ಜೈ ಕನ್ನಡ...

Saturday, November 1, 2008


ಎಲ್ಲರಿಗೂ 53ನೆಯ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಹೆಚ್ಚು ಹೆಚ್ಚು ಕನ್ನಡಲ್ಲೇ ಮಾತನಾಡಿ, ಕನ್ನಡ ಉಳಿಸಿ, ಬೆಳೆಸಿ, ಜೊತೆಗೆ ನೀವು ಬೆಳೆಯಿರಿ(ಇದು ನಾನು 53 ನೆಯ ರಾಜ್ಯೋತ್ಸವದ ಸಂಧರ್ಭದಲ್ಲಿ ನಾಡಿಗೆ ಕೊಡುತ್ತಿರುವ ಕರೆ ;-) )


ಇದೇ ಸಂಧರ್ಭದಲ್ಲಿ ಕನ್ನಡವನ್ನು ಶಾಸ್ತ್ರೀಯ ಭಾಷೆಯೆಂದು ಕೇಂದ್ರ ಸರಕಾರ ಘೋಷಿಸಿದೆ,ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು, ನೆರೆಯ ತೆಲುಗಿಗೂ ಈ ಭಾಗ್ಯ ಲಭಿಸಿದೆ.Cheers...


ಶಾಸ್ತ್ರೀಯ ಭಾಷೆ ಎಂದರೆ ಒಂದು ಭಾಷೆ ತನ್ನ ಅಸ್ತಿತ್ವದಲ್ಲಿ, ದಶಕಗಳಿಂದ ತನ್ನ ಪ್ರಭಾವನ್ನು ಬೀರಿದ್ದೇ ಆದರೆ ಹಾಗೂ ತನ್ನ ಮೂಲ ರೂಪದಿಂದ ಬೇರೆ ರೂಪಗಳನ್ನು ಪಡೆದಿದ್ದಾಗ್ಯೂ ಅದರ ಪ್ರಭಾವ ಹಾಗೆ ಉಳಿಸಿಕೊಂಡಿರುವ ಭಾಷೆಯನ್ನು "Classical" ಅಥವಾ ಶಾಸ್ತ್ರೀಯ ಭಾಷೆಯೆನ್ನುತ್ತಾರೆ.


ಶಾಸ್ತ್ರೀಯ ಭಾಷೆಯ ಬಗ್ಗೆ ಒಂದಷ್ಟು ತುಣುಕುಗಳು :

1)ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲಿಕ್ಕೆ ಇವಿಷ್ಟೂ ಅಂಶಗಳು ಮಾನದಂಡ

-ಭಾಷೆಯು ಕನಿಷ್ಟವೆಂದರೂ ಸಾವಿರ ವರ್ಷ ಪುರತನದ್ದಾಗಿರಬೇಕು(ಕನ್ನಡ ಎರಡು ಸಾವಿರ ವರ್ಷಕ್ಕಿಂತಲೂ ಪುರಾತನವಾದದ್ದು)

-ಭಾಷೆಗೆ ಅಷ್ಟು ವರ್ಷಗಳ ಐತಿಹ್ಯವಿರಬೇಕು, ಅದರ ಸಲುವಾಗಿ ಶಾಸನಗಳು, ಸೂಕ್ತ ದಾಖಲೆಗಳು ಹೊಂದಿರಬೇಕು.

-ಭಾಷೆಯು ಸ್ವಂತದ್ದಾಗಿರಬೇಕು, ಬೇರೆ ಭಾಷೆಯಿಂದ ಟಿಸಿಲೊಡೆದಿರಬಾರದು.


2)ಶಾಸ್ತ್ರೀಯ ಭಾಷೆಯನ್ನು ಮೃತ(!!) ಭಾಷೆಯೆಂದೂ ಕರೆಯುತ್ತಾರೆ, ಕಾರಣ ಅದರ ಮೂಲರೂಪದಿಂದ ಕವೊಲೊಡೆದು ಈಗ ಬೆರೆಯೆ ತೆರೆನಾದ ರೂಪವನ್ನು ಹೊಂದಿರುತ್ತದೆ.


3)ಸಂಸ್ಕೃತ ಭಾಷೆಯು ಪ್ರಪಂಚದ ಶಾಸ್ತ್ರೀಯ ಭಾಷೆಗಳ ಪಟ್ಟಿಯಲ್ಲಿದೆ, ಅದರ ಜೊತೆಗೆ ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳು ಕೂಡ ಇವೆ.


4)ತಮಿಳು ಭಾಷೆಯನ್ನು 2004 ರಲ್ಲಿ ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಲಾಯಿತು. ಅದರ ಹಿಂದೆ ನಲವತ್ತು ವರ್ಷಗಳ ಹೋರಾಟವಿತ್ತು.

ಶಾಸ್ತ್ರೀಯ ಭಾಷೆಯ ಗರಿಯನ್ನು ಸಿಕ್ಕಿಸಿಕೊಂಡದ್ದಾಯಿತು. ಇನ್ನಷ್ಟು ಕನ್ನಡ ಸಾಹಿತ್ಯದಲ್ಲಿ ಕೃಷಿಯಾಗಲಿ, ಕನ್ನಡ ಇನ್ನಷ್ಟು ಮತ್ತಷ್ಟು ಮುಗಿಲಿಗೇರಲಿ ಎನ್ನುವ ಆಶಯದೊಂದಿಗೆ ಮತ್ತೊಮ್ಮೆ ತಮಗೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.

(ಫೋಟೋ ಕಾಣಿಕೆ : ಡೈನಮಿಕ್ ದಿವ್ಯಾ)


ITC Infotech ಗೆ ವಿದಾಯ

Wednesday, October 29, 2008

ಈ ಲೇಖನವನ್ನ 24-ಶುಕ್ರವಾರ-2008 ರಂದೇ ಬರೆಯಬೇಕಿತ್ತು, ಕಾರಣಾಂತರಗಳಿಂದ ಆಗಲಿಲ್ಲ. ಅಂದಿನ ದಿನಾಂಕಕ್ಕೆ ಸಮೀಕರಿಸಿಕೊಳ್ಳಿ ;-)



ನನ್ನ ಜೀವನದ 22ವರುಷಗಳದ್ದು ಒಂದು ಪರ್ವವಾದರೆ ಇನ್ನೆರಡು ವರ್ಷ ಮತ್ತೊಂದು ಪರ್ವ. ಪರ್ವದಲ್ಲಿ ನನ್ನ ಮೊದಲ ಕಂಪೆನಿಯಾದ ITC Infotech ಗೆ ತನ್ನದೇ ಆದ ಸ್ಥಾನವಿದೆ. ಹಲವಾರು ಮೊದಲುಗಳಿಗೆ ಕಾರಣವಾಗಿದೆ. ಒಂದು ಕಂಪೆನಿಯಲ್ಲಿ ಹೇಗಿರಬೇಕು ಎಂಬುದರಿಂದ ಹಿಡಿದು ಜನರ ಜೊತೆ ಹೇಗಿರಬಾರದು ಎಂಬುದರವರೆಗೂ ಕಂಪೆನಿ ಕಲಿಸಿಕೊಟ್ಟಿದೆ. ಅನೇಕ ಕಟು ಸತ್ಯಗಳನ್ನು ಕಲಿಸಿದೆ, ಸಿಹಿ ಸಿಂಚನಗಳಿಗೇನೂ ಕಮ್ಮಿಯಿಲ್ಲ. ಹೌದು ಇಂದು ಕಂಪೆನಿಯಿಂದ ಬೇರ್ಪಡುತ್ತಿದ್ದೇನೆ ಇನ್ನೊಂದು ಕಡೆಗೆ...Change is the only constant thing in Life...Hmmm

ಎಂಜಿನಿಯರಿಂಗ್ ವಿದ್ಯಾರ್ಥಿ ಜೀವನದ ಮುಂದುವರಿದ ಭಾಗದಂತೇ ಇತ್ತು ITC Infotech ನಲ್ಲಿ ನನ್ನ ದಿನಗಳು. ನನ್ನ ಜೊತೆ ಸೇರಿದವರೆಲ್ಲರನ್ನು ನಾನು ಗೆಳೆಯರೆಂದೇ ಹೇಳಲಿಚ್ಚಿಸುತ್ತೇನೆ, ಯಾರೊಬ್ಬರನ್ನು ಕಲೀಗ್ಸ್ ಎಂದು ಸಂಭೋದಿಸಲು ಇಂದಿಗೂ ಮುಜುಗರವಾಗುತ್ತದೆ. ಎರಡು ವರ್ಷಗಳು ಆಟ ಆಡಿಕೊಂಡೇ ಕಳೆದುಬಿಟ್ಟೆ. ಕೆಲಸ ಮಾಡುತ್ತಿದ್ದೇನೆ ಎಂದೆನಿಸುತ್ತಿರಲಿಲ್ಲ, ಕಾಲೇಜಿಗೇ ಹೋಗಿ ಬರುವಂತಿತ್ತು ದಿನವೂ. ಇಂದಿಗೆ ನನ್ನ ಎಲ್ಲ ಆಟಗಳಿಗೆ, ಆರಾಮದಾಯಕ Professional ಜೀವನಕ್ಕೆ ತೆರೆ ಬಿದ್ದಿದೆ. ನಾನು ಈಗ ಹೋಗುತ್ತಿರುವ ಕಡೆ ಹೇಗಿರುತ್ತದೋ ಏನೋ??

ಕಳೆದ ವಾರವೇ ನನ್ನ ಕಟ್ಟ ಕಡೆಯ ರಾತ್ರಿ ಪಾಳಿಯನ್ನು ಇಡೀ ರಾತ್ರಿ ತೂಕಡಿಸದೆ ವಿಜೃಂಭಣೆಯಿಂದ ನಾನೊಬ್ಬನೇ ಆಚರಿಸಿದ್ದೆ. ಅಲ್ಲೆಲ್ಲಾ ನಾನೊಬ್ಬನೇ ತಿರುಗಾಡುತ್ತಾ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದೆ. ಮತ್ತೆ ಹೀಗೆ ರಾತ್ರಿಯೆಲ್ಲಾ ಕೆಲಸ ಮಾಡುವ ಕರ್ಮವಿರುವುದಿಲ್ಲವೆಂಬ ಸಂತೋಷ ಒಂದು ಕಡೆಯಾಗಿದ್ದರೆ ಇಂದಿಗೆ ಮತ್ತೆ ಇವೆಲ್ಲವನ್ನು ಮಿಸ್ ಮಾಡಿಕೊಳ್ಳುತ್ತೇನೆಂಬ ದುಗುಡ ಇನ್ನೊಂದು ಕಡೆ. ರಾತ್ರಿ ಪಾಳಿಯಲ್ಲಿ ಇಡೀ ರಾತ್ರಿ ಇರುತ್ತಿದ್ದದ್ದೆ ಹಾಗೆ, ಕೆಲಸವಿದ್ದರೆ ಯಾವುದೇ ತಾಪತ್ರಯವಿರುತ್ತಿರಲಿಲ್ಲ, ಹೇಗೋ ಎಚ್ಚರವಾಗಿದ್ದು ಕೆಲಸ ಮಾಡುವುದರಲ್ಲಿ ಮಗ್ನರಾಗಿ ಸಮಯ ಕಳೆಯುತ್ತಿದ್ದೆವು, ಕೆಲಸ ಇರದಿದ್ದರೆ 2 ಗಂಟೆಯೊಳಗಾಗಿ ನಿದಿರಾದೇವಿ ಆವರಿಸಿಕೊಳ್ಳುತ್ತಿದ್ದಳು, ತನ್ನ ಕಬಂದ ಬಾಹುಗಳನ್ನು ಚಾಚಿ ಬರಸೆಳೆದು ನಿದಿರೆಗೆ ಜಾರಲು ಪ್ರೇರೇಪಿಸುತ್ತಿದ್ದಳು, ಅದರ ಪರಿಣಾಮ ಅಲ್ಲೇ ತೂಕಡಿಸಿ ಹಾಗೆ ಒರಗಿಕೊಂಡು ನಿದಿರೆಗೆ ಜಾರಿಬಿಡುತ್ತಿದ್ದೆ. ರಾತ್ರಿ ಪಾಳಿಯ ಇನ್ನೊಂದು ಸೊಗಸೆಂದರೆ ಕೆಲಸ ಮಾಡುತ್ತ ಹಾಡುಗಳು ಕೇಳುತ್ತಾ, ಕಾಪಿ ಹೀರುತ್ತ ಆರಮಾಗಿ ಇರಬಹುದಾಗಿತ್ತು , ಯಾರೊಬ್ಬರು ಕೇಳಲು ಇರುತ್ತಿರಲಿಲ್ಲ. ನಮ್ಮ ಕೆಲಸಗಳು ಸಾವಧಾನವಾಗಿ ಮಾಡಿಕೊಳ್ಳಬಹುದಾಗಿತ್ತು, ಹೊಸ ವಿಷಯಗಳ ಕಲಿಕೆಗೂ ಬಹಳ ಪೂರಕವಾಗಿತ್ತು. ಆದರೆ ಅದರಿಂದ ಆರೋಗ್ಯ ಹದಗೆಡುತ್ತಿತ್ತು. ನಾಲ್ಕು ತಿಂಗಳ ಹಿಂದೆ ಇನ್ನು ಮುಂದೆ ರಾತ್ರಿ ಪಾಳಿಗೆ ಬರಲಾಗುವುದಿಲ್ಲವೆಂದು ನನ್ನ ಮ್ಯಾನೇಜರಿಗೆ ಖಡಾಖಂಡಿತವಾಗಿ ಹೇಳಿಬಿಟ್ಟೆ. ಅವೆಲ್ಲಾ ಮುಗಿದ ಮೇಲೆ ಬೇರೆ ಕಂಪೆನಿಯಲ್ಲಿ ಕೆಲಸ ದೊರೆತು ನನ್ನ ರಾಜೀನಾಮೆಯನ್ನು ನೀಡಿದ ಬಳಿಕ ಮ್ಯಾನೇಜರಿನ ಕೋರಿಕೆಯ ಮೇರೆಗೆ ಮತ್ತೆ ಒಂದು ವಾರ ರಾತ್ರಿ ಪಾಳಿಗೆ ಒಪ್ಪಿಕೊಂಡೆ. ಅದನ್ನು ಕಳೆದ ಶುಕ್ರವಾರ(17-Friday-2008) ಮುಗಿಸಿದೆ.

ಕಡೆಯ ವಾರ ಕಂಪೆನಿಯಿಂದ ಹೊರನಡೆಯಲು ಇದ್ದ ಬದ್ದ ಎಲ್ಲ ನಿಯಮಾವಳಿಗಳನ್ನು ಮುಗಿಸುವುದರಲ್ಲಿ ಒಡಾಡುತ್ತಿದ್ದೆ. ಪ್ರತಿಯೊಂದು ವಿಭಾಗದಲ್ಲೂ ಅವರ ಸಹಿ ಹಾಕಿ, ಕ್ಲಿಯರೆನ್ಸ್ ಪತ್ರ ಕೊಡುತ್ತಿದ್ದ ಹಾಗೆ ಇಂಚಿಂಚಾಗಿ ಕಂಪೆನಿಯಿಂದ ಬೇರ್ಪಡುತ್ತಿದ್ದ ಭಾವ ಸುಳಿಯುತ್ತಿತ್ತು. ಮತ್ತೆ ವಾಪಸು ಸೇರಿಬಿಡೋಣವೇ ಎಂದಂತಲೂ ಅನಿಸುತ್ತಿತ್ತು, ನಿರ್ಧಾರ ಬಿಗಿ ಮಾಡಿ ಮುಂದಿನ ವಿಭಾಗದೆಡೆಗೆ ನಡೆದೆ.


ಎಲ್ಲಾ ವಿಭಾಗಗಳಿಂದಲೂ ಕ್ಲಿಯರೆನ್ಸ್ ಪತ್ರ ಪಡೆದು ಕಂಪೆನಿಗೆ ಪಾವತಿಸಬೇಕಾದ ಹಣ ಪಾವತಿಸಿ ಸಂಜೆ ಐದರ ಹೊತ್ತಿಗೆ ಕಂಪೆನಿಯ ರಿಲೀವಿಂಗ್(ಕನ್ನಡ ಪದ ತಿಳಿಯಲಿಲ್ಲ) ಪತ್ರ ಇಸಿದುಕೊಂಡೆ. ನನ್ನ ಕಂಪೆನಿ ಗೆಳೆಯರು ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ ಎರಡು ಮಾತನಾಡಿ ಎಲ್ಲರ ಕೈಕುಲುಕಿ ಎಲ್ಲಾ ಮುಗಿದ ಮೇಲೆ ಅಲ್ಲೇ ಮೂಲೆಯಲ್ಲಿ ಒಂದೆಡೆ ಕುಳಿತೆ. ಸಂಜೆ ಗೆಳೆಯರಿಗೆ Farewell ಪಾರ್ಟಿ ಕೊಡಿಸಿ ಮತ್ತೆ ಆಫೀಸಿಗೆ ಹಿಂದಿರುಗಿದಾಗ ಗಂಟೆ ಹತ್ತಾಗಿತ್ತು. ಲೀಟರುಗಟ್ಟಲೆ ಕಾಫಿ ಎರಕ ಹೊಯ್ದಿದ್ದ ಕಾಫಿ ಮೆಶೀನಿನ ಎರಡು ಫೋಟೋ ಕ್ಲಿಕ್ಕಿಸಿ ಮತ್ತೊಂದು ಕಪ್ ಕಾಫಿ ಕುಡಿದು ಜಡಿ ಮಳೆಯಲ್ಲೇ ಮನೆಗೆ ಹಿಂದಿರುಗಿ ಬಂದೆ.

ಪದಗಳಿಗೆ ನಿಲುಕದ ಅನೇಕ ಭಾವಗಳಿಗೆ ನನ್ನ ಮೊದಲ ಕಂಪೆನಿ ಸಾಕ್ಷಿಯಾಗಿದೆ, ಎರಡು ವರ್ಷಗಳು ಕಳೆದದ್ದೇ ಗೊತ್ತಾಗಲಿಲ್ಲ. ಅನೇಕ ಗೆಳೆಯರನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಹೊಸ ಪ್ರಪಂಚಕ್ಕೆ ಕಾಲಿಡಲಿದ್ದೇನೆ ಸೋಮವಾರದಿಂದ. Wish me all the best.

ಕಡೆಯ ದಿನಗಳಲ್ಲಿ ಕಂಪೆನಿಯಲ್ಲಿ ತೆಗೆದ ಫೋಟೋಗಳನ್ನು ಬಿಡುವು ಮಾಡಿಕೊಂಡು ನೋಡಿಬಿಡಿ.

ಕಥೆಗಾರ....

Monday, September 29, 2008


ಇದು ನನ್ನ ತಂಗಿಯ ಅಬ್ಸರ್ವೇಶನ್. ಜೊತೆಗೆ ನನ್ನಗನ್ನಿಸಿದ್ದು ಸೇರಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಕಮೆಂಟಿಸಿ..

ಒಂದು ಮಧ್ಯಾನ್ಹ ಹೀಗೆ ಅವಳೊಡನೆ ಚರ್ಚಿಸುತ್ತಿದ್ದೆ, ಕನ್ನಡ ಬರಹಗಾರರ ಬಗ್ಗೆ, ತೇಜಸ್ವಿ ಬಹಳ ಚೆನ್ನಾಗಿ ಬರೀತಾರೆ, ಎಷ್ಟು ಸರಳವಾಗಿ ವಿಷಯ ಮುಟ್ಟಿಸುತ್ತಾರೆ, ಭೈರಪ್ಪನೋರು ಒಂಥರಾ ಸ್ತ್ಯಾಂಡರ್ಡ್, ಸಿಕ್ಕಾಪಟ್ಟೆ ಫಿಲಾಸಪಿ ಓದಿಕೊಂಡಿದ್ದಾರೆ, ಅವರ ಕಾದಂಬರಿಗಳು ಓದಿ ಮುಗಿಸಿದರೆ ಅದೇ ಗುಂಗಿನಲ್ಲಿ ಇರಬೇಕಾಗುತ್ತದೆ ಹಾಗೆ ಹೀಗೆ ಅಂತೆಲ್ಲ.

ತಟ್ಟನೆ ಹೇಳಿದಳು "ನೋಡಣ್ಣ ಈ ಕತೆಗಳು ಕಾದಂಬರಿಗಳು ಬರೆಯುವ ಮಂದಿಯನ್ನು ನೋಡಿದ್ದೇನೆ, ಅವರ್ಯಾರು ಮೂಲತ: ಬೆಂಗಳೂರಿನವರಲ್ಲ, ಅವರಿಗೊಂದು ಮೂಲವೆಂಬುದು ಇರುತ್ತದೆ ಅದು ಹಳ್ಳಿಗಳು. ಬೆಂಗಳೂರಿನ ಮೂಲದವರಿಗೆ ಒಳ್ಳೆ ಕತೆ ಹೆಣೆಯಲು ಆಗುವುದಿಲ್ಲವೆನಿಸುತ್ತದೆ" ಎಂದಳು.ನಾನು ಆದಾದ ಬಳಿಕ ಯೋಚಿಸತೊಡಗಿದೆ, ಬೆಳಗೆರೆ ಬಳ್ಳಾರಿಯವರು, ಭೈರಪ್ಪ ಚನ್ನಪಟ್ಟಣದ ಕಡೆಯವರು, ತೇಜಸ್ವಿ ಮೂಡಿಗೆರೆಯವರು, ಕಾಯ್ಕಿಣಿ ಗೋಕರ್ಣದವರು. ಅರೆರೆ ನನಗೆ ತಿಳಿದವರು ಬೆಂಗಳೂರಿನವರು ಯಾರು ಇಲ್ಲ!! ತಕ್ಷಣ soft soft software ಕತೆಗಳನ್ನು ಬರೆಯುವ ವಸುಧೇಂದ್ರರಿದ್ದಾರಲ್ಲ ಎಂದು ನಿರಾಳವಾಯಿತು. ನಾನು ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರಣ ಅವರ ಕತೆಗಳು ಹೆಚ್ಚು ಇಷ್ಟವಾಗುತ್ತದೆ, ಕಾರಣ ಅದು ನಮಗೆ ಹತ್ತಿರವಾಗಿರುತ್ತದೆ. ಅವರ "ಎಲ್ಲರ ಮನೆ ಕಾರಿಗೂ ನೆಗ್ಗು" ಎಂಬ ಲೇಖನವನ್ನ ಪತ್ರಿಕೆಯಲ್ಲಿ ಓದಿದ್ದೆ. ಇಡೀ ಪತ್ರಿಕೆಯನ್ನ ಜತನವಾಗಿ ಇಂದಿಗೂ ಕಾಪಿಟ್ಟುಕೊಂಡಿದ್ದೇನೆ, ಅಷ್ಟು ನಕ್ಕಿದ್ದೇನೆ. ಒಬ್ಬರಾದರೂ ಸಿಕ್ಕರಲ್ಲ ಎಂದು ಅವರ ಪುಸ್ತಕ ತೆರೆದು ನೋಡಿದರೆ "ಬಳ್ಳಾರಿಯ ಸಂಡೂರಿನಲ್ಲಿ ಜನನ" ನೋಡಿ ನಿರಾಶನಾದೆ. ಉಹೂ ಬೆಂಗಳೂರಿನವರು ಸಿಗಲೇ ಇಲ್ಲ.
ಮತ್ತೆ ಹುಡುಕಿ ಹುಡುಕಿ ಸಾಕಾಯಿತು. ನಿಮಗಾರಾದರು ಗೊತ್ತಿದ್ದರೆ ತಿಳಿಸಿ.

ಪಟ್ಟಣಗಳಲ್ಲಿ ದೊಡ್ಡ ದೊಡ್ಡ ಶಹರಗಳಲ್ಲಿ ಹುಟ್ಟಿ ಬೆಳೆದವರಿಗೆ ಕತೆಗಳು ಏಕೆ ಹುಟ್ಟುವುದಿಲ್ಲವೋ ನಾ ಕಾಣೆ. ನಾನು ಹಲವಾರು ಪ್ರಯತ್ನಿಸಿದ್ದೇನೆ, ಸಣ್ಣ ಕತೆಗಳು ಬರೆಯಲು. ರಭಸವಾಗಿ ಬೈಕ್ ಓಡಿಸುವಾಗ ಯಾವುದೋ ತಿರುವಿನಲ್ಲೋ ಸಿಗ್ನಲಿನಲ್ಲೋ ಕತೆ ಹುಟ್ಟಿಕೊಂಡಿರುತ್ತದೆ. ಲೋಕದ ಚಿಂತೆ ಮರೆತು ಕತೆಗೆ ರೆಕ್ಕೆ ಪುಕ್ಕ ಕಟ್ಟಲು ಕೂತಿದ್ದೇನೆ. ಬೈಕ್ ಪಾಡಿಗೆ ರಭಸವಾಗಿ ಹೋಗುತ್ತಿರುತ್ತದೆ ಕತೆಯ ಓಘ ಕೂಡ ಅದೇ ರಭಸದಲ್ಲಿ ಬೆಳೆಯುತ್ತಿರುತ್ತದೆ. "ಒಂದು ಮುಂಜಾವಿನಲ್ಲಿ ಆತ ಹಳ್ಳಿಯಿಂದ ಹೊರಟ, ಮನೆಯಲ್ಲಿ ಇನ್ನು ಇರಲಾಗುವುದಿಲ್ಲವೆಂದು ನಿರ್ಧರಿಸಿದ, ಮನೆಯ ಕಿರುಕುಳ ಸಾಕೆಂದು .........." ಹೀಗೆ ಹಲವು ಸಾಲುಗಳು. ಮತ್ತೆ ಕತೆ ಆರಂಭಿಸಲು ಯಾವುದೋ ಹಳ್ಳಿ ಹೆಸರನ್ನು ತಡಕಾಡುತ್ತಿರುತ್ತೇನೆ. ಜೀವಮಾನದಲ್ಲೇ ಒಂದು ಹಳ್ಳಿಯನ್ನೂ ಸರಿಯಾಗಿ ನೋಡದ, ಅಲ್ಲಿನ ಪರಿಸರ ತಿಳಿಯದ ನಾನು ಕತೆ ಹೇಗೆ ಬರೆಯಲು ಸಾಧ್ಯ?M G road ಶುರುವಾಗುವ ಹೊತ್ತಿಗೆ ಶುರುವಾಗುವ ಕತೆ Corporation ಬಳಿ ಬರುವುದರೊಳಗಾಗಿ ರೆಕ್ಕೆ ಪುಕ್ಕ ಸರಿಯಾಗಿ ಅಂಟಿಕೊಳ್ಳದೆ ಕತೆ ಸತ್ತಿರುತ್ತದೆ, ಬೈಕ್ ನ ವೇಗವೂ ಕಮ್ಮಿಯಾಗಿರುತ್ತದೆ. ಕತೆ ಬರೆಯಲು ಮನಸಿನ್ನೂ ಮಾಗಿಲ್ಲವೆಂದು ಸುಮ್ಮನಾಗುತ್ತೇನೆ. ತೇಜಸ್ವಿಯವರ "ಚಿದಂಬರ ರಹಸ್ಯ" ಓದಿ ಅದರಲ್ಲಿ ಬರುವ ಲಂಟಾನದ ಜಿಗ್ಗು ತಿಳಿಯಲು ನಾನು ಪಟ್ಟ ಹರಸಾಹಸ ಅರುಣನಿಗೆ ಮಾತ್ರ ಗೊತ್ತು. ರಂಗಶಂಕರದಲ್ಲಿ ನಾಟಕವನ್ನು ಏರ್ಪಡಿಸಿದಾಗ ನಾನು ಕಾಯುತ್ತಲಿದ್ದು ಲಂಟಾನದ ಜಿಗ್ಗು ನೋಡಲೆಂದೆ. ಮುಳ್ಳಯ್ಯನಗಿರಿ ಚಾರಣದಲ್ಲಿ ಅರುಣ ತೋರಿಸಿದ್ದ "ಇದೇ ಕಣೊ ಲಂಟಾನದ ಜಿಗ್ಗು" ಎಂದು..ಇನ್ನು ಸಮಾಧಾನವಾಗಿಲ್ಲ. ತೇಜಸ್ವಿಯರ ಕತೆಗಳ ಪಾತ್ರಗಳೇ ತಿಳಿಯಲು ಇಷ್ಟು ಒದ್ದಾಡಿದರೆ ನಾನು ಹೇಗೆ ತಾನೆ ಕತೆ ಬರೆಯಬಲ್ಲೆನು?

