ನಾನು ಕವಿಯಲ್ಲ...

Thursday, February 14, 2008

ಅದೇ ಲಹರಿಯಲ್ಲಿ ಬಂದ ಎರಡನೆಯ ಕವನ.. :-) :-)
ನಾನು ಕವಿಯಲ್ಲ...

ಮನದಾಳದ ಭಾವಗಳನು ಕವನಗಳಲಿ ಚಿತ್ರಿಸಲು ಬಾರದಲ್ಲ,
ಆದರೂ ನನ್ನೀ ಪ್ರಯತ್ನಕ್ಕೆ ನಿನ್ನ ಮೆಚ್ಚುಗೆ ಇರುತ್ತದಲ್ಲ?
ನಾನು ಕವಿಯಲ್ಲ...

ಇಂದ್ರ ಚಂದ್ರರ ಉಪಮೆಗಳನ್ನೊಡಗೂಡಿಸಿ ಬಣ್ಣಿಸಲೆನಗೆ ಬಾರದು,
ನಿನಗೆ ಜೋಗುಳ ಹಾಡಿ ಮಲಗಿಸದೆ ಎನಗೆ ನಿದಿರೆಯು ಸನಿಹ ಸುಳಿಯದು,
ನಾನು ಕವಿಯಲ್ಲ...

ಹಸುಗೂಸಿನ ನಗುವು, ಕಲ್ಮಷವನರಿಯದ ಕಂಗಳು,
ನಿನ್ನಿಂದಲೇ ನನ್ನೀ ಮನದ ಮುಗಿಲೆಲ್ಲಾ ತುಂಬಿದೆ ಬೆಳದಿಂಗಳು,
ನಾನು ಕವಿಯಲ್ಲ...

ನಂದಿ ಹೋಗಿದ್ದ ಒಲವಿಗೆ ಹಚ್ಚಿದೆ ನೀನು ಹಣತೆ,
ನೆಲೆಸಿಹುದಿಂದು ಹೃದಯಾಳದಲ್ಲಿ ನಿನ್ನಿಂದಲೇ ದಿವ್ಯತೆ,
ನಾನು ಕವಿಯಲ್ಲ...
-ಶ್ರೀಧರ

ಮೊದಲು ...

ನನ್ನವಳಿಗಾಗಿ ನನ್ನ ಮೊದಲ ಕವನ .. :-)


ನಾ ಬರೆಯ ಹೊರಟೆ ಒಲವಿನ ಓಲೆ ನನ್ನ ನಲ್ಲೆಗೆ,
ಇದು ನನ್ನ ಮೊದಲ ಕವನ ಅರ್ಪಿಸುವೆನೆಮ್ಮೆಯ ಪ್ರೀತಿಗೆ,

ಕವಿವರೇಣ್ಯರಂತೆ ನಿನ್ನ ತಿಂಗಳ ಬೆಳಕಿಗೆ, ಕಾಮನಬಿಲ್ಲಿಗೆ ಹೋಲಿಸುವುದಿಲ್ಲ,
ನೀ ನನ್ನ ಬಾಳಿಗಾಸರೆಯೆಂದು ಹೇಳುವುದಾ ನಾ ಮರೆಯುವುದಿಲ್ಲ,

ಗುರಿಯಿಲ್ಲದ ಹುಡುಕಾಟದಲ್ಲಿದ್ದೆ ನಾನು, ಆಕಸ್ಮಿಕವಾಗಿ ಬಂದೆ ನೀನು,
ಎಣೆಯಿಲ್ಲದಾ ಕನಸುಗಳಿಗೆ ಸ್ಪೂರ್ತಿಯಾಗಿರುವೆಯಿಂದು ನೀನು,

ನಿನ್ನ ಬಿಗಿದಪ್ಪಿ ಮುದ್ದಾಡುವ ಕಾತುರ,
ಇದ ತಿಳಿದೂ ತಿಳಿದೂ ನೀನಿರುವಿಯೇಕೆ ಅಷ್ಟು ದೂರ?

