಡನೆ ಮೈಸೂರಿನ ಅಪೊಲೊ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ, ಅಲ್ಲಿ ಚೆಕ್ ಮಾಡಿಸಿ ಅವನ ಗಾಡಿಯನ್ನ ಬಜಾಜ್ ಸರ್ವೀಸ್ ಸೆಂಟರಿಗೆ ಕೊಟ್ಟು ಶ್ರೀನಿವಾಸನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗೋಣ" ಎಂದ. ಯಾಕೋ ಗಾಡಿಯನ್ನು ಸರ್ವೀಸ್ ಸೆಂಟರಿಗೆ ಕೊಟ್ಟು ಬರುವುದು ಯಾರಿಗೂ ಸರಿ ಬರಲಿಲ್ಲ. ಅದೊಂದು ಮಾತನ್ನು ಧಿಕ್ಕರಿಸಿ ಉಳಿದಕ್ಕೆ ಅನುಮೋದಿಸಿ ಮೈಸೂರಿಗೆ ಹೊರಡಲು ನಿರ್ಧರಿಸಿದೆವು.

ಶ್ರೀಕಾಂತ, ಶ್ರೀನಿವಾಸ, ಶ್ರುತಿ, ಶುಭಾ ಇಷ್ಟು ಜನ ಗಾಡಿಯಲ್ಲಿ ಮೈಸೂರಿಗೆ ಹೊರಟರು. ನಾನು ಮತ್ತೆ ಗೋವಿಂದರಾಜ್ ಬೈಕನ್ನು ಬೈಕನ್ನು ಮೈಸೂರಿನ ಅಪೋಲೊ ಆಸ್ಪತ್ರೆ ಬಳಿ ತಂದೆವು. ಸಮಯ ಸುಮಾರು 7 ಗಂಟೆ ಆಗಿತ್ತೆನಿಸುತ್ತದೆ. ನಾನು ಮತ್ತೆ ಗೋವಿಂದರಾಜ್ ಬರುವ ಹೊತ್ತಿಗೆ ಚೆಕಪ್ ಮುಗಿದಿತ್ತು. ಕತ್ತಿಗೇನೂ ಆಗಿಲ್ಲವೆಂದು ಕೇಳಿ ಸಮಾಧಾನವಾಯಿತು. ಉಳಿದ ಫಾರ್ಮಾಲಿಟಿಗಳನ್ನ ಮುಗಿಸಿ ಬರುವುದಕ್ಕಾಗಿ ಅಪೊಲೊ ಆಸ್ಪತ್ರೆ ಹೊರಾಂಗಣದಲ್ಲಿ ಕಾಯುತ್ತಿದ್ದೆವು, ಎಲ್ಲರೂ ಅದೇ ಮಾತು, ಏನೋ ಅನ್ಕೋತಿದ್ವಿ, ಏನೋ ಆಗ್ಬಿಡ್ತು, ನಾವು ಆ ಹಾದಿಯಲ್ಲಿ ಹೋಗದಿದ್ದರೆ ? ಶ್ರೀಕಾಂತ ನಡೆದ ಅಪಘಾತವನ್ನು ಗಮನಿಸದಿದ್ದರೆ? ಅವನೂ ಕೂಡ ನಿದ್ರಿಸಿದ್ದರೆ?? ಹೀಗೆ ನಮಗೆ ಕೇಳಿಕೊಂಡ ಪ್ರಶ್ನೆಗಳಿಗೆ ಯಾರೊಬ್ಬರಲ್ಲೂ ಉತ್ತರವಿರಲಿಲ್ಲ, ಶ್ರೀನಿವಾಸ ಹೊರಗಡೆ ಬರುವುದಕ್ಕೇ ಕಾಯುತ್ತಿದ್ದೆವು. ಅಷ್ಟೊತ್ತಿಗೆ ಶುಭಾ ಅವರ ದೊಡ್ಡಪ್ಪನ ಮನೆ ಇಲ್ಲೇ ಹತ್ತಿರವಿದೆಯೆಂದೂ ಬೈಕನ್ನು ಇಲ್ಲೇ ಬಿಡೋಣ ಎಂದು ಹೇಳುತ್ತಿದ್ದಳು. ಶ್ರೀನಿವಾಸ ಹೊರಗಡೆ ಬಂದಾಗ ಮುಖ ಸಲ್ಪ ಮಟ್ಟಿಗೆ ಗೆಲುವಾಗಿತ್ತು. ಮತ್ತೆ ಅವನ್ನು ವಿಚಾರಿಸಿಕೊಂದು ಗಾಡಿಯಲ್ಲಿ ಕೂತು ಶುಭಾಳ ದೊಡ್ಡಪ್ಪನ ಮನೆ ಕಡೆಗೆ ಹೊರಟೆವು. ಮನೆ ಬಹಳ ಸೊಗಸಾಗಿತ್ತು, ಮನೆಯ ಮುಂದೆ ಒಂದಷ್ಟು ಗಿಡಗಳನ್ನು ಬೆಳೆಸಿದ್ದರು, ಬಾಗಿಲ ಎದುರಿಗೆ ತುಳಸೀಕಟ್ಟೆ, ತಂಪಿನ ಹವೆ ಬಹಳ ಹಿತವನ್ನು ನೀಡಿತು. ಮನೆಯಲ್ಲಿದ್ದ ಶುಭಾಳ ದೊಡ್ಡಪ್ಪ ಶ್ರೀನಿವಾಸನ್ನು ವಿಚಾರಿಸಿ ಎಲ್ಲಾ ಸರಿ ಹೋದ ಮೇಲೆ ಬಂದು ಗಾಡಿ ತೆಗೆದುಕೊಂಡು ಹೋಗು, ಏನೂ ಯೋಚನೆ ಮಾಡಬೇಡ ಎಂದು ಹೇಳಿ ನಮ್ಮೆಲ್ಲರನ್ನು ಬೀಳ್ಕೊಟ್ಟರು.