ಕನ್ನಡದಲ್ಲಿ ಆರುನೂರಕ್ಕೂ ಹೆಚ್ಚು ಬ್ಲಾಗುಗಳಿದೆ. ಅದರಲ್ಲಿ ಬೆಂಗಳೂರಿನವರೆಂದರೆ ಎಂದರೆ ಒಂದಂಕಿಯಲ್ಲಿ ಎಣಿಸಿಬಿಡಬಹುದು. ಎಲ್ಲರಿಗೂ ಬೇರೆಯ ಮೂಲವೊಂದಿರುತ್ತದೆ. ಅದಕ್ಕಾಗಿ ಕತೆಗಳು ಹುಟ್ಟುತ್ತವೆ ಎನಿಸುತ್ತಿದೆ ನನಗೆ. ಒಂದಷ್ಟು ಹಳ್ಳಿಗಳು, ಬೆಟ್ಟಗಳು, ಊರು ಕೇರಿ ಸುತ್ತಿ ಬಂದರೆ ಕತೆಗಳನ್ನ ಬರೆಯಬಹುದೇನೊ? ಬರೆದರೆ ಖಂಡಿತಾ ನಿಮ್ಮ ಮುಂದಿಡುತ್ತೇನೆ.

ವಿ.ಸೂ : ಇಲ್ಲಿ ಬೆಂಗಳೂರಿನವರು ಏಕೆ ಕತೆ ಬರೆಯಲಾಗುತ್ತಿಲ್ಲ ಎಂಬುದನ್ನ ತಿಳಿಯಲು ಯತ್ನಿಸಿರುವದರ ಬಗ್ಗೆ ಬರೆದಿದ್ದೇನಷ್ಟೆ, ಬೇರೆ ಊರಿನವರ ಬಗ್ಗೆ ಜೆಲಸಿ ಇದೆಯೆಂದು ಅಪ್ಪಿ ತಪ್ಪಿಯೂ ಕೂಡ ಭಾವಿಸಬೇಡಿ. ಜೈ ಕರ್ನಾಟಕ.

ನಾನೇಕೆ ಬರೆಯುತ್ತಿಲ್ಲ!!??...

Wednesday, September 24, 2008


ಎಸ್. ಎಲ್. ಭೈರಪ್ಪನವರ  "ನಾನೇಕೆ ಬರೆಯುತ್ತೇನೆ" ಎಂಬ ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಇಂತಹುದೊಂದು ಲೇಖನ ಕುಟ್ಟುತ್ತಿದ್ದೇನೆ. ಹೌದು "ನಾನೇಕೆ ಬರೆಯುತ್ತಿಲ್ಲ" ??


ಇದು ನನಗನ್ನಿಸಿದ್ದು ಬ್ಲಾಗ್ ಬರೆಯುವುದು ಬಿಟ್ಟು ಸುಮಾರು ಎರಡು ತಿಂಗಳಾಗುವ ಹೊತ್ತಿಗೆ. ಅರುಣ ಚಾಟ್ ನಲ್ಲಿ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ ಪಿಂಗಿ "ಬರ್ಯೋ ಇವತ್ತಾದ್ರು" ಎನ್ನುತ್ತಿದ್ದ, ಶ್ರೀಕಾಂತ್ ನನ್ನ ಹಳೆಯ ಬ್ಲಾಗ್ ಲೇಖನದ ಕೊಂಡಿಗಳನ್ನು ಗೆಳೆಯರಿಗೆ ಕಳಿಸಿ ಬ್ಲಾಗ್ update ಆಗಿದೆ ಎಂದು ಸಾರುತ್ತಿದ್ದ!!. ಲಕ್ಷ್ಮಿ "ಕರ್ಮಕಾಂಡ ಪ್ರಭುಗಳೇ , ಕಂಗ್ಲೀಷ್ ನಲ್ಲಿ ಲೇಖನ ಬರೆದು ಕೊಡಿ ಕನ್ನಡಕ್ಕೆ ತರುವ ಜವಾಬ್ದಾರಿ ನನ್ನದು" ಎನ್ನುತ್ತಿದ್ದರು.. ಎಲ್ಲರ ಮಾತಿಗೂ, ಅಪ್ಪಣೆಗೂ, ಬೆದರಿಕೆಗೂ, ಛೀಮಾರಿಗಳಿಗೂ "ದಿವ್ಯ"ಮೌನ ವಹಿಸಿದ್ದೆ.

 

ಹೊಸ ಕೆಲಸ ಹುಡುಕುವ ಗೋಜಿನಲ್ಲೇ ಇವರುಗಳೆಲ್ಲರ ಬ್ಲಾಗುಗಳನ್ನು ಓದುತ್ತಿದ್ದೆ. ಓದುವುದು ಕಮೆಂಟಿಸುವುದು ಇಷ್ಟಕ್ಕೆ ಸೀಮಿತವಾಗಿತ್ತು ನನ್ನ ಬರವಣಿಗೆ. ಇತ್ತ ಅರುಣ consistent ಆಗಿ ಪರಿಸರಪ್ರೇಮಿ ಮತ್ತು Speaktonature ನಲ್ಲಿ ಯಾವುದೇ ಅಡೆ ತಡೆಯಿಲ್ಲದೆ ಅಂಕಣಗಳು ಹೊರಹೊಮ್ಮುತ್ತಿತ್ತು, ಲಕ್ಷ್ಮಿಯಂತೂ 5-6 ಬ್ಲಾಗುಗಳನ್ನು ನಿಭಾಯಿಸುತ್ತಿದ್ದರು, ವಾರಕ್ಕೆ ಎರಡರಂತೆ ಲೇಖನಗಳು ಬರುತ್ತಿದ್ದವು, ಚಾಟ್ ಗೆ ಸಿಕ್ಕಾಗಲೆಲ್ಲ ಪಿಂಗಿ ಪಿಂಗಿ update ಸರಮಾಲೆ ಹೇಳುತ್ತಿದ್ದರು. ಶ್ರೀಕಾಂತ ಆಗಾಗ್ಗೆ

ವೈಚಾರಿಕ ಲೇಖನಗಳನ್ನು ಹರಿಯಬಿಡುತ್ತಿದ್ದ ಮತ್ತು ಶ್ರೀನಿವಾಸ ಆಂಗ್ಲಭಾಷೆಯಲ್ಲಿ ಬರೆಯಲು ಶುರುಮಾಡಿದ್ದ. ಅರೆರೆ ನನ್ನ ಗೆಳೆಯರೆಲ್ಲಾ ಬರೆಯುತ್ತಿದ್ದಾರೆ, ಒಂದರ ಮೇಲೊಂದಂತೆ ಒಂದರ ಮೇಲೊಂದಂತೆ. ಏನಾದರಾಗಲಿ ಕುಪ್ಪಳ್ಳಿ ಪ್ರವಾಸ ಕಥನವನ್ನು ಮುಗಿಸಿಯೇ ಬಿಡುವ ಎಂದು ಕೂತು 10ಸಾಲುಗಳಿಂದ 20ಸಾಲಿಗೆ ಏರಿಸಿಬಿಟ್ಟೆ, ಆ ಜೋಷ್ ನಲ್ಲಿ, ಅಷ್ಟೇ ಅದು ಅಲ್ಲಿಗೆ ನಿಂತುಬಿಟ್ಟಿತು, ಅರುಣನಿಗೆ ಹೇಳಿದೆ "ಕುಪ್ಪಳ್ಳಿ ಲೇಖನ ಬರೀತಿದೀನಿ ಕಣೊ" ಎಂದು ಹಲ್ಲುಕಿರಿಯುತ್ತ. ಯಥಾಪ್ರಕಾರ ಬೈದು ಹೂಂಕರಿಸಿ ಸುಮ್ಮನಾದ. ಈ "ಕುಪ್ಪಳ್ಳಿ" ಪ್ರವಾಸ ಕಥನಕ್ಕೆ ಅರುಣನಿಂದ ಕಾಫಿಯಲ್ಲಿ ವಿಷಬೆರಕೆ ಶ್ರೀಕಾಂತನಿಂದ ಕೊಲೆಬೆದರಿಕೆ ಎಲ್ಲವನ್ನು ಎದುರಿಸಿದ್ದೇನೆ, ಏಕೋ ಏನೋ ಅದು ಅದು ಮುಂದೆ ಹೋಗುತ್ತಿಲ್ಲ ಕರ್ಮಕಾಂಡ ಬ್ಲಾಗಿಗೆ ಅಲಂಕರಿಸುವ ಯೋಗ ಎಂದಿದೆಯೋ??

 

ಮತ್ತೆ ಅದೇ ಪ್ರಶ್ನೆಗೆ ಬರೋಣ, ನಾನೇಕೆ ಬರೆಯುತ್ತಿಲ್ಲ?? ಕಾರಣಗಳು ಹಲವಾರು. ಹೊಸಕೆಲಸ ಹುಡುಕುವುದೇ ಮುಖ್ಯವಾಗಿತ್ತು, ಈಗ ಮಾಡುತ್ತಿದ್ದ ಕೆಲಸ ಅನುಕೂಲಕರವಾಗಿರದುದ್ದರ ಪರಿಣಾಮ ಹೊಸತನ್ನು ಹುಡುಕಲೇ ಬೇಕಾದ ಅನಿವಾರ್ಯತೆ ಇತ್ತು. ಅದಕ್ಕಾಗಿ ಸಂದರ್ಶನಗಳಿಗೆ ಅಣಿಯಾಗುತ್ತಲಿದ್ದೆ ಇಷ್ಟು ದಿನವೂ, ಅದಕ್ಕಾಗಿ ಬರವಣಿಯೆಡೆಗೆ ಬರಲಾಗಲಿಲ್ಲ. ಮುಂದಿನ ತಿಂಗಳಿಂದ ಬೇರೆ ಕಂಪೆನಿಗೆ ಹೋಗಲಿದ್ದೇನೆ. ಏಲ್ಲೋ ನಡೆದು ಹೋಗುತ್ತಿರುವಾಗ, ಬೈಕ್ ಓಡಿಸುತ್ತಿರುವಾಗ, ಇನ್ನೇನು ನಿದ್ದೆ ಹತ್ತುತ್ತಿದೆ ಅನ್ನುವಾಗ ಪುಂಖಾನುಪುಂಖವಾಗಿ ಲೇಖನಗಳು ಬಂದಿವೆ, ಎಷ್ಟು ಕೊರೆತ ಎಂದರೆ ಬರೆದುಬಿಡಲೇ ಬೇಕು ಎಂದು ತಡಬಡಿಸಿ ಸಿಸ್ಟಮ್ ಮುಂದೆ ಕೂತ ಕೂಡಲೇ ಎಲ್ಲವೂ ಖಾಲಿ ಖಾಲಿ. ಹೀಗೆಷ್ಟು ಬಾರಿ ಆಗಿದೆಯೋ ಲೆಕ್ಕವಿಟ್ಟಿಲ್ಲ. ಬರೆಯಬೇಕು ಅನಿಸಿದಾಗಲೆಲ್ಲ ಬರೆದುಬಿಟ್ಟಿದ್ದರೆ ಅದರ ಕತೆಯೇ ಬೆರೆಯದಾಗಿರುತ್ತಿತ್ತು, ಸುಮ್ಮನೇ ಶೀರ್ಷಿಕೆಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದೆ. ನನ್ನ ಕನ್ನಡ ಕೈಬರಹ ಯಾವುದೇ ಗುಪ್ತಭಾಷೆಗೂ ಕಮ್ಮಿಯಿಲ್ಲದುದ್ದರ ಕಾರಣ ಪೆನ್ನು ಹಿಡಿದು ಪೇಪರಿನ ಮೇಲೆ ಬರೆಯುವ ದುಸ್ಸಾಹಸ ಮಾಡಲಿಲ್ಲ. ಈಗಲೂ ಸಾಕಷ್ಟು ಶೀರ್ಷಿಕೆಗಳು ಹರಿದಾಡುತ್ತಿವೆ. "ನಾನೇಕೆ ಬರೆಯುತ್ತಿಲ್ಲ" ಎಂದು ಮತ್ತೆ ಬರವಣಿಗೆ ಶುರು ಮಾಡಿದ್ದೇನೆ.

 

ನಿಮ್ಮ ಹಾರೈಕೆಯಿರಲಿ. 

ಸೈಕೊ....

Sunday, September 14, 2008

ಚಿತ್ರ ಬಿಡುಗಡೆಯಾಗಬೇಕಿದೆ, ಅಪಾರ ನಿರೀಕ್ಷೆ ಹೊತ್ತಿದ್ದೇನೆ ಚಿತ್ರದ ಬಗ್ಗೆ, ಜಯಂತ್ ಕಾಯ್ಕಿಣಿ ಯುಗಳಗೀತೆಗಳ ರಚನಾಕಾರರಾಗಿ ಹೊರಹುಮ್ಮುತ್ತಿದ್ದಾರೆ.

ನನಗೆ ಬಹಳ ಇಷ್ಟವಾದ ಹಾಡೊಂದನ್ನು ನಿಮ್ಮ ಮುಂದಿರಿಸಿದ್ದೇನೆ. ಗುನುಗಿಕೊಳ್ಳಿ....

 

ಬೆಳದಿಂಗಳಂತೆ ಮಿನು ಮಿನುಗುತ ಬೆಳಕಾಗಿ ಬಂದಿರಲು ನೀನು

ಅನುರಾಗದಲ್ಲಿ ಹೊಳೆ ಹೊಳೆಯುತ ನಸು ನಾಚಿ ನಿಂದಿರಲು ನೀನು

ಮರುಳಾದೆ ದಿವ್ಯಸಖಿ ನಿನಗೆ ಪ್ರಣಾಮ, ಅಪರೂಪ ರೂಪಸಿಯೇ ನಿನಗೆ ಪ್ರಣಾಮ

 

ತಂಗಾಳಿಯಂತೆ ಸುಳಿ ಸುಳಿಯುತ ಆವರಿಸಿಕೊಂಡಿರಲು ನೀನು

ಕುಡಿನೋಟದಲ್ಲೆ ನುಲಿ ನುಲಿಯುತ ನೀವರಿಸಿನಿಂದಿರಲು ನೀನು

ಮನಸೋತೆ ಮೋಹಿತನೆ ನಿನಗೆ ಪ್ರಣಾಮ, ಹಿತವಾದ ಸ್ನೇಹಿತನೆ ನಿನಗೆ ಪ್ರಣಾಮ

 

ಕನಸಲ್ಲು ಹುಚ್ಚನಂತೆ ನಿನಗಾಗಿ ಓಡುವೆ, ಮೈಮರೆತು ಸಂತೆಯಲ್ಲೂ ನಿನ್ನನ್ನೆ ಕೂಗುವೆ

ಒರಗಿರಲು ನಿನ್ನ ಮಡಿಲಲಿ

ಕಾಗದದ ದೋಣಿಯಲ್ಲಿ ಕಡಲನ್ನು ದಾಟುವೆ, ಗಂಧರ್ವ ಸೀಮೆಯಲ್ಲಿ ಉಯ್ಯಾಲೆ ಜೀಕುವೆ

ನೀನಿರಲು ನನ್ನಾ ಕತೆಯಲಿ

 

ನಾನಿರುವೆ ನಿನ್ನಾ ಜೊತೆಯಲಿ

 

ಬೆಳದಿಂಗಳಂತೆ ಮಿನು ಮಿನುಗುತ ||

 

 

ಕಣ್ತುಂಬ ನಿನ್ನ ಅಂದ ಸವಿಯುತ್ತಾ ಕೂಡಲೇ, ಕಂಡಿದ್ದು ನಿಜವೇ ಅಂತ ಮುತ್ತಿಟ್ಟು ನೋಡಲೇ

ನೀನಿರಲು ನನ್ನಾ ತೊಳಲಿ

ನಾನೆಂದು ನೋಡದಂತ ಬೆಳಕೊಂದು ಮೂಡಿದೆ ನಿನಗಷ್ಟೆ ಕೇಳುವಂತೆ ಮನಸಿಂದು ಹಾಡಿದೆ

ಕೈಯಿರಲು ನಿನ್ನಾ ಕೈಯಲಿ

 

ನಾನಿರುವೆ ನಿನ್ನಾ ಬಾಳಲಿ

 

ಬೆಳದಿಂಗಳಂತೆ ಮಿನು ಮಿನುಗುತ ||

 

 

ಶೋ.....ಗಳು

Tuesday, June 10, 2008

ಟೀವಿ ವಾಹಿನಿಗಳಲ್ಲಿ ಒಂದು ಕಾರ್ಯಕ್ರಮ ಸ್ವಲ್ಪ ಯಶಸ್ಸು ಗಳಿಸಿದರೆ ಅದನ್ನೇ ಅನುಸರಿಸಿ ಬೇರೆ ವಾಹಿನಿಗಳಲ್ಲಿ ಶುರುವಿಕ್ಕುತ್ತಾರೆ. ಅದಕ್ಕೆ ಉತ್ತಮ ನಿದರ್ಶನ ಈ ಟೀವಿಯಲ್ಲಿ ಪ್ರಸಾರವಾಗುವ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮ. ಎಂದು ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಂದ ಹಾಡಿಸಲು ಶುರು ಮಾಡಿದರೋ ಬೇರೆ ವಾಹಿನಿಗಳಲ್ಲೂ ಸಹ ಇದೇ ರೀತಿಯ ಕಾರ್ಯಕ್ರಮಗಳನ್ನು ಶುರು ಮಾಡಿದರು. ಈಗ ಯಾವ ಚಾನೆಲ್ ನೋಡಿದರೂ ಇದೇ ಕಾರ್ಯಕ್ರಮಗಳು. ತೀರ್ಪುಗಾರ ವೈವಿಧ್ಯಮಯ ತೀರ್ಪು, ಮಕ್ಕಳ ಕಾಂಪಿಟೇಶನ್, ಹೆತ್ತವರ ಉದ್ವೇಗ, ಚಪ್ಪಾಳೆ. ಎಲ್ಲವೂ ವಾರಕ್ಕೆ ಒಮ್ಮೆ ಬಂದರೆ ಚೆನ್ನ, ದಿನಾ ಅದೇ ಆಗಿಹೋದರೆ ಬೋರ್ ಹೊಡೆಸುತ್ತದೆ.

ಕಾರ್ಯಕ್ರಮದ ಉದ್ದೇಶ ಒಳ್ಳೆಯದೇ ಇರಬಹುದು, ಬಾಲ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ನಿಜಕ್ಕೊ ಶ್ಲಾಘನೀಯ. ಎಲ್ಲವೂ ಹಾಡು ಹಾಡುವುದಕ್ಕೆ ಏಕೆ ಕೇಂದ್ರೀಕೃತವಾಗಿದೆ? ಏಕೆ ಇದೇ ವಾಹಿನಿಗಳು ಚಿತ್ರ ಬರೆಯುವುದಕ್ಕೆ, ಕತೆ, ಕವನ ಹೇಳುವುದಕ್ಕೆ, ವೀಣೆ, ತಬಲ, ಕೊಳಲು ಇನ್ನು ಅನೇಕ ಸಂಗೀತ ಸಾಧನಗಳನ್ನು ನುಡಿಸುವುದಕ್ಕೆ, ಏಕಪಾತ್ರಾಭಿನಯ ಮಾಡುವುದಕ್ಕೆ ದೊಡ್ಡ ಮಟ್ಟದಲ್ಲಿ ವೇದಿಕೆ ಏಕೆ ಎರ್ಪಡಿಸಬಾರದು? ಟೀವಿ ವಾಹಿನಿಗಳನ್ನ ನಡೆಸುವವರಿಗೆ ಇದೂ ಕೂಡ ಹೊಳೆಯುವುದಿಲ್ಲವೆ?

ಎಲ್ಲರೂ ಒಂದಕ್ಕೆ ಏಕೆ ಗಂಟು ಬೀಳುತ್ತಾರೆ?

ಇವರುಗಳು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಜನರನ್ನು ತಮ್ಮ ವಾಹಿನಿಯೆಡೆಗೆ ಸೆಳೆಯುವುದೇ ಆಗಿದೆ. ಅದಕ್ಕೆ ಯಶಸ್ಸಿನ ಜಾಡನ್ನೇ ಹಿಡಿಯುತ್ತಾರೆ. ಇನ್ನೂ ಪ್ರವರ್ಧಮಾನಕ್ಕೆ ಬರದ ಹಾಡುಗಾರರೆಲ್ಲರೂ ಆಗಲೇ ಈ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಬಿಟ್ಟಿದ್ದಾರೆ, ಅವರಿಗೆ ಸಂಗೀತವಾದರೂ ಎಷ್ಟರ ಮಟ್ಟಿಗಿದೆ? ಹಾಡುವ ಮಕ್ಕಳನ್ನು ಅಳೆಯಲು ನಿಜವಾಗಲು ಅವರಿಗೆ ಅರ್ಹತೆ ಇದೆಯೆ? ಸುಮ್ಮನೆ ಸ್ಟಾರ್ ಗಳನ್ನು ತಂದು ಕೂರಿಸಿರುತ್ತಾರೆ. ಈ ಕಾರ್ಯಕ್ರಮಗಳಿಗೆ ಬರುವವರೆಲ್ಲರೂ Celebrityಗಳೇ ಆಗಿರುತ್ತಾರೆ. ಇನ್ನು ತೀರ್ಪು ನೀಡುವ ಸಂಧರ್ಭಗಳಲ್ಲಿ ಎಲ್ಲ ವಾಹಿನಿಗಳಲ್ಲೂ ಒಂದೇ ರೀತಿಯ ಸಂಭಾಷಣೆಗಳು. "ಇಲ್ಲಿ ಯಾರೂ ಸೋತಿಲ್ಲ, ಯಾರೂ ಗೆದ್ದಿಲ್ಲ, ಎಲ್ಲರೂ ಚೆನ್ನಾಗಿಯೇ ಹಾಡಿದ್ದಾರೆ, ನನಗೆ ತೀರ್ಪು ನೀಡುವುದಕ್ಕೆ ನಿಜವಾಗಲೂ ಕಷ್ಟವಾಗುತ್ತಿದೆ" ಎಂದು ಹೇಳುತ್ತಲೆ ಒಬ್ಬರಿಗೆ ಪ್ರಶಸ್ತಿ ನೀಡುತ್ತಾರೆ.

ಇನ್ನು ಕೊನೆ ಸುತ್ತಿನಲ್ಲಿ ಪ್ರಶಸ್ತಿ ಕಳಕೊಂಡ ಮಕ್ಕಳು ಅಳುವುದು ಸಹಜ. ಆದರ ಅವರ ಪೋಷಕರೂ ಸಹ ಅಳುತ್ತಿರುತ್ತಾರೆ. feelings ಅರ್ಥ ವಾಗುತ್ತದೆ ನನಗೆ ಆದರೂ ಹೀಗೆ ಅಳುವ ಮಕ್ಕಳ ಜೊತೆ ಅಳುವುದು ಉಚಿತವೆ? ಬಂದು ಮಕ್ಕಳ ಮೈದಡವಿ ಸಮಾಧಾನ ಮಾಡುವುದು ಬಿಟ್ಟು. ಒಮ್ಮೊಮ್ಮೆ ರೇಗಿ ಹೋಗುತ್ತದೆ ಇವೆಲ್ಲವನ್ನು ನೋಡಿದರೆ. ಚಾನೆಲ್ ಬದಲಾಯಿಸಿಬಿಡುತ್ತೇನೆ.

ಬರೀ ಇಂತಹ ಕಾರ್ಯಕ್ರಮಗಳನ್ನೇ ಮಾಡುವ ಬದಲು Discovery, National Geographic, Animal Planet, History ಚಾನೆಲ್ ನಲ್ಲಿ ಬರುವ ಕೆಲವು ಒಳ್ಳೆಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಸಾರ ಮಾಡಬಾರದೇಕೆ?? ಇನ್ನಾದರೂ ಪ್ರಮುಖ ವಾಹಿನಿಗಳು ಒಂದೇ ತೆರನಾದ ಕಾರ್ಯಕ್ರಮಗಳಿಗೆ ಜೋತು ಬೀಳದೆ ಬೇರೆಡೆಗೆ ಗಮನ ನೀಡಿದರೆ ಒಳಿತು.

"ಪಾಡವಾ ತೀಯಗಾ ಕಮ್ಮನಿ ಒಕ ಪಾಟ..."

ಮುಳ್ಳಯ್ಯನಗಿರಿ

ಕಡೇ ಘಳಿಗೆಯ ನನ್ನ ನಿರ್ಧಾರ ಒಂದು ಸುಂದರ ಚಾರಣ ಮಾಡಲು ಅನುವುಮಾಡಿಕೊಟ್ಟಿತು. ಹೋಗದೆ ಬರೀ ಚಿತ್ರಗಳನ್ನು ನೋಡಿದ್ದರೆ ಖಂಡಿತವಾಗಿ ಪರಿತಪಿಸುತ್ತಿದ್ದೆ, ಹೋಗಲಾಗಲಿಲ್ಲವೆಂದು. ಇಂತಹ ಒಂದು ಸುಂದರವಾದ ಸ್ಥಳಕ್ಕೆ ಕರೆದುಕೊಂಡು ಹೋದ ಅರುಣನಿಗೆ Thanks -u... ಇದುವರೆಗೂ ನಾನು ಮಾಡಿದ best trek ಇದು.