ನಮ್ಮೀ ಪ್ರೀತಿ ಎಂದೆಂದಿಗೂ ಅಜರಾಮರ...ಅಜರಾಮರ ........
-ಶ್ರೀಧರ

ಚಿತ್ರಚಾಪ - ನನಗನ್ನಿಸಿದ್ದು....

Tuesday, February 12, 2008


’ಚಿತ್ರಚಾಪ’ದ ಬಿಡುಗಡೆ ಸಮಾರಂಭಕ್ಕೆ ನೀವೆಲ್ಲರೂ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿದುದಕ್ಕೆ ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕವಾದ ನಮನಗಳು. ನಾನು ತೆಗೆದಿರಿಸಿದ ಪ್ರತಿಯನ್ನು ಮನೆಗೆ ಕೊಂಡು ಹೋಗಿ ಇದಾಗಲೇ ಓದಲು ಶುರುವಿಕ್ಕಿರುತ್ತೀರಿ ಎಂಬುದು ಸಹ ತಿಳಿದ ವಿಷಯವೇ.


Proffessor ಜಿ.ವೆಂಕಟಸುಬ್ಬಯ್ಯನವರು ’ನಾನು ಕಳೆದ 20ವರ್ಷಗಳಲ್ಲಿ ಈ ರೀತಿಯ ಸಮಾರಂಭವನ್ನು ನೋಡಿರಲಿಲ್ಲ’ ಎಂದಾಗ ಪುಸ್ತಕದ ಬಗ್ಗೆ ಅಪಾರ ಮೆಚ್ಚುಗೆಯನ್ನು ಸಭಿಕರ ಮುಂದೆ ವ್ಯಕ್ತಪಡಿಸಿದಾಗ ಉಂಟಾದ ಕರಾಡತನದ ಶಬ್ಧ ಇನ್ನೂ ಕಿವಿಯಲ್ಲಿ ಗುಯ್ ಗುಡುತ್ತಿರುವಾಗಲೇ ಪುಸ್ತಕವನ್ನು ಓದಿ ಮುಗಿಸಿದೆ.

ಪುಸ್ತಕ ಬಿಡುಗಡೆಯ ಹಿಂದಿನ ದಿವಸ ರಾತ್ರಿ 1ಗಂಟೆಯಲ್ಲಿ ಅರುಣ ಕೇಳಿದ ’ಮುನ್ನುಡಿ’ ಓದುವೆಯಾ ಎಂದು, ಅದು ಪುಸ್ತಕದ ಮೊದಲ ಪ್ರತಿ. ಇಲ್ಲ ನಾಳೆ ಬಿಡುಗಡೆಯಾದಮೇಲೆ ಕೊಂಡೇ ಓದುವೆ ಎಂದು ಸುಮ್ಮನಾದೆ.

’ಚಿತ್ರಚಾಪ’ದ ಉದ್ದಿಶ್ಯ ಒಂದೇ ವಾಕ್ಯದಲ್ಲಿ ಸವಿಸ್ತಾರವಾಗಿ ವರ್ಣಿಸಿದ್ದಾರೆ.."ಮೊದಲ ಪ್ರಯತ್ನವಿದು ಚಿತ್ರಚಾಪ. ಪ್ರಕೃತಿಗಾಗಿ, ಕನ್ನಡಕ್ಕಾಗಿ, ನಮಗಾಗಿ, ನಿಮಗಾಗಿ, ಎಲ್ಲರಿಗಾಗಿ". ವಸುಧೇಂದ್ರರ ಮುನ್ನುಡಿಯು ಪುಸ್ತಕಕ್ಕೆ ಕಳಶವಿಟ್ಟಂತಿದೆ.