ಸಮಯ ಎಂಟಾಗಿದ್ದಿರಬಹುದು. ಆಗ ಬೆಂಗಳೂರಿನೆಡೆಗೆ ಹೊರಟೆವು. ದೇಹಕ್ಕೆ ಅಷ್ಟಾಗಿ ದಣಿವಾಗಿಲ್ಲದಿದ್ದರೂ ಮನಸಿಗೆ ಏನೇನೇನೋ ನಡೆದು ಹೋಯಿತೆಂಬ ಭಾವನೆ. ಯಾರ ಪ್ರಶ್ನೆಗಳಿಗೂ ಯಾರ ಬಳಿಯೂ ಉತ್ತರವಿರಲಿಲ್ಲ. ಮತ್ತೆ ಎಲ್ಲರೂ ನಿದ್ದೆಗೆ ಜಾರಿದೆವು, ಮಾರ್ಗ ಮಧ್ಯ ಊಟ ಮುಗಿಸಿ ಕೆಂಗೇರಿಯ ಬಳಿ ಬಂದಾಗ ಗೋವಿಂದರಾಜ್ ನಾನು ಇಲ್ಲೇ ಇಳಿದುಕೊಳ್ಳುತ್ತೇನೆಂದರು. ಅವರ ವಯಸ್ಸಿನವರು ಬೇರೆಯಾರಾಗಿದ್ದರೂ "ಮನೆವರೆಗೂ ಬಿಟ್ಬಿಡೀ ಪಾ" ಎನ್ನುತ್ತಿದ್ದರೇನೋ ?? ಎಲ್ಲರಿಗೂ ಬೈ ಬೈ ಹೇಳಿ ಅಲ್ಲೆ ಕಣ್ಮರೆಯಾಗಿಬಿಟ್ಟರು.ಶ್ರೀನಿವಾಸನನ್ನು ಜಾಲಹಳ್ಳಿಯ ಅವರ ಮನೆ ಬಳಿ ಬಂದೆವು. ಶ್ರೀಕಾಂತ ಅವನನ್ನ ಕರೆದು ಕೊಂಡು ಅವರ ಮನೆ ಬಾಗಿಲ ವರೆಗೂ ಬಿಟ್ಟು ಬಂದ, ನಂತರ ಶುಭಾಳ ಮನೆಗೆ ಹೋಗಿ ಅಲ್ಲಿಂದ ಶರ್ಮಾಳನ್ನು ಚಾಮರಾಜಪೇಟೆ ಬಳಿ ಇಳಿಸಿ ನಾನು ಮತ್ತೆ ಶ್ರೀಕಾಂತ ನ.ರಾ. ಕಾಲೋನಿ ಬಳಿ ಬರುವ ಹೊತ್ತಿಗೆ ರಾತ್ರಿ ಹನ್ನೊಂದೂವರೆಯಾಗಿತ್ತು. ಡ್ರೈವರನ ದುಡ್ಡು ಸೆಟಲ್ ಮಾಡಿ ನಾನು ಮನೆ ದಾರಿ ಹಿಡಿದೆನು. ಹೋಗಿದ್ದು ಎರಡೇ ದಿನವಾದರೂ ಏನೆಲ್ಲ ನಡೆದು ಹೋಯಿತೆಂಬ ಅಚ್ಚರಿ, ಒಂದು ತೆರನಾದ ಭಾರ ಮನಸಿಗೆ.

ನಾಗಸಂದ್ರ ಸರ್ಕಲ್ಲಿನ ಇಳಿರೋಡಿನಲ್ಲಿ ನಡೆದು ಬರುತ್ತಿದ್ದ ನನ್ನನ್ನು ನೋಡಿ ಬೀದಿ ನಾಯಿಯೊಂದು ನನ್ನ ನೋಡುತ್ತಲೇ ತಾನಿದ್ದ ಜಾಗದಿಂದ ವಿಕಾರವಾಗಿ ಬೊಗಳುತ್ತಾ ನನ್ನೆಡೆಗೆ ಓಡಿ ಬಂತು. "ಭಗವಂತಾ" ಎಂದು ಉದ್ಗರಿಸಿದ್ದಷ್ಟೆ ನೆನಪು.

ಜೈ ಕನ್ನಡ...

Saturday, November 1, 2008


ಎಲ್ಲರಿಗೂ 53ನೆಯ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹೆಚ್ಚು ಹೆಚ್ಚು ಕನ್ನಡಲ್ಲೇ ಮಾತನಾಡಿ, ಕನ್ನಡ ಉಳಿಸಿ, ಬೆಳೆಸಿ, ಜೊತೆಗೆ ನೀವು ಬೆಳೆಯಿರಿ(ಇದು ನಾನು 53 ನೆಯ ರಾಜ್ಯೋತ್ಸವದ ಸಂಧರ್ಭದಲ್ಲಿ ನಾಡಿಗೆ ಕೊಡುತ್ತಿರುವ ಕರೆ ;-) )


ಇದೇ ಸಂಧರ್ಭದಲ್ಲಿ ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಕೇಂದ್ರ ಸರಕಾರ ಘೋಷಿಸಿದೆ,ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು, ನೆರೆಯ ತೆಲುಗಿಗೂ ಈ ಭಾಗ್ಯ ಲಭಿಸಿದೆ.Cheers...


ಶಾಸ್ತ್ರೀಯ ಭಾಷೆ ಎಂದರೆ ಒಂದು ಭಾಷೆ ತನ್ನ ಅಸ್ತಿತ್ವದಲ್ಲಿ, ದಶಕಗಳಿಂದ ತನ್ನ ಪ್ರಭಾವನ್ನು ಬೀರಿದ್ದೇ ಆದರೆ ಹಾಗೂ ತನ್ನ ಮೂಲ ರೂಪದಿಂದ ಬೇರೆ ರೂಪಗಳನ್ನು ಪಡೆದಿದ್ದಾಗ್ಯೂ ಅದರ ಪ್ರಭಾವ ಹಾಗೆ ಉಳಿಸಿಕೊಂಡಿರುವ ಭಾಷೆಯನ್ನು "Classical" ಅಥವಾ ಶಾಸ್ತ್ರೀಯ ಭಾಷೆಯೆನ್ನುತ್ತಾರೆ.


ಶಾಸ್ತ್ರೀಯ ಭಾಷೆಯ ಬಗ್ಗೆ ಒಂದಷ್ಟು ತುಣುಕುಗಳು :

1)ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲಿಕ್ಕೆ ಇವಿಷ್ಟೂ ಅಂಶಗಳು ಮಾನದಂಡ

-ಭಾಷೆಯು ಕನಿಷ್ಟವೆಂದರೂ ಸಾವಿರ ವರ್ಷ ಪುರತನದ್ದಾಗಿರಬೇಕು(ಕನ್ನಡ ಎರಡು ಸಾವಿರ ವರ್ಷಕ್ಕಿಂತಲೂ ಪುರಾತನವಾದದ್ದು)

-ಭಾಷೆಗೆ ಅಷ್ಟು ವರ್ಷಗಳ ಐತಿಹ್ಯವಿರಬೇಕು, ಅದರ ಸಲುವಾಗಿ ಶಾಸನಗಳು, ಸೂಕ್ತ ದಾಖಲೆಗಳು ಹೊಂದಿರಬೇಕು.

-ಭಾಷೆಯು ಸ್ವಂತದ್ದಾಗಿರಬೇಕು, ಬೇರೆ ಭಾಷೆಯಿಂದ ಟಿಸಿಲೊಡೆದಿರಬಾರದು.