ಈ ಬಾರಿ ನಾವು ಹೋಗುತ್ತಿದ್ದ ಸ್ಥಳ "ಮುಳ್ಳಯ್ಯನಗಿರಿ", ಒಟ್ಟೂ ಐದು ಜನ, ನಾನು, ಅರುಣ್, ಶ್ರೀನಿವಾಸ್, ವಿವೇಕ್ ಮತ್ತು ನಾರಾಯಣ್. ನಾನು, ಅರುಣ್,ವಿವೇಕ್ ಬೆಂಗಳೂರಿನಿಂದ ಹೊರಟೆವು, ಶ್ರೀನಿವಾಸ್ ಮಂಗಳೂರಿನಿಂದ ಹೊರಟಿದ್ದ, ನಾರಯಣ್ ಮೈಸೂರಿನಿಂದ. ಎಲ್ಲರೂ "ಚಿಕ್ಕಮಗಳೂರು" ನಲ್ಲಿ ಭೇಟಿಯಾಗುವುದೆಂದು ನಿರ್ಧರಿಸಿದ್ದೆವು. ಶ್ರೀನಿವಾಸನು ಬೆಳಗಿನ ಜಾವ ಒಂದೂವರೆಗೆಲ್ಲ ಚಿಕ್ಕಮಗಳೂರು ಬಸ್ ನಿಲ್ದಾಣ ತಲುಪಿದ್ದುದ್ದರ ಕಾರಣ ಬಸ್ ನಿಲ್ದಾಣದ ವಲಯನ್ನು ಚೆನ್ನಾಗಿ "ಬೀಟ್" ಹಾಕಿದ್ದ, ಒಂದಷ್ಟು ಫೋಟೋಗಳೂ ಸಹ ಕ್ಲಿಕ್ಕಿಸಿದ್ದ. ಬೆಂಗಳೂರಿನಿಂದ ಹೊರಟ ನಾವು ಮೂವರೂ ಅವನನ್ನು ಮತ್ತು ನಾರಯಣನನ್ನು ಬೆಳಿಗ್ಗೆ 5:30ಗೆ ಅಲ್ಲೇ ಇದ್ದ ಹೋಟೆಲಿನಲ್ಲಿ ಉಪ್ಪಿಟ್ಟು ಸಮೇತರಾಗಿ ಎದುರುಗೊಂಡೆವು. ಶ್ರೀನಿವಾಸ ಬಂದ ಕೂಡಲೇ "ನಮ್ಮಗೆ ಕಾಯದೆ ತಿನ್ನಕ್ಕೆ ಕೂತಿದ್ದೀರೇನೋ" ಎಂದು ಹುಸಿ ಕೋಪವನ್ನು ಹೊರಸೂಸಿದ.
ಅಲ್ಲಿಂದ ಹೊರಬಂದು "ಬಾಬಾಬುಡನ್ ಗಿರಿ" ಬಸ್ ಗಾಗಿ ಬಂದು ನಿಂತೆವು. ಅಲ್ಲೇ ಒಂದು ಬಸ್ ಇನ್ನು 15-20ನಿಮಿಷದೊಳಗೆ ಹೊರಡಲು ಸಜ್ಜಾಗಿ ನಿಂತಿತ್ತು. ನಾವು ನಮ್ಮ ಟ್ರೆಕ್ ಬ್ಯಾಗುಗಳ ಸಮೇತ ಒಳ ಹೊಕ್ಕೆವು. ಕಂಡಕ್ಟರ್ ಮಹಾಶಯ ಬಂದು ನಿಮ್ಮ ಬ್ಯಾಗುಗಳನ್ನು ಟಾಪ್ ನಲ್ಲಿ ಹಾಕಿ ಎಂದ. ಒಬ್ಬರನ್ನೊಬ್ಬರು ಮುಖ ನೋಡಿ, ಬ್ಯಾಗ್ ಬಿದ್ದು ಗಿದ್ದು ಹೋದರೆ ಏನು ಗತಿ ಮತ್ತೆ ಮೇಲೆ ಬಹಳ ಒದ್ದೆ ಇದ್ದುದರ ಕಾರಣ ಈ ಬಸ್ ಮಿಸ್ ಮಾಡಲು ನಿರ್ಧರಿಸಿದೆವು. ಆದರೂ ಮನಸು ಒಪ್ಪದೆ ಅವರನ್ನು ಮುಂದಿನ ಬಸ್ ಬಗ್ಗೆ ವಿಚಾರಿಸಿದಾಗ 8:30ಗೆ ಎಂದ. ಲೇಟ್ ಆಗುತ್ತದೆಂದು ಮತ್ತೊಮ್ಮೆ ಬಸ್ ಬಳಿ ಬಂದು ನಿಂತೆವು, ಮತ್ತೊಮ್ಮೆ ಕಂಡಕ್ಟರ್ ಮಹಾಶಯ ಬಂದು ಬಸ್ ಟಾಪ್ ನಲ್ಲಿ ಕುಳಿತುಕೊಳ್ಳಿ ಎಂದ. ಬಸ್ ಟಾಪ್ ನಲ್ಲಿ ಪಯಣ ಎಂದು ತಿಳಿದ ಕೂಡಲೇ ಮಜವಾಗಿರುತ್ತದೆಂದು ಎಲ್ಲರೂ ಈ ಬಸ್ ಅನ್ನು ಮಿಸ್ ಮಾಡದಿರಲು ನಿರ್ಧರಿಸಿ ಮೇಲೆ ಹತ್ತಿ ಕುಳಿತೆವು. ಬಸ್ ಟಾಪ್ ಮೇಲೆ ಇದೇ ನನ್ನ ಮೊದಲ ಪಯಣ. ಬೆಳಗಿನ ಜಾವ ಆರುಗಂಟೆ ಹೊತ್ತಿನಲ್ಲಿ ಘಾಟ್ section ನಲ್ಲಿ ಒಂದೂವರೆಗಂಟೆ ಪಯಣ, ಯಾರಿಗುಂಟು ಯಾರಿಗಿಲ್ಲ. ಶ್ರೀನಿವಾಸನು ಬಸ್ ದಿಕ್ಕಿಗೆ ಮುಖ ಮಾಡಿದ್ದರೆ ನಾವೆಲ್ಲ ವಿರುದ್ದ ದಿಕ್ಕಿಗೆ ಮುಖ ಮಾಡಿ ಕುಳಿತಿದ್ದೆವು!!..ಅರುಣ ಬಿದ್ದುಕೊಂಡಿದ್ದ. ಶ್ರೀನಿವಾಸ ಬಸ್ ಹೋಗುತ್ತಿದುರ ದಿಕ್ಕಿಗೆ ಮುಖ ಮಾಡಿದ್ದಿದುರರಿಂದ ಯಾವುದಾದರು ಮರದ ಟೊಂಗೆಗಳು ನಮ್ಮ ತಲೆಗಳಿಗೆ ತಾಗುವಂತಿದ್ದರೆ ಎಚ್ಚರಿಸುತ್ತಿದ್ದ. ಆತ ಹೇಳಿದ ಕೂಡಲೇ ಶಿರಬಾಗಿಸಿಬಿಡುತ್ತಿದ್ದೆವು. ಹಿತವಾದ ಚಳಿಯಿತ್ತು. ಸುತ್ತಲೂ ಪರ್ವತ ತಪ್ಪಲು, ಪಯಣ ಅತ್ಯದ್ಭುತವಾಗಿತ್ತು, ಅನೇಕ ಫೋಟೊಗಳನ್ನು ಶ್ರೀನಿವಾಸನ ಮೊಬೈಲು ಮತ್ತು ವಿವೇಕನ ಕ್ಯಾಮೆರಾ ಸೆರೆ ಹಿಡಿದವು. ಮುಂಜಾವಿನ ಆಹ್ಲಾದಕರ ಪಯಣ ಮುಗಿಸಿ "ಬಾಬಾಬುಡನ್ ಗಿರಿ" ತಲುಪಿದೆವು. ಅಲ್ಲೇ "ದತ್ತ ಪೀಠ" ಇರುವುದೆಂದು ತಿಳಿಯಿತು, ಹೋಗಲಿಲ್ಲ. ಈ ದತ್ತ ಪೀಠದ ವಿಶೇಷತೆ ಎಂದರೆ ಹಿಂದೂಗಳು ಮತ್ತೆ ಮುಸ್ಲಿಮರು ಒಟ್ಟಿಗೆ ಭೇಟಿಕೊಡುವ ಸ್ಥಳ ಎಂದು ಅರುಣ ವಿವರಿಸಿದ.
ಅಲ್ಲಿಂದ "ಮಾಣಿಕ್ಯಧಾರ" ವನ್ನು ನೋಡಲು ಹೊರಟೆವು. ಸುಮಾರು 20ನಿಮಿಷಗಳ ನಡಿಗೆ. ಅಲ್ಲಿ ನೀರು ಬೀಳುವುದು ನೋಡಲು ಚೆನ್ನಾಗಿಯೇನೊ ಇದೆ, ಸಣ್ಣದಾಗಿ ಝರಿಯಂತೆ ಒಂದು ಬಂಡೆ ಮೇಲಿನಿಂದ ಬೀಳುತ್ತಿರುತ್ತದೆ. ಆದರೆ ಅದಕ್ಕೆ ಭೇಟಿ ನೀಡುವ ಜನಗಳು ಮಾತ್ರ ಆ ಜಾಗವನ್ನು ಗಬ್ಬೆಬ್ಬಿಸಿಬಿಟ್ಟಿದ್ದಾರೆ. ಸ್ನಾನ ಮಾಡಿದ ಮೇಲೆ ಅಲ್ಲೆ ಬಟ್ಟೆ ಬಿಸಾಕಬೇಕಂತೆ, ಒಳ್ಳೆ ತಿಪ್ಪೆಯಂತಿತ್ತು, ಒಂದಷ್ಟು ದುರ್ನಾತ ಬೆರೆ ಸೂಸುತ್ತಿತ್ತು, ಬೇಗ ಅದನ್ನು ವೀಕ್ಷಿಸಿ ಅಲ್ಲಿಂದ ಆದಷ್ಟು ಬೇಗ ಹೊರಡಲನುವಾದೆವು. ನಮ್ಮ ಪ್ಲಾನ್ ಇದ್ದದ್ದು ಮಾಣಿಕ್ಯಧಾರದಿಂದ ಬಾಬಾಬುಡನ್ ಗಿರಿ ಗೆ ವಾಪಸ್ ಬಂದು ಅಲ್ಲಿಂದ ಬಸ್ ಹಿಡಿದು ಸ್ವಲ್ಪ ದೂರ ಕ್ರಮಿಸಿ ಅಲ್ಲಿಂದ ಮುಳ್ಳಯ್ಯನಗಿರಿಗೆ ಚಾರಣ ಮಾಡುವೆದೆಂದಿದ್ದೆವು. ಮಾಣಿಕ್ಯಧಾರಾದ ಹೋಟೆಲೊಂದರಲ್ಲಿ ವೆಜಿಟಬಲ್ ಪಲಾವ್ ತಿಂದ ಮೇಲೆ ಮುಂಚೆ ಮಾಡಿದ್ದ ಪ್ಲಾನ್ ಅನ್ನು ಅಲ್ಲಿಗೆ ಡ್ರಾಪ್ ಮಾಡಲು ನಿರ್ಧರಿಸಿದೆವು. ಹೋಟೆಲಿನಲ್ಲಿ ಮನಸೋಇಚ್ಚೆ ತಿಂದ ಮೇಲೆ ಮಾಣಿಕ್ಯಧಾರದಿಂದಲೇ ಮುಳ್ಳಯ್ಯನಗಿರಿ ಗೆ ಚಾರಣಗೈಯ್ಯಲ್ಲು ನಿರ್ಧರಿಸಿದೆವು. ವೆಜಿಟಬಲ್ ಪಲಾವ್ ಬುತ್ತಿ ಕಟ್ಟಿಸಿಕೊಂಡು ಮುಳ್ಳಯ್ಯನಗಿರಿ ಕಡೆಗೆ ಹೊರಟೆವು.
ಅಲ್ಲಿಂದ ಸುಮಾರು 5-6 ಗಂಟೆಗಳ ಚಾರಣ ಮಾಡಿದೆವು, ಅದರ ವಿವರಣೆ ಕೊಡಲು ಪದಗಳಿಗೆ ತಡಕಾಡುತ್ತಿದ್ದೇನೆ, ಅಷ್ಟು ಸೊಗಸು, ಅಷ್ಟು ಸುಂದರ, ಅಷ್ಟು ರಮಣೀಯ, ಅಷ್ಟು ರುದ್ರ. ಸುತ್ತಮುತ್ತಲೆಲ್ಲವೂ ಹಸಿರುಮಯ. ನಮ್ಮ ಸದ್ದು ಬಿಟ್ಟು ಮಿಕ್ಕೆಲ್ಲವೂ ಶಾಂತ. ಬಹಳ ಆಹ್ಲಾದಕರವಾಗಿತ್ತು, ಬಿಸಿಲೂ ಕೂಡ ಅಷ್ಟಾಗಿರಲಿಲ್ಲ, ಮೋಡಗಳ ಮೇಲಿದ್ದೆವು. ಅಲ್ಲೆ ಪಕ್ಕದ ಬೆಟ್ಟದಲ್ಲಿ ಮಳೆಯಾಗುತ್ತಿತ್ತು, ಅತ್ತ ಕಡೆಯಿಂದ ಬೀಸುವ ಗಾಳಿ ಆ ಮಳೆಯ ಹನಿಗಳನ್ನು ನಮ್ಮ ಮೇಲೆ ಸಿಂಪಡಿಸುತ್ತಿದ್ದವು. ಸ್ವರ್ಗಸದೃಶವೇ ಸರಿ. ಒಂದಾದ ಮೇಲೊಂದು ಬೆಟ್ಟಗಳನ್ನು ಹತ್ತುತ್ತಿದ್ದೆವು, ಹಾಗೆ ಇಳಿಯುತ್ತಿದ್ದೆವು. ದೂರದಲ್ಲಿ ನಮ್ಮ ಗಮ್ಯ ಮುಳ್ಳಯ್ಯನಗಿರಿ ಕಾಣುತ್ತಲಿತ್ತು. ಹಿತವಾದ ತಂಗಾಳಿಯಲ್ಲಿ ನಿಧಾನವಾಗಿ ಸಾಗುತ್ತಿದ್ದೆವು. ಮಧ್ಯ ಒಂದು ಬೆಟ್ಟ ಬಹಳ ಕಡಿದಾಗಿತ್ತು, ಸ್ವಲ್ಪ ಆಯ ತಪ್ಪಿದರೂ ಪ್ರಪಾತಕ್ಕೆ ಬೀಳುವ ಸಂಭವ. ಹಿಂದೆಂದೂ ಈ ರೀತಿಯ ಸಾಹಸಗಳನ್ನು ಮಾಡಿರಲಿಲ್ಲ, ನಾವೆಲ್ಲರೂ ಆ ಕಡಿದಾದ ಜಾಗಗಳಲ್ಲಿ ಹತ್ತಿ ಇಳಿಯುತ್ತಿದ್ದು ನಮ್ಮ ಮನೆಯವರು ನೋಡಿದ್ದರೆ ನನ್ನ ಮುಖಸ್ತುತಿ ಮಾಡುತ್ತಿದ್ದರು. ಬಹಳ ರೋಮಾಂಚಕಾರಿಯಾಗಿತ್ತು, ಸಿಕ್ಕಾಪಟ್ಟೆ "ಎಂಜಾಯ್" ಮಾಡಿದೆ. ಎಲ್ಲ ಚಾರಣಗಳಲ್ಲೂ ಈ ರೀತಿಯ ಕಡಿದಾದ ಪ್ರದೇಶಗಳಿರಬೇಕು, ಮೈಯೆಲ್ಲ ಕಣ್ಣಾಗಿ ಬಹಳ ಎಚ್ಚರ ವಹಿಸಿ ಹತ್ತಿ ಇಳಿಯುವುದರಲ್ಲಿ ಬಹಳ ಥ್ರಿಲ್ಲ್ ಇರುತ್ತದೆ. ಶ್ರೀನಿವಾಸನ ಮೊಬೈಲು ಮತ್ತೆ ವಿವೇಕನ ಕ್ಯಾಮೆರ ಎಡೆಬಿಡದೆ ಅಲ್ಲಿ ಇದ್ದುದುವೆಲ್ಲದನ್ನು ದಾಖಲಿಸುವ ಯತ್ನದಲ್ಲಿದ್ದವು. ಅರುಣ ಮತ್ತೆ ಶ್ರೀನಿವಾಸ ಕನ್ನಡ ಹಾಡುಗಳನ್ನು ಆಂಗ್ಲೀಕರಿಸುವ ಯತ್ನದಲ್ಲಿದ್ದರು, ವಿವೇಕ್ ಹೇಳುವಂತೆ ಈ ಹಾಡುಗಳನ್ನೆಲ್ಲ ಬರೆದ ಸಾಹಿತಿಗಳು ಇವರೀರ್ವರ ಆಂಗ್ಲೀಕರಣ ಕೇಳಿದ್ದರೆ ಅಲ್ಲಿದ್ದ ಪರ್ವತವೊಂದರಿಂದ ಸಾಲು ಸಾಲಾಗಿ ಧುಮುಕುತ್ತಿದ್ದರು. ದಾರಿ ಉದ್ದಕ್ಕೂ ಎಡೆಬಿಡದೆ ಇವರೀರ್ವರ ಆಂಗ್ಲೀಕರಣ ಸಾಗುತ್ತಲೇ ಇತ್ತು. ಇನ್ನೇನು ಮುಳ್ಳಯ್ಯನಗಿರಿ ತಲುಪುವುದಕ್ಕೆ 10-15ನಿಮಿಷಗಳು ಇರುವಾಗ ಮಳೆ ಶುರುವಾಯಿತು. ಹಿಂದೆಂದೂ ಮಳೆಯಲ್ಲಿ ಚಾರಣ ಮಾಡಿರಲಿಲ್ಲ, ದಣಿದ ದೇಹಕ್ಕೆ ಮಳೆ ನೀರು ಬಿದ್ದಾಗ ಆಗುವ ಆನಂದ ವರ್ಣನಾತೀತ. ಬಾಟಲಿಗಳಲ್ಲಿ ತಂದ ಕುಡಿಯುವ ನೀರು ಖಾಲಿಯಾಗಿತ್ತು, ಮಳೆ ನೀರಿಗೆ ಬಾಯ್ತೆರೆದು ದಾಹ ನೀಗಿಸಿಕೊಳ್ಳುವ ಯತ್ನ ಮಾಡಿದೆ. ನಾನು , ವಿವೇಕ್ ಮತ್ತು ನಾರಯಣ್ ಮುಳ್ಳಯ್ಯನಗಿರಿ ತುದಿಯನ್ನು ಮೊದಲು ಮುಟ್ಟಿದೆವು, ಅಲ್ಲಿ ಯಾರೋ ನಿಂತಿದ್ದವರು ನಾವು ಬೆಟ್ಟ ಹತ್ತಿ ಬಂದಿದ್ದು ನೋಡಿ "ಎಲ್ಲಿಂದ ಬರುತ್ತಿದ್ದೀರಿ" ಎಂದರು..
ನಾನು "ಬಾಬಾ ಬುಡನ್ ಗಿರಿಯಿಂದ" ಎಂದೆ..
"ಹೇಗೆ" ಎಂದರು..
"ನಡಕೊಂಡು" ಎಂದೆ..

ಇಬ್ಬರೂ ಕಣ್ಣಗಲಿಸುತ್ತ ನಿಂತಿದ್ದರು.....ಅಷ್ಟರಲ್ಲಿ ಅರುಣ ಮತ್ತೆ ಶ್ರೀನಿವಾಸ ಒಡಗೂಡಿದರು...ಮುಂದೆ ಸಾಗಿದೆವು..
ಬೆಟ್ಟದ ಮೇಲೆ ಸಣ್ಣ ದೇವಸ್ಥಾನ ವಿದೆ, ಅದರ ಅರ್ಚಕರು ಅರುಣನಿಗೆ ಪರಿಚಯ, ಅವರ ಮನೆಯಲ್ಲೇ ಉಳಿದುಕೊಳ್ಳಲು ಅವಕಾಶವಿತ್ತರು. ಸಮಯ ಸುಮಾರು ಐದಿರಬಹುದು, ಮುಖ ತೊಳೆದು ಅವರು ಮಾಡಿಕೊಟ್ಟ ಅತ್ಯದ್ಭುತವಾದ ಕಾಫಿ ಕುಡಿದೆವು.. ಅಹಾ ಸೂಪರ್ ಕಾಪಿ...

ಸೂರ್ಯಾಸ್ತವನ್ನು ವೀಕ್ಷಿಸಿ ಮತ್ತೆ ಒಳಗೆ ಬಂದು ಕುಳಿತಿದ್ದೆವು, ಏನು ಮಾಡಬೇಕೆಂದು ತೋಚಲಿಲ್ಲ, ಮತ್ತೊಂದು ಸುತ್ತು ಕಾಪಿ ಕೇಳಲಾ ಎಂದು ಅರುಣನಿಗೆ ಕೇಳಿದೆ..

"ಹೋಗೊ ನಾಚಿಕೆ ಎಲ್ಲಾ ಬಿಟ್ಟು ಕೇಳು, ಏನು ಅನ್ಕೊಳಲ್ಲ ಮಾಡ್ಕೊಡ್ತಾರೆ" ಅಂದ...

ಹಾಗೆ ಅಳುಕುತ್ತಲೇ ಕೇಳಿದೆ.."ಆಂಟೀ ಇನ್ನು ಸ್ವಲ್ಪ ಕಾಫಿ ಬೇಕಿತ್ತು" ಎಂದು..

ಪಾಪ ಮಾಡಿಕೊಟ್ಟರು ಬೇಸರ ಪಟ್ಟಿಕೊಳ್ಳದೆ...ಮತ್ತೊಂದು ಸುತ್ತು ಕಾಫಿ ಸಮಾರಾಧನೆ ಸಾಗಿತು.

ಎಂಟೂವರೆಗೆಲ್ಲ ಊಟ ಮಾಡಿ ಮತ್ತೊಂದು ಸುತ್ತು ಹಾಕಲು ಹೊರ ಬಂದೆವು.

ಹೊರಗಡೆ ತುಂಬಾ ಚಳಿಯಿತ್ತು. ಆ ದೇವಸ್ಥಾನದ ದ್ವಾರದಲ್ಲಿ ಸ್ವಲ್ಪ ಜಾಗವಿತ್ತು, ಅಲ್ಲೆ ಟೆಂಟ್ ಹಾಕೋಣವೆಂದುಕೊಂಡೆವು, ಆದರೆ ರಾತ್ರಿ ಮಳೆ ಶುರುವಾದರೆ ತೊಂದರೆಯಾಗುವುದೆಂದು ಯೋಚಿಸಿ ಒಳಗಡೆಯೆ ಮಲಗಲು ಹೊರಟೆವು.
ರಾತ್ರಿ ಹೊತ್ತು ಆಕಾಶದ ತುಂಬಾ ಚುಕ್ಕಿಗಳ ಚಿತ್ತಾರ, ಎಲ್ಲೆಲ್ಲೂ ನಕ್ಷತ್ರಗಳು, ಹಿತವಾದ ಗಾಳಿ, ಆಗಾಗ್ಗೆ ಮಂಜು ಮುಸುಕುತ್ತಿತ್ತು, ನಗರ ಜೀವನ ಜಂಜಡಗಳಿಂದ ತಪ್ಪಿಸಿಕೊಂಡು ತಿಂಗಳಿಗೆ ಒಮ್ಮೆಯಾದರೂ ಇಲ್ಲಿಗೆ ಬರಬೇಕೇನಿಸುತ್ತಿತ್ತು. ಬೆಟ್ಟದ ಮೇಳಿಂದ ನೋಡಿದರೆ ಚಿಕ್ಕಮಗಳೂರು ಕಾಣಿಸುತ್ತಿತ್ತು, ಝಗಮಗಿಸುವ ದೀಪಗಳು, ಇಡೀ ಊರಿಗೆ ಕರೆಂಟ್ ಹೋದರೆ ನೋಡಲು ಹೇಗಿರುತ್ತದೆ ಎಂದು ಆಲೋಚಿಸುತ್ತ ಬಂದು ಮಲಗಿದೆ.

ಬೆಳಿಗ್ಗೆ ಅರುಣ ಎಬ್ಬಿಸಿದ್ದು ನೆನಪಿದೆ, "ಎಳೊ ಟೈಮ್ ಆಯ್ತು" ಎಂದು..ಆತನ ಮಾತಿಗೆ ಕಿವಿಗೊಡದೆ ಮತ್ತೆ ತಿರುಗಿ ಮಲಗಿಬಿಟ್ಟೆ.
ಆಮೇಲೆ ತಿಳಿಯಿತು ಸೂರ್ಯೋದಯಕ್ಕೆ ಎಬ್ಬಿಸಿದರು ಎಂದು..ಎಬ್ಬಿಸುವಾಗ ಒಬ್ಬರೂ ಹೇಳಲಿಲ್ಲ ಸೂರ್ಯೋದಯಕ್ಕೆ ಹೋಗುತ್ತಿದ್ದೆವೆಂದು, Hopeless fellows..
ನಾನು ಮತ್ತೆ ನಾರಾಯಣ್ ಸೂರ್ಯೋದಯವನ್ನು ಮಿಸ್ ಮಾಡಿದೆವು..

ಮುಂಜಾವಿನ ಕಾರ್ಯಗಳನ್ನು ಮುಗಿಸಿ ತಿಂದು ತಿಂದು ಮತ್ತೆ ಚಿಕ್ಕಮಗಳೂರಿಗೆ ಹೊರಟೆವು, downhill trek. ಯಾಕೋ ಕಾಲು ಹಿಡಿದುಕೊಂಡಿತ್ತು, ಇಳಿಯಲು ತುಸು ಕಷ್ಟವಾಗುತ್ತಿತ್ತು. ಬಹಳ ಸುಸ್ತಾಗುತ್ತಿತ್ತು ಕೂಡ.. ಕಾಫಿ ಏಸ್ಟೇಟ್ ನಡುವೆಯೆಲ್ಲ ಹಾದು ಹೋದೆವು. ಮಧ್ಯ ಮಧ್ಯ ಸಿಕ್ಕ ಸಣ್ಣ ಝರಿಗಳಿಂದ ನೀರು ಕುಡಿಯುತ್ತಾ, ದಾರಿ ಹುಡುಕುತ್ತ ಸಾಗುತ್ತಿದ್ದೆವು. ಮತ್ತೆ ಶ್ರೀನಿವಾಸ ಮತ್ತೆ ಅರುಣ ಆಂಗ್ಲೀಕರಣ ಶುರು ಹಚ್ಚಿಕೊಂಡಿದ್ದರು. ಸ್ವಲ್ಪ ದೂರ ನಡೆದು ಮುಖ್ಯರಸ್ತೆಗೆ ಬಂದು ಒಬ್ಬೊಬ್ಬರು ರಸ್ತೆಯ ಇಕ್ಕೆಲಗಳಲ್ಲಿ ಕುಳಿತುಬಿಟ್ಟೆವು, ಯಾವುದಾದರೂ ಗಾಡಿ ಬಂದರೆ ಹೋಗೋಣವೆಂದು. ಐದು ನಿಮಿಷ ಕಳೆಯುವುದರೊಳಗೆ ಲಗ್ಗೇಜ್ ಆಟೋ ನಮ್ಮನ್ನು ಹತ್ತಿಸಿಕೊಂಡಿತು, ಅದರಲ್ಲೆ ಮತ್ತೊಂದು ಫೋಟೋ ಸೆಷನ್ ಮುಗಿಸಿ ಚಿಕ್ಕಮಗಳೂರಿಗೆ ಬಂದೆವು...ಸಮಯ 12ಗಂಟೆ.

ಮಧ್ಯಾನ್ಹದ ಊಟ ಮುಗಿಸಿ ಎಲ್ಲರೂ ಬೀಳ್ಕೊಂಡೆವು. ಶ್ರೀನಿವಾಸ ಮಂಗಳೂರಿನ ಬಸ್, ನಾರಯಣ್ ಮೈಸೂರಿನ ಬಸ್ ಹತ್ತಿದರು. ನಾವು ಬೆಂಗಳೂರಿನ ಬಸ್ ಹತ್ತಿ ಕುಳಿತೆವು. ಸಂಜೆ 7ಕ್ಕೆ ಬೃಹತ್ ಬೆಂಗಳೂರಿಗೆ ಯಾವುದೇ ತೊಂದರೆಯಿಲ್ಲದೆ ತಂದು ಹಾಕಿತು ರಾಜಹಂಸ.

ನಮ್ಮ ನಮ್ಮ ಮನೆಗಳಿಗೆ ಬಂದು ಬೀಳಲು BMTC ಸಹಾಯ ಮಾಡಿತು. ಹೀಗೆ ಮುಗಿದಿತ್ತು "ಮುಳ್ಳಯ್ಯನಗಿರಿ" ಚಾರಣ.

ಸರಿಯಾಗಿ ಒಂದು ವರ್ಷವಾಗಿತ್ತು ನಾನು ಎರಡು ದಿನದ ಚಾರಣ ಮಾಡಿ, ಅದು ಮುಳ್ಳಯ್ಯನಗಿರಿ ಚಾರಣದೊಂದಿಗೆ ಮುಗಿಯಿತು. ಅದೇ ಬೆಂಗಳೂರು, ಅದೇ ಕಟ್ಟಡಗಳು, ಅದೇ traffic ಕಿರಿಕಿರಿ ಅದೇ ಆಫೀಸಿನ ಕೆಲಸದಿಂದ ಬೇಸೆತ್ತುಹೋಗಿದ್ದ ನನಗೆ ಸಿಕ್ಕಾಪಟ್ಟೆ relief ;-) ಕೊಟ್ಟ ಟ್ರೆಕ್ ಇದು. ಇದುವರೆಗೂ ಮಾಡಿದ best trek. ನನ್ನ ಜೊತೆಗೂಡಿದ ಎಲ್ಲರಿಗೂ ವಂದನೆಗಳು. ಈ ಚಾರಣದ ಹೆಚ್ಚಿನ ಫೋಟೊಗಳಿಗಾಗಿ ಕೆಳಕೊಟ್ಟಿರುವ ಮೈಲ್ ಗೆ ಮೈಲ್ ರವಾನಿಸುವುದು.