ಒಟ್ಟಾರೆಯಾಗಿ ಪುಸ್ತಕದಲ್ಲಿ 3 ಕವನಗಳು 5 ಪ್ರಭಂದಗಳು ಇವೆ, ಯಾವುದೇ ಕವನಗಳು ನನಗೆ ಏಕೆ ಅರ್ಥವಾಗುವುದಿಲ್ಲ ಎಂದು ನನಗೇ ಅರ್ಥವಾಗಿಲ್ಲ!!, ಅದರ ಬಗ್ಗೆ No Comments!!!

ಶ್ರೀನಿಧಿಯವರ ಪರಿಸರದ ನಾಲ್ಕು ಚಿತ್ರಗಳಾದ ಕೆರೆ,ಕೃಷಿ,ನೆಲೆ, ಅಲೆ ಇವುಗಳ ಬಗ್ಗೆ ಸವಿಸ್ತಾರವಾಗಿಯೇ ಬರೆದಿದ್ದಾರೆ. ಇವುಗಳ ಮೇಲೆ ಮಾನವರ ಅವಲಂಬಿತನದ ಚಿತ್ರಣ ಸಿಗುತ್ತದೆ, ಇದರಲ್ಲಿ ಯಾವುದಕ್ಕೊ ಅಂತ್ಯವಿಲ್ಲ, ಓದುಗರನ್ನು ಅದರ ಬಗ್ಗೆ ಚಿಂತಿಸುವಂತೆಯೇ ಮಾಡಿ ಅದರ ಬಗ್ಗೆ ಯೋಚಿಸುತ್ತಿರುವಾಗಲೇ ಮುಂದಿನ ಚಿತ್ರದ ಬಗ್ಗೆ ಚಿತ್ರಣ ಶುರುವಾಗಿರುತ್ತದೆ. ಅರೆರೆ ಮುಗಿದೇ ಹೋಯಿತೇ ಎಂದೆನಿಸುತ್ತದೆ ಮತ್ತೊಮ್ಮೆ ಮಗದೊಮ್ಮೆ ಓದುವಂತೆ ಪ್ರೇಪಿಸುತ್ತದೆ. ಪಾತ್ರಗಳ ಕಟ್ಟುವಿಕೆ ಅದ್ಭುತವಾಗಿದೆ, ಅರ್ಥವಾದರೂ ಅರ್ಥವಾಗದ ಒಂದು ಗುಂಗಿನಲ್ಲಿ ಇದ್ದೇ ’ಪರಿಸರದ ನಾಲ್ಕು ಚಿತ್ರಗಳು’ ಓದಿದ ಮೇಲೆ, ಮತ್ತೊಮ್ಮೆ ಓದುತ್ತೇನೆ...ರಾಹೆಯವರ ರೇಖಾಚಿತ್ರಗಳು ಇಲ್ಲದಿದ್ದರೆ ಮತ್ತಷ್ಟು ತಿಣುಕಾಡುತ್ತಿದ್ದನೇನೋ...

ಶ್ರೀನಿವಾಸನ ’ಇದು ಎಂಥಾ ಲೋಕವಯ್ಯ!’ ಆತ ಮಾಡಿದ ಬೆಳಗಾವಿಯ ಪ್ರವಾಸಕಥನ. ಸಂಪೂರ್ಣ ಪ್ರವಾಸ ಕಥನ ಕಣ್ಣಿಗೆ ಕಟ್ಟಿದಂತಿದೆ, ಅಲ್ಲಲ್ಲಿ ಕಂಡು ಬರುವ ಉಪಮೆಗಳು, ಕಂಡ ದೃಶ್ಯಗಳನ್ನು ವರ್ಣಿಸುವ ರೀತಿ, ಪದಬಳಕೆ ನಿರ್ಜೀವ ವಸ್ತುಗಳಲ್ಲಿ ಜೀವಂತಿಕೆ ತುಂಬಿ ಓದುಗರ ಮುಂದೆ ಸಾದ್ಯಂತ ಪಡಿಸುವ ರೀತಿ ಬಹಳ ಸೊಗಸಾಗಿದೆ.