2)ಶಾಸ್ತ್ರೀಯ ಭಾಷೆಯನ್ನು ಮೃತ(!!) ಭಾಷೆಯೆಂದೂ ಕರೆಯುತ್ತಾರೆ, ಕಾರಣ ಅದರ ಮೂಲರೂಪದಿಂದ ಕವೊಲೊಡೆದು ಈಗ ಬೆರೆಯೆ ತೆರೆನಾದ ರೂಪವನ್ನು ಹೊಂದಿರುತ್ತದೆ.


3)ಸಂಸ್ಕೃತ ಭಾಷೆಯು ಪ್ರಪಂಚದ ಶಾಸ್ತ್ರೀಯ ಭಾಷೆಗಳ ಪಟ್ಟಿಯಲ್ಲಿದೆ, ಅದರ ಜೊತೆಗೆ ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳು ಕೂಡ ಇವೆ.


4)ತಮಿಳು ಭಾಷೆಯನ್ನು 2004 ರಲ್ಲಿ ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲಾಯಿತು. ಅದರ ಹಿಂದೆ ನಲವತ್ತು ವರ್ಷಗಳ ಹೋರಾಟವಿತ್ತು.

ಶಾಸ್ತ್ರೀಯ ಭಾಷೆಯ ಗರಿಯನ್ನು ಸಿಕ್ಕಿಸಿಕೊಂಡದ್ದಾಯಿತು. ಇನ್ನಷ್ಟು ಕನ್ನಡ ಸಾಹಿತ್ಯದಲ್ಲಿ ಕೃಷಿಯಾಗಲಿ, ಕನ್ನಡ ಇನ್ನಷ್ಟು ಮತ್ತಷ್ಟು ಮುಗಿಲಿಗೇರಲಿ ಎನ್ನುವ ಆಶಯದೊಂದಿಗೆ ಮತ್ತೊಮ್ಮೆ ತಮಗೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.

(ಫೋಟೋ ಕಾಣಿಕೆ : ಡೈನಮಿಕ್ ದಿವ್ಯಾ)


ITC Infotech ಗೆ ವಿದಾಯ

Wednesday, October 29, 2008

ಈ ಲೇಖನವನ್ನ 24-ಶುಕ್ರವಾರ-2008 ರಂದೇ ಬರೆಯಬೇಕಿತ್ತು, ಕಾರಣಾಂತರಗಳಿಂದ ಆಗಲಿಲ್ಲ. ಅಂದಿನ ದಿನಾಂಕಕ್ಕೆ ಸಮೀಕರಿಸಿಕೊಳ್ಳಿ ;-)



ನನ್ನ ಜೀವನದ 22ವರುಷಗಳದ್ದು ಒಂದು ಪರ್ವವಾದರೆ ಇನ್ನೆರಡು ವರ್ಷ ಮತ್ತೊಂದು ಪರ್ವ. ಪರ್ವದಲ್ಲಿ ನನ್ನ ಮೊದಲ ಕಂಪೆನಿಯಾದ ITC Infotech ಗೆ ತನ್ನದೇ ಆದ ಸ್ಥಾನವಿದೆ. ಹಲವಾರು ಮೊದಲುಗಳಿಗೆ ಕಾರಣವಾಗಿದೆ. ಒಂದು ಕಂಪೆನಿಯಲ್ಲಿ ಹೇಗಿರಬೇಕು ಎಂಬುದರಿಂದ ಹಿಡಿದು ಜನರ ಜೊತೆ ಹೇಗಿರಬಾರದು ಎಂಬುದರವರೆಗೂ ಕಂಪೆನಿ ಕಲಿಸಿಕೊಟ್ಟಿದೆ. ಅನೇಕ ಕಟು ಸತ್ಯಗಳನ್ನು ಕಲಿಸಿದೆ, ಸಿಹಿ ಸಿಂಚನಗಳಿಗೇನೂ ಕಮ್ಮಿಯಿಲ್ಲ. ಹೌದು ಇಂದು ಕಂಪೆನಿಯಿಂದ ಬೇರ್ಪಡುತ್ತಿದ್ದೇನೆ ಇನ್ನೊಂದು ಕಡೆಗೆ...Change is the only constant thing in Life...Hmmm

ಎಂಜಿನಿಯರಿಂಗ್ ವಿದ್ಯಾರ್ಥಿ ಜೀವನದ ಮುಂದುವರಿದ ಭಾಗದಂತೇ ಇತ್ತು ITC Infotech ನಲ್ಲಿ ನನ್ನ ದಿನಗಳು. ನನ್ನ ಜೊತೆ ಸೇರಿದವರೆಲ್ಲರನ್ನು ನಾನು ಗೆಳೆಯರೆಂದೇ ಹೇಳಲಿಚ್ಚಿಸುತ್ತೇನೆ, ಯಾರೊಬ್ಬರನ್ನು ಕಲೀಗ್ಸ್ ಎಂದು ಸಂಭೋದಿಸಲು ಇಂದಿಗೂ ಮುಜುಗರವಾಗುತ್ತದೆ. ಎರಡು ವರ್ಷಗಳು ಆಟ ಆಡಿಕೊಂಡೇ ಕಳೆದುಬಿಟ್ಟೆ. ಕೆಲಸ ಮಾಡುತ್ತಿದ್ದೇನೆ ಎಂದೆನಿಸುತ್ತಿರಲಿಲ್ಲ, ಕಾಲೇಜಿಗೇ ಹೋಗಿ ಬರುವಂತಿತ್ತು ದಿನವೂ. ಇಂದಿಗೆ ನನ್ನ ಎಲ್ಲ ಆಟಗಳಿಗೆ, ಆರಾಮದಾಯಕ Professional ಜೀವನಕ್ಕೆ ತೆರೆ ಬಿದ್ದಿದೆ. ನಾನು ಈಗ ಹೋಗುತ್ತಿರುವ ಕಡೆ ಹೇಗಿರುತ್ತದೋ ಏನೋ??