ಪುಟ್ಟ ಪುಟ್ಟ ಆಸೆಗಳೂ....

Wednesday, May 21, 2008

ಬೆಂಗಳೂರು ಈಗ ಬೃಹತ್ ಆಗಿ ಬೆಳೆದಿದೆ..ಬೆಳೆಯುತ್ತಲೇ ಇದೆ, "ಬೃಹತ್ ಬೆಂಗಳೂರು" ಎಂದು ಕರೆದು ಏನೇನೋ ಅಭಿವೃದ್ದಿ!! ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ,ಮಾಡಲಿ, ಅವರಿಗೆ ಜಯವಾಗಲಿ... ಈ ಬೃಹತ್ ಬೆಂಗಳೂರಿನಲ್ಲಿ ನನ್ನದೊಂದಷ್ಟು ಪುಟ್ಟ ಆಸೆಗಳಿವೆ, ನನ್ನ ಜೊತೆಗೂಡುತ್ತೀರಾ ?? ಪಟ್ಟಿ ಹೀಗಿದೆ...

1) ಸದಾ ಜನಭರಿತವಾಗಿರುವ J C ರೋಡಿನಲ್ಲಿ Townhall ಕಡೆ ಇಂದ Lalbagh ಕಡೆಗೆ ಬೈಕಿನಲ್ಲಿ ವೇಗವಾಗಿ ಸಾಗಬೇಕು ರಾತ್ರಿ 10ರ ಸಮಯದಲ್ಲಿ, ಅಲ್ಲಿ ಏಕಮುಖ ಸಂಚಾರ ಇದೆ ಎಂದು ನಿಮಗೆ ಗೊತ್ತಲ್ಲವೆ? ಹಾಗೆ ಒಮ್ಮೆ ವಿರುದ್ದ ದಿಕ್ಕಿನಲ್ಲಿ ಓಡಿಸಿಕೊಂಡು ಹೋಗಬೇಕು..

2) 501,201, ಈ ಸರಣಿಯ ಬಸ್ಸುಗಳನ್ನು ನೋಡಿದರೆ ಏನೋ ಪುಳಕ, ಕಾರಣ ಅದು ring ರೋಡಿನಲ್ಲಿ ಪ್ರದಕ್ಷಿಣೆಹಾಕುತ್ತದೆ, ಒಂದು ಟ್ರಿಪ್ಪಿಗೆ ಏನಿಲ್ಲವೆಂದರೂ 4-5ಗಂಟೆ ಸಮಯ ಹಿಡಿಯುತ್ತದೆ, ಆ ಬಸ್ಸುಗಳಲ್ಲಿ ಕಿಟಕಿಯ ಪಕ್ಕ ಕೂತು ನಗರವನ್ನು ನೋಡಬೇಕು, ಆದರೆ ಹಾಗೆ ಕೂತರೆ ಕಂಡಕ್ಟರ್ ಮಹಾಶಯನ ಬಯ್ಗುಳಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಅರುಣ ಹೇಳಿದ, ಆದಷ್ಟು ಬೇಗ ಸಮಯ ಮಾಡಿಕೊಂದು ಬನಶಂಕರಿ ಬಸ್ ನಿಲ್ದಾಣಕ್ಕೆ ಪೋಗುವೇನ್!!.. ನನ್ನೀ ಪ್ರಯಾಣದ ಬಗ್ಗೆ ಒಂದು ಲೇಖನವನ್ನು ಬರೆಯಬೇಕು...

3) ರವಿ ಬೆಳಗೆರೆಯವರ "ಪಾಪಿಗಳ ಲೋಕದಲ್ಲಿ" ಒದಿದಾಗಲಿಂದಲೂ ಶ್ರೀರಾಂಪುರದ ಬಗ್ಗೆ ವಿಶೇಷ ಒಲವು, ರೌಡಿಗಳ ತವರು ಎಂದು, ಆ ಏರಿಯಾಕ್ಕೆ ಹೋಗಿ ಒಬ್ಬ ರೌಡಿ ಇನ್ನೊಬ್ಬ ರೌಡಿಯನ್ನು ಅಟ್ಟಾಡಿಸಿಕೊಂಡು ಹೋಗುವುದೋ, ಕತ್ತರಿಸಿ ಹಾಕುವುದೋ, ಅಥವಾ "ಡೀಲ್" ಗಳನ್ನು ರೌಡಿಗಳು ಕುದುರಿಸುವುದನ್ನು ಕಣ್ತುಂಬಿಕೊಳ್ಳಬೇಕು.



4) ಮೈಸೂರು ರಸ್ತೆಯಲ್ಲಿ 24hrs ತೆರೆದಿರುವ ಕಾಫಿ ಡೆ ಇದೆಯಂತೆ, ಅಲ್ಲಿ ಮಧ್ಯರಾತ್ರಿ 3ರ ಹೊತ್ತಿಗೆ ಹೋಗಿ ಕಾಫಿ ಕುಡಿಯಬೇಕು....

5) N R ಕಾಲೊನಿಯಲ್ಲಿ "ಕಟ್ಟೆ ಬಳಗ" ಎಂಬ ಒಂದು ಜಾಗವಿದೆ, ಮಧ್ಯ ಸಣ್ಣ ಜಾಗ, ಅದರ ಇಕ್ಕೆಲಗಳಲ್ಲಿ ರಸ್ತೆ, ದಟ್ಟ ಮರಗಳ ಆಶ್ರಯವಿದೆ, ಅಲ್ಲಿ ಕೂತು ಆಪ್ತ ಗೆಳೆಯರೊಡನೆ ಹರಟೆ ಹೊಡೆಯಬೇಕು....

ಪುಟ್ಟ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳುವಲ್ಲಿ ದೊಡ್ಡ ಮಟ್ಟದ ಸಂತೋಷವಿರುತ್ತದೆ, ಪುಟ್ಟ ಪುಟ್ಟ ಆಸೆಗಳೂ...... ಚಿಕ್ಕ ಚಿಕ್ಕ ಆಸೆಗಳೂ.....

ಸದ್ಯಕ್ಕಿಷ್ಟೆ!!! ...

ಅರಮನೆ...

Sunday, April 27, 2008


’ನಕ್ಕ ಆ ಕ್ಷಣ ನಿರಾಳ ಮೈಮನ.......’

’ನಗು ನಗು ನಗು’ ಹಾಡಿನ ಬಹಳ ಅಚ್ಚು ಮೆಚ್ಚಿನ ಸಾಲು ಇದು ನನಗೆ....

ಜಯಂತ್ ಕಾಯ್ಕಿಣಿ ಒಂದೇ ರೀತಿಯ ಹಾಡುಗಳಿಗೆ ಬ್ರಾಂಡ್ ಆಗುತ್ತಿದ್ದಾರೆ ಎಂಬ ಕಳವಳವಿದೆ......

’ನನಗು ನಿನಗೂ ಕಣ್ಣಲ್ಲೇ ಪರಿಚಯ..ಸನಿಹ ಸುಳಿವ ಮನದಾಸೆ ಅತಿಶಯ....’ ಅದ್ಭುತವಾದ ಹಾಡು..

ಕವಿರಾಜರಿಗೆ ಕವಿರಾಜರೇ ಸಾಟಿ.. ’ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ, ಹೇಗೆ ಹೇಳಲಿ ನನ್ನ ಮನದ ಹಂಬಲಾ.....’

ಬಹಳ ಬಹಳ ಸಿಂಪಲ್ ಕತೆ...ನಿರೂಪಣೆಯಲ್ಲಿ ನಿರ್ದೇಶಕರ ಕುಸುರಿ ಕೆಲಸ ಕಾಣುತ್ತದೆ, ಅತಿರೇಕದ ಸಂಭಾಷಣೆಗಳಿಲ್ಲ, ಗಣೇಶ್ ಎಷ್ಟು ಬೇಕೋ ಅಷ್ಟು ಮಾತನಾಡುತ್ತಾರೆ, ಅನಂತನಾಗ್ ರವರದ್ದು ಮಾಗಿದ ಅಭಿನಯ.. ಚಿತ್ರ ನಿಂತಿರಿರುವುದು ಇವರಿಬ್ಬರ ಮೇಲೆಯೇ. ನಮ್ಮ ಅಕ್ಕ ಪಕ್ಕದಲ್ಲೇ ಇರುವ ಹುಡುಗನಂತಿದೆ ಗಣೇಶ್ ಅಭಿನಯ, ಅದಕ್ಕೆ ಇಷ್ಟವಾಗುತ್ತಾರೆ.

ಒಟ್ಟಾರೆಯಾಗಿ ನಾಗಶೇಖರ್ ಒಂದು ಒಳ್ಳೆಯ ಚಿತ್ರ ಮಾಡಿದ್ದಾರೆ. ಗಣೇಶ್ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಹೊಸ ಪ್ರಯೋಗಗಳು ಹೀಗೆ ಸಾಗಲಿ. ಗಣೇಶ್, ಅನಂತ್ ನಾಗ್ ಮತ್ತು ನಾಗಶೇಖರ್ ರವರಿಗೆ Congratulations......

ವಯಸ್ಸಿನ ಅಂತರವಿಲ್ಲದೆ ಎಲ್ಲರೂ ನೋಡಬಹುದಂತಹದಾದ ಚಿತ್ರ... "ಅರಮನೆ"

ಒಮ್ಮೆ ನೋಡಿಬನ್ನಿ....

ದೇವ್ರು ದೇವ್ರು ಅಂತ ಹೇಳ್ತಾರೆಲ್ಲ ಜನ್ರು....

Friday, April 18, 2008


’ದೇವರಿದ್ದಾನೊ ಇಲ್ಲವೋ’..ಈ ವಿಷಯದ ಮೇಲೆ ಚರ್ಚೆ-ವಾದಗಳು ದೇವರು ಹುಟ್ಟಿದಾಗಿನಿಂದ(!!) ನಡೆಯುತ್ತಲೇ ಇದೆ. ಇದಕ್ಕೆ ಆದಿ-ಅಂತ್ಯವೆಂಬುದು ಇರುವುದಿಲ್ಲ. ಇದಮಿತ್ತಂ ಎಂದು ಹೇಳಲು ಆಗುವುದಿಲ್ಲ, ಹಾಗೆ ಹೇಳಲು ಜನರು ಸಹ ಬಿಡುವುದಿಲ್ಲ!!.. ಎಳೆದಾಡುತ್ತಲೇ ಇರುತ್ತಾರೆ.. ಚರ್ಚೆಗೂ ವಾದಕ್ಕೊ ಬಹಳ ವ್ಯತ್ಯಾಸವಿದೆ, ವಾದಗಳಲ್ಲಿ ನನಗೆ ಆಸಕ್ತಿಯಿಲ್ಲ..

ಮನುಷ್ಯನಿಗೆ ಕಾಣದುದರ ಬಗ್ಗೆ ಯಾವಾಗಲೂ ಹೆಚ್ಚಿನ ಆಸಕ್ತಿ, ಕುತೂಹಲ ಇದ್ದೇ ಇರುತ್ತದೆ, ಅದು ಮಾನವ ಸ್ವಭಾವ, ಹೊಸದನ್ನು ಅನ್ವೇಷಿಸಲು, ಹುಡುಕಲು, ಪಡೆಯಲು ಅನವರತ ಕಾಲ ಶ್ರಮಿಸುತ್ತಲೇ ಇರುತ್ತಾನೆ, ಹಾಗಿರದಿದ್ದರೆ ಇಷ್ಟೆಲ್ಲ ಸಂಶೋಧನೆಗಳು, ಆವಿಷ್ಕಾರಗಳು ಆಗುತ್ತಿರಲಿಲ್ಲ, ಹಾಗಾಗಿ ಈ ವಿಷಯದ ಬಗ್ಗೆ ಚರ್ಚೆ-ವಾದಗಳು ನಡೆಯುತ್ತಲೇ ಇರುತ್ತದೆ....
’ಮರಳಿ ಬಂದವರಿಲ್ಲ, ವರದಿ ತಂದವರಿಲ್ಲ...’
ನೆನ್ನೆ ಶ್ರೀಕಾಂತ ಕೇಳಿದ, ನೀನು ಹುಟ್ಟುವುದಕ್ಕೆ ಮುಂಚೆ ಎಲ್ಲಿದ್ದೆ, ಸತ್ತ ನಂತರ ಎಲ್ಲಿಗೆ ಹೋಗುತ್ತೀಯ...ಎರಡಕ್ಕೂ ನನ್ನ ಉತ್ತರ "ಗೊತ್ತಿಲ್ಲ". ನನಗೆ ತಿಳಿದುಕೊಳ್ಳುವ ಅವಶ್ಯಕತೆಯೂ ಕಾಣಲಿಲ್ಲ.. ಇರುವಷ್ಟು ದಿನ ಹೇಗೆ ಜೀವಿಸಿದೆ ಅನ್ನುವುದಕ್ಕೆ ಮಾತ್ರ ನನ್ನ ಬದುಕು ಸೀಮಿತ, ಆತ್ಮ, ಪ್ರೇತಾತ್ಮ, ಭೂತಾತ್ಮ ಇದಾವುದು ನನಗೆ ಗೊತ್ತಿಲ್ಲ. ಇರುವಷ್ಟು ದಿನ ಹೇಗಿದ್ದೆ, ನನ್ನಿಂದ ಯಾರಿಗೂ ಸಹಾಯ ಆಗದಿದ್ದರೆ ಪರವಾಯಿಲ್ಲ ತೊಂದರೆ ಆಗದಿದ್ದರೆ ಸಾಕು. ಬದುಕು ಬಹಳ ಚಿಕ್ಕದು ಇಂತಹ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು, Live the Life to the fullest... ಅದರ ಪ್ರಯತ್ನದಲ್ಲಿರುವೆ, ಕಾಯ-ವಾಚಾ-ಮನಸಾ....


ಹಾಗೆಂದ ಮಾತ್ರಕ್ಕೆ "ದೇವರ" ಬಗ್ಗೆ ತಿರಸ್ಕಾರ ಭಾವ ಇದೆ ಎಂಬುದಲ್ಲ. ನನ್ನ ಗ್ರಹಿಕೆಗೆ, ಬುದ್ದಿಮತ್ತೆಗೆ, ಅನುಭವಕ್ಕೆ ಬಂದುದಷ್ಟು ತಿಳಿದುಕೊಂಡಿದ್ದೇನೆ. ಆ ವಿಷಯದ ಬಗ್ಗೆ ಸದ್ಯಕ್ಕೆ ಅಷ್ಟು ಸಾಕು ಎಂದು full stop(.) ಹಾಕಿ ಸುಮ್ಮನಾಗಿದ್ದೇನೆ, ಅದಕ್ಕೆ ನನಗೆ ಬೇಕೆನಿಸಿದಾಗ comma(,) ಹಾಕಿ ಮುಂದುವರೆಸಿಕೊಳ್ಳುವೆ.

"ದೇವರು" ಎನ್ನುವುದು ಬಹಳ ಸುಂದರವಾದ concept, ಆ concept ನಿಂದ ಮನುಷ್ಯದ ತನ್ನ ದಿನನಿತ್ಯದ ಜಂಜಡಗಳಿಂದ,ಕಷ್ಟಗಳಿಂದ, ತನ್ನ ಗೋಳು ಪರದಾಟಗಳಿಂದ ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯನ್ನು ಪಡೆಯುತ್ತಾನೆ, ನನ್ನ ಮಟ್ಟಿಗೆ ಅದರ ಸಲುವಾಗೆ "ದೇವರು" ಇರುವುದು. ಕೆಲವು ಸಮಯಗಳಲ್ಲಿ ಮನುಷ್ಯ ತನ್ನ ಕೈಲಾದ ಕೆಲಸವನ್ನು ಮಾಡಿ ಬಸವಳಿದಾಗ ಮುಂದೆ ದಾರಿ ಕಾಣದಾದಾಗ, ತೋಚದಾದಾಗ ಕೈಚೆಲ್ಲಿ ಕೂರುವಾಗ ದೇವರು ನೆರವಿಗೆ ಬರುತ್ತಾನೆ, "ಭಗವಂತಾ ನನ್ನ ರಕ್ಷಿಸಪ್ಪಾ" ಎಂದು ಉದ್ಗರಿಸಿ ಸುಮ್ಮನಾಗುತ್ತಾರೆ, ಹಾಗೆ ದೇವರ ಮೇಲೆ ಭಾರ ಹಾಕಿ ತಮ್ಮ ಕೆಲಸವನ್ನ ಮುಂದುವರೆಸುತ್ತಾರೆ. ಆ ಕ್ಷಣಕ್ಕೆ "ದೇವರು" ಎನ್ನುವ concept ಆತನಿಗೆ releif ಕೊಡುತ್ತದೆ, ಆತನ ಮನಸ್ಸು ಎಷ್ಟೋ ನಿರಾಳವಾಗುತ್ತದೆ. ಕಾರಿನಲ್ಲಿ ಕುಳಿತ ಚಾಲಕ ಬ್ರೇಕ್ brake fail ಆಗಿ control ತಪ್ಪಿದಾಗ ತನ್ನ ಕೈಲಾದುದನ್ನು ಮಾಡಿ "ಭಗವಂತಾ ಕಾಪಾಡಪ್ಪಾ" ಎಂದು ಉದ್ಗರಿಸುತ್ತಾನೆ, ಬದುಕುಳಿದರೆ "ದೇವರು" ರಕ್ಷಿಸಿದ ಎಂದು ಸಂತಸ ಪಡುವನು, ಇಲ್ಲದಿದ್ದರೆ "ಗೊತ್ತಿಲ್ಲ". ಅವನ ಆಯುಷ್ಯ ಮುಗಿದಿತ್ತು ಎಂದಲೋ ಅಥವಾ ಆತನ time ಸರಿಯಾಗಿರಲಿಲ್ಲ ಎಂದಲೋ ಸುಮ್ಮನಾಗುವರು, ಈ ರೀತಿಯ ಮಾತುಗಳೆಲ್ಲ ಅವರವರ ಮನಗಳಿಗೆ ಗೊತ್ತಗದೆ ಇರುವ ಪ್ರಶ್ನೆಗಳಿಗೆ ಕೊಟ್ಟುಕೊಳ್ಳುವ releif ಗಳು, ಸಮಾಧಾನಕರ ಮಾತುಗಳು..ನನ್ನ ಮಟ್ಟಿಗೆ ದೇವರು ಅಷ್ಟೆ, ನನಗೆ ದೇವರು "ಸಕಲ"ನೂ ಅಲ್ಲ "ಕೇವಲ"ನೂ ಅಲ್ಲ...
ಕೆಲವರಿಗೆ "ದೇವರು" ಎಂಬುದು ತಮ್ಮನ್ನು ನಿಯಂತ್ರಿಸಿಕೊಳ್ಳುವುದಕ್ಕೆ ಉಪಯೋಗಿಸಿಕೊಳ್ಳುತ್ತಾರೆ, ಆ ಕೆಟ್ಟ ಕೆಲಸವನ್ನು ಮಾಡಿದರೆ ದೇವರು ನನಗೆ ಶಿಕ್ಷೆ ನೀಡುತ್ತಾನೆಂದು ನೆನೆದು ಸುಮ್ಮನಾಗುತ್ತರೆ, ಅಥವಾ ತಾವು ಮಾಡಿದ ಕೆಲಸಗಳಿಗೆ ಕಷ್ಟ ಅನುಭವಿಸುತ್ತಿದ್ದರೆ "ನಾನು ಮಾಡಿದ ಪಾಪ ಕಾರ್ಯಗಳಿಗೆ ಹೀಗೆ ಆಗಿದೆ" ಎಂದು ಪಶ್ಚಾತಾಪ ಅನುಭವಿಸಿ ಮುಂದೆ ಆ ರೀತಿಯ ಕೆಲಸಗಳಿಗೆ ಕೈಹಾಕದೆ ಸುಮ್ಮನಾಗುತ್ತಾರೆ ...ದೇವಸ್ಥಾನಗಳಿಗೆ ಅಲೆದು ನೆಮ್ಮದಿ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ.

ದೇವಸ್ಥಾನಗಳಿಗೆ ಕಾಲಿಟ್ಟರೆ ಮನಸ್ಸು ಪ್ರಫುಲ್ಲವಾಗುವುದು, ವೇದಘೋಷಗಳು, ಹಿತವಾಗಿ ಬೀಸುವ ಗಾಳಿ, ಧೂಪದಾರತಿಗಳು, ಘಂಟಾನಾದಗಳು ಇವೆಲ್ಲ ಒಂದು ರೀತಿಯ ನೆಮ್ಮದಿ ಕೊಡುತ್ತದೆ, relax ಆಗುತ್ತಾರೆ. ಎಲ್ಲಾ ದೇವಸ್ಥಾನಗಳು ಈ ರೀತಿಯಿರುವುದಿಲ್ಲ ಬಿಡಿ..ಅದು ಬೇರೆಯ ಸಂಗತಿ..ಅದಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ಹೋಗುತ್ತಾರೆ..

ನಮಗೆ ಕಾಣದ ಶಕ್ತಿಯೊಂದು ನಮ್ಮ ಮೇಲೆ ಸದಾ ಇದೆ, ನಮ್ಮನ್ನು ನಿಯಂತ್ರಿಸುತ್ತದೆ, ಆ ಶಕ್ತಿಗೆ ನಾನು "ದೇವರು" ಎನ್ನುತ್ತೇನೆ, ಅದಕ್ಕೆ ಜನರು ಅವರಿಗೆ ಬೇಕಾದ ರೀತಿಯಲ್ಲಿ ಆ ಶಕ್ತಿಯನ್ನು ಆರಾಧಿಸುತ್ತಾರೆ, ಅದಕ್ಕೆಂದೇ ಹಲವು ಮತಗಳು, ಕುಲಗಳು, ಹಲವು ವೇಷಗಳು, ಇದಕ್ಕೆ ಪುಷ್ಟಿ ಕೊಡುವ ಉಕ್ತಿ.."ದೇವನೊಬ್ಬ ನಾಮ ಹಲವು..."

ಮನುಷ್ಯ ಸಮಾಜದಲ್ಲಿ ಬಾಳಿ-ಬದುಕಲು ಹಲವು ರೀತಿಯ protocol ಗಳನ್ನು ಅಳವಡಿಸಿಕೊಂಡಿದ್ದಾನೆ... ನಗರಗಳಲ್ಲಿ ಒಡಾಡಲು ಗಾಡಿಗಳು ಹೇಗೆ ಎಡಬದಿಯಲ್ಲಿ ಮಾತ್ರ ಚಲಿಸಬೇಕು, ಸಿಗ್ನಲ್ ಪಾಲನೆ ಮಾಡಬೇಕು ಅಂತಿದೆಯೋ , ಇವೆಲ್ಲದುದರ ಉದ್ದೇಶ ಇಷ್ಟೆ, ಆರಮಾದಾಯಕ ಸಂಚಾರ. ಹಾಗೆ "ದೇವರು" ಸಹ ಹೀಗೆ ಒಂದು ರೀತಿಯ protocol.. ನಮಗೆ ತೊಂದರೆಯಾದಾಗ, ಸಂಕಟಗಳ ಸುಳಿಯಲ್ಲಿ ಸಿಲುಕಿದಾಗ, ಹತಾಶರಾದಾಗ "ದೇವರು" ಎಂದು ಬೊಬ್ಬೆ ಹೊಡೆಯುತ್ತೇವೆ, ಸಂತಸದ ಸಮಯದಲ್ಲಿ ದೇವರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ.. ಸಾಮನ್ಯ ಮನುಷ್ಯರು ಮಾಡುವುದು ಇಷ್ಟೆ..."ಸಂಕಟ ಬಂದಾಗ ವೆಂಕಟರಮಣ...". ದಿನ ನಿತ್ಯ ಜೀವನದಲ್ಲಿ ಹಲವಾರು ಆಚರಣೆಗಳನ್ನು ಅಳವಡಿಸಿಕೊಂಡಿರುತ್ತಾರೆ ಜನರು, ಅವೆಲ್ಲಾ ಕೇವಲ ಅವರವರ ನೆಮ್ಮದಿಗೆ ಅಷ್ಟೆ. ದಿನ ನಿತ್ಯ ಪ್ರಾರ್ಥನೆ ಮಾಡುವುದು, ದೇವರಿಗೆ ಕೈಮುಗಿಯುವುದು, ದಂಡ ಬೀಳುವುದು ಹೀಗೆ. ಕೆಲವರು ಚಿಕ್ಕಂದಿನಿಂದ ರೂಡಿಸಿಕೊಂಡು ಬಂದಿರುತ್ತಾರೆ ಹಾಗೆ ಮುಂದುವರೆಸಿಕೊಂಡು ಹೋಗುತ್ತಾರೆ. ಆರಾಮದಾಯಕ ಜೀವನ.



ಹಾಗೆ ಇದರಂತೆಯೇ ಜ್ಯೋತಿಷ್ಯದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ನಾನು ಹುಟ್ಟಿದಾಗಲೇ ನಾನು ಎಂದು ಸಾಯುವುದು, ನಾನು ಹೇಗೆ ಇರುವುದು, ಯಾವಾಗ ತೊಂದರೆಯಾಗುವುದು ಎಂದೆಲ್ಲ ಗೊತ್ತಾಗಿಬಿಟ್ಟರೆ, ನನ್ನ ಹಣೆಬರಹವನ್ನು ಬರೆದು ಕಳಿಸಿದರೆ "ನನ್ನದು" ಅಂತ ಏನಿರುತ್ತದೆ ಈ ಪ್ರಪಂಚದಲ್ಲಿ. ನನ್ನ ಅಸ್ಥಿತ್ವಕ್ಕೆ ಬೆಲೆಯೇ ಇರುವುದಿಲ್ಲ...ಯಾರೋ ಬರೆದಂತೆ ನಡೆವುದಾದರೆ ನಾ ಮಾಡುವುದೇನಿದೆ ಇಲ್ಲಿ??? ಹಾಗೆ ನಾ ಅಂದುಕೊಳ್ಳುವಂತೆ ಎಲ್ಲವೂ ಎಲ್ಲ ಕಾಲದಲ್ಲಿಯೂ ಆಗುವುದಿಲ್ಲ, ಆಗ ಇದ್ದೆ ಇದ್ದಾನಲ್ಲ ನನ್ನ ನೆಮ್ಮದಿಯ ದೇವರು... ನನ್ನ ಕೈಲಾದುದನ್ನು ಮಾಡಿದ್ದೇನೆ, ಇನ್ನು ನಿನಗೆ ಬಿಟ್ಟದ್ದು ಎಂದು ನಿರಾಳನಾಗುತ್ತೇನೆ.

ಎಲ್ಲವನ್ನು ನಾನೇ ಮಾಡುತ್ತೇನೆ, ಎಲ್ಲವೂ ನನ್ನ ಮೇಲೆ ನಿಂತಿದೆ, ನಾನು ನಡೆದಂತೆ ಆಗುತ್ತದೆ ಎಂದರೆ ಜೀವನವನ್ನು ನಿಭಾಯಿಸುವುದು ಕಷ್ಟ, ಬಹಳ ಹೊರೆ ಬೀಳುತ್ತದೆ. ಎಲ್ಲದಕ್ಕೂ ನನ್ನಲ್ಲೇ ಉತ್ತರ ಕಂಡುಕೊಳ್ಳಬೇಕಾಗುತ್ತದೆ..ಒಳ್ಳೆಯವನಾಗಿ ಇರುವುದು ಮತ್ತು ಒಳ್ಳೆಯದನ್ನು ಮಾಡುವುದು ಇಷ್ಟೆ ನನ್ನ ಕೆಲಸ..ಅದಕ್ಕಾಗಿ ನನ್ನ ದೇವರು...