ಸುಶ್ರುತರ ’ಹಳ್ಳಿ ಪರಿಸರದಲ್ಲೊಂದು ಸುತ್ತು’ ತೇಜಸ್ವಿಯವರ 'ಪರಿಸರದ ಕತೆ' ನೆನಪಿಸಿತು ನನಗೆ, ಹಳ್ಳಿ ವಾತವರಣದಲ್ಲಿ ನಡೆಯುವ ಘಟನಾವಳಿಗಳು, ಅಲ್ಲಿನ ಜನಜೀವನವನ್ನ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ’ಅಡಿಕೆ’ ಬೆಳೆಯ ಸಂಪೂರ್ಣ ಮಾಹಿತಿ ದೊರೆಯುತ್ತದೆ, ಆರಂಭದಿಂದ ಹಿಡಿದು ಕೊನೆಯವರೆಗೆ ನಾವೇ ಆ ಸಕಲ ಕಾರ್ಯಗಳು ನಮ್ಮ ಕಣ್ಣ ಮುಂದೇನೇ ನಡೆಯುತ್ತಿದ್ದೇನೋ ಎಂಬಂತೆ ಭಾಸವಾಗುತ್ತಿತ್ತು.

ಅರುಣನ ’ಅರಿವೆಷ್ಟಿದೆ ನಮಗೆ’ ಲೇಖನವನ್ನು ಒಂದು ಪಠ್ಯಪುಸ್ತಕದ ಪಾಠವನ್ನಗಿಸುವ ಸಕಲ ಲಕ್ಷಣಗಳೂ ಇವೆ. Trekking ಏಕೆ ಮಾಡುತ್ತೇವೆ? ಪರಿಸರದ ಸಂರಕ್ಷಣೆಯಲ್ಲಿ ನಮ್ಮ ಪಾತ್ರವೆಷ್ಟು, ಪ್ರಾಣಿ ಪಕ್ಷಿ ಸಂಕುಲಗಳ ಜಾಗವನ್ನು ನಾವೆಷ್ಟು ಆಕ್ರಮಿಸಿದ್ದೇವೆ, ಎಷ್ಟೋ ಮಂದಿಗೆ ಇದಾವುದರ ಅರಿವಿಲ್ಲದೆಯೇ ಪರಿಸರವನ್ನು ಹಾಳುಗೆಡವುತ್ತಿರುತ್ತಾರೆ ತಿಳಿದೆಯೋ ತಿಳಿಯದೆಯೋ... ವಯೋಮಾನದ ಮಿತಿಯಿಲ್ಲದೆ ಎಲ್ಲರೂ ಓದಲೇಬೇಕಾದ ಲೇಖನ ’ಅರಿವೆಷ್ಟಿದೆ ನಮಗೆ’? ಓದಿದ ಮೇಲೆ ಪರಿಸರದ ಬಗ್ಗೆ ನಿಮ್ಮ ದೃಷ್ಟಿಕೋನ ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತದೆ ಎಂಬುದರ ಅರಿವು ನನಗಿದೆ..!!

ಕೊನೆಯದಾಗಿ ಅನ್ನಪೂರ್ಣರ ’ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೊದ್ರೊಳಗೆ ಒಮ್ಮೆ ನೋಡು ಕೆಮ್ಮಣ್ ಗುಂಡಿ ’ ಓದಿದ ಮೇಲೆ ಕೆಮ್ಮಣ್ಣುಗುಂಡಿಗೇ ಹೋಗಿ ಬಂದಂತಾಯಿತು. ನಾನೂ ಒಮ್ಮೆ ಇವರೊಡನೆ ಹೋಗಬೇಕು. ’ರಾಣಿ’ ಮತ್ತೆ ’ವಾಣಿ’ ಯನ್ನು ನೋಡಬೇಕು. !!