ಕಳೆದ ವಾರವೇ ನನ್ನ ಕಟ್ಟ ಕಡೆಯ ರಾತ್ರಿ ಪಾಳಿಯನ್ನು ಇಡೀ ರಾತ್ರಿ ತೂಕಡಿಸದೆ ವಿಜೃಂಭಣೆಯಿಂದ ನಾನೊಬ್ಬನೇ ಆಚರಿಸಿದ್ದೆ. ಅಲ್ಲೆಲ್ಲಾ ನಾನೊಬ್ಬನೇ ತಿರುಗಾಡುತ್ತಾ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದೆ. ಮತ್ತೆ ಹೀಗೆ ರಾತ್ರಿಯೆಲ್ಲಾ ಕೆಲಸ ಮಾಡುವ ಕರ್ಮವಿರುವುದಿಲ್ಲವೆಂಬ ಸಂತೋಷ ಒಂದು ಕಡೆಯಾಗಿದ್ದರೆ ಇಂದಿಗೆ ಮತ್ತೆ ಇವೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತೇನೆಂಬ ದುಗುಡ ಇನ್ನೊಂದು ಕಡೆ. ರಾತ್ರಿ ಪಾಳಿಯಲ್ಲಿ ಇಡೀ ರಾತ್ರಿ ಇರುತ್ತಿದ್ದದ್ದೆ ಹಾಗೆ, ಕೆಲಸವಿದ್ದರೆ ಯಾವುದೇ ತಾಪತ್ರಯವಿರುತ್ತಿರಲಿಲ್ಲ, ಹೇಗೋ ಎಚ್ಚರವಾಗಿದ್ದು ಕೆಲಸ ಮಾಡುವುದರಲ್ಲಿ ಮಗ್ನರಾಗಿ ಸಮಯ ಕಳೆಯುತ್ತಿದ್ದೆವು, ಕೆಲಸ ಇರದಿದ್ದರೆ 2 ಗಂಟೆಯೊಳಗಾಗಿ ನಿದಿರಾದೇವಿ ಆವರಿಸಿಕೊಳ್ಳುತ್ತಿದ್ದಳು, ತನ್ನ ಕಬಂದ ಬಾಹುಗಳನ್ನು ಚಾಚಿ ಬರಸೆಳೆದು ನಿದಿರೆಗೆ ಜಾರಲು ಪ್ರೇರೇಪಿಸುತ್ತಿದ್ದಳು, ಅದರ ಪರಿಣಾಮ ಅಲ್ಲೇ ತೂಕಡಿಸಿ ಹಾಗೆ ಒರಗಿಕೊಂಡು ನಿದಿರೆಗೆ ಜಾರಿಬಿಡುತ್ತಿದ್ದೆ. ರಾತ್ರಿ ಪಾಳಿಯ ಇನ್ನೊಂದು ಸೊಗಸೆಂದರೆ ಕೆಲಸ ಮಾಡುತ್ತ ಹಾಡುಗಳು ಕೇಳುತ್ತಾ, ಕಾಪಿ ಹೀರುತ್ತ ಆರಮಾಗಿ ಇರಬಹುದಾಗಿತ್ತು , ಯಾರೊಬ್ಬರು ಕೇಳಲು ಇರುತ್ತಿರಲಿಲ್ಲ. ನಮ್ಮ ಕೆಲಸಗಳು ಸಾವಧಾನವಾಗಿ ಮಾಡಿಕೊಳ್ಳಬಹುದಾಗಿತ್ತು, ಹೊಸ ವಿಷಯಗಳ ಕಲಿಕೆಗೂ ಬಹಳ ಪೂರಕವಾಗಿತ್ತು. ಆದರೆ ಅದರಿಂದ ಆರೋಗ್ಯ ಹದಗೆಡುತ್ತಿತ್ತು. ನಾಲ್ಕು ತಿಂಗಳ ಹಿಂದೆ ಇನ್ನು ಮುಂದೆ ರಾತ್ರಿ ಪಾಳಿಗೆ ಬರಲಾಗುವುದಿಲ್ಲವೆಂದು ನನ್ನ ಮ್ಯಾನೇಜರಿಗೆ ಖಡಾಖಂಡಿತವಾಗಿ ಹೇಳಿಬಿಟ್ಟೆ. ಅವೆಲ್ಲಾ ಮುಗಿದ ಮೇಲೆ ಬೇರೆ ಕಂಪೆನಿಯಲ್ಲಿ ಕೆಲಸ ದೊರೆತು ನನ್ನ ರಾಜೀನಾಮೆಯನ್ನು ನೀಡಿದ ಬಳಿಕ ಮ್ಯಾನೇಜರಿನ ಕೋರಿಕೆಯ ಮೇರೆಗೆ ಮತ್ತೆ ಒಂದು ವಾರ ರಾತ್ರಿ ಪಾಳಿಗೆ ಒಪ್ಪಿಕೊಂಡೆ. ಅದನ್ನು ಕಳೆದ ಶುಕ್ರವಾರ(17-Friday-2008) ಮುಗಿಸಿದೆ.

ಕಡೆಯ ವಾರ ಕಂಪೆನಿಯಿಂದ ಹೊರನಡೆಯಲು ಇದ್ದ ಬದ್ದ ಎಲ್ಲ ನಿಯಮಾವಳಿಗಳನ್ನು ಮುಗಿಸುವುದರಲ್ಲಿ ಒಡಾಡುತ್ತಿದ್ದೆ. ಪ್ರತಿಯೊಂದು ವಿಭಾಗದಲ್ಲೂ ಅವರ ಸಹಿ ಹಾಕಿ, ಕ್ಲಿಯರೆನ್ಸ್ ಪತ್ರ ಕೊಡುತ್ತಿದ್ದ ಹಾಗೆ ಇಂಚಿಂಚಾಗಿ ಕಂಪೆನಿಯಿಂದ ಬೇರ್ಪಡುತ್ತಿದ್ದ ಭಾವ ಸುಳಿಯುತ್ತಿತ್ತು. ಮತ್ತೆ ವಾಪಸು ಸೇರಿಬಿಡೋಣವೇ ಎಂದಂತಲೂ ಅನಿಸುತ್ತಿತ್ತು, ನಿರ್ಧಾರ ಬಿಗಿ ಮಾಡಿ ಮುಂದಿನ ವಿಭಾಗದೆಡೆಗೆ ನಡೆದೆ.


ಎಲ್ಲಾ ವಿಭಾಗಗಳಿಂದಲೂ ಕ್ಲಿಯರೆನ್ಸ್ ಪತ್ರ ಪಡೆದು ಕಂಪೆನಿಗೆ ಪಾವತಿಸಬೇಕಾದ ಹಣ ಪಾವತಿಸಿ ಸಂಜೆ ಐದರ ಹೊತ್ತಿಗೆ ಕಂಪೆನಿಯ ರಿಲೀವಿಂಗ್(ಕನ್ನಡ ಪದ ತಿಳಿಯಲಿಲ್ಲ) ಪತ್ರ ಇಸಿದುಕೊಂಡೆ. ನನ್ನ ಕಂಪೆನಿ ಗೆಳೆಯರು ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ ಎರಡು ಮಾತನಾಡಿ ಎಲ್ಲರ ಕೈಕುಲುಕಿ ಎಲ್ಲಾ ಮುಗಿದ ಮೇಲೆ ಅಲ್ಲೇ ಮೂಲೆಯಲ್ಲಿ ಒಂದೆಡೆ ಕುಳಿತೆ. ಸಂಜೆ ಗೆಳೆಯರಿಗೆ Farewell ಪಾರ್ಟಿ ಕೊಡಿಸಿ ಮತ್ತೆ ಆಫೀಸಿಗೆ ಹಿಂದಿರುಗಿದಾಗ ಗಂಟೆ ಹತ್ತಾಗಿತ್ತು. ಲೀಟರುಗಟ್ಟಲೆ ಕಾಫಿ ಎರಕ ಹೊಯ್ದಿದ್ದ ಕಾಫಿ ಮೆಶೀನಿನ ಎರಡು ಫೋಟೋ ಕ್ಲಿಕ್ಕಿಸಿ ಮತ್ತೊಂದು ಕಪ್ ಕಾಫಿ ಕುಡಿದು ಜಡಿ ಮಳೆಯಲ್ಲೇ ಮನೆಗೆ ಹಿಂದಿರುಗಿ ಬಂದೆ.