ನನಗೆ ತಿಳಿದಿರುವಷ್ಟು ದೇವರನ್ನು ಅರ್ಥೈಸಿಕೊಂಡಿದ್ದೇನೆ, ನನಗಿಷ್ಟು ಸಾಕು. ಸದ್ಯಕ್ಕೆ ಇಷ್ಟು ಸಾಕು....

ನಿಮಗೆ ದೇವರು ಒಳ್ಳೇದು ಮಾಡಲಿ.... :-)

(ವಿ.ಸೂ : ಈ ನನ್ನ ದೇವರ ನಿಲುವಿನ ಬಗ್ಗೆ ವಾದಗಳು-ಚರ್ಚೆಗಳು ಅನಾವಶ್ಯಕ...not interested)

ಎರಡು ಮುಖಗಳು..

Thursday, April 10, 2008


ಸನ್ನಿವೇಶ 1 : ಆಗ ತಾನೆ ಜೀತದಾಳು ತನ್ನ hectic ಕೆಲಸವನ್ನ ಮುಗಿಸಿ, ಕೈಕಾಲು ಮುಖ ತೊಳೆದು ಯಜಮಾನಿಯ ಊಟಕ್ಕಾಗಿ ಅಂಗಳದಲ್ಲಿ ಕಾದು ಕುಳಿತಿದ್ದ, ಯಜಮಾನಿ ತಂದ ಊಟವನ್ನು ಕಣ್ಣಿಗೊತ್ತಿಗೊಂದು ತಿನ್ನಲನುವಾದ, ಆಗ ತಾನೆ ಮನೆಗೆ ಪ್ರವೇಶಿಸಿದ ಯಜಮಾನ ಹಸುಗಳಿಗೆ ಹುಲ್ಲು ಹಾಕಿಲ್ಲವೆಂದು ಕೆಂಡಾಮಂಡಲನಾಗಿ ಆಳು ತಿನ್ನಲನುವಾಗಿದ್ದ ತಟ್ಟೆಯನ್ನು ಝಾಡಿಸಿ ವೊದ್ದುಬಿಟ್ಟ, ಅನ್ನ ಅಂಗಳದಲ್ಲಿ ಚೆಲ್ಲಾಪಿಲ್ಲಿಯಾಗಿಬಿಟ್ಟಿತು, ಆಳಿಗೆ ಹೊಟ್ಟೆ ಹಸಿವಿನೊಂದಿಗೆ ನಾಲ್ಕು ಬಿಗಿತಗಳು,ಬಯ್ಗುಳಗಳು ಬಿದ್ದವು...ಆಳಿನ ಕಂಗಳಲ್ಲಿ ನೀರು ಬತ್ತಿಹೋಗಿತ್ತು, ಚುರುಗುಡುತ್ತಿದ್ದ ಹೊಟ್ಟೆಯೊಂದಿಗೆ ಸುಡುಬಿಸಿಲಿನಲ್ಲಿ........ ಆ ಯಜಮಾನ ಏನಾಗಿರಬಹುದು??

ಸನ್ನಿವೇಶ 2: ಕಷ್ಟದಲ್ಲಿರುವ ವೃದ್ಧರು, ಹಸಿದಿರುವ ಮುಖಗಳು ಕಂಡರೆ ಕೈಲಿದ್ದ ಹಣವನ್ನು ಎಷ್ಟಿದೆಯೆಂದೂ ಸಹ ನೋಡದೆ ಅವರಿಗೆ ಕೊಟ್ಟುಬಿಡುತ್ತಿದ್ದ, ತನಗೆ ತಿನ್ನಲಿಕ್ಕೆ ಇಲ್ಲದಿದ್ದರೂ ಹಸಿದಿರುವವರಿಗೆ ತಿನ್ನಲು ಕೊಟ್ಟು ಅವರನ್ನೇ ದಿಟ್ಟಿಸುತ್ತಾ ಕಣ್ಣುತುಂಬಿಕೊಳ್ಳುತ್ತಿದ್ದ, ಅವರ ಕೈಮುಗಿತದಲ್ಲಿ ಕೊನೆಗಾಣುತ್ತಿತ್ತು..ಎಷ್ಟು ಜನರಿಗೆ ಅನ್ನ ನೀಡಿದನೋ ಗೊತ್ತಿಲ್ಲ .... ಈ ಯಜಮಾನ ಏನಾಗಿರಬಹುದು??

ಎರಡೂ ಸಹ ಸತ್ಯ, ಎರಡೂ ಸಹ ಶುದ್ಧ ಸುಳ್ಳು... ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು....
ಬಹಳಷ್ಟು ಪ್ರಶ್ನೆಗಳು ಉಳಿದಿವೆ....!!!!

Race....

Wednesday, April 9, 2008


"Pehli nazar main kaisa jaadu kar diyaaaaaaaaa........."ಈ ಹಾಡಿಗೆ ಮನಸೋತು, ತಲೆದೂಗಿ(ಬಾಗಿ)!!, ಗುನುಗಿ ಗುನುಗಿ ಸಾಕಾಗಿ, FMನಲ್ಲಿ ಕೇಳಿ ಕೇಳಿ life -ಉ ನನ್ನದಾಗಿಸಿ ಕೊಂಡು ಭಾರಿ ನಿರೀಕ್ಷೆ ಹೊತ್ತು ಚಿತ್ರವನ್ನ ನೋಡಲು ಕುಳಿತೆ... Atif Aslam ಹಾಡುಗಾರಿಕೆ ಬಹಳವಾಗಿ ಮೆಚ್ಚಿದ್ದೆ.. ಚಿತ್ರನೋಡಿದ ಮೆಲೆ ನನಗನ್ನಿಸಿದ್ದು ಇಷ್ಟು...ನಿಮಗೆ ಬೇರೆ ಅನ್ನಿಸಬಹುದು, after all "ಅವರವರ ಭಾವಕ್ಕೆ ತಕ್ಕಂತೆ".....


Saif Ali Khan : ಹೊಸ ಗೆಟಪ್, ತುಂಬಾ ಖದರ್ ಇದೆ, ಒಳ್ಳೆ ಅಭಿನಯ..ChappaaLe...chappaaLe..
Askhaye Khanna : OK!!
Anil Kapoor : Timepass
Bipasha Basu : Censored!!!
Katrina Kaif : Cute..
Sameera Reddy : ಯಾಕಿದ್ದಳೊ ಕೊನೆವರೆಗೂ ಗೊತ್ತಾಗಲೇ ಇಲ್ಲ..


Locations : South Africa ಎಂದು ಚಿತ್ರದಲ್ಲಿ ತೋರಲ್ಪಡಿಸುತ್ತಾರೆ... ಕಣ್ಮನ ಸೆಳೆಯುತ್ತದೆ..
Cars -u : ಉನ್ನತ ದರ್ಜೆಯ ಮಸ್ತ್ ಮಸ್ತ್ ಕಾರುಗಳು...ಒಂದಕ್ಕಿಂತ ಒಂದು ಚೆನ್ನಾಗಿದೆ.
ಕತೆ : Full confuse -u...ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಬಿಡುವ ಯತ್ನದಲ್ಲಿ super ಆಗಿ ಎಡವಿದ್ದಾರೆ..ಆದರೆ ಒಂದಂತು ಖರೆ, ಒಂದು ದೃಶ್ಯವನ್ನು ನೀವು miss ಮಾಡಿದರೆ ತಲೆ ಕುಲಗೆಡುತ್ತದೆ...ಮೋಸ, ಧಗಾ, ವಂಚನೆ ಚಿತ್ರದ ಜೀವಾಳ....


ಎಲ್ಲದಕ್ಕಿಂತ ಹೆಚ್ಚಾಗಿ ನಾನು ಕಾಯುತ್ತಿದ್ದ "Pehli Nazar " ಹಾಡಿನ ಚಿತ್ರೀಕರಣ ನನ್ನ ನಿರೀಕ್ಷೆ ಹುಸಿ ಮಾಡಿತು...ಇನ್ನೂ ಚೆನ್ನಾಗಿ ಮಾಡಬಹುದಿತ್ತು..
ದುಡ್ಡು ಜಾಸ್ತಿ ಇದ್ದರೆ ಒಮ್ಮೆ ಚಿತ್ರವನ್ನ ವೀಕ್ಷಿಸಿ............

ಅರಮನೆ ...

Tuesday, March 25, 2008


ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ
ಹೇಗೆ ಹೇಳಲಿ ನನ್ನ ಮನದ ಹಂಬಲ......

ಮಾತನಾಡಲಾ ಇಲ್ಲ ಹಾಡು ಹಾಡಲಾ
ಹೇಗೆ ತಿಳಿಸಲಿ ನನ್ನ ಎದೆಯ ತಳಮಳ.....


ಇದು "ಅರಮನೆ" ಚಿತ್ರದ ಒಂದು ಹಾಡಿನ ನಾಲ್ಕು ಸಾಲುಗಳು...ಬಹಳ ಬಹಳ ಬಹಳ ಹಿಡಿಸಿತು ಅದಕ್ಕಾಗಿ ಬ್ಲಾಗಿಸಿದೆ...ಬರೆದವರು "ಕವಿರಾಜ್" ....


ಚೆನ್ನಾಗಿದೆ ಅಲ್ಲ್ವಾ??

ನಾನು ಬ್ರಹ್ಮ ಮತ್ತು ಮುಖ್ಯಮಂತ್ರಿ - ಭಾಗ 5

Friday, March 7, 2008

Brahma is back... 5 ತಿಂಗಳ ಹಿಂದೆ ಬಂದಿದ್ದ ಬ್ರಹ್ಮನನ್ನು ದಸರೆಯ ರಜೆಗೆಂದು ಕಳಿಸಿದ್ದೆ, ಆಗಲೇ ಸಾಕಷ್ಟು ವರಗಳ ಪಟ್ಟಿ ಇಟ್ಟಿದ್ದೆ, ಇನ್ನಷ್ಟು ಹೇಳುವ ಹಂಬಲದಲ್ಲಿದ್ದೆ, ಸಮಯಾವಕಾಶ ಅಭಾವದಲ್ಲಿದ್ದ ಬ್ರಹ್ಮನನ್ನು ದಸರೆಯ ರಜೆಗಾಗಿ ಕಳುಹಿಸಿಕೊಟ್ಟಿದ್ದೆ, ಇದೀಗ ಮರಳಿ ಬಂದು ನಿನ್ನ ವರಪಟ್ಟಿಯನ್ನು ಮುಗಿಸು ಎಂದು ಕಾಡುತ್ತಿದ್ದಾನೆ, ಇನ್ನಿಲ್ಲದಂತೆ, ನಿನ್ನ ವರಪಟ್ಟಿಯನ್ನು ಮುಗಿಸಿದರೆ ನನಗೆ ವರಮುಕ್ತಿಯಾಗುವುದಯ್ಯ ಎಂದು ಹೇಳಿದುದಕ್ಕಾಗಿ ಮತ್ತೆ ಬ್ರಹ್ಮನ ಸರಣಿಯ ಕೊನೆಯ ಭಾಗವನ್ನು ನಿಮ್ಮ ಮುಂದಿಡುತ್ತಿದೇನೆ, ಓದಿಕೊಳ್ಳಿ...

’ನಾನು, ಬ್ರಹ್ಮ ಮತ್ತು ಮುಖ್ಯಮಂತ್ರಿ’ ಸರಣಿಯನ್ನು ನಾಲ್ಕು ಭಾಗಗಳಲ್ಲಿ ಕುಯ್ದಿದ್ದೆ ;-), ಮಾನವರ ನೆನಪಿನ, ಮೆದುಳಿನ ಕಾರ್ಯಕ್ಷಮತೆಯ ಅರಿವು ನನಗಿರುವುದರಿಂದ, ಒಮ್ಮೆ ಆ ನಾಲ್ಕು ಭಾಗಗಳ ಮೇಲೆ ಒಂದು ಸಿಂಹಾವಲೋಕನ ಮಾಡಿಬಿಡಿ...ಪ್ಲೀಸ್, ಇಲ್ಲವೆಂದರೆ ನಿಮ್ಮ ಲಹರಿಗೆ ತೊಡಕುಂಟಾಗುತ್ತದೆ, ಅದರ ಕೊಂಡಿಗಳು ಹೀಗಿವೆ, ಒಂದು ಧೀರ್ಘವಾದ ನಿಟ್ಟಿಸಿರು ಬಿಟ್ಟು ಓದಲನುವಾಗಿ, ನಿಮಗೆ ಶುಭವಾಗಲಿ.....
ಭಾಗ 1
ಭಾಗ 2
ಭಾಗ 3
ಭಾಗ 4
----------------



ಬ್ರಹ್ಮನ ಮುಂದೆ ನಾನು ಮುಖ್ಯಮಂತ್ರಿಯಾಗುವ ಹಾಗೂ ಆ ಸ್ಥಾನದ ಅಧಿಕಾರದ ವ್ಯಾಪ್ತಿ ವಿಸ್ತರಿಸುವ ಬಗ್ಗೆ ನನಗಿದ್ದ ಕನಸುಗಳನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೆ..

ಬ್ರಹ್ಮ ಬಂದ ಕೂಡಲೆ ಕೈಕುಲುಕಿ "ಎಲ್ಲಾ ಕ್ಷೇಮವೋ?"

"Everything is fine Mr.Brahma"..ಎಂದು ಹೇಳಿ ಮುಗಿಸಿ ಮತ್ತೆ..

"I missed you a lotttttttt..." ಎಂದು ಭಾವಭರಿತವಾಗಿ ಉದ್ಗರಿಸಿದೆ..

ಅದಕ್ಕೆ ಆತ "OK" ಎಂದು "ಮುಂದುವರೆಸು ಇನ್ನ ಪ್ರಣಾಳಿಕೆಯನ್ನು" ಎಂದುಬಿಟ್ಟ..

Hmmm.. "OK" ಪದಬಳಕೆ ತಟ್ಟಬೇಕಾದ ಸ್ಥಳಗಳನ್ನೆಲ್ಲ ತಟ್ಟಿದೆ ಎಂದು ನನ್ನ ಆಶಯಗಳನ್ನ ಮುಂದುವರೆಸಲು ಸನ್ನದ್ಧನಾದೆ..

ಬ್ರಹ್ಮ ನನ್ನ ರಾಜಕೀಯ ಆಶಯಗಳನ್ನೆಲ್ಲ ಅದಾಗಲೇ ನಿನ್ನ ಮುಂದಿಟ್ಟಿಯಾಗಿದೆ, ಮತ್ತೊಮ್ಮೆ clear picture ಬೇಕಾದರೆ ಮತ್ತೊಮ್ಮೆ ಓದಿಕೊಂಡು ಬಿಡು..


"ಹಾಗದರೆ ನಿನ್ನ ವರಪಟ್ಟಿ ಮುಗಿಯಿತೋ" ಎಂದು ಕೇಳಿದ.

"ಇಲ್ಲ ಬ್ರಹ್ಮ ಇನ್ನೂ ಮುಗಿದಿಲ್ಲ, ನಾನು ಬೆಂಗಳೂರಿಗ ನಾದುದರಿಂದ "ನಮ್ಮ ಬೆಂಗಳೂರು" ಬಗ್ಗೆ ಒಂದಷ್ಟು ಬೇಡಿಕೆಗಳು, ಸುಧಾರಣೆಯ ಹಾದಿಯಲ್ಲಿ...


"ಸರಿ..."



"ಬೆಂಗಳೂರು ಎಗ್ಗಿಲ್ಲದೆ ಬೆಳೆದಿದೆ, ಬೆಳೆಯುತ್ತಲಿದೆ, ಇದಕ್ಕೆ ಕಡಿವಾಣ ಅಗತ್ಯ, ದೇಶದ ಮೂಲೆ ಮೂಲೆಗಳಿಂದ ಜನರು ಈ ಊರಿಗೆ ಧಾವಿಸಿ ಬರುತ್ತಿದ್ದಾರೆ, ಇದಕ್ಕೆಲ್ಲ ಕಾರಣ ಇಲ್ಲಿರುವ ಮಾನವ ಸಂಪನ್ಮೂಲ, ಇಷ್ಟೊಂದು ಸಂಪನ್ಮೂಲ ಇರುವುದಕ್ಕೆ ಕಾರಣ ನಗರದಲ್ಲಿ ಹೆಚ್ಚಿದ ಇಂಜಿನಿಯರಿಂಗ್ ಕಾಲೇಜುಗಳು, ರಾಜಕಾರಣಿಗಳು ತಮ್ಮ ಕಪ್ಪು ಹಣ ಹುದುಗಿಸಿಡಲು ಇಂಜಿನಿಯರಿಂಗ್ ಕಾಲೇಜುಗಳನ್ನು ನಾಯಿಕೊಡೆಗಳಂತೆ ತೆರೆಯುತ್ತ ಹೋದರು, ಇಂದು ನಾವು ಏನೆಲ್ಲಾ traffic ಕಿರಿಕಿರಿ, ಹೆಚ್ಚಿದ ಜನಸಂದಣಿ , ಗಗನ ಮುಟ್ಟಿರುವ ಸೈಟುಗಳ ರೇಟು ಇವೆಲ್ಲದಕ್ಕೂ ಹೊರ ರಾಜ್ಯಗಳಿಂದ ವಲಸೆ ಬಂದಿರುವುದರಿಂದಲೇ ಉಂಟಾಗಿರುವುದು, ಬಂದವರು ಬಂದು ವಿದ್ಯೆ ಕಲಿತು ಹೋಗಿದ್ದರೆ ಚೆನ್ನಾಗಿತ್ತೇನೋ, ಇಲ್ಲೆ ತಳವೂರಿದರು, ಆಸ್ತಿ ಮನೆ ಮಠ ಮಾಡಿಕೊಂಡರು, ಇಷ್ಟೆಲ್ಲ ಸಾಲದೆಂಬಂತೆ ಇಲ್ಲಿನ ಭಾಷೆ, ಜನರನ್ನ ಜರಿದರು, ಜರಿಯುತ್ತಲೇ ಇದ್ದಾರೆ( ಹಾ! ಬಂದವರೆಲ್ಲರೂ ಹೀಗೆ ಅಲ್ಲ, ಆದರ ಬಹಳ ಮಂದಿ ಇದೇ ನಿಲುವನ್ನು ಹೊಂದಿರುವವರು..hmmm) ಇರಬರುವ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಿಂದ ವಿಧ್ಯಾರ್ಥಿಗಳನ್ನು ಕೋಳಿ ಎಗರಿಸಿಕೊಂಡು ಹೋಗುವಂತೆ ಎಗರಿಸಿಕೊಂಡು ಕೆಲಸ ಕೊಟ್ಟವರು IT ಕಂಪೆನಿಗಳು, ಇದರಿಂದ ಆರ್ಥಿಕವಾಗಿ ಬೆಂಗಳೂರು ಸುಧಾರಿಸಿರಬಹುದು, ಅದರಿಂದ ಲಾಭವೂ ಇದೆ, ಆದರೆ ಅದಕ್ಕೆ ತೆರುತ್ತಿರುವ ಕಂದಾಯ ಬಹಳವೇ ಆಗಿದೆ. ಎಲ್ಲಾ ಈಟ್ ಕಂಪೆನಿಗಳು ಬೆಂಗಳೂರಿನಲ್ಲಿ ಟಿಕಾಣಿ ಹೂಡಿ, ಎಲ್ಲರಿಗೂ ಇಲ್ಲೇ ಕೆಲಸ ಕೊಟ್ಟರೆ ಜನರು ಹೆಚ್ಚಗುವುದಿಲ್ಲವೇ ?, ಕೆಲಸದ ನೆಪದಲ್ಲಿ ದೂರ ದೂರ ಊರುಗಳಿಂದ ಜನರು ಬಂದರು, ಬೆಂಗಳೂರು ಬೆಳೆಯಿತು, ಜೊತೆ ಜೊತೆಗೆ ಸಮಸ್ಯೆಗಳು ಕೂಡ.. IT ಕಂಪೆನಿಗಳಿಂದ ಲಾಭವಾಗಿರಬಹುದು, ಅದರ ಬಗ್ಗೆ ನಾನು ಚರ್ಚಿಸುವುದಿಲ್ಲ, ಅದರ ಬಗ್ಗೆ ಪುಂಖಾನುಪುಂಖವಾದ ವ್ಯಾಖ್ಯಾನಗಳು, ಊಹಪೋಹಗಳು ಚಾಲ್ತಿಯಲ್ಲಿ ಇದ್ದೇ ಇರುತ್ತವೆ...ಇರಲಿ ಜನರು ಭ್ರಮೆಯಲ್ಲೇ ಇರಲಿ..."


ಬ್ರಹ್ಮ ಕಣ್ಣರಳಿಸಿಕೊಂಡು ನನ್ನನ್ನೇ ನೋಡುತ್ತಲಿದ್ದ....

ನಾನು ಇನ್ನೂ ಮುಂದುವರೆದು..."ಬ್ರಹ್ಮ ಇದಕ್ಕೆಲ್ಲ ನನಗೆ ತೋಚಿದ ಪರಿಹಾರ ನೀಡುತ್ತೇನೆ, ಇದಕ್ಕೆ ಕೂದ ಅಧಿಕಾರ ಬೇಕು, ನಿನ್ನ ಆಶೀರ್ವಾದವೂ ಕೂಡ..."

"ಅದು ಯಾವಗಲೂ ಇರುತ್ತದೆ ಮಗೂ... ಮುಂದುವರೆಸು.."

ನನ್ನ ಪಟ್ಟಿ ಹೀಗಿದೆ...
1) ನಗರದಲ್ಲಿ ಇರುವ 120+ ಕಾಲೇಜುಗಳಲ್ಲಿ ಒಂದಷ್ಟಕ್ಕೆ ಬಾಗಿಲು ಜಡಿಯಬೇಕು, 40 ಕಾಲೇಜುಗಳಿಗೆ ಮಾತ್ರ ಅವಕಾಶ ನೀಡುತ್ತೇನೆ.
2) ಮಿಕ್ಕ ಕಾಲೇಜುಗಳನ್ನು ರಾಜ್ಯಾದ್ಯಂತ ಸರಿಯಾಗಿ ವಿಂಗಡನೆಯಾಗುವಂತೆ ನಾನು ನೋಡಿಕೊಳ್ಳುತ್ತೇನೆ.
3) ಇಂಜಿನಿಯರಿಂಗ್ ಒಂದೇ ಅಲ್ಲದೇ ಇತರೆ ಎಲ್ಲಾ ವಿಭಾಗಗಳಿಗೂ ಸಮಾನ ಪ್ರಾಮುಖ್ಯತೆ ಸಿಗುವಂತೆ ಮಾಡುತ್ತೇನೆ, ಅದಕ್ಕೆ ರೂಪುರೇಶೆಯನ್ನು ಸಿದ್ದಪಡಿಸುವೆ.
4) ನಗರದ ಒಳಗೆ ಇರುವ ಹಲವಾರು IT ಕಂಪೆನಿಗಳನ್ನು ನಗರದ ಆಚೆಗೆ ಉಚ್ಚಾಟಿಸುತ್ತೇನೆ, ಊರ ಸುತ್ತಲೂ IT park ಗಳನ್ನು ನಿರ್ಮಿಸಲನುವಾಗುವಂತೆ ನೋಡಿಕೊಳ್ಳುತ್ತೇನೆ.. ಇದರಿಂದ ನಗರದ ಒಳಗೆ traffic ಒತ್ತಡ ಸ್ವಲ್ಪ ಮಟ್ಟಿಗಾದರೂ ಕಮ್ಮಿಯಾಗುತ್ತದೆ
5) ಹೊರ ರಾಜ್ಯ ವಿದ್ಯಾರ್ಥಿಗಳಿಗೆ ಇನ್ನು ನಮ್ಮ ರಾಜ್ಯದಲ್ಲಿ ಇಂಜಿನಿಯರಿಂಗ್ ಸೀಟುಗಳು ದೊರೆಯದಂತೆ ಮಾಡುತ್ತೇನೆ..!!
6) "ಕನ್ನಡ" ಭಾಷೆಯನ್ನು ಹೆಚ್ಚು ವ್ಯಾಪಕವಾಗಿ ಉಪಯೋಗಿಸುವಂತೆ ಆದೇಶ ಹೊರಡಿಸುತ್ತೇನೆ, ಉಲ್ಲಂಘಿಸಿದರು ದಂಡನೆಗೆ ಅರ್ಹರು...!!


ಹೀಗೆ ಪಟ್ಟಿ ಸಾಗುತ್ತಲೇ ಇರುತ್ತದೆ ಬ್ರಹ್ಮ, ನನ್ನ ಕಳಕಳಿ ನಿನಗೆ ಅರ್ಥವಾಯಿತಲ್ಲವೆ?, ನನಗೆ ಇದನ್ನೆಲ್ಲವ ಮಾಡುವ ಅಧಿಕಾರ ಬೇಕು, ಹಣ ಬೇಕು, ನಾನು ಇದನೆಲ್ಲವನ್ನು ಹಣ, ಅಧಿಕಾರ, ಒಂದಷ್ಟು ಸಮಚಿತ್ತರೊಡನೊಡಗೂಡಿ ಸಾಧಿಸುವೆ..ಏನೆನ್ನುವಿ ಬ್ರಹ್ಮ??

ಬ್ರಹ್ಮ ನನ್ನನ್ನೇ ದಿಟ್ಟಿಸುತ್ತಿದ್ದ, ನನಗೂ ಒಂದೇ ಸಮನೇ ಭಾಷಣ ಬಿಗಿದು ದಣಿವಾಗಿತ್ತು.

ಮೌನ ಮುರಿದು ಬ್ರಹ್ಮ.."ನಿನ್ನ ಜನಪರ ಕಾಳಜಿ ನನಗೆ ಹಿಡಿಸಿತು, ಆದರೆ ಇದೆಲ್ಲವನ್ನು ನಿನ್ನೊಬ್ಬನಿಂದಲೆ ಸಾಧಿಸಲು ಸಾಧ್ಯವೇ??"

"ನನ್ನಿಂದಲಾದರೂ ಶುರುವಾಗಲಿ ಬ್ರಹ್ಮ, ಒಳ್ಳೇ ಕೆಲಸ ಎಂದಿಗೂ ಮುಂದುವರೆಯುತ್ತದೆ..."

"ಹಿಂದೆ ಯಾರೂ ಸಹ ಈ ಪರಿಯ ವರವನ್ನು ಕೇಳಿರಲಿಲ್ಲ, ಮುಂದೆಯು ಕೇಳುವುದಿಲ್ಲವೆಂದೆನಿಸುತ್ತೆ, ನ ಭೂತೋ ನ ಭವಿಷ್ಯತಿ, ಇದೋ ನಿನಗೆ ವರವೀಯುತ್ತಿದ್ದೇನೆ, ನೀನೆಂದುಕೊಂಡಿರುವ ಈ ಏಲ್ಲಾ ಕನಸುಗಳು ಕೈಗೂಡಲಿ, ಅದಕ್ಕೆ ಬೇಕಾದ ಹಣ, ಅಧಿಕಾರವನ್ನು ನಾನು ನಿನಗೆ ನೀಡುತ್ತಿದ್ದೇನೆ, ಇಂದಿನಿಂದ ನೀನು ಈ ರಾಜ್ಯದ ಮುಖ್ಯಮಂತ್ರಿ....ಮುಖ್ಯಮಂತ್ರಿ..." ಎಂದು ನನ್ನ ತಲೆ ಮೇಲೆ ತನ್ನ ಹಸ್ತವನ್ನಿಟ್ಟು ಉದ್ಗರಿಸಿದ...

ಮೈರೋಮಗಳೆಲ್ಲ ಸೆಟೆದು ನಿಂತು, ನರನಾಡಿಗಳಲ್ಲಿ ಮಿಂಚಿನ ಸಂಚಾರವುಂಟಾಗಿತ್ತು, ಒಂದು ತೆರನಾದ ಭಾವ ನನ್ನಲ್ಲಿ ಉಂಟಾಗಿತ್ತು, ಶಬ್ಧಾತೀತ ಭಾವ!! ಮಾಡಿಕೊಂಡ ರೂಪುರೇಷೆಗಳೆಲ್ಲ ಸಾಧಿಸುವಷ್ಟು ಶಕ್ತಿ ನನ್ನಲ್ಲಿ ಉಂಟಾಗಿತ್ತು ಬ್ರಹ್ಮನ ಸ್ಪರ್ಶಮಾತ್ರದಿಂದ...ಅದೇ ಭಾವದಲ್ಲಿ ಒಂದತ್ತು ನಿಮಿಷಗಳು ಕಳೆದೆ ಎಂದೆನಿಸುತ್ತೆ...