ಪುಸ್ತಕ ರೂಪದ ಮೊದಲ ಪ್ರಯತ್ನದಲ್ಲೇ ಎಲ್ಲರಿಗೂ full ಮಾರ್ಕ್ಸ್ ಬಂದಿದೆ, ಸಂಪೂರ್ಣ ಪುಸ್ತಕ ಓದಿದ ಮೇಲೆ ಪುಸ್ತಕ ಮುಗಿದೇ ಹೋಯಿತೇ ಎಂಬ ಭಾವ ನಿಮ್ಮನ್ನು ಕಾಡೇ ಕಾಡುತ್ತದೆ. ಹೀಗೆ ಮುಂಬರುವ ಎಲ್ಲಾ ಪ್ರಯತ್ನಗಳಿಗೂ ನಿಮಗೆ ಯಶ ಸಿಗಲಿ. ’ಪ್ರಣತಿ’ ಸಂಸ್ಥೆಯಿಂದ ಸಾಕಷ್ಟು ಪುಸ್ತಕಗಳು ಹೊರಬರಲಿ...

ಪುಟ್ಟ - ಪುಟ್ಟಿ ....

Saturday, February 9, 2008

ನನ್ನನ್ನು ಯಾರಾದರೂ ತಡೆದು ಜಗತ್ತಿನ ಅತ್ಯಂತ ಶ್ರೇಷ್ಠ ಸಂಭಂದ ಯಾವುದೆಂದು ಕೇಳಿದರೆ ಪಟ್ ಎಂದು ಹೇಳುತ್ತೇನೆ...ಅದು ನನ್ನವರಾದ ಪುಟ್ಟ - ಪುಟ್ಟಿ ಸಂಭಂದ ಎಂದು.

ಬಾಹ್ಯ ಪ್ರಪಂಚಕ್ಕೆ ಅಕ್ಕ-ತಮ್ಮ ಇವರು. ಪುಟ್ಟ ಎಲ್ಲೆಲ್ಲಿಯೂ ಪುಟ್ಟಿಯನ್ನು ಕಾಣುತ್ತಾನೆ, ಪುಟ್ಟಿ ಮಗುವಿನಂತೆ ಎತ್ತಿ ಮುದ್ದಾಡಿಸುತ್ತಾಳೆ, ಉಹೂ ನನಗೆ ಈ ಸಂಭಂದವನ್ನು ವಿವರಿಸಲು ಬಣ್ಣಿಸಲು ಪದಗಳಿಗೆ ತಡಕಾಡುತ್ತಿದ್ದೇನೆ, ಪದಗಳಿಗೆ ನಿಲುಕದ ಭಾವವಿದು. ಸಂಭಂದದಲ್ಲಿ ನಿಷ್ಠೆ ಎಂದರೆ ಹೇಗಿರಬೇಕು ಎಂಬುದನ್ನು ಇವರುಗಳನ್ನು ನೋಡಿ ಕಲಿಯಬೇಕು, ಆ ನಿಷ್ಠೆಯನ್ನು ಪ್ರಯತ್ನಪೂರ್ವಕವಾಗಿ ಹೇರಿಕೊಂಡಿದುದಲ್ಲ, ಹೃದಯಾಂತರಾಳದ ಭಾವ.