ಪದಗಳಿಗೆ ನಿಲುಕದ ಅನೇಕ ಭಾವಗಳಿಗೆ ನನ್ನ ಮೊದಲ ಕಂಪೆನಿ ಸಾಕ್ಷಿಯಾಗಿದೆ, ಎರಡು ವರ್ಷಗಳು ಕಳೆದದ್ದೇ ಗೊತ್ತಾಗಲಿಲ್ಲ. ಅನೇಕ ಗೆಳೆಯರನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಹೊಸ ಪ್ರಪಂಚಕ್ಕೆ ಕಾಲಿಡಲಿದ್ದೇನೆ ಸೋಮವಾರದಿಂದ. Wish me all the best.

ಕಡೆಯ ದಿನಗಳಲ್ಲಿ ಕಂಪೆನಿಯಲ್ಲಿ ತೆಗೆದ ಫೋಟೋಗಳನ್ನು ಬಿಡುವು ಮಾಡಿಕೊಂಡು ನೋಡಿಬಿಡಿ.

ಕಥೆಗಾರ....

Monday, September 29, 2008


ಇದು ನನ್ನ ತಂಗಿಯ ಅಬ್ಸರ್ವೇಶನ್. ಜೊತೆಗೆ ನನ್ನಗನ್ನಿಸಿದ್ದು ಸೇರಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಕಮೆಂಟಿಸಿ..

ಒಂದು ಮಧ್ಯಾನ್ಹ ಹೀಗೆ ಅವಳೊಡನೆ ಚರ್ಚಿಸುತ್ತಿದ್ದೆ, ಕನ್ನಡ ಬರಹಗಾರರ ಬಗ್ಗೆ, ತೇಜಸ್ವಿ ಬಹಳ ಚೆನ್ನಾಗಿ ಬರೀತಾರೆ, ಎಷ್ಟು ಸರಳವಾಗಿ ವಿಷಯ ಮುಟ್ಟಿಸುತ್ತಾರೆ, ಭೈರಪ್ಪನೋರು ಒಂಥರಾ ಸ್ತ್ಯಾಂಡರ್ಡ್, ಸಿಕ್ಕಾಪಟ್ಟೆ ಫಿಲಾಸಪಿ ಓದಿಕೊಂಡಿದ್ದಾರೆ, ಅವರ ಕಾದಂಬರಿಗಳು ಓದಿ ಮುಗಿಸಿದರೆ ಅದೇ ಗುಂಗಿನಲ್ಲಿ ಇರಬೇಕಾಗುತ್ತದೆ ಹಾಗೆ ಹೀಗೆ ಅಂತೆಲ್ಲ.

ತಟ್ಟನೆ ಹೇಳಿದಳು "ನೋಡಣ್ಣ ಈ ಕತೆಗಳು ಕಾದಂಬರಿಗಳು ಬರೆಯುವ ಮಂದಿಯನ್ನು ನೋಡಿದ್ದೇನೆ, ಅವರ್ಯಾರು ಮೂಲತ: ಬೆಂಗಳೂರಿನವರಲ್ಲ, ಅವರಿಗೊಂದು ಮೂಲವೆಂಬುದು ಇರುತ್ತದೆ ಅದು ಹಳ್ಳಿಗಳು. ಬೆಂಗಳೂರಿನ ಮೂಲದವರಿಗೆ ಒಳ್ಳೆ ಕತೆ ಹೆಣೆಯಲು ಆಗುವುದಿಲ್ಲವೆನಿಸುತ್ತದೆ" ಎಂದಳು.ನಾನು ಆದಾದ ಬಳಿಕ ಯೋಚಿಸತೊಡಗಿದೆ, ಬೆಳಗೆರೆ ಬಳ್ಳಾರಿಯವರು, ಭೈರಪ್ಪ ಚನ್ನಪಟ್ಟಣದ ಕಡೆಯವರು, ತೇಜಸ್ವಿ ಮೂಡಿಗೆರೆಯವರು, ಕಾಯ್ಕಿಣಿ ಗೋಕರ್ಣದವರು. ಅರೆರೆ ನನಗೆ ತಿಳಿದವರು ಬೆಂಗಳೂರಿನವರು ಯಾರು ಇಲ್ಲ!! ತಕ್ಷಣ soft soft software ಕತೆಗಳನ್ನು ಬರೆಯುವ ವಸುಧೇಂದ್ರರಿದ್ದಾರಲ್ಲ ಎಂದು ನಿರಾಳವಾಯಿತು. ನಾನು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ಅವರ ಕತೆಗಳು ಹೆಚ್ಚು ಇಷ್ಟವಾಗುತ್ತದೆ, ಕಾರಣ ಅದು ನಮಗೆ ಹತ್ತಿರವಾಗಿರುತ್ತದೆ. ಅವರ "ಎಲ್ಲರ ಮನೆ ಕಾರಿಗೂ ನೆಗ್ಗು" ಎಂಬ ಲೇಖನವನ್ನ ಪತ್ರಿಕೆಯಲ್ಲಿ ಓದಿದ್ದೆ. ಇಡೀ ಪತ್ರಿಕೆಯನ್ನ ಜತನವಾಗಿ ಇಂದಿಗೂ ಕಾಪಿಟ್ಟುಕೊಂಡಿದ್ದೇನೆ, ಅಷ್ಟು ನಕ್ಕಿದ್ದೇನೆ. ಒಬ್ಬರಾದರೂ ಸಿಕ್ಕರಲ್ಲ ಎಂದು ಅವರ ಪುಸ್ತಕ ತೆರೆದು ನೋಡಿದರೆ "ಬಳ್ಳಾರಿಯ ಸಂಡೂರಿನಲ್ಲಿ ಜನನ" ನೋಡಿ ನಿರಾಶನಾದೆ. ಉಹೂ ಬೆಂಗಳೂರಿನವರು ಸಿಗಲೇ ಇಲ್ಲ.
ಮತ್ತೆ ಹುಡುಕಿ ಹುಡುಕಿ ಸಾಕಾಯಿತು. ನಿಮಗಾರಾದರು ಗೊತ್ತಿದ್ದರೆ ತಿಳಿಸಿ.

ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಶಹರಗಳಲ್ಲಿ ಹುಟ್ಟಿ ಬೆಳೆದವರಿಗೆ ಕತೆಗಳು ಏಕೆ ಹುಟ್ಟುವುದಿಲ್ಲವೋ ನಾ ಕಾಣೆ. ನಾನು ಹಲವಾರು ಪ್ರಯತ್ನಿಸಿದ್ದೇನೆ, ಸಣ್ಣ ಕತೆಗಳು ಬರೆಯಲು. ರಭಸವಾಗಿ ಬೈಕ್ ಓಡಿಸುವಾಗ ಯಾವುದೋ ತಿರುವಿನಲ್ಲೋ ಸಿಗ್ನಲಿನಲ್ಲೋ ಕತೆ ಹುಟ್ಟಿಕೊಂಡಿರುತ್ತದೆ. ಲೋಕದ ಚಿಂತೆ ಮರೆತು ಕತೆಗೆ ರೆಕ್ಕೆ ಪುಕ್ಕ ಕಟ್ಟಲು ಕೂತಿದ್ದೇನೆ. ಬೈಕ್ ಪಾಡಿಗೆ ರಭಸವಾಗಿ ಹೋಗುತ್ತಿರುತ್ತದೆ ಕತೆಯ ಓಘ ಕೂಡ ಅದೇ ರಭಸದಲ್ಲಿ ಬೆಳೆಯುತ್ತಿರುತ್ತದೆ. "ಒಂದು ಮುಂಜಾವಿನಲ್ಲಿ ಆತ ಹಳ್ಳಿಯಿಂದ ಹೊರಟ, ಮನೆಯಲ್ಲಿ ಇನ್ನು ಇರಲಾಗುವುದಿಲ್ಲವೆಂದು ನಿರ್ಧರಿಸಿದ, ಮನೆಯ ಕಿರುಕುಳ ಸಾಕೆಂದು .........." ಹೀಗೆ ಹಲವು ಸಾಲುಗಳು. ಮತ್ತೆ ಕತೆ ಆರಂಭಿಸಲು ಯಾವುದೋ ಹಳ್ಳಿ ಹೆಸರನ್ನು ತಡಕಾಡುತ್ತಿರುತ್ತೇನೆ. ಜೀವಮಾನದಲ್ಲೇ ಒಂದು ಹಳ್ಳಿಯನ್ನೂ ಸರಿಯಾಗಿ ನೋಡದ, ಅಲ್ಲಿನ ಪರಿಸರ ತಿಳಿಯದ ನಾನು ಕತೆ ಹೇಗೆ ಬರೆಯಲು ಸಾಧ್ಯ?M G road ಶುರುವಾಗುವ ಹೊತ್ತಿಗೆ ಶುರುವಾಗುವ ಕತೆ Corporation ಬಳಿ ಬರುವುದರೊಳಗಾಗಿ ರೆಕ್ಕೆ ಪುಕ್ಕ ಸರಿಯಾಗಿ ಅಂಟಿಕೊಳ್ಳದೆ ಕತೆ ಸತ್ತಿರುತ್ತದೆ, ಬೈಕ್ ನ ವೇಗವೂ ಕಮ್ಮಿಯಾಗಿರುತ್ತದೆ. ಕತೆ ಬರೆಯಲು ಮನಸಿನ್ನೂ ಮಾಗಿಲ್ಲವೆಂದು ಸುಮ್ಮನಾಗುತ್ತೇನೆ. ತೇಜಸ್ವಿಯವರ "ಚಿದಂಬರ ರಹಸ್ಯ" ಓದಿ ಅದರಲ್ಲಿ ಬರುವ ಲಂಟಾನದ ಜಿಗ್ಗು ತಿಳಿಯಲು ನಾನು ಪಟ್ಟ ಹರಸಾಹಸ ಅರುಣನಿಗೆ ಮಾತ್ರ ಗೊತ್ತು. ರಂಗಶಂಕರದಲ್ಲಿ ನಾಟಕವನ್ನು ಏರ್ಪಡಿಸಿದಾಗ ನಾನು ಕಾಯುತ್ತಲಿದ್ದು ಲಂಟಾನದ ಜಿಗ್ಗು ನೋಡಲೆಂದೆ. ಮುಳ್ಳಯ್ಯನಗಿರಿ ಚಾರಣದಲ್ಲಿ ಅರುಣ ತೋರಿಸಿದ್ದ "ಇದೇ ಕಣೊ ಲಂಟಾನದ ಜಿಗ್ಗು" ಎಂದು..ಇನ್ನು ಸಮಾಧಾನವಾಗಿಲ್ಲ. ತೇಜಸ್ವಿಯರ ಕತೆಗಳ ಪಾತ್ರಗಳೇ ತಿಳಿಯಲು ಇಷ್ಟು ಒದ್ದಾಡಿದರೆ ನಾನು ಹೇಗೆ ತಾನೆ ಕತೆ ಬರೆಯಬಲ್ಲೆನು?

ಕನ್ನಡದಲ್ಲಿ ಆರುನೂರಕ್ಕೂ ಹೆಚ್ಚು ಬ್ಲಾಗುಗಳಿದೆ. ಅದರಲ್ಲಿ ಬೆಂಗಳೂರಿನವರೆಂದರೆ ಎಂದರೆ ಒಂದಂಕಿಯಲ್ಲಿ ಎಣಿಸಿಬಿಡಬಹುದು. ಎಲ್ಲರಿಗೂ ಬೇರೆಯ ಮೂಲವೊಂದಿರುತ್ತದೆ. ಅದಕ್ಕಾಗಿ ಕತೆಗಳು ಹುಟ್ಟುತ್ತವೆ ಎನಿಸುತ್ತಿದೆ ನನಗೆ. ಒಂದಷ್ಟು ಹಳ್ಳಿಗಳು, ಬೆಟ್ಟಗಳು, ಊರು ಕೇರಿ ಸುತ್ತಿ ಬಂದರೆ ಕತೆಗಳನ್ನ ಬರೆಯಬಹುದೇನೊ? ಬರೆದರೆ ಖಂಡಿತಾ ನಿಮ್ಮ ಮುಂದಿಡುತ್ತೇನೆ.

ವಿ.ಸೂ : ಇಲ್ಲಿ ಬೆಂಗಳೂರಿನವರು ಏಕೆ ಕತೆ ಬರೆಯಲಾಗುತ್ತಿಲ್ಲ ಎಂಬುದನ್ನ ತಿಳಿಯಲು ಯತ್ನಿಸಿರುವದರ ಬಗ್ಗೆ ಬರೆದಿದ್ದೇನಷ್ಟೆ, ಬೇರೆ ಊರಿನವರ ಬಗ್ಗೆ ಜೆಲಸಿ ಇದೆಯೆಂದು ಅಪ್ಪಿ ತಪ್ಪಿಯೂ ಕೂಡ ಭಾವಿಸಬೇಡಿ. ಜೈ ಕರ್ನಾಟಕ.