ನನಗೆ ನಾನು ಅಂದುಕೊಳ್ಳುತ್ತಲ್ಲಿದ್ದೆ..."ನಾನೀಗ ಮುಖ್ಯಮಂತ್ರಿ..ರಾಜ್ಯವನ್ನಾಳುವ ಮುಖ್ಯಮಂತ್ರಿ..."

ತಲೆ ನೇವರಿಸುತ್ತ ಬ್ರಹ್ಮ ಕೇಳಿದ.."ಮಗೂ ಇದುವರೆಗೂ ನಿನಗೆ ಅಂತ ಏನು ಕೇಳಿಕೊಳ್ಳಲಿಲ್ಲವಲ್ಲ, ಏನಾದರೂ ಕೇಳು"

"ನನಗೆ ಕೇಳಬೇಕೆಂದೆನಿಸಲ್ಲಿಲ್ಲ ಬ್ರಹ್ಮ..." ಹಾಕಿರುವ ಯೋಜನಾಪಟ್ಟಿಗಳನ್ನು ಪೂರೈಸುವ ಶಕ್ತಿ ಕೊಡು ಸಾಕು ನನಗೆ".

"ಶಕ್ತಿಯೆಲ್ಲವನ್ನು ಕೊಟ್ಟಾಯಿತು, ವಯುಕ್ತಿಕವಾಗಿ ನೀನು ಏನೊಂದನ್ನೂ ಕೇಳಲಿಲ್ಲವಲ್ಲ, ಏನಾದರೂ ಇದ್ದರೆ ಕೇಳು, ಇದು ನನ್ನ ಆದೇಶ.." ಎಂದು ನನ್ನ ಮೇಲೆ ಹುಸಿಕೋಪವನ್ನು ಹೊರಸೂಸಿದ..

"ಸರಿ ಹಾಗಿದ್ದಲ್ಲಿ, ನನ್ನವರನ್ನೆಲ್ಲಾ ಚೆನ್ನಾಗಿಡು..." ಎಂದೆ..

"ಮುಂದೆ" ಎಂದ ಬ್ರಹ್ಮ..

ಮತ್ತೆ ಮತ್ತೆ ಯೋಚಿಸಿದೆ, ಮನದಾಳದಲ್ಲಿ ಒಂದು ಆಸೆ ಕೂತಿತ್ತು, ನನ್ನ ವಯುಕ್ತಿಕ ಕನಸಾಗಿತ್ತು ಅದು, ಅದಕ್ಕೆ ನೀರೆರೆದು ಪಾಲಿಸಿ ಪೋಷಿಸಿ ಜತನವಾಗಿ ಕಾಪಿಟ್ಟುಕೊಂಡು ಬಂದಿದ್ದೆ, ಈ ಗಡಿಬಿಡಿಯಲ್ಲಿ ಮರೆತಿದ್ದೆ, ಕೇಳೋಣವೆಂದೆನಿಸಿತು, ಒಂದು ರೀತಿಯ ಅಳುಕಿತ್ತು,ರಾಜನ ಮುಂದೆ ಬದನೆಕಾಯಿ ಕೇಳಿದ ಹಾಗಿರುತ್ತದೆ ಎಂದು.

ಗಂಟಲು ಸರಿ ಮಾಡಿಕೊಂಡು "ಬ್ರಹ್ಮಾ.................." ಎಂದೆ..

"ಏನು ಮಗೂ, ಏನದು ನಿಸ್ಸಂಕೋಚವಾಗಿ ಕೇಳುವವನಂತಾಗು...."

"ಅ...ಅದು...ನನಗೆ.." ಎಂದು ತಡವರಿಸುತ್ತಿದ್ದೆ...

ಅಷ್ಟರಲ್ಲಿ.....

ನನ್ನ ಮೊಬೈಲು ರಿಂಗುಣಿಸುತ್ತಿತ್ತು, ಮುಸುಕು ಹಾಕಿ ಮಲಗಿದ್ದ ನಾನು ಧಡಾರನೆ ಎದ್ದು ನೋಡಿದೆ, ಸಮಯ ಅದಾಗಲೇ ಬೆಳಿಗ್ಗೆ 5:45 ಆಗಿತ್ತು, ನನ್ನನ್ನು ಆಫೀಸಿಗೆ ಹೊತ್ತುಕೊಂಡು ಹೋಗಲು ಬಂದಿದ್ದ ನನಗಾಗಿ ಕಾದು ಕುಳಿತಿದ್ದ ಕ್ಯಾಬ್ ಡ್ರೈವರ್ ನ ಕರೆಯಾಗಿತ್ತು ಅದು...

ಎದ್ದೆನೋ ಬಿದ್ದೆನೋ ಎಂದು ಕೆಳಗೋಡಿದೆ, ಮಧ್ಯ ಮಧ್ಯ ಕಣ್ಣುಜ್ಜಿ ನೋಡಿಕೊಳ್ಳುತ್ತಿದ್ದೆ, ಬ್ರಹ್ಮ ನಿದ್ದಾನೋ ಇಲ್ಲವೋ ಎಂದು, ಬ್ರಹ್ಮನೂ ಇಲ್ಲ ಯಾವನೂ ಇಲ್ಲ..ಅದಾಗಲೆ 5 ಬಾರಿ missed calls ಕೊಟ್ಟಿದ ಡ್ರೈವರನಿಗೆ 10ನಿಮಿಷದಲ್ಲಿ ಬರುವುದಾಗಿ ತಿಳಿಸಿ ಸ್ನಾನಾದಿಕಾರ್ಯಗಳಿಗೋಸ್ಕರ ಕರ್ಮಭೂಮಿಯೆಡೆಗೆ ನುಗ್ಗಿದೆ....


-(ಮುಗಿಯಿತು)

ನಾನು ಕವಿಯಲ್ಲ...

Thursday, February 14, 2008

ಅದೇ ಲಹರಿಯಲ್ಲಿ ಬಂದ ಎರಡನೆಯ ಕವನ.. :-) :-)
ನಾನು ಕವಿಯಲ್ಲ...

ಮನದಾಳದ ಭಾವಗಳನು ಕವನಗಳಲಿ ಚಿತ್ರಿಸಲು ಬಾರದಲ್ಲ,
ಆದರೂ ನನ್ನೀ ಪ್ರಯತ್ನಕ್ಕೆ ನಿನ್ನ ಮೆಚ್ಚುಗೆ ಇರುತ್ತದಲ್ಲ?
ನಾನು ಕವಿಯಲ್ಲ...

ಇಂದ್ರ ಚಂದ್ರರ ಉಪಮೆಗಳನ್ನೊಡಗೂಡಿಸಿ ಬಣ್ಣಿಸಲೆನಗೆ ಬಾರದು,
ನಿನಗೆ ಜೋಗುಳ ಹಾಡಿ ಮಲಗಿಸದೆ ಎನಗೆ ನಿದಿರೆಯು ಸನಿಹ ಸುಳಿಯದು,
ನಾನು ಕವಿಯಲ್ಲ...

ಹಸುಗೂಸಿನ ನಗುವು, ಕಲ್ಮಷವನರಿಯದ ಕಂಗಳು,
ನಿನ್ನಿಂದಲೇ ನನ್ನೀ ಮನದ ಮುಗಿಲೆಲ್ಲಾ ತುಂಬಿದೆ ಬೆಳದಿಂಗಳು,
ನಾನು ಕವಿಯಲ್ಲ...

ನಂದಿ ಹೋಗಿದ್ದ ಒಲವಿಗೆ ಹಚ್ಚಿದೆ ನೀನು ಹಣತೆ,
ನೆಲೆಸಿಹುದಿಂದು ಹೃದಯಾಳದಲ್ಲಿ ನಿನ್ನಿಂದಲೇ ದಿವ್ಯತೆ,
ನಾನು ಕವಿಯಲ್ಲ...
-ಶ್ರೀಧರ

ಮೊದಲು ...

ನನ್ನವಳಿಗಾಗಿ ನನ್ನ ಮೊದಲ ಕವನ .. :-)


ನಾ ಬರೆಯ ಹೊರಟೆ ಒಲವಿನ ಓಲೆ ನನ್ನ ನಲ್ಲೆಗೆ,
ಇದು ನನ್ನ ಮೊದಲ ಕವನ ಅರ್ಪಿಸುವೆನೆಮ್ಮೆಯ ಪ್ರೀತಿಗೆ,

ಕವಿವರೇಣ್ಯರಂತೆ ನಿನ್ನ ತಿಂಗಳ ಬೆಳಕಿಗೆ, ಕಾಮನಬಿಲ್ಲಿಗೆ ಹೋಲಿಸುವುದಿಲ್ಲ,
ನೀ ನನ್ನ ಬಾಳಿಗಾಸರೆಯೆಂದು ಹೇಳುವುದಾ ನಾ ಮರೆಯುವುದಿಲ್ಲ,

ಗುರಿಯಿಲ್ಲದ ಹುಡುಕಾಟದಲ್ಲಿದ್ದೆ ನಾನು, ಆಕಸ್ಮಿಕವಾಗಿ ಬಂದೆ ನೀನು,
ಎಣೆಯಿಲ್ಲದಾ ಕನಸುಗಳಿಗೆ ಸ್ಪೂರ್ತಿಯಾಗಿರುವೆಯಿಂದು ನೀನು,

ನಿನ್ನ ಬಿಗಿದಪ್ಪಿ ಮುದ್ದಾಡುವ ಕಾತುರ,
ಇದ ತಿಳಿದೂ ತಿಳಿದೂ ನೀನಿರುವಿಯೇಕೆ ಅಷ್ಟು ದೂರ?

ನಮ್ಮೀ ಪ್ರೀತಿ ಎಂದೆಂದಿಗೂ ಅಜರಾಮರ...ಅಜರಾಮರ ........
-ಶ್ರೀಧರ

ಚಿತ್ರಚಾಪ - ನನಗನ್ನಿಸಿದ್ದು....

Tuesday, February 12, 2008


’ಚಿತ್ರಚಾಪ’ದ ಬಿಡುಗಡೆ ಸಮಾರಂಭಕ್ಕೆ ನೀವೆಲ್ಲರೂ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿದುದಕ್ಕೆ ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕವಾದ ನಮನಗಳು. ನಾನು ತೆಗೆದಿರಿಸಿದ ಪ್ರತಿಯನ್ನು ಮನೆಗೆ ಕೊಂಡು ಹೋಗಿ ಇದಾಗಲೇ ಓದಲು ಶುರುವಿಕ್ಕಿರುತ್ತೀರಿ ಎಂಬುದು ಸಹ ತಿಳಿದ ವಿಷಯವೇ.


Proffessor ಜಿ.ವೆಂಕಟಸುಬ್ಬಯ್ಯನವರು ’ನಾನು ಕಳೆದ 20ವರ್ಷಗಳಲ್ಲಿ ಈ ರೀತಿಯ ಸಮಾರಂಭವನ್ನು ನೋಡಿರಲಿಲ್ಲ’ ಎಂದಾಗ ಪುಸ್ತಕದ ಬಗ್ಗೆ ಅಪಾರ ಮೆಚ್ಚುಗೆಯನ್ನು ಸಭಿಕರ ಮುಂದೆ ವ್ಯಕ್ತಪಡಿಸಿದಾಗ ಉಂಟಾದ ಕರಾಡತನದ ಶಬ್ಧ ಇನ್ನೂ ಕಿವಿಯಲ್ಲಿ ಗುಯ್ ಗುಡುತ್ತಿರುವಾಗಲೇ ಪುಸ್ತಕವನ್ನು ಓದಿ ಮುಗಿಸಿದೆ.

ಪುಸ್ತಕ ಬಿಡುಗಡೆಯ ಹಿಂದಿನ ದಿವಸ ರಾತ್ರಿ 1ಗಂಟೆಯಲ್ಲಿ ಅರುಣ ಕೇಳಿದ ’ಮುನ್ನುಡಿ’ ಓದುವೆಯಾ ಎಂದು, ಅದು ಪುಸ್ತಕದ ಮೊದಲ ಪ್ರತಿ. ಇಲ್ಲ ನಾಳೆ ಬಿಡುಗಡೆಯಾದಮೇಲೆ ಕೊಂಡೇ ಓದುವೆ ಎಂದು ಸುಮ್ಮನಾದೆ.

’ಚಿತ್ರಚಾಪ’ದ ಉದ್ದಿಶ್ಯ ಒಂದೇ ವಾಕ್ಯದಲ್ಲಿ ಸವಿಸ್ತಾರವಾಗಿ ವರ್ಣಿಸಿದ್ದಾರೆ.."ಮೊದಲ ಪ್ರಯತ್ನವಿದು ಚಿತ್ರಚಾಪ. ಪ್ರಕೃತಿಗಾಗಿ, ಕನ್ನಡಕ್ಕಾಗಿ, ನಮಗಾಗಿ, ನಿಮಗಾಗಿ, ಎಲ್ಲರಿಗಾಗಿ". ವಸುಧೇಂದ್ರರ ಮುನ್ನುಡಿಯು ಪುಸ್ತಕಕ್ಕೆ ಕಳಶವಿಟ್ಟಂತಿದೆ.

ಒಟ್ಟಾರೆಯಾಗಿ ಪುಸ್ತಕದಲ್ಲಿ 3 ಕವನಗಳು 5 ಪ್ರಭಂದಗಳು ಇವೆ, ಯಾವುದೇ ಕವನಗಳು ನನಗೆ ಏಕೆ ಅರ್ಥವಾಗುವುದಿಲ್ಲ ಎಂದು ನನಗೇ ಅರ್ಥವಾಗಿಲ್ಲ!!, ಅದರ ಬಗ್ಗೆ No Comments!!!

ಶ್ರೀನಿಧಿಯವರ ಪರಿಸರದ ನಾಲ್ಕು ಚಿತ್ರಗಳಾದ ಕೆರೆ,ಕೃಷಿ,ನೆಲೆ, ಅಲೆ ಇವುಗಳ ಬಗ್ಗೆ ಸವಿಸ್ತಾರವಾಗಿಯೇ ಬರೆದಿದ್ದಾರೆ. ಇವುಗಳ ಮೇಲೆ ಮಾನವರ ಅವಲಂಬಿತನದ ಚಿತ್ರಣ ಸಿಗುತ್ತದೆ, ಇದರಲ್ಲಿ ಯಾವುದಕ್ಕೊ ಅಂತ್ಯವಿಲ್ಲ, ಓದುಗರನ್ನು ಅದರ ಬಗ್ಗೆ ಚಿಂತಿಸುವಂತೆಯೇ ಮಾಡಿ ಅದರ ಬಗ್ಗೆ ಯೋಚಿಸುತ್ತಿರುವಾಗಲೇ ಮುಂದಿನ ಚಿತ್ರದ ಬಗ್ಗೆ ಚಿತ್ರಣ ಶುರುವಾಗಿರುತ್ತದೆ. ಅರೆರೆ ಮುಗಿದೇ ಹೋಯಿತೇ ಎಂದೆನಿಸುತ್ತದೆ ಮತ್ತೊಮ್ಮೆ ಮಗದೊಮ್ಮೆ ಓದುವಂತೆ ಪ್ರೇಪಿಸುತ್ತದೆ. ಪಾತ್ರಗಳ ಕಟ್ಟುವಿಕೆ ಅದ್ಭುತವಾಗಿದೆ, ಅರ್ಥವಾದರೂ ಅರ್ಥವಾಗದ ಒಂದು ಗುಂಗಿನಲ್ಲಿ ಇದ್ದೇ ’ಪರಿಸರದ ನಾಲ್ಕು ಚಿತ್ರಗಳು’ ಓದಿದ ಮೇಲೆ, ಮತ್ತೊಮ್ಮೆ ಓದುತ್ತೇನೆ...ರಾಹೆಯವರ ರೇಖಾಚಿತ್ರಗಳು ಇಲ್ಲದಿದ್ದರೆ ಮತ್ತಷ್ಟು ತಿಣುಕಾಡುತ್ತಿದ್ದನೇನೋ...

ಶ್ರೀನಿವಾಸನ ’ಇದು ಎಂಥಾ ಲೋಕವಯ್ಯ!’ ಆತ ಮಾಡಿದ ಬೆಳಗಾವಿಯ ಪ್ರವಾಸಕಥನ. ಸಂಪೂರ್ಣ ಪ್ರವಾಸ ಕಥನ ಕಣ್ಣಿಗೆ ಕಟ್ಟಿದಂತಿದೆ, ಅಲ್ಲಲ್ಲಿ ಕಂಡು ಬರುವ ಉಪಮೆಗಳು, ಕಂಡ ದೃಶ್ಯಗಳನ್ನು ವರ್ಣಿಸುವ ರೀತಿ, ಪದಬಳಕೆ ನಿರ್ಜೀವ ವಸ್ತುಗಳಲ್ಲಿ ಜೀವಂತಿಕೆ ತುಂಬಿ ಓದುಗರ ಮುಂದೆ ಸಾದ್ಯಂತ ಪಡಿಸುವ ರೀತಿ ಬಹಳ ಸೊಗಸಾಗಿದೆ.


ಸುಶ್ರುತರ ’ಹಳ್ಳಿ ಪರಿಸರದಲ್ಲೊಂದು ಸುತ್ತು’ ತೇಜಸ್ವಿಯವರ 'ಪರಿಸರದ ಕತೆ' ನೆನಪಿಸಿತು ನನಗೆ, ಹಳ್ಳಿ ವಾತವರಣದಲ್ಲಿ ನಡೆಯುವ ಘಟನಾವಳಿಗಳು, ಅಲ್ಲಿನ ಜನಜೀವನವನ್ನ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ’ಅಡಿಕೆ’ ಬೆಳೆಯ ಸಂಪೂರ್ಣ ಮಾಹಿತಿ ದೊರೆಯುತ್ತದೆ, ಆರಂಭದಿಂದ ಹಿಡಿದು ಕೊನೆಯವರೆಗೆ ನಾವೇ ಆ ಸಕಲ ಕಾರ್ಯಗಳು ನಮ್ಮ ಕಣ್ಣ ಮುಂದೇನೇ ನಡೆಯುತ್ತಿದ್ದೇನೋ ಎಂಬಂತೆ ಭಾಸವಾಗುತ್ತಿತ್ತು.

ಅರುಣನ ’ಅರಿವೆಷ್ಟಿದೆ ನಮಗೆ’ ಲೇಖನವನ್ನು ಒಂದು ಪಠ್ಯಪುಸ್ತಕದ ಪಾಠವನ್ನಗಿಸುವ ಸಕಲ ಲಕ್ಷಣಗಳೂ ಇವೆ. Trekking ಏಕೆ ಮಾಡುತ್ತೇವೆ? ಪರಿಸರದ ಸಂರಕ್ಷಣೆಯಲ್ಲಿ ನಮ್ಮ ಪಾತ್ರವೆಷ್ಟು, ಪ್ರಾಣಿ ಪಕ್ಷಿ ಸಂಕುಲಗಳ ಜಾಗವನ್ನು ನಾವೆಷ್ಟು ಆಕ್ರಮಿಸಿದ್ದೇವೆ, ಎಷ್ಟೋ ಮಂದಿಗೆ ಇದಾವುದರ ಅರಿವಿಲ್ಲದೆಯೇ ಪರಿಸರವನ್ನು ಹಾಳುಗೆಡವುತ್ತಿರುತ್ತಾರೆ ತಿಳಿದೆಯೋ ತಿಳಿಯದೆಯೋ... ವಯೋಮಾನದ ಮಿತಿಯಿಲ್ಲದೆ ಎಲ್ಲರೂ ಓದಲೇಬೇಕಾದ ಲೇಖನ ’ಅರಿವೆಷ್ಟಿದೆ ನಮಗೆ’? ಓದಿದ ಮೇಲೆ ಪರಿಸರದ ಬಗ್ಗೆ ನಿಮ್ಮ ದೃಷ್ಟಿಕೋನ ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತದೆ ಎಂಬುದರ ಅರಿವು ನನಗಿದೆ..!!

ಕೊನೆಯದಾಗಿ ಅನ್ನಪೂರ್ಣರ ’ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೊದ್ರೊಳಗೆ ಒಮ್ಮೆ ನೋಡು ಕೆಮ್ಮಣ್ ಗುಂಡಿ ’ ಓದಿದ ಮೇಲೆ ಕೆಮ್ಮಣ್ಣುಗುಂಡಿಗೇ ಹೋಗಿ ಬಂದಂತಾಯಿತು. ನಾನೂ ಒಮ್ಮೆ ಇವರೊಡನೆ ಹೋಗಬೇಕು. ’ರಾಣಿ’ ಮತ್ತೆ ’ವಾಣಿ’ ಯನ್ನು ನೋಡಬೇಕು. !!

ಪುಸ್ತಕ ರೂಪದ ಮೊದಲ ಪ್ರಯತ್ನದಲ್ಲೇ ಎಲ್ಲರಿಗೂ full ಮಾರ್ಕ್ಸ್ ಬಂದಿದೆ, ಸಂಪೂರ್ಣ ಪುಸ್ತಕ ಓದಿದ ಮೇಲೆ ಪುಸ್ತಕ ಮುಗಿದೇ ಹೋಯಿತೇ ಎಂಬ ಭಾವ ನಿಮ್ಮನ್ನು ಕಾಡೇ ಕಾಡುತ್ತದೆ. ಹೀಗೆ ಮುಂಬರುವ ಎಲ್ಲಾ ಪ್ರಯತ್ನಗಳಿಗೂ ನಿಮಗೆ ಯಶ ಸಿಗಲಿ. ’ಪ್ರಣತಿ’ ಸಂಸ್ಥೆಯಿಂದ ಸಾಕಷ್ಟು ಪುಸ್ತಕಗಳು ಹೊರಬರಲಿ...

ಪುಟ್ಟ - ಪುಟ್ಟಿ ....

Saturday, February 9, 2008

ನನ್ನನ್ನು ಯಾರಾದರೂ ತಡೆದು ಜಗತ್ತಿನ ಅತ್ಯಂತ ಶ್ರೇಷ್ಠ ಸಂಭಂದ ಯಾವುದೆಂದು ಕೇಳಿದರೆ ಪಟ್ ಎಂದು ಹೇಳುತ್ತೇನೆ...ಅದು ನನ್ನವರಾದ ಪುಟ್ಟ - ಪುಟ್ಟಿ ಸಂಭಂದ ಎಂದು.

ಬಾಹ್ಯ ಪ್ರಪಂಚಕ್ಕೆ ಅಕ್ಕ-ತಮ್ಮ ಇವರು. ಪುಟ್ಟ ಎಲ್ಲೆಲ್ಲಿಯೂ ಪುಟ್ಟಿಯನ್ನು ಕಾಣುತ್ತಾನೆ, ಪುಟ್ಟಿ ಮಗುವಿನಂತೆ ಎತ್ತಿ ಮುದ್ದಾಡಿಸುತ್ತಾಳೆ, ಉಹೂ ನನಗೆ ಈ ಸಂಭಂದವನ್ನು ವಿವರಿಸಲು ಬಣ್ಣಿಸಲು ಪದಗಳಿಗೆ ತಡಕಾಡುತ್ತಿದ್ದೇನೆ, ಪದಗಳಿಗೆ ನಿಲುಕದ ಭಾವವಿದು. ಸಂಭಂದದಲ್ಲಿ ನಿಷ್ಠೆ ಎಂದರೆ ಹೇಗಿರಬೇಕು ಎಂಬುದನ್ನು ಇವರುಗಳನ್ನು ನೋಡಿ ಕಲಿಯಬೇಕು, ಆ ನಿಷ್ಠೆಯನ್ನು ಪ್ರಯತ್ನಪೂರ್ವಕವಾಗಿ ಹೇರಿಕೊಂಡಿದುದಲ್ಲ, ಹೃದಯಾಂತರಾಳದ ಭಾವ.

ಎಂತೆಂತಹ ಕ್ಷುಲ್ಲಕ ವಿಷಯಗಳಿಗೆ ಸಂಭಂದಗಳನ್ನು ಕಳೆದುಕೊಳ್ಳುವ ಮಂದಿಯನ್ನು ನೋಡಿದ್ದೇನೆ, ಯಾರೋ ಒಬ್ಬರು ಮೋಸ ಮಾಡಿದರು ಎಂದು ಇಡೀ ಸಂಕುಲವನ್ನು ಜೀವನ ಪರ್ಯಂತ ಶಪಿಸುವರನ್ನು ನೋಡಿದ್ದೇನೆ, ಸಂಭಂದಗಳಲ್ಲಿನ ಅವಕಾಶವಾದವನ್ನು ನೋಡಿದ್ದೇನೆ. ಅಂತಹವರಿಗೆ ಇವರೀರ್ವರನ್ನು ತೋರಿಸಬೇಕು, ಅವರು ಜೀವನವನ್ನು ನೋಡುವ ದೃಷ್ಟಿಕೋನ ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತದೆ.
"ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ..." ಎಂದು ಹೇಳಿದ್ದಾರಲ್ಲವೆ?

ಬಿಟ್ಟಾಕಿ, ಜೋಗವನ್ನು ನೋಡದಿದ್ದರೂ ಪರವಾಯಿಲ್ಲ, ಇರೋದ್ರೊಳಗೆ ಇವರಿಬ್ಬರನ್ನು ನೋಡಿ.
ಅಂತಹ ಜೋಗದಲ್ಲೇ ನೀರು ಕಮ್ಮಿ ಆಗುತ್ತದಂತೆ, ಆದರೆ ಇಲ್ಲಿ...............................

ಅತಿ ಶೀಘ್ರದಲ್ಲಿ ನಿಮಗೆ ಪರಿಚಯಿಸುತ್ತೇನೆ.................

ಚಿತ್ರಚಾಪ....

Thursday, February 7, 2008


ಈ ಭಾನುವಾರ ಅಂದರೆ Feb 10ರಂದು ಸರಿಯಾಗಿ ಬೆಳಿಗ್ಗೆ ಹತ್ತೂವರೆಗೆ Indian Institute of World Culture ನ ಅಂಗಳದಲ್ಲಿ ನಿಮ್ಮನ್ನು ಎದುರುಗೊಳ್ಳುವ ಅಭಿಲಾಷೆ ನನ್ನದು.. ಏನು ವಿಶೇಷ ಎಂದು ಕೇಳಿದಿರಾ??

ನಮ್ಮ ಉತ್ಸಾಹಿ ಯುವಕರ ತಂಡ "ಚಿತ್ರಚಾಪ" ಎಂದು ಶೀರ್ಷಿಕೆಯನ್ನೊತ್ತ ಪುಸ್ತಕದ ಅನಾವರಣದ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ. ಇದರ ಕರ್ತೃಗಳು ನಮ್ಮವರೇ ಆದ ಅರುಣ್, ಶ್ರೀನಿವಾಸ, ಸುಶೃತ, ಶ್ರೀನಿಧಿ ಮತ್ತು ಅನ್ನಪೂರ್ಣ . ಅತಿಥಿಗಳಾಗಿ Professor ಜಿ.ವೆಂಕಟಸುಬ್ಬಯ್ಯ ಹಾಗು ಶ್ರೀ ಹೆಚ್ ಕೆ ಶ್ರೀನಿವಾಸ ಮೂರ್ತಿಗಳು ಆಗಮಿಸಲಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ಪಾದರ್ಪಣೆ ಮಾಡುತ್ತಿರುವ ಹೊಸ ಪ್ರತಿಭೆಗಳ ಹೊಸ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಓದುಗರಾದ ನಮ್ಮೆಲ್ಲರದು. ಬರುವಿರಿ ತಾನೆ? ನಿಮಗಾಗಿ ಒಂದು ಪ್ರತಿಯನ್ನು ತೆಗೆದಿರಿಸಿರುತ್ತೇನೆ.. Feb 10 ರಂದು ಸಿಗುವ..