ಎಂತೆಂತಹ ಕ್ಷುಲ್ಲಕ ವಿಷಯಗಳಿಗೆ ಸಂಭಂದಗಳನ್ನು ಕಳೆದುಕೊಳ್ಳುವ ಮಂದಿಯನ್ನು ನೋಡಿದ್ದೇನೆ, ಯಾರೋ ಒಬ್ಬರು ಮೋಸ ಮಾಡಿದರು ಎಂದು ಇಡೀ ಸಂಕುಲವನ್ನು ಜೀವನ ಪರ್ಯಂತ ಶಪಿಸುವರನ್ನು ನೋಡಿದ್ದೇನೆ, ಸಂಭಂದಗಳಲ್ಲಿನ ಅವಕಾಶವಾದವನ್ನು ನೋಡಿದ್ದೇನೆ. ಅಂತಹವರಿಗೆ ಇವರೀರ್ವರನ್ನು ತೋರಿಸಬೇಕು, ಅವರು ಜೀವನವನ್ನು ನೋಡುವ ದೃಷ್ಟಿಕೋನ ಸ್ವಲ್ಪ ಮಟ್ಟಿಗಾದರೂ ಬದಲಾಗುತ್ತದೆ.
"ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ..." ಎಂದು ಹೇಳಿದ್ದಾರಲ್ಲವೆ?

ಬಿಟ್ಟಾಕಿ, ಜೋಗವನ್ನು ನೋಡದಿದ್ದರೂ ಪರವಾಯಿಲ್ಲ, ಇರೋದ್ರೊಳಗೆ ಇವರಿಬ್ಬರನ್ನು ನೋಡಿ.
ಅಂತಹ ಜೋಗದಲ್ಲೇ ನೀರು ಕಮ್ಮಿ ಆಗುತ್ತದಂತೆ, ಆದರೆ ಇಲ್ಲಿ...............................

ಅತಿ ಶೀಘ್ರದಲ್ಲಿ ನಿಮಗೆ ಪರಿಚಯಿಸುತ್ತೇನೆ.................

ಚಿತ್ರಚಾಪ....

Thursday, February 7, 2008


ಈ ಭಾನುವಾರ ಅಂದರೆ Feb 10ರಂದು ಸರಿಯಾಗಿ ಬೆಳಿಗ್ಗೆ ಹತ್ತೂವರೆಗೆ Indian Institute of World Culture ನ ಅಂಗಳದಲ್ಲಿ ನಿಮ್ಮನ್ನು ಎದುರುಗೊಳ್ಳುವ ಅಭಿಲಾಷೆ ನನ್ನದು.. ಏನು ವಿಶೇಷ ಎಂದು ಕೇಳಿದಿರಾ??

ನಮ್ಮ ಉತ್ಸಾಹಿ ಯುವಕರ ತಂಡ "ಚಿತ್ರಚಾಪ" ಎಂದು ಶೀರ್ಷಿಕೆಯನ್ನೊತ್ತ ಪುಸ್ತಕದ ಅನಾವರಣದ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ. ಇದರ ಕರ್ತೃಗಳು ನಮ್ಮವರೇ ಆದ ಅರುಣ್, ಶ್ರೀನಿವಾಸ, ಸುಶೃತ, ಶ್ರೀನಿಧಿ ಮತ್ತು ಅನ್ನಪೂರ್ಣ . ಅತಿಥಿಗಳಾಗಿ Professor ಜಿ.ವೆಂಕಟಸುಬ್ಬಯ್ಯ ಹಾಗು ಶ್ರೀ ಹೆಚ್ ಕೆ ಶ್ರೀನಿವಾಸ ಮೂರ್ತಿಗಳು ಆಗಮಿಸಲಿದ್ದಾರೆ.

ಕನ್ನಡ ಸಾಹಿತ್ಯ ಲೋಕಕ್ಕೆ ಪಾದರ್ಪಣೆ ಮಾಡುತ್ತಿರುವ ಹೊಸ ಪ್ರತಿಭೆಗಳ ಹೊಸ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಓದುಗರಾದ ನಮ್ಮೆಲ್ಲರದು. ಬರುವಿರಿ ತಾನೆ? ನಿಮಗಾಗಿ ಒಂದು ಪ್ರತಿಯನ್ನು ತೆಗೆದಿರಿಸಿರುತ್ತೇನೆ.. Feb 10 ರಂದು ಸಿಗುವ..