ನಾನೇಕೆ ಬರೆಯುತ್ತಿಲ್ಲ!!??...

Wednesday, September 24, 2008


ಎಸ್. ಎಲ್. ಭೈರಪ್ಪನವರ  "ನಾನೇಕೆ ಬರೆಯುತ್ತೇನೆ" ಎಂಬ ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಇಂತಹುದೊಂದು ಲೇಖನ ಕುಟ್ಟುತ್ತಿದ್ದೇನೆ. ಹೌದು "ನಾನೇಕೆ ಬರೆಯುತ್ತಿಲ್ಲ" ??


ಇದು ನನಗನ್ನಿಸಿದ್ದು ಬ್ಲಾಗ್ ಬರೆಯುವುದು ಬಿಟ್ಟು ಸುಮಾರು ಎರಡು ತಿಂಗಳಾಗುವ ಹೊತ್ತಿಗೆ. ಅರುಣ ಚಾಟ್ ನಲ್ಲಿ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ ಪಿಂಗಿ "ಬರ್ಯೋ ಇವತ್ತಾದ್ರು" ಎನ್ನುತ್ತಿದ್ದ, ಶ್ರೀಕಾಂತ್ ನನ್ನ ಹಳೆಯ ಬ್ಲಾಗ್ ಲೇಖನದ ಕೊಂಡಿಗಳನ್ನು ಗೆಳೆಯರಿಗೆ ಕಳಿಸಿ ಬ್ಲಾಗ್ update ಆಗಿದೆ ಎಂದು ಸಾರುತ್ತಿದ್ದ!!. ಲಕ್ಷ್ಮಿ "ಕರ್ಮಕಾಂಡ ಪ್ರಭುಗಳೇ , ಕಂಗ್ಲೀಷ್ ನಲ್ಲಿ ಲೇಖನ ಬರೆದು ಕೊಡಿ ಕನ್ನಡಕ್ಕೆ ತರುವ ಜವಾಬ್ದಾರಿ ನನ್ನದು" ಎನ್ನುತ್ತಿದ್ದರು.. ಎಲ್ಲರ ಮಾತಿಗೂ, ಅಪ್ಪಣೆಗೂ, ಬೆದರಿಕೆಗೂ, ಛೀಮಾರಿಗಳಿಗೂ "ದಿವ್ಯ"ಮೌನ ವಹಿಸಿದ್ದೆ.

 

ಹೊಸ ಕೆಲಸ ಹುಡುಕುವ ಗೋಜಿನಲ್ಲೇ ಇವರುಗಳೆಲ್ಲರ ಬ್ಲಾಗುಗಳನ್ನು ಓದುತ್ತಿದ್ದೆ. ಓದುವುದು ಕಮೆಂಟಿಸುವುದು ಇಷ್ಟಕ್ಕೆ ಸೀಮಿತವಾಗಿತ್ತು ನನ್ನ ಬರವಣಿಗೆ. ಇತ್ತ ಅರುಣ consistent ಆಗಿ ಪರಿಸರಪ್ರೇಮಿ ಮತ್ತು Speaktonature ನಲ್ಲಿ ಯಾವುದೇ ಅಡೆ ತಡೆಯಿಲ್ಲದೆ ಅಂಕಣಗಳು ಹೊರಹೊಮ್ಮುತ್ತಿತ್ತು, ಲಕ್ಷ್ಮಿಯಂತೂ 5-6 ಬ್ಲಾಗುಗಳನ್ನು ನಿಭಾಯಿಸುತ್ತಿದ್ದರು, ವಾರಕ್ಕೆ ಎರಡರಂತೆ ಲೇಖನಗಳು ಬರುತ್ತಿದ್ದವು, ಚಾಟ್ ಗೆ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ update ಸರಮಾಲೆ ಹೇಳುತ್ತಿದ್ದರು. ಶ್ರೀಕಾಂತ ಆಗಾಗ್ಗೆ

ವೈಚಾರಿಕ ಲೇಖನಗಳನ್ನು ಹರಿಯಬಿಡುತ್ತಿದ್ದ ಮತ್ತು ಶ್ರೀನಿವಾಸ ಆಂಗ್ಲಭಾಷೆಯಲ್ಲಿ ಬರೆಯಲು ಶುರುಮಾಡಿದ್ದ. ಅರೆರೆ ನನ್ನ ಗೆಳೆಯರೆಲ್ಲಾ ಬರೆಯುತ್ತಿದ್ದಾರೆ, ಒಂದರ ಮೇಲೊಂದಂತೆ ಒಂದರ ಮೇಲೊಂದಂತೆ. ಏನಾದರಾಗಲಿ ಕುಪ್ಪಳ್ಳಿ ಪ್ರವಾಸ ಕಥನವನ್ನು ಮುಗಿಸಿಯೇ ಬಿಡುವ ಎಂದು ಕೂತು 10ಸಾಲುಗಳಿಂದ 20ಸಾಲಿಗೆ ಏರಿಸಿಬಿಟ್ಟೆ, ಆ ಜೋಷ್ ನಲ್ಲಿ, ಅಷ್ಟೇ ಅದು ಅಲ್ಲಿಗೆ ನಿಂತುಬಿಟ್ಟಿತು, ಅರುಣನಿಗೆ ಹೇಳಿದೆ "ಕುಪ್ಪಳ್ಳಿ ಲೇಖನ ಬರೀತಿದೀನಿ ಕಣೊ" ಎಂದು ಹಲ್ಲುಕಿರಿಯುತ್ತ. ಯಥಾಪ್ರಕಾರ ಬೈದು ಹೂಂಕರಿಸಿ ಸುಮ್ಮನಾದ. ಈ "ಕುಪ್ಪಳ್ಳಿ" ಪ್ರವಾಸ ಕಥನಕ್ಕೆ ಅರುಣನಿಂದ ಕಾಫಿಯಲ್ಲಿ ವಿಷಬೆರಕೆ ಶ್ರೀಕಾಂತನಿಂದ ಕೊಲೆಬೆದರಿಕೆ ಎಲ್ಲವನ್ನು ಎದುರಿಸಿದ್ದೇನೆ, ಏಕೋ ಏನೋ ಅದು ಅದು ಮುಂದೆ ಹೋಗುತ್ತಿಲ್ಲ ಕರ್ಮಕಾಂಡ ಬ್ಲಾಗಿಗೆ ಅಲಂಕರಿಸುವ ಯೋಗ ಎಂದಿದೆಯೋ??