ಅಭಿಮಾನಿ...

Tuesday, January 29, 2008



ನಾನು ಭೈರಪ್ಪನವರ ಎರಡು ಕಾದಂಬರಿಗಳನ್ನು ಮಾತ್ರ ಓದಿದ್ದೇನೆ...’ಆವರಣ’ ಮತ್ತು ’ಸಾಕ್ಷಿ’, ಎರಡೂ ಸಹ ಅನನ್ಯ ಕೃತಿಗಳು. ಅವರು ಇದುವರೆಗೂ ಬರೆದ ಅಷ್ಟೂ ಕಾದಂಬರಿಗಳನ್ನು ಕೊಂಡು ಯಾವುದಾದರೂ ಬೆಟ್ಟದ(ಕೊಡಚಾದ್ರಿ) ತುದಿಯಲ್ಲಿ ಒಂದು ಸಣ್ಣ ಗೂಡು ಮಾಡಿಕೊಂಡು ಓದಬೇಕೆಂದೆನಿಸುತ್ತಿದೆ, ಒಬ್ಬನೇ.

ಅವರ ಕಾದಂಬರಿಗಳ ವಿಮರ್ಶೆಮಾಡಲು ನಾನು ಯೋಗ್ಯನಲ್ಲ, ಅದರ ಯೋಚನೆ ಸಹ ಮಾಡುವುದಿಲ್ಲ(ಶಾಂತಂ ಪಾಪಂ), ಅವರೇ ಹೇಳುವಂತೆ ಅವರ ಪ್ರತಿ ಕಾದಂಬರಿಯಲ್ಲೂ ಯಾವುದಾದರೊಂದರ(ಸತ್ಯದ!!)(ಸತ್ಯದ ವಿವಿಧ ಮಜಲುಗಳು) ಅನ್ವೇಷಣೆ ಇದ್ದೇ ಇದೆ. ಅವರಂತೆಯೇ ನಾನು ಆಗಬೇಕು(ದಯಮಾಡಿ ನಗಬೇಡಿ...please... ನಂಗೊತ್ತು ನೀವು ನಗ್ತಾಇದ್ದೀರ ಅಂತ..hmmmm) ಅನ್ವೇಷಣೆ ನಡೆಸಬೇಕು, ಆ ಅನ್ವೇಷಣೆಯಲ್ಲಿ ಹಲವಾರು ವರ್ಷಗಳನ್ನು ಕಳೆದು, ನಿಂತಲ್ಲಿ ಕುಂತಲ್ಲಿ ಚಿಂತನ ಮಂಥನ ನಡೆಸಿ ಕೂತು ಬರೆಯಬೇಕು, ನಿಂತು ಬರೆಯಬೇಕು. ನನೂ ಸಹ ಸತ್ಯವನ್ನು ತಿಳಿಯಬೇಕು, ಅರಿಯಬೇಕು. ಭೈರಪ್ಪನವರ ಕಾದಂಬರಿಗಳನ್ನು ಅಭ್ಯಸಿಸಬೇಕು. ಅವರನ್ನೊಮ್ಮೆ ನೇರವಾಗಿ ಕಾಣಬೇಕು. ಏನೇನೋ ಆಸೆಗಳು. hmmm
ಅವರ ಅಷ್ಟೂ ಕಾದಂಬರಿಗಳನ್ನು ಕೊಳ್ಳುತ್ತೇನೆ, ಆದಷ್ಟು ಬೇಗ. ಆದರೆ ಬೆಟ್ಟದ ತುದಿಯಲ್ಲಿ ಕುಳಿತು ಅವರ ಕಾದಂಬರಿಗಳನ್ನು ಅಭ್ಯಸಿಸುವ ಪುಣ್ಯ ನನ್ನದಾಗುತ್ತದೋ ಇಲ್ಲವೊ ತಿಳಿದಿಲ್ಲ, ನನ್ನೀ ಆಸೆಗೆ(ಹುಚ್ಚಿಗೆ!!) ನಿಮ್ಮ ಹಾರೈಕೆಯಿರಲಿ.




@ಭೈರಪ್ಪ : ಭೈರಪ್ಪನವರೇ ನಿಮಗೆ ನೀವೇ ಸಾಟಿ, ನಿಮ್ಮ ಸಾಹಿತ್ಯ ಕೃಷಿ ಹೀಗೆ ಸಾಗುತ್ತಿರಲಿ, ನಿರಂತರವಾಗಿ....... ಎಂದೆಂದಿಗೂ ನಂದದ ದೀಪವಾಗಿರಲಿ. ನಿಮಗೆ ನನ್ನ ಭಾವಪೂರ್ಣವಾದ ನಮಸ್ಕಾರ.

ನಿನದೇ ನೆನಪು...

Wednesday, January 2, 2008

ಕವಿರಾಜ್ ರ ಒಳ್ಳೆ ಸಾಹಿತ್ಯ..ಇಷ್ಟ ವಾಯಿತು..ಇದು ನನ್ನವಳಿಗೆ ;-) ಅರ್ಪಿತ....

ಹೀಗೀಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲೂ ನಂಗೆ ನೀ ಕಾಣುವೆ...
ಸುಡುಸುಡುತಿದೆ ಎದೆಯೊಳಗೆ ನಿನದೇ ನೆನಪು
ಕಾಡಿಸುತಿದೆ ಪ್ರತಿಘಳಿಗೆ ನಿನದೇ ನೆನಪು ನನ್ನಾಣೆ..


ಅರೆಘಳಿಗೆಯು ಮರೆತಿರಲು ನಾನೂ ನಿನ್ನಾ
ಮರುಘಳಿಗೆಯೇ ಮರಣ ಕಣೇ ನಂಗೆ ಚಿನ್ನಾ
ಇನ್ನು ದೂರಾಗದೆ ಎಂದು ಕೈಜಾರದೆ ನನ್ನ ಸಂಗಾತಿ ನೀನಾಗು ಬಾ...

ನೀನಿಲ್ಲದ ಕನಸುಗಳೂ ನನಗೆ ಬೇಡ
ನಿನ್ನ ಕಾಣದೆ ನರಳುವುದು ನೆರಳೂ ಕೂಡ
ಮರೆತೂ ನಿನ್ನನೂ ಮರೆತೂ ಹೋಗೆನು, ಇನ್ನು ಎಂದೆಂದು ನಿನ್ನೋನು ನಾ...

ಹೀಗೀಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲೂ ನಂಗೆ ನೀ ಕಾಣುವೆ...
ಸುಡುಸುಡುತಿದೆ ಎದೆಯೊಳಗೆ ನಿನದೇ ನೆನಪು
ಕಾಡಿಸುತಿದೆ ಪ್ರತಿಘಳಿಗೆ ನಿನದೇ ನೆನಪು ನನ್ನಾಣೆ..

Weekend Culture....

ಈ ಲೇಖನವನ್ನು ಎಂದೊ ಬರೆಯಬೇಕಿತ್ತು ಆಗಿರಲಿಲ್ಲ..ಇಂದು ಬರೆದೆ...ಸಮಾಧಾನವಾಯಿತು..
"ಏನ್ ಮಗಾ ಏನ್ ಪ್ರೋಗ್ರಾಮ್ ಈ ವೀಕೆಂಡ್ ಗೆ?"..

"Hey how was your weekend man ?"...

ಈ ರೀತಿಯ ತರೇವಾರಿ ಪ್ರಶ್ನೆಗಳು ಬೆಂಗಳೂರಿಗರ ನಾಲಿಗೆಯಲಿ ಹರಿದಾಡುತ್ತಲೇ ಇರುತ್ತದೆ..ಪ್ರತಿ ವೀಕೆಂಡ್ ಬಂದರೆ.. IT ಯ ಕೊಡುಗೆಯಲ್ಲಿ(!!) ವೀಕೆಂಡ್ ಕಲ್ಚರ್ ಕೂಡ ಒಂದು..

ಐದಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ವೀಕೆಂಡ್ ಗಳು ಬಂದು ಹೋಗುತ್ತಿದ್ದು ದಿಟವಾದರೂ ಅದರ ಅರಿವು(!!) ನಮಗೆ ಅಷ್ಟಾಗಿ ಇರಲಿಲ್ಲ..ಭಾನುವಾರ ಬಂತೆಂದರೆ ಖುಶಿ ಪಡುತ್ತಿದ್ದೆವು...ಬೆಳಿಗ್ಗೆ 10ರ ವರೆಗೂ ಮಲಗಿ, ಎಣ್ಣೆ ಸ್ನಾನ ಮಾಡಿ, ಚೆನ್ನಾಗಿ ಉಂಡು ಮತ್ತೆ ನಿದ್ರಿಸಿ ಟೀವಿಯಲ್ಲಿ ಬರುವ ಯಾವುದಾದರೂ ಪಿಚ್ಚರ್ ನೋಡಿ ಮಲಗುತ್ತಿದ್ದೆವು... ಈಗ ಪರಿಸ್ಥಿತಿ ಬದಲಾಗಿದೆ...IT ವರ್ಗದವರಿಗೆಲ್ಲ 5 ದಿನ ಸಜೆಯ ನಂತರ ಬರುವ ಎರಡು ದಿನದ ರಜಕ್ಕಾಗಿ ಕಾಯುತ್ತಿರುತ್ತಾರೆ...ಬಹಳ ಮಂದಿ ಶುಕ್ರವಾರ ಸಂಜೆಯಿಂದಲೆ ಪ್ರೋಗ್ರಾಮ್ fix ಮಾಡಿಕೊಂಡಿರುತ್ತಾರೆ... IT ಮಂದಿಗೆ ಹಣದ ಕೊರತೆಯು ಅಷ್ಟಾಗಿ ಇರುವುದಿಲ್ಲ... ಪ್ರತಿ ಶುಕ್ರವಾರವೂ ಯಾವುದಾದರೊಂದು ಚಲನ ಚಿತ್ರವು ಬಿಡುಗಡೆಯಾಗುವುದರಿಂದ ಅದಕ್ಕೆ ಪ್ಲಾನ್ ಮಾಡಿರುತ್ತಾರೆ..Internet ನಲ್ಲಿ ticket ಬುಕ್ ಮಾಡಿಸಿಯೂ ಇರುತ್ತಾರೆ ಕೂಡ.. ಬಹಳ ಮಂದಿಗೆ ಗೆಳೆಯರನ್ನು ಪ್ರತಿ ವಾರವೂ ಭೇಟಿಯಾಗುವ ಹಂಬಲದಿಂದ ಈ ರೀತಿಯ ನೆಪ ಮಾಡಿಕೊಂಡಿರುತ್ತಾರೆ...

ಗೆಳೆಯರ ಬಳಗವೂ ದೊಡ್ಡದಿರುತ್ತದೆ...ಆಫೀಸಿನ ಸಹೋದ್ಯೋಗಿಗಳ ಜೊತೆ, ಶಾಲಾ-ಕಾಲೇಜು ಗೆಳೆಯರ ಜೊತೆ, girl friend, boy friend ಗಳಿದ್ದರೆ ಮುಗಿದೇ ಹೋಯಿತು..ವೀಕೆಂಡ್ ಕ್ಷಣದಂತೆ ಉರುಳಿರುತ್ತದೆ....

PVR/Inox ನಲ್ಲಿ ಚಿತ್ರ ವೀಕ್ಷಿಸಿ , McDonalds ಅಥವ KFC ನಲ್ಲಿ ಬರ್ಗರ್ ಮೆಲ್ಲಿ, ಹಾಗೆ ಕಾಫಿ ಡೆ ನಲ್ಲೆ ಚಿತ್ರ ವಿಚಿತ್ರ ಕಾಫಿ ಕುಡಿದು ವೀಕೆಂಡ್ ಮುಗಿಸುವ ದೊಡ್ಡ ದಂಡೇ ಇದೆ..ಎಲ್ಲ ಮುಗಿದ ಮೇಲೆ Credit cardಗಳನ್ನು ಉಜ್ಜಿ ಹಣ ಪಾವತಿಸಿ ಮುನ್ನಡೆಯುತ್ತಾರೆ....ಇದಾವುದೂ ತಪ್ಪಲ್ಲ...ನಾವು ಬೆಳೆದಂತೆ ಬೆಂಗಳೂರು ಬೆಳೆದಂತೆ ನಾವು ನಮ್ಮವರನ್ನು ಭೇಟಿಮಾಡುವ ಕಾಲವನ್ನು ಕಳೆಯುವ ರೀತಿ-ರಿವಾಜುಗಳು ಹೇಗೆ ಬದಲಾಗುತ್ತಿವೆ ಎಂದು ಕೂತು ವೀಕ್ಷಿಸುತ್ತಿದ್ದೇನೆ...ಈ ಚಿತ್ರಣ ನಮಗೆ ಸಿಗುವುದು ಬೆಂಗಳೂರಿನಲ್ಲಿ ಮಾತ್ರ..ಕಾರಣ ದೇಶದ ಮೂಲೆ ಮೂಲೆಯಿಂದ ವಲಸೆ ಬಂದ ಜನರಿಗೆ ಅವರ ಅಭಿರುಚಿಗೆ ತಕ್ಕಂತೆ, ಅವರ ಕಾಸಿಗೆ ತಕ್ಕಂತೆ ಅವರನ್ನು ಸಂತಸ ಪಡಿಸುವ ವ್ಯವಸ್ಥೆ ಬೆಂಗಳೂರಿನಲ್ಲಿ ಚೆನ್ನಾಗೇ ಇದೆ.. ಪಕ್ಕದ ಮೈಸೂರಿನಲ್ಲಿ, ಮಂಗಳೂರಿನಲ್ಲಿ ಈ ಚಿತ್ರಣ ನಿಮಗೆ ಕಾಣ ಸಿಗುವುದಿಲ್ಲ... "ಜಾಗತೀಕರಣ" ದ special effect ಗಳಲ್ಲಿ ಇದೂ ಒಂದು ಎಂದು ನನ್ನ ಅಭಿಪ್ರಾಯ...ಬೆಂಗಳೂರು hmmm....

ಇನ್ನೊಂದು ಬಳಗ ಇದೆ..."Cool Dudes", ಪಡ್ಡೆ ಹುಡುಗರು ಇತ್ಯಾದಿ ಉಪಮೆಗಳಿಂದ ಕರೆಯಲ್ಪಡುವ ಹುಡುಗರು...ಇವರ್ಯಾರು girl friend ಕೆನ್ನೆ ಗಿಲ್ಲಲು ಹೋಗುವುದಿಲ್ಲ, ಮಾಲ್, show room ಗಳಲ್ಲಿ ಕಾಣಸಿಗುವುದಿಲ್ಲ.... ಬೈಕನ್ನೇರಿ ಯಾವುದಾದರೂ ಜಾಗ ಗೊತ್ತು ಮಾಡಿಕೊಂಡು ಹೊರಡುತ್ತಾರೆ....ಹೋದ ಜಾಗದಲ್ಲಿ ಸಿಗರೆಟ್ , ಎಣ್ಣೆ ಸಮಾರಾಧನೆ ನಡೆಸಿ, ಬಿಯರ್ ಬಾಟಲಿಗಳಿಂದ ನೊರೆ ಉಕ್ಕಿಸಿ, ಕೇಕೆ ಹಾಕಿ, ಕುಡಿದು ತೂರಾಡಿ "We had a great weekend dude" ಎಂದು ray-ban ಗ್ಲಾಸ್ ಧರಿಸಿ ಸಿಗರೆಟ್ ಹೊಗೆ ಬಿಡುತ್ತಾರೆ.... ಇದೂ ತಪ್ಪಲ್ಲ..ಯಾರಿಗೂ ತೊಂದರೆ ಕೊಡದಿದ್ದರೆ ಸಾಕು..

ಮತ್ತೊಂದಷ್ಟು ಮಂದಿ ಸ್ವಲ್ಪ ತಲೆ ಓಡಿಸಿ ಗಾಯನ ಕಛೇರಿಗೋ, ಪುಸ್ತಕ ಮೇಳಕ್ಕೋ, ಯಾವುದಾದರೂ ಗೋಷ್ಟಿಗೋ, ನಾಟಕಕ್ಕೋ, ಅಥವಾ ಕರ್ನಾಟಕದ ಯಾವುದಾದರೂ ಮೂಲೆಗೋ ಚಾರಣಕ್ಕೆ ಹೊರಡುತ್ತಾರೆ.... "ಚಾರಣ" ಮಾಡುವುದು ಸಹ ವೀಕೆಂಡ್ ಪ್ರೋಗ್ರಾಮ್ ಗಳಾಗಿ ಸೇರ್ಪಡೆಯಾಗಿದೆ... Weekdays ನಲ್ಲಿ ಮೈಮರೆತು ದುಡಿಯುವ ಜನರಿಗೆ ವೀಕೆಂಡ್ ಬಂತೆಂದರೆ ಏನು ಮಾಡಬೇಕೆಂದು ತಿಳಿದಿರುವುದಿಲ್ಲ... ಎಲ್ಲರಿಗೂ ಏನಾದರೂ ಮಾಡಬೇಕೆಂದಿರುತ್ತದೆ, ಆದರೆ ಅದೇನೆಂದು ತಿಳಿದಿರುವುದಿಲ್ಲ....


ಬೆಂಗಳೂರು ಬೆಳೆದಿದೆ, ಸಮಯ ಕಳೆಯಲು ಬೇಕಾದಷ್ಟು ಮಾರ್ಗಗಳಿವೆ , ಜನರು ಅವರಿಗೆ ಬೇಕಾದ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಮತ್ತಷ್ಟು ಪಟ್ಟಿಗೆ ಸೇರುತ್ತಲೇ ಇವೆ..."ಜಾಗತೀಕರಣ" ದಿಂದ ಮಧ್ಯಮ ವರ್ಗದವರು ಸದ್ದಿಲ್ಲದೆ ಮೇಲ್ಮಧ್ಯಮವರ್ಗಕ್ಕೆ ಸೇರ್ಪಡೆಯಾಗುತ್ತಾರೆ.. ಹಣ ಖರ್ಚು ಮಾಡಲು ಅಷ್ಟಾಗಿ ಯೋಚಿಸುವುದಿಲ್ಲ..
ವಸಾಹತುಶಾಹಿ ಜನಾಂಗದ ಪ್ರಭಾವ ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮವರ್ಗದವರ ಮೇಲೆ ಢಾಳಾಗಿಯೇ ಇದೆ..

ಕಾಫಿ ಡೆ ನಲ್ಲಿ ಗೆಳೆಯರ ಜೊತೆ ಮೈ ಮರೆತು ನಗುತ್ತಿರುವಾಗ, ಯಾವುದಾದರೂ ಚಾರಣದಲ್ಲಿದ್ದಾಗ, credit card ಉಜ್ಜುವಾಗ , ಬ್ರಾಂಡ್ ವಸ್ತುಗಳನ್ನು ಉಪಯೋಗಿಸುವಾಗ, Inbox ನಲ್ಲಿ ಸಂಬಳ ಜಮೆ ಆದ ಮೇಲ್ ನೋಡಿದಾಗ ಫಕ್ಕನೆ ಮನಸಿಗೆ ಬಂದು ಹೋಗುತ್ತದೆ...ಶಾಲಾ-ಕಾಲೇಜು ದಿನಗಳೇ ಚೆನ್ನಾಗಿದ್ದವೇನೊ ಎಂದು..ಉಹೂ comparisons ಸಲ್ಲ......

Three Stages -u

ಎಲ್ಲೋ ಕೇಳಿದ ನೆನಪು..

ಮನುಷ್ಯನಾಗಿ ಹುಟ್ಟಿದ ಮನುಷ್ಯ ಗುಣಗಳನ್ನು ರೂಢಿಸಿಕೊಂಡವನು ಜೀವನದ ಉದ್ದಗಲಕ್ಕೂ ಈ ಮೂರು ಹಂತಗಳಲ್ಲಿ ತೊಯ್ದಾಡುತ್ತಿರುತ್ತಾನೆ...ನನಗೆ ಹೌದೆನ್ನಿಸಿತು...ಓದಿಕೊಳ್ಳಿ..

೧) ನಾನು ಮಾಡುತ್ತಿರುವುದು ಸರಿ, ಪ್ರಪಂಚ ಸರಿಯಿಲ್ಲ..

೨) ನನ್ನಲ್ಲೇ ಏನೋ ತಪ್ಪಿದೆ, ಪ್ರಪಂಚ ಸರಿಯಾಗೆ ಇದೆ...

೩) ನಾನು ಸರಿಯಾಗಿದ್ದೀನಿ, ಪ್ರಪಂಚ ಕೂಡ ಸರಿಯಾಗೆ ಇದೆ...

ಓದಿ ನಿಮಗೆ ಏನೆನ್ನಿಸಿತು??

ನೂತನ ಸಂವತ್ಸರದ ಹಾರ್ದಿಕ ಶುಭಾಶಯಗಳು......

ನೆಮ್ಮದಿ....

Tuesday, January 1, 2008

ಇವತ್ತು ಎರಡನೆ ಬಾರಿ "ರಂಗಶಂಕರ" ದಲ್ಲಿ "ಮೈಸೂರ ಮಲ್ಲಿಗೆ" ನಾಟಕ ನೋಡಿದೆ.. ಬಹಳ ಬಹಳ ಹಿಡಿಸಿತು..ಬಹಳ ಸೊಗಸಾಗಿದೆ, ಅಚ್ಚುಕಟ್ಟಾಗಿದೆ...

ಅದರಲ್ಲಿ ಒಂದು ಕಡೆ ಕೆ.ಎಸ್.ನರಸಿಂಹಸ್ವಾಮಿಯವರ ಪತ್ನಿ ಹೀಗೆ ಕೇಳುತ್ತಾರೆ...."ನೀವು ಸಂತಸ ದಿಂದ ಬರೆದ್ರಿ, ನೋವಲ್ಲಿ ಬರೆದ್ರಿ, ನಲಿವಲ್ಲಿ ಬರೆದ್ರಿ, ಕಷ್ಟ ಇದ್ದಾಗ ಬರೆದ್ರಿ, ಸುಖ ಇದ್ದಾಗ ಬರೆದ್ರಿ, ಆದ್ರೆ ನೆಮ್ಮದಿಯಾಗಿ ಒಂದೂ ಪದ್ಯ ಬರೆದಿಲ್ಲವೆಂದೆನಿಸುತ್ತೆ ನಂಗೆ" ಎಂದು..

ಅದಕ್ಕೆ ಪ್ರತ್ಯುತ್ತರವಾಗಿ ನರಸಿಂಹಸ್ವಾಮಿಯವರು " ’ನೆಮ್ಮದಿ’ ಇದ್ದರೆ ಕವಿ ಯಾಗುವುದಕ್ಕೆ ಹೇಗೆ ಸಾಧ್ಯ..." ಎಂದರು..


ಯಾಕೋ ಏನೋ ಬಹಳ ಮನ ಮುಟ್ಟಿತು ಅವರ ಮಾತು...ಅದಕ್ಕಾಗಿ ಬ್ಲಾಗಿಸಿದೆ..

ಓದಿದುದಕ್ಕಾಗಿ ವಂದನೆಗಳು...

ಗೋವೆ ಪ್ರವಾಸ.. ಭಾಗ-1

ಮೊದಲ ಬಾರಿಗೆ ಅಂತರರಾಜ್ಯ ಪ್ರವಾಸಕ್ಕೆ ಅಣಿಯಾಗುತ್ತಲಿದ್ದೆ..ನಮ್ಮ ಗಮ್ಯ ಗೋವೆಯೆಂದು ನಿರ್ಧರಿಸಿದ್ದೆವು..ಪಶ್ಚಿಮ ಘಟ್ಟಗಳ ನಡುವೆ ಹಾದು ನುಸುಳುವ ರುದ್ರ ರಮಣೀಯ ಕೊಂಕಣ ರೈಲ್ವೆ ನಲ್ಲಿ ಪಯಣಿಸುವ ಬಯಕೆ ನಮ್ಮೆಲ್ಲರದಾಗಿತ್ತು...ರಂಜನ್ ಇದರ ರೂಪುರೇಶೆಯನ್ನು ಇತರರ ಮುಂದಿಟ್ಟಿದ್ದ...ಹಾ ಮರೆತಿದ್ದೆ ಈ ಪ್ರವಾಸದ ಪಾತ್ರಧಾರಿಗಳ ನಾಮಾಂಕಿತಗಳು ಹೀಗಿವೆ.. ಅಜಿತ್, ಶ್ರೀರಾಮ್, ಸಂದೀಪ್, ರಂಜನ್, ಉಜ್ವಲ್, ಸುನೀಲ್, ಶ್ರೀಧರ್..ಒಟ್ಟು ಏಳು ಜನ.. ಬೆಂಗಳೂರಿನಿಂದ ಮಂಗಳೂರಿಗೆ ಹೊರಟು ಅಲ್ಲಿಂದ ಕೊಂಕಣ ರೈಲ್ವೆ ನಲ್ಲಿ ಸಾಗಿ ಗೋವೆಯನ್ನು ತಲುಪಬೇಕೆಂದು ನಿರ್ಧರಿಸಿದ್ದೆವು.. ಸರಿ ಸುಮಾರು 15 ವರ್ಷಗಳ ತರುವಾಯ ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ಮತ್ತೆ ತನ್ನ ಸಂಚಾರ ಆರಂಭಿಸಿತ್ತು...ಅದನ್ನು ನೋಡುವ ಬಯಕೆ ಕೂಡ ನಮ್ಮೆಲ್ಲರದಾಗಿತ್ತು..ಅನೇಕ ರಾಜಕೀಯ ಕುಯುಕ್ತಿ ಹುನ್ನಾರ ಗಳಿಗೆ ಒಳಗಾಗಿ ಸುದೀರ್ಘ ೧೫ ವರ್ಷಗಳ ನಂತರ ರೈಲ್ವೆ ಮಾರ್ಗ ಏರ್ಪಟ್ಟಿತ್ತು ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ...

19/12/2007 ರಾತ್ರಿ ಎಂಟೂವರೆಗೆ ಗಿಜಿಗುಡುತ್ತಿದ್ದ ಬೆಂಗಳೂರು ರೈಲ್ವೆ ನಿಲ್ದಾಣದ platform ಎಂಟರಲ್ಲಿ ನಮ್ಮ ಸಾಮಾನು ಸರಂಜಾಮುಗಳೊಂದಿಗೆ ರೈಲನ್ನು ಎದುರು ನೋಡುತ್ತಿದ್ದೆವು.....ಬಂದ ಕೂಡಲೇ ಹತ್ತಿ ನಮ್ಮ ನಮ್ಮ ಸ್ಥಾನಗಳಲ್ಲಿ ಕುಳ್ಳರಿಸಿದೆವು..ಆದಷ್ಟು ಬೇಗ ಹೊರಟರೆ ಸಾಕು ಎಂಬಂತಿದ್ದೆವು...ನಾನು ರೈಲಿನಲ್ಲಿ ಪ್ರಯಾಣ ಮಾಡಿ ಒಂದು ವರ್ಷದ ಮೇಲಾಗಿತ್ತು... ಶ್ರೀರಾಮ್, ಸಂದೀಪ್, ರಂಜನ್ ಇವರೆಲ್ಲ ನನ್ನ ಹೈಸ್ಕೂಲ್ ಗೆಳೆಯರು..ಸರಿ ಸುಮಾರು 12 ವರ್ಷಗಳ ಒಡನಾಟ ಇದೆ ಇವರೊಡನೆ..ಶ್ರೀರಾಮ್ ನೊಡನೆ 19ವರ್ಷಗಳ ಸಖ್ಯ...ನನ್ನ ಆಪ್ತವರ್ಗ ಇವರೆಲ್ಲಾ..ಸುನೀಲ್ PESIT ಗೆಳೆಯ. 4 ವರ್ಷದ ಒಡನಾಟ...ಮಿಕ್ಕಿಬ್ಬರಾದ ಉಜ್ವಲ್ ಮತ್ತು ಅಜಿತ್ ರಂಜನ್ ಗೆಳೆಯರು....



ರಾಮ ಮಾತು ಮಾತಿಗೂ ದಬ್ಬಲ್ meaning ಮಾತುಗಳನ್ನು ತರುತ್ತಿದ್ದ...ಹೆಸರಿಗೆ ಮಾತ್ರ "ಶ್ರೀರಾಮ" ನಷ್ಟೆ ಆತ... ;-) ಉಜ್ವಲ್ ಮತ್ತು ಅಜಿತ್ ಅದನ್ನ ಅರ್ಥ ಮಾಡಿಕೊಳ್ಳುವುದರಲ್ಲಿ ಸಫಲರಾಗಿದ್ದರು..ಎಲ್ಲರೂ ಹಲ್ಕಾಗಳೆಂದೇ ಭಾವಿಸಿ filter ;-) ಇಲ್ಲದೆ ಮಾತನಾಡತೊಡಗಿದೆವು.. ತುಂಬಾ ಆಪ್ತರೊಡನೆ ರೈಲಿನಲ್ಲಿ ಪಯಣಿಸುವ ಅನುಭವವೇ ಬೇರೆ..ಅದನ್ನ ಪದಗಳಲ್ಲಿ ವ್ಯಕ್ತಪಡಿಸಲಾಗುವುದಿಲ್ಲ.. ಯಾವುದೇ ಪ್ರವಾಸವು ಎಲೆಗಳ ಆಟ ವಿಲ್ಲದೆ ಮುಕ್ತಿ ಹೊಂದುವುದಿಲ್ಲ....ನಮ್ಮಲ್ಲಿ ಕೆಲವರು ಊಟ ಮಾಡಿರಲಿಲ್ಲ...ಬ್ಯಾಗಿನಲ್ಲಿ ಇದ್ದ ಕುರು ಕುರು ತಿಂಡಿಗಳನ್ನೇ ಹೊಟ್ಟೆಗೆ ಆಧಾರಪಡಿಸಿಕೊಂಡರು...ನನಗೆ ಕಾಫಿ ಸಿಗಲಿಲ್ಲ..ರೈಲ್ವೆ ನಿಲ್ದಾಣದಲ್ಲಿ ಕುಡಿದದ್ದೇ ಕೊನೆ... ನಾನು ಸುನೀಲ್ ಈ ಎಲೆಗಳ ಆಟದಲ್ಲಿ ಹೆಬ್ಬೆಟ್ಟು... ರಾಮನು ತನಗೆ ಗೊತ್ತಿದ್ದ ಆಟವನ್ನು ಹೇಳಿಕೊಟ್ಟ...ರಂಜನ್ ಮತ್ತು ಸಂದೀಪ್ ಚದುರಂಗ ಆಡುತ್ತಿದ್ದರು..ಯಾರೊಬ್ಬರಿಗೂ ನಿದ್ದೆ ಬರುತ್ತಿರಲಿಲ್ಲ ಸುನೀಲನನ್ನು ಬಿಟ್ಟು...ಬಹಳ ಬೇಗ ನಿದ್ದೆಗೆ ಜಾರಿದ್ದ..ನಿದ್ರಲೋಲನೆ ಸರಿ....ಈ ಪ್ರವಾಸದುದ್ದಕ್ಕೂ ಎಲ್ಲರಿಗಿಂತ ಈತನೆ ಹೆಚ್ಚು ನಿದ್ದೆ ಮಾಡಿದ್ದು ಎಂದೆನಿಸುತ್ತೆ.....ಸುಮಾರು ಎರಡರ ಹೊತ್ತಿಗೆ ಎಲ್ಲರೂ ನಿದ್ರಿಸಲನುವಾದರು ರಾಮನನ್ನು ಹೊರತು ಪಡಿಸಿ..ಒಬ್ಬೊಬ್ಬರಾಗಿ ನಿದ್ದೆಗೆ ಜಾರುತ್ತಿದ್ದೆವು. ಈತ ಮಾತ್ರ ಕಿಟಕಿಯಾಚೆ ಏನೋ ನೋಡುತ್ತಿದ್ದ..ಘಾಟಿಗಳ ನಡುವೆ ನುಸುಳುವ ರೈಲು ನೊಡುವ ಭಾಗ್ಯ ನಮ್ಮದಾಗಲಿಲ್ಲ.. ಸಕಲೇಶಪುರ ಇತ್ಯಾದಿ ಊರುಗಳೆಲ್ಲವು ಮುಂಜಾನೆ 4ರ ಸಮಯದಲ್ಲಿ ಬಂದು ಹೋಗಿತ್ತು...ಒಟ್ಟಿನಲ್ಲಿ ರೈಲಿನ ಪ್ರಯಾಣ ಆರಾಮದಾಯಕವಾಗಿತ್ತು..



ಮಂಗಳೂರು ಇಳಿದ ಕೂಡಲೇ ಎಲ್ಲರೂ ಬೆವರಲಾರಂಭಿಸಿದೆವು...ಬೆಂಗಳೂರಿನಿಂದ ಹೊರಟಾಗ ಚುಮು ಚುಮು ಚಳಿ...ಮಂಗಳೂರಿನಲ್ಲಿ ಇದಕ್ಕೆ ಸಂಪೂರ್ಣ ವ್ಯತಿರಿಕ್ತ ವಾತವರಣ...ಏರಿಸಿದ್ದ ಉಣ್ಣೆ ಬಟ್ಟೆಗಳನ್ನು ಕಳಚಿ ಬ್ಯಾಗಿನಲ್ಲಿ ತುರುಕಿ ಲಾಕರ್ ಗಳಲ್ಲಿ ತುಂಬಿದೆವು...ಗೋವೆಗೆ ರೈಲು ಮಧ್ಯಾನ್ಹ 2:4೦ಕ್ಕೆ ಇತ್ತು...ನಮಗೆ ಸುಮಾರು ಏನಿಲ್ಲವೆಂದರೂ 4-5 ಗಂಟೆಗಳ ಅವಕಾಶವಿತ್ತು...ಹಾಗಾಗಿ ರೈಲ್ವೆ ನಿಲ್ದಾಣದ ಮಂದಿಯಲ್ಲಿ ಕೇಳತೊಡಗಿದೆವು...ಇಲ್ಲೆಲ್ಲಾದರು ನೋಡುವಂತಹ ಸ್ಥಳಗಳಿವೆಯೇ ಎಂದು..ಯಾರೋ ಪುಣ್ಯಾತ್ಮ St.Mary's Island ಗೆ ಹೋಗಿ ಬನ್ನಿ ಅಂದ.. ರೈಲ್ವೆ ನಿಲ್ದಾಣದಿಂದ ಕೇವಲ ಅರ್ಧ ಗಂಟೆ ಪ್ರಯಾಣ ಎಂದು ಆಸೆ ಹುಟ್ಟಿಸಿದರು...ಲಗುಬಗೆಯಿಂದ ಎಷ್ಟು ಬೇಕೊ ಅಷ್ಟು ದಿರಿಸುಗಳನ್ನು ಸಣ್ಣ ಬ್ಯಾಗಿನಲ್ಲಿ ಇಟ್ಟುಕೊಂಡು ಆ ಪುಣ್ಯಾತ್ಮ ತೋರಿಸಿದ ಮಂಗಳೂರು ಬಸ್ ನಿಲ್ದಾಣದೆಡೆಗೆ ಹೆಜ್ಜೆಯಿಟ್ಟೆವು.... ದಾರಿಯುದ್ದಕ್ಕು ಸುಡು ಬಿಸಿಲು...ಇನಿಲ್ಲದಂತೆ ಬೆವರತೊಡಗಿದೆವು..ಬೆಂಗಳೂರಿನ ಚಳಿಯನ್ನು ನೆನೆಯುತ್ತಾ ಬಿಸಿಲಿಗೆ ಶಪಿಸುತ್ತಾ ನಡೆದೆವು... "ಹೋಟೆಲ್ ತಾಜ್ ಮಹಲ್" ನಲ್ಲಿ ಉಪಹಾರ ಸೇವಿಸಿ ಪಣಂಬೂರು ಬೀಚಿನೆಡೆಗೆ ಬಸ್ ಹಿಡಿದೆವು..ಕಾರಣ ಪಣಂಬೂರು ಬೀಚಿನಿಂದ St.Mary's Island ಪಯಣಿಸಬಹುದು ಎಂದು....ಮಂಗಳೂರಿಗೆ ಇದು ನನ್ನ ಮೊದಲ ಭೇಟಿ....traffic ಕಿರಿ ಕಿರಿ ಅಷ್ಟಾಗಿರಲಿಲ್ಲ..ಮಂಗಳೂರನ್ನು ನೋಡುವ ಆಸೆ ಬಹಳ ಹಿಂದಿನಿಂದ ಇತ್ತು..ಅದು ಅಂದು ಒಂದು ರೀತಿಯಲ್ಲಿ ಪೂರ್ಣಗೊಂಡಿತ್ತು..ಪಣಂಬೂರು ಬೀಚಿನಲ್ಲಿ ಇಳಿದ ಕೂಡಲೇ ಆಟೋದವರು ನಿಮಗೆ ತಪ್ಪು ಮಾಹಿತಿ ದೊರೆತಿದೆ..ಈ ಬೀಚಿನಿಂದ St.Mary's Island ಹೋಗಲಾಗುವುದಿಲ್ಲ...ಮಲ್ಪೆ ಬೀಚಿನಿಂದ ಹೋಗಿ ಎಂದುಬಿಟ್ಟರು..ಮಲ್ಪೆ ಬೀಚು ಅಲ್ಲಿಂದ ಸುಮಾರು 45ನಿಮಿಶಗಳ ಪ್ರಯಾಣ...ಸಮಯ ಮೀರುತ್ತಿದ್ದುದರಿಂದ ಪಣಂಬೂರು ಬೀಚಿಗೆ ಹೋಗಲು ನಿರ್ಧರಿಸಿದೆವು....ಬಸ್ ಸ್ಟಾಪಿನಿಂದ ಅಲ್ಲಿಗೆ ಹೋಗುವ ದಾರಿ ಯಲ್ಲಿ ಗಣಿಗಾರಿಕೆ ನಡೆಯುತ್ತದೆಂದು ತೋರುತ್ತದೆ..ಬಹಳ ಧೂಳಿತ್ತು..ಆಟೋದವರಿಗೆ ಕೆಳಿದ್ದಕ್ಕೆ "manganese" ಅದಿರನ್ನು ಬೇರೆ ದೇಶಗಳಿಗೆ ರಪ್ತು ಮಾಡುತ್ತರೆಂದು ಹೇಳಿದರು...



ಬೀಚಿನ ಮರಳು ಕಾವೇರಿತ್ತು...ಬರಿಗಾಲಿಡಲು ಸಹ ಆಗುತ್ತಿರಲಿಲ್ಲ...ಕಾದ ಕಾವಲಿಯಾದಂತಿತ್ತು..ಸಮುದ್ರವನ್ನು ನೋಡ ನೋಡುತ್ತಿದ್ದಂತೆ ನಮ್ಮ ಹುಡುಗರು ಅದರೆಡೆಗೆ ಧಾವಿಸಿದರು...ನನಗೇನೊ ನೀರಿಗೆ ಇಳಿಯಲು ಮನಸಾಗಲಿಲ್ಲ...ಸಂದೀಪನು ಕೂಡ ನನ್ನೊಡನಿದ್ದ.... photo session ಅದಾಗಲೇ ಶುರು ಆಗಿತ್ತು...ವಿಧ ವಿಧ ಭಾವ ಭಂಗಿಗಳಲ್ಲಿ photo ಗಳು ಒಂದೆ ಸಮನೇ ಕ್ಲಿಕ್ಕಿಸಲ್ಪಡುತ್ತಿದವು... ಬಿಸಿಲಿನ ಝಳ ಹೆಚ್ಚಾಗುತ್ತಲೇ ಇತ್ತು.ಅಲ್ಲೆ ಬಾಕ್ಸ್ ಟೆನ್ನಿಸ್ ಮತ್ತು frisbee ಯಲ್ಲಿ ಆಡುತ್ತಿದ್ದೆವು.. ಅಷ್ಟರಲ್ಲಿ ರಂಜನ್ ಅದೆಲ್ಲಿಂದ ಹುಡುಕಿ ತಂದನೋ 4-5 ಸ್ಟಾರ್ ಮೀನುಗಳನ್ನು ಹಿಡಿದಿಟ್ಟಿದ್ದ...ಅದನ್ನ ಒಂದು ಕವರೊಳಗೆ ಹಾಕಿ ಅದಕ್ಕೆ ನೀರು ಸೇರಿಸಿ ಅದನ್ನ ಬೆಂಗಳೂರಿಗೆ ಹೊತ್ತೊಯ್ಯುವ್ವ ಮಹತ್ ಅಭಿಲಾಷೆಯನ್ನು ಹೊಂದಿದ್ದ!!... ಇನ್ನಿಲ್ಲದಂತೆ ಅದನ್ನು ಪ್ಲಾಸ್ಟಿಕ್ ಕವರೊಳಗೆ ಅಲ್ಲಾಡಿಸಿ ಕಾಟ ಕೊಟ್ಟು ಹಿಡಿದಿಟ್ಟಿದ್ದ....ಯಾರೆಷ್ಟು ಬೇಡವೆಂದರೂ ತನ್ನ ಹಟವನ್ನು ಸಾಧಿಸಿಯೇ ತೀರುತ್ತೇನೆಂದಿದ್ದ.... ಸಮುದ್ರಲ್ಲಿ ಈಜಾಡಿ ಆಟ ಮುಗಿಸಿ ಅಲ್ಲೆ ಹತ್ತಿರದಲ್ಲಿದ್ದ ಹೋಟೆಲಿನಲ್ಲಿ ಆಳು ಮೂಳು ತಿಂದು ಮತ್ತೆ ಮಂಗಳೂರು ರೈಲ್ವೆ ನಿಲ್ದಾಣದೆಡೆಗೆ ಧಾವಿಸಿದೆವು..ರಂಜನ್ ಸ್ಟಾರ್ ಮೀನುಗಳನ್ನು ಹಿಡಕೊಂಡೇ ಬಂದ...ನಮಗಾಗಲೇ ಅನ್ನಿಸಿತ್ತು ಅದರ ಪ್ರಾಣ ಪಕ್ಷಿ ಹಾರಿಹೋಗಿದೆಯೆಂದು....ವೃಥಾ ಅಲ್ಲಾಡಿಸಿ ನೋಡುತ್ತಿದ್ದ..ಬದುಕಿದೆಯೇನೊ ಎಂದು ನೋಡಿ "ಬದುಕಿದೆ ಕಣ್ರೊ" ಎಂದು ಸಂಭ್ರಮಿಸುತ್ತಿದ್ದ...ಮಂಗಳೂರು ರೈಲ್ವೆ ನಿಲ್ದಾಣದ ಸೆರುವ ಹೊತ್ತಿಗೆ "ಮಥ್ಸ್ಯಗಂಧ express" ನಮಗಾಗಿ ಕಾದು ನಿಂತಿತ್ತು ಗೋವೆಕಡೆಗೆ ಮುಖ ಮಾಡಿ..ಲಗುಬಗೆಯಿಂದ ಸಿಕ್ಕಿದ್ದು ತಿಂದು ನಮ್ಮ ಬ್ಯಾಗಳು ಹೊತ್ತು ನಮ್ಮ ಆಸನಗಳನ್ನು ಹಿಡಿದೆವು...ರಂಜನ್ ಒಂದು ಪ್ಲಾಸ್ಟಿಕ್ ಡಬ್ಬವನ್ನು ತಂದು ಕವರಿನಿಂದ ಆ ಮೀನುಗಳನ್ನು ಪ್ಲಾಸ್ಟಿಕ್ ಡಬ್ಬಕ್ಕೆ ಹಸ್ತಾಂತರಿಸಿದ್ದ....ಜೀವ ಹೋದ ಮೇಲೆ ಏನು ಮಾಡಿ ಏನು ಪ್ರಯೋಜನ..ಆದರೂ ಅದು ಹೋಗಿದೆ ಎಂದು ನಂಬುವುದಕ್ಕೆ ಆತನು ಸಿದ್ದನೇ ಇರಲಿಲ್ಲ.. ರಂಜನ್ ನಮ್ಮೆಲ್ಲರ ಘೋರವಾದ ಖಂಡನೆ ಇದೆ ಆ ಜೀವಿಗಳ ಪ್ರಾಣ ತೆಗೆದಿದುದಕ್ಕೆ...




ಮತ್ತೆ ರೈಲಿನ ಪ್ರಯಾಣ.... ಬೆವರು ಹನಿ ತನ್ನ ಪಾಡಿಗೆ ಎಲ್ಲರ ಮುಖದಲ್ಲೂ ಇಳಿಯುತ್ತಲೇ ಇತ್ತು...ಬಳಲಿಕೆ ಯಾರೊಬ್ಬರ ಮುಖದಲ್ಲೂ ಇರಲಿಲ್ಲ...ಕೊಂಕಣ ರೈಲ್ವೆ ..ಸಾಕಷ್ಟು ಸುರಂಗಗಳು, ಪಶ್ಚಿಮ ಘಟ್ಟಗಳ ಶ್ರೇಣಿ ಮಧ್ಯೆ ನುಸುಳುವ ರೈಲನ್ನು ನೆನೆನೆನು ಪುಳಕಿತರಾಗುತ್ತಿದ್ದೆವು...ಕಿಟಕಿ ಪಕ್ಕದ ಸೀಟಿಗಾಗಿ ಗುದ್ದಾಡುತ್ತಿದ್ದೆವು..ಸಂದೀಪ್, ರಂಜನ್ ಇನ್ನು ಮುಂದೆ ಹೋಗಿ ಬಾಗಿಲ ಬಳಿ ಕುಳಿತಿದ್ದರು...ನಾನು ಸುನೀಲ ಇನ್ನೊಂದು ಬಾಗಿಲ ಬಳಿ ಕುಳಿತಿದ್ದೆವು.. ಕಂಗಳಲ್ಲಿ ಪ್ರಕೃತಿಯ ರಮ್ಯ ನೋಟ ತುಂಬಿಕೊಳ್ಳುವ ತವಕ ಎಲ್ಲರಲ್ಲೂ ಇತ್ತು..ಆಗಾಗ ಕಾಪಿ-ಟೀ ಸಮಾರಾಧನೆ ಎಡೆಬಿಡದೆ ನಡೆಯುತ್ತಲೇ ಇತ್ತು... ಹಾಲಿಗಿಂತ ನೀರೇ ಹೆಚ್ಚಾಗಿತ್ತು..photo sessions ನಡೆಯುತ್ತಲೇ ಇತ್ತು..ಇದ್ದ ಬದ್ದ ಭಾವ ಭಂಗಿಗಳು ಎಲ್ಲರೂ ಮಾಡುತ್ತಿದ್ದೆವು...ಒಟ್ಟು ಮೂರು ಕ್ಯಾಮೆರಾ ಮನಸೋ ಇಛ್ಛೆ ಕ್ಲಿಕ್ಕಿಸುತ್ತಿದ್ದರು.. ರೈಲಿನ ಬಾಗಿಲ ಬಳಿ ಕುಳಿತು ಮೊಬೈಲ್ ನಲ್ಲಿದ್ದ ಹಾಡುಗಳನ್ನು ಕೇಳುತ್ತಿದ್ದೆ..ರೈಲಿನ ರಭಸಕ್ಕೆ ಮನಸೂ ಸಹ ಎಲ್ಲೆಲ್ಲೊ ಹಾರಡುತ್ತಿತ್ತು..ಸಾವಿರಾರು ಯೋಚನೆಗಳು...ಪ್ರತಿ ಕ್ಷಣಕ್ಕೂ ದೃಶ್ಯಗಳು ಬದಲಾಗುತ್ತಿರುವಂತೆ ಮನಸಿನ ಓಟ ನಡೆಯುತ್ತಲಿತ್ತು...







ಸುರಂಗಗಳು ಬಂದಾಗ "ಹೋ" ಎಂದು ಕೂಗಲು ಶುರು ಮಾಡುತ್ತಿದ್ದೆವು...ಅಮೇಲೆ ಸುರಂಗಗಳ ಸರಮಾಲೆಯೇ ಇತ್ತು..ಬಂತೆಂದರೆ ಬಾಗಿಲ ಬಳಿ ಬಂದು ಬಗ್ಗಿ ನೋಡುತ್ತಿದ್ದೆವು..ಏನೋ ರೋಮಾಂಚನ...ನಮ್ಮಲ್ಲೆ ಮಾತಾಡಿಕೊಳ್ಳುತ್ತಿದ್ದೆವು.."ಏಷ್ಟ್ ಕಷ್ಟ ಆಗಿರುತ್ತೆ ಅಲ್ಲ್ವ...ಇಷ್ಟ್ ದೊಡ್ಡ tunnel ಮಾಡಕ್ಕೆ.ಏಷ್ಟ್ ಉದ್ದ ಇದೆ ನೋಡು...ಸೂಪರ್ ಕಣೋ...worth ಈ ರೈಲಿನಲ್ಲಿ travel ಮಾಡಿದ್ದಕ್ಕೊ worth it." ಕೊಂಕಣ ರೈಲ್ವೆ ಮಾರ್ಗ ನಿಜಕ್ಕೊ ಸುಂದರ..ಪಶ್ಚಿಮಘಟ್ಟಗಳನ್ನು ಬಳಸಿಕೊಂಡು ರೈಲಿನ ಹಾದಿ ನಿರ್ಮಿಸಿರುವುದು ಬೃಹತ್ ಸಾಹಸವೇ ಸರಿ...ಎಲ್ಲರೂ ಒಮ್ಮೆಯಾದರೂ ಪಯಣಿಸಬೇಕಾದ ದಾರಿ ಅದು....ಯಾವುದು ಅತ್ಯಂತ ಉದ್ದವಾದ ಸುರಂಗ ಎಂದು ಕಾತುರದಿಂದ ಲೆಕ್ಕವಿಡುತ್ತಿದ್ದೆವು..ಪ್ರತಿ ಸುರಂಗ ಬಂದಾಗಲೂ...ನಮಗೆ ತಿಳಿದ ರೀತಿಯಲ್ಲಿ ಬೈಂದೂರು ಬಳಿಯ ಸುರಂಗ ಅತ್ಯಂತ ಉದ್ದವೆಂದು ಮಾತಾಡಿಕೊಳ್ಳುತ್ತಿದ್ದೆವು...ಎನಿಲ್ಲವೆಂದರೂ ಸುಮಾರು 10ನಿಮಿಷಗಳು ಸುರಂಗದಲ್ಲಿ ಸಂಪೂರ್ಣ ಓಟ ನಡೆಸಿತ್ತು ರೈಲು ಬೈಂದೂರು ಸುರಂಗದಲ್ಲಿ... ಕತ್ತಲಾಗುತ್ತಿತ್ತು, ಆದಷ್ಟು ಕಣ್ಣಿಗೆ ಕಾಣುವಷ್ಟು ಕಣ್ಣಿಗೆ ತುಂಬಿಕೊಳ್ಳುವ ತವಕ.. ಆಗ ಕಂಡದ್ದು ದೊಡ್ಡ ಶಿವನ ವಿಗ್ರಹ...ಅದೇ ಮುರುಡೇಶ್ವರ, ರಾಮ ವಿವರಿಸುತ್ತಿದ್ದ...ಆತನಿಗೊಂದು ಆಸೆ ಇತ್ತು..ಈ ರೈಲಿನಲ್ಲಿ ಪಯಣಿಸುವಾಗ ಮುರುಡೇಶ್ವರ ಬೀಚು ಕಾಣಿಸುತ್ತದಂತೆ ನೋಡಬೇಕೆಂದು..ಎಲ್ಲರೂ ಇರುವ ಎರಡು ಕಂಗಳನ್ನು ಊರಗಳ ಅರಳಿಸಿ ಕಾಲಿನ ಬೆರಳ ಮೇಲೆ ನಿಂತು ನೋಡುತ್ತಿದ್ದೆವು..ಶರವೇಗದಲ್ಲಿ ಸಾಗುತ್ತಿತ್ತು ರೈಲು.ಶಿವನ ಶಿಲೆ ದೂರದಿಂದ ವಿರಾಜಮಾನವಾಗಿ ಕಾಣಿಸಿತು, ಅದರ ಬಗ್ಗೆ ತನಗೆ ತಿಳಿದಿದ್ದ ಮಾಹಿತಿಯನ್ನು ನೀಡುತ್ತಿದ್ದ ರಾಮ, ಬೀಚು ಮಾತ್ರ ಕಾಣಿಸಲಿಲ್ಲ.."ಲೊ ಅದರ ಪಕ್ಕಾನೇ ಕಣ್ರೋ ಬೀಚು, ಕಾಣಿಸ್ತಿಲ್ಲ..ಚೆ ಚೆ."ಎಂತು ಪರಿತಪಿಸುತ್ತಿದ್ದ..ಶಿವನ ವಿಗ್ರಹ ಕಣ್ಣಿಗೆ ಕಾಣುವಷ್ಟು ದೂರ ನೋಡುತ್ತಲೆ ಇದ್ದೆವು...ಇದು ಮುಗಿಯುವುದರೊಳಗೆ ಕತ್ತಲೂ ಸಂಪೂರ್ಣ ಆವರಿಸಿತ್ತು ನೀಲಿ ಆಗಸದಲ್ಲಿ, ಮತ್ತೆ ಹಿತವಾದ ಚಳಿ ಶುರು ಆಗಿತ್ತು..ಕಿಟಕಿಯಿಂದ ಎಷ್ಟೆ ಆಚೆ ನೋಡಿದರೂ ಕಣ್ಣಿಗೆ ಏನೊಂದೂ ರಾಚುತ್ತಿರಲಿಲ್ಲ...ಮತ್ತೆ ಆಡಲು ಶುರು ಮಾಡಿದೆವು...ಮತ್ತದೇ ಜೋಕುಗಳು, ಎಲ್ಲರೂ ಎಲ್ಲರನ್ನು ರೇಗಿಸುತ್ತ "ಮಡಗಾವ್" ರೈಲು ನಿಲ್ದಾಣದ ಎದುರು ನೋಡುತ್ತಿದ್ದೆವು...ಕಾರವಾರ ದಿಂದ ಕೇವಲ ಅರ್ಧ ಗಂಟೆ "ಮಡಗಾವ್" ಎಂಬ ವಿಷಯ ತಿಳಿಯಿತು..ನಮಗೆ "ಮಡಗಾವ್" ನಿಂದ ರೂಮಿನಲ್ಲಿ ಉಳಿಯುವ ವ್ಯವಸ್ಥೆ ಹೊಣೆಯೆಲ್ಲವನ್ನು ರಂಜನ್ ಹೊತ್ತಿದ್ದ, ಅವನ ಗೆಳೆಯ ಅದರ ತಯಾರಿ ಮಾಡಿದ್ದ.."ಮಡಗಾವ್" ನಿಲ್ದಾಣದಲ್ಲಿ driver ರಂಜಿತ್ ಬಂದು ನಮ್ಮನ್ನು ಎದುರು ಮಾಡಿಕೊಳ್ಳುವ ಹಾಗೆ ವ್ಯವಸ್ಥೆ ಯಾಗಿತ್ತು..ಸುಮಾರು ರಾತ್ರಿ 9ಗಂಟೆಗೆ "ಮಡಗಾವ್" ತಲುಪಿದೆವು...ರಂಜಿತ್ ನಮಗಾಗಿ ಕಾದಿದ್ದ.. ಬ್ಯಾಗುಗಳನ್ನು ಹೊತ್ತು ಅವನ ಹಿಂದೆ ಹೆಜ್ಜೆ ಹಾಕಿದೆವು.. ನಮಗಾಗಿ ಕಾದು ನಿಂತಿತ್ತು "ಟಾಟ ಸುಮೋ..."




(ಸಶೇಷ)...