 

ಮತ್ತೆ ಅದೇ ಪ್ರಶ್ನೆಗೆ ಬರೋಣ, ನಾನೇಕೆ ಬರೆಯುತ್ತಿಲ್ಲ?? ಕಾರಣಗಳು ಹಲವಾರು. ಹೊಸಕೆಲಸ ಹುಡುಕುವುದೇ ಮುಖ್ಯವಾಗಿತ್ತು, ಈಗ ಮಾಡುತ್ತಿದ್ದ ಕೆಲಸ ಅನುಕೂಲಕರವಾಗಿರದುದ್ದರ ಪರಿಣಾಮ ಹೊಸತನ್ನು ಹುಡುಕಲೇ ಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ಸಂದರ್ಶನಗಳಿಗೆ ಅಣಿಯಾಗುತ್ತಲಿದ್ದೆ ಇಷ್ಟು ದಿನವೂ, ಅದಕ್ಕಾಗಿ ಬರವಣಿಯೆಡೆಗೆ ಬರಲಾಗಲಿಲ್ಲ. ಮುಂದಿನ ತಿಂಗಳಿಂದ ಬೇರೆ ಕಂಪೆನಿಗೆ ಹೋಗಲಿದ್ದೇನೆ. ಏಲ್ಲೋ ನಡೆದು ಹೋಗುತ್ತಿರುವಾಗ, ಬೈಕ್ ಓಡಿಸುತ್ತಿರುವಾಗ, ಇನ್ನೇನು ನಿದ್ದೆ ಹತ್ತುತ್ತಿದೆ ಅನ್ನುವಾಗ ಪುಂಖಾನುಪುಂಖವಾಗಿ ಲೇಖನಗಳು ಬಂದಿವೆ, ಎಷ್ಟು ಕೊರೆತ ಎಂದರೆ ಬರೆದುಬಿಡಲೇ ಬೇಕು ಎಂದು ತಡಬಡಿಸಿ ಸಿಸ್ಟಮ್ ಮುಂದೆ ಕೂತ ಕೂಡಲೇ ಎಲ್ಲವೂ ಖಾಲಿ ಖಾಲಿ. ಹೀಗೆಷ್ಟು ಬಾರಿ ಆಗಿದೆಯೋ ಲೆಕ್ಕವಿಟ್ಟಿಲ್ಲ. ಬರೆಯಬೇಕು ಅನಿಸಿದಾಗಲೆಲ್ಲ ಬರೆದುಬಿಟ್ಟಿದ್ದರೆ ಅದರ ಕತೆಯೇ ಬೆರೆಯದಾಗಿರುತ್ತಿತ್ತು, ಸುಮ್ಮನೇ ಶೀರ್ಷಿಕೆಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದೆ. ನನ್ನ ಕನ್ನಡ ಕೈಬರಹ ಯಾವುದೇ ಗುಪ್ತಭಾಷೆಗೂ ಕಮ್ಮಿಯಿಲ್ಲದುದ್ದರ ಕಾರಣ ಪೆನ್ನು ಹಿಡಿದು ಪೇಪರಿನ ಮೇಲೆ ಬರೆಯುವ ದುಸ್ಸಾಹಸ ಮಾಡಲಿಲ್ಲ. ಈಗಲೂ ಸಾಕಷ್ಟು ಶೀರ್ಷಿಕೆಗಳು ಹರಿದಾಡುತ್ತಿವೆ. "ನಾನೇಕೆ ಬರೆಯುತ್ತಿಲ್ಲ" ಎಂದು ಮತ್ತೆ ಬರವಣಿಗೆ ಶುರು ಮಾಡಿದ್ದೇನೆ.

 

ನಿಮ್ಮ ಹಾರೈಕೆಯಿರಲಿ. 

ಸೈಕೊ....

Sunday, September 14, 2008

ಚಿತ್ರ ಬಿಡುಗಡೆಯಾಗಬೇಕಿದೆ, ಅಪಾರ ನಿರೀಕ್ಷೆ ಹೊತ್ತಿದ್ದೇನೆ ಚಿತ್ರದ ಬಗ್ಗೆ, ಜಯಂತ್ ಕಾಯ್ಕಿಣಿ ಯುಗಳಗೀತೆಗಳ ರಚನಾಕಾರರಾಗಿ ಹೊರಹುಮ್ಮುತ್ತಿದ್ದಾರೆ.

ನನಗೆ ಬಹಳ ಇಷ್ಟವಾದ ಹಾಡೊಂದನ್ನು ನಿಮ್ಮ ಮುಂದಿರಿಸಿದ್ದೇನೆ. ಗುನುಗಿಕೊಳ್ಳಿ....

 

ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು

ಅನುರಾಗದಲ್ಲಿ ಹೊಳೆ ಹೊಳೆಯುತ ನಸು ನಾಚಿ ನಿಂದಿರಲು ನೀನು

ಮರುಳಾದೆ ದಿವ್ಯಸಖಿ ನಿನಗೆ ಪ್ರಣಾಮ, ಅಪರೂಪ ರೂಪಸಿಯೇ ನಿನಗೆ ಪ್ರಣಾಮ

 

ತಂಗಾಳಿಯಂತೆ ಸುಳಿ ಸುಳಿಯುತ ಆವರಿಸಿಕೊಂಡಿರಲು ನೀನು

ಕುಡಿನೋಟದಲ್ಲೆ ನುಲಿ ನುಲಿಯುತ ನೀವರಿಸಿನಿಂದಿರಲು ನೀನು

ಮನಸೋತೆ ಮೋಹಿತನೆ ನಿನಗೆ ಪ್ರಣಾಮ, ಹಿತವಾದ ಸ್ನೇಹಿತನೆ ನಿನಗೆ ಪ್ರಣಾಮ

 

ಕನಸಲ್ಲು ಹುಚ್ಚನಂತೆ ನಿನಗಾಗಿ ಓಡುವೆ, ಮೈಮರೆತು ಸಂತೆಯಲ್ಲೂ ನಿನ್ನನ್ನೆ ಕೂಗುವೆ

ಒರಗಿರಲು ನಿನ್ನ ಮಡಿಲಲಿ

ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ, ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಜೀಕುವೆ

ನೀನಿರಲು ನನ್ನಾ ಕತೆಯಲಿ

 

ನಾನಿರುವೆ ನಿನ್ನಾ ಜೊತೆಯಲಿ

 

ಬೆಳದಿಂಗಳಂತೆ ಮಿನು ಮಿನುಗುತ ||

 

 

ಕಣ್ತುಂಬ ನಿನ್ನ ಅಂದ ಸವಿಯುತ್ತಾ ಕೂಡಲೇ, ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೇ

ನೀನಿರಲು ನನ್ನಾ ತೊಳಲಿ

ನಾನೆಂದು ನೋಡದಂತ ಬೆಳಕೊಂದು ಮೂಡಿದೆ ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ

ಕೈಯಿರಲು ನಿನ್ನಾ ಕೈಯಲಿ

 

ನಾನಿರುವೆ ನಿನ್ನಾ ಬಾಳಲಿ

 

ಬೆಳದಿಂಗಳಂತೆ ಮಿನು ಮಿನುಗುತ